ವೈಭವ್ ಸೂರ್ಯವಂಶಿ, 15 ವರ್ಷದ ಹುಡುಗನೇ ಇರಬಹುದು, ಆಟ ಹಾಗಿಲ್ಲ. ಮೈದಾನದಲ್ಲಿ ಸಿಂಹದಂತೆ ಘರ್ಜಿಸುವ ವೈಭವ್, ಮೈದಾನದ ಹೊರಗೆ ಹಿರಿಯ ಆಟಗಾರರ ಎದುರು ತಲೆತಗ್ಗಿಸಿ ನಿಲ್ಲುವ ಹುಡುಗ. ಸಚಿನ್, ಗಾವಾಸ್ಕರ್, ಹರ್ಷಭೋಗ್ಲೆ, ಧೋನಿ, ಸಂಜಯ್ ಬಂಗಾರ್, ರವಿಶಾಸ್ತ್ರಿ.. ಅಂತಹ ಹಿರಿಯ ಆಟಗಾರರು ಕಂಡ ತಕ್ಷಣ ಕಾಲಿಗೆ ಬಿದ್ದು ನಮಸ್ಕರಿಸುವ ವೈಭವ್, ಅದೊಂದು ವರ್ತನೆಗೆ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಅಂತಹ ವೈಭವ್ ಶ್ರೀಲಂಕಾ ಎ ತಂಡದ ಎದುರು ಆಡುವಾಗ ಆಟಗಾರರ ಜೊತೆ ರೊಚ್ಚಿಗೆದ್ದು ಜಗಳಕ್ಕೆ ಹೋಗಿದ್ದಾರೆಂದರೆ ಏನು ಕಾರಣ ಇರಬಹುದು ಎಂಬ ಗೊಂದಲವಂತೂ ಇತ್ತು. ಶ್ರೀಲಂಕಾದ ಆಟಗಾರ ಬಳಸಿದ ಪದ, ಬೈಗುಳ ಏನು ಎಂಬ ಕುತೂಹಲವೂ ಇತ್ತು. ಅದು ಈಗ ಬಹಿರಂಗವಾಗಿದೆ.
ಶ್ರೀಲಂಕಾ ಆಟಗಾರ ವಿಷೇನ್ ಹಲಂಬಗೆ ‘ಮನೆಗೆ ಹೋಗು, ಇದು ಐಪಿಎಲ್ ಅಲ್ಲ’ ಎಂದು ಹೇಳಿದ್ದಾರಂತೆ. ಇದು ಕ್ರಿಕ್ ಬಜ್ ಮಾಡಿರುವ ರಿಪೋರ್ಟ್. ದನ್ನು ಕೇಳಿದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ವಿಷೇನ್ ಹಲಂಬಗೆ ಅವರು ಈ ಹಿಂದೆಯೂ ವೈಭವ್ ಅವರನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದ್ದರಂತೆ. ಜೂನ್ 9 ರಂದು ನಡೆದಿದ್ದ ಪಂದ್ಯದಲ್ಲೂ ವೈಭವ್ಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರಂತೆ. ವೈಭವ್ನನ್ನು ಪದೇ ಪದೇ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದ ವಿಷೇನ್ ಹಲಂಬಗೆ, ಸೋಮವಾರ ನಡೆದ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮಾಡುವಾಗಲೂ ಅದನ್ನು ಮುಂದುವರಿಸಿದ್ದರು ಎಂದು ವರದಿಯಾಗಿದೆ.
ಸೂಪರ್ ಓವರ್ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಲು ಬಂದಾಗಲೂ ತನ್ನ ನೀಚತನವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ವೈಭವ್ಗೆ “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಟೀಕಿಸಿದ್ದಾರೆ. ಸೂಪರ್ ಓವರ್ ಮುಗಿದ ನಂತರ ವಿಷೇನ್ ಹಲಂಬಗೆ, ವೈಭವ್ ಸೂರ್ಯವಂಶಿ ಜೊತೆಗೆ ಕಾಲ್ಕೆರೆದು ಮತ್ತೆ ಜಗಳಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಅವರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಈ ಜಗಳಕ್ಕೆ ತಾರಕಕ್ಕೇರುತ್ತಿರುವುದನ್ನು ನೋಡಿದ ಇತರ ಆಟಗಾರರು ಇಬ್ಬರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಶಿಕ್ಷೆಯಿಂದ ಬಚಾವ್ : ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ (Vaibhav Sooryavanshi), ಶ್ರೀಲಂಕಾ ಎ ತಂಡದ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದು, ದೊಡ್ಡ ವಿವಾದವಾದ ಕಾರಣ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾರಣ, ನಿಯಮ ಉಲ್ಲಂಘಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ವೈಭವ್ಗೆ ಡಿಮೆರಿಟ್ ಅಂಕಗಳೊಂದಿಗೆ ಪಂದ್ಯದಿಂದ ನಿಷೇಧಿಸುವ ಶಿಕ್ಷೆ ವಿಧಿಸುವ ಆತಂಕವೂ ಇತ್ತು. ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ, ವೈಭವ್ಗೆ ಆ ರೀತಿಯ ಯಾವುದೇ ಶಿಕ್ಷೆಯನ್ನು ವಿಧಿಸಲಾಗುತ್ತಿಲ್ಲ.
ಭಾರತ ಎ ತಂಡದ ನಾಯಕರಾಗಿರುವ ತಿಲಕ್ ವರ್ಮಾ ಇಡೀ ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ. ತಂಡದ ಮ್ಯಾನೇಜ್ ಮೆಂಟ್ ಜೊತೆ ಸುದೀರ್ಘ ಮೀಟಿಂಗ್ ಮಾಡಿದ್ದು, ನಂತರ ಮ್ಯಾಚ್ ರೆಫರಿಗೂ ಕಾರಣವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಅಸಲಿಗೆ ಈ ಜಗಳಕ್ಕೆ ಪ್ರಮುಖ ಕಾರಣ, ಲಂಕಾ ಆಟಗಾರರ ಅತಿರೇಕತನ. ಪಂದ್ಯ ಪ್ರಾರಂಭವಾದಾಗಿನಿಂದಲೂ ಶ್ರೀಲಂಕಾ ಎ ಆಟಗಾರರು ವೈಭವ್ ಸೂರ್ಯವಂಶಿ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದರು. ಜೊತೆಗೆ ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಸಮಯದಲ್ಲಿ ವೈಭವ್ಗೆ ಆಟಗಾರನನ್ನು ತಳ್ಳುವ ಉದ್ದೇಶವಿರಲಿಲ್ಲ. ಆದರೆ ಶ್ರೀಲಂಕಾ ತಂಡದ ಆಟಗಾರ, ತನ್ನ ಬಳಿ ಬರುತ್ತಿರುವುದನ್ನು ನೋಡಿದ ವೈಭವ್, ಅವನನ್ನು ದೂರದಲ್ಲೇ ನಿಂತು ಮಾತನಾಡುವಂತೆ ಹೇಳುತ್ತ ಹಿಂದಕ್ಕೆ ತಳ್ಳಿದನು ಎಂಬುದನ್ನು ತಿಲಕ್, ರೆಫರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಘಟನೆಯ ಬಳಿಕ ಶ್ರೀಲಂಕಾದ ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡಿದ್ದು, ಐಪಿಎಲ್ನಲ್ಲಿ ಸೂರ್ಯವಂಶಿ ಅವರೊಂದಿಗೆ ಆಡಿದ ಆಟಗಾರರು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದರಂತೆ.
ಭಾರತೀಯ ತಂಡಕ್ಕೆ ಔಪಚಾರಿಕ ಕ್ಷಮೆಯಾಚಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಶ್ರೀಲಂಕಾ ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ. ವೈಭವ್ ಸೂರ್ಯವಂಶಿ ವಿರುದ್ಧ ಯಾವುದೇ ನಿಷೇಧ ಅಥವಾ ಶಿಸ್ತು ಕ್ರಮದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಯುವ ಭಾರತೀಯ ಆಟಗಾರನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದ ಶ್ರೀಲಂಕಾದ ಆಟಗಾರನಿಗೆ ರೆಫರಿ ಕಠಿಣ ಛೀಮಾರಿ ಹಾಕಿದ್ದಾರೆ.



