ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಇರುವ ಒಂದು ಬಣದ ನಾಯಕರು ಸಮರ ಸಾರಿರುವುದು ಗುಟ್ಟೇನೂ ಅಲ್ಲ. ಇದನ್ನು ಹೈಕಮಾಂಡ್ ನೋಡಿಯೂ ನೋಡದಂತೆ.. ಕಂಡರೂ ಕಾಣದಂತೆ ಜಾಣ ಆಟ ತೋರಿಸ್ತಾ ಇರೋದು ಹೊಸದಲ್ಲ. ದಕ್ಷಿಣದ ರಾಜ್ಯಗಳ ವಿಷಯದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ಎಷ್ಟು ವೀಕ್ ಎನ್ನುವುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಈ ಬಾರಿಯೂ ಅಷ್ಟೇ.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಂದು ಹೋಗಿ ಎರಡು ವಾರಗಳು ಕಳೆದರೂ ಯಾವುದೇ ಪರಿಹಾರ ಸಿಕ್ಕಂತೆ ಇಲ್ಲ. ಬದಲಿಗೆ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದೆ.
ಬಿಜೆಪಿಯ ಪಡಸಾಲೆಯಲ್ಲಿ ಈಗ ಅವರು ಬದಲಾಗ್ತಾರೆ.. ಇವರು ಬದಲಾಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆಯೇ ಹೊರತು, ಸಂಘಟನೆ, ಹೋರಾಟಗಳ ಕುರಿತು ಯಾವ ಚರ್ಚೆಯೂ ಆಗುತ್ತಿಲ್ಲ. ಅಧ್ಯಕ್ಷರು ಬದಲಾಗ್ತಾರೆ.. ಎಂದು ಅಶೋಕ್ ಬಣ ಹೇಳುತ್ತಿದ್ದರೆ, ವಿರೋಧ ಪಕ್ಷದ ನಾಯಕರು ಬದಲಾಗ್ತಾರೆ ಎನ್ನುವುದು ವಿಜಯೇಂದ್ರ ಟೀಂನವರು ಹರಡುತ್ತಿರುವ ಸುದ್ದಿ. ಬಿಜೆಪಿ ನಾಯಕರು ಎಂದಿನಂತೆ ʻಮೀಡಿಯಾ ಟೈಗರ್ʼಗಳಾಗಿದ್ದಾರೆ. ಅಂದರೆ ಟಿವಿ ಚಾನೆಲ್ಲುಗಳ ಮೈಕು ಕಂಡಾಗ.. ವರದಿಗಾರರು ಪ್ರಶ್ನೆ ಕೇಳಿದಾಗ.. ಮಾತನಾಡುವ ಹೋರಾಟ.
ಈ ಮಧ್ಯೆ ಪ್ರಲ್ಹಾದ್ ಜೋಶಿಯವರು ಇದ್ದಕ್ಕಿದ್ದಂತೆ ಆಕ್ಟಿವ್ ಆಗಿದ್ದಾರೆ. ಕರ್ನಾಟಕದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ರಾಜ್ಯಸಭೆ ಚುನಾವಣೆಯಲ್ಲಿ ಪ್ರೊ.ಎಂ ನಾಗರಾಜ್ ಎಂಬುವವರ ಆಯ್ಕೆಯೇ ಇದಕ್ಕೆ ಸಾಕ್ಷಿ. ರಾಜ್ಯ ಬಿಜೆಪಿಯ ಸೀನಿಯರ್ ನಾಯಕರುಗಳಲ್ಲಿಯೂ ಬಹುತೇಕರಿಗೆ ಈ ವ್ಯಕ್ತಿಯ ಪರಿಚಯ ಇರಲಿಲ್ಲ. ಆದರೆ ಅದು ಪ್ರಲ್ಹಾದ್ ಜೋಶಿಯವರಿಗೆ ಇತ್ತು. ಸಂಘ ಪರಿವಾರದ ಹಿನ್ನೆಲೆ ಇರುವ ನಾಯಕ.
ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಅಷ್ಟೇ, ಬಿಜೆಪಿ ರಾಜ್ಯ ಘಟಕ ಹೇಳಿದ್ದ ಹೆಸರಿಗೆ ಹೈಕಮಾಂಡ್ ಓಕೆ ಎಂದಿಲ್ಲ. ಆದರೆ ಸ್ವಲ್ಪ ಜಾಣತನ ತೋರಿಸಿದೆ. ಒಂದು ಸೀಟನ್ನು ವಿಜಯೇಂದ್ರ ಬಣಕ್ಕೂ, ಇನ್ನೊಂದು ಸೀಟನ್ನು ಪ್ರಲ್ಹಾದ್ ಜೋಶಿಯವರಿಗೂ ನೀಡಲಾಗಿದೆ. ರಘು ಕೌಟಿಲ್ಯ, ವಿಜಯೇಂದ್ರ ಕ್ಯಾಂಡಿಡೇಟ್ ಆದರೆ, ಲಿಂಗರಾಜ್ ಪಾಟೀಲ್, ಪ್ರಲ್ಹಾದ್ ಜೋಷಿ ಅವರ ಕ್ಯಾಂಡಿಡೇಟು.
ವಿಶೇಷ ಎಂದರೆ ವಿ ಸೋಮಣ್ಣ ಅವರ ಹೆಸರನ್ನು ಇತ್ತೀಚೆಗೆ ಹೈಕಮಾಂಡ್ ಹೇಳುತ್ತಿಲ್ಲ. ಹೀಗಾಗಿಯೇ ತಮ್ಮ ಹೆಸರನ್ನು ಮರೆತಿರುವ ಹೈಕಮಾಂಡ್ ನಾಯಕರಿಗೆ ನೆನಪಿಸಲು ಎಂದೇ ಸೋಮಣ್ಣ ರಾಜ್ಯ ಪ್ರವಾಸ ಹೆಚ್ಚಾಗಿದೆ.
ಅಂದಹಾಗೆ ಪ್ರಲ್ಹಾದ್ ಜೋಶಿಯವರಿಗೆ ಕರ್ನಾಟಕದ ಸಿಎಂ ಆಗುವ ಕನಸು ಹೊಸದೇನಲ್ಲ. 2023ರಲ್ಲಿಯೇ ಜೋಶಿ ಅವರ ಹೆಸರು ಕೇಳಿ ಬರುತ್ತಿತ್ತು. ಅದಕ್ಕೆ ಕಲ್ಲು ಹಾಕಿದ ಖ್ಯಾತಿ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. ಈಗ ಅವರ ಪಕ್ಷವೇ ಬಿಜೆಪಿ ಮೈತ್ರಿಯಲ್ಲಿದೆ. ಹೀಗಿರುವಾಗ ಜೋಶಿಯವರ ರೊಟ್ಟಿಯೇ ತುಪ್ಪದ ಜಾಡಿಯಲ್ಲಿ ಬಿದ್ದಂತೆ ಕಾಣುತ್ತಿದೆ. ಎಲ್ಲವೂ ಕಾಲದ ಮಹಿಮೆ. ಅಂದಹಾಗೆ ವಿಜಯೇಂದ್ರ ಅವರಿಗೆ ಅಡ್ಡಿಯಾಗುತ್ತಿರುವುದು ಅವರ ವಯಸ್ಸು. ಅಷ್ಟೇ ಹೊರತು ರೆಬಲ್ಸ್ಗಳ ಶಕ್ತಿ ಪ್ರದರ್ಶನ ಅಲ್ಲ.



