ಮೋದಿಯನ್ನು ವಿರೋಧಿಸುವ ಒಂದು ಪಡೆಯೇ ದೇಶದಲ್ಲಿದೆ. ಗುಜರಾತ್ ಸಿಎಂ ಆದಾಗ ಸಣ್ಣ ಪ್ರಮಾಣದಲ್ಲಿದ್ದ ಆ ಗುಂಪು, ಪ್ರಧಾನಿಯಾದ ನಂತರ ವಿಸ್ತರಿಸಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧಿಸುವುದು ತಪ್ಪೇನಲ್ಲ. ಆದರೆ ಕಳೆದ 12 ವರ್ಷಗಳಿಂದ ಒಂದು ವಿಚಿತ್ರ ಗಮನಿಸಿದರೆ, ಆರಂಭದಲ್ಲಿ ಮೋದಿಯನ್ನು ವಿರೋಧಿಸಿದ್ದವರೇ ಕ್ರಮೇಣ ಮೋದಿ ಭಕ್ತರಾಗುತ್ತಿದ್ದಾರೆ. ಒಂದೋ.. ಅವರ ಪಕ್ಷವನ್ನು ಸೇರುತ್ತಾರೆ. ಇಲ್ಲವೇ ಮಿತ್ರ ಪಕ್ಷವನ್ನು ಸೇರುತ್ತಾರೆ. ಎರಡೂ ಆಗದೆ ಹೋದಾಗ ಕೇವಲ ಅಭಿಮಾನಿಗಳಾಗಿ ದೂರ ಉಳಿಯುತ್ತಾರೆ. ಈಗ ಟಿಎಂಸಿಯ 20+ ಸಂಸದರ ಸರದಿ. ಮಮತಾ ಬ್ಯಾನರ್ಜಿ ಪಕ್ಷದಿಂದ ಗೆದ್ದಿದ್ದ 20ಕ್ಕೂ ಹೆಚ್ಚು ಸಂಸದರು ಮೋದಿಗೆ ಜೈಕಾರ ಹಾಕಿದ್ದಾರೆ. ಈ ಹಿಂದೆ ಮೋದಿಯವರನ್ನು ಖಂಡತುಂಡವಾಗಿ ವಿರೋಧ ಮಾಡಿ, ಕ್ರಮೇಣ ಬಿಜೆಪಿ ಸೇರಿ, ಮೋದಿಗೆ ಬಹುಪರಾಕ್ ಹೇಳಿದವರ ಒಂದು ಲಿಸ್ಟೇ ಇದೆ.
ನಂ.1 ಅಲ್ಪೇಶ್ ಠಾಕೂರ್
ಅಲ್ಪೇಶ್ ಠಾಕೂರ್ 2015-17ರ ಅವಧಿಯಲ್ಲಿ ಗುಜರಾತ್ನಲ್ಲಿ ಒಬಿಸಿ ಸಮುದಾಯಗಳ ಹಿತರಕ್ಷಣೆ ಹೆಸರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಆಂದೋಲನ ನಡೆಸಿದ್ದ. “OSS (OBC, SC, ST) ಏಕತಾ ಮಂಚ್’ ಸ್ಥಾಪಿಸಿದ್ದ ಅಲ್ಪೇಶ್ ಠಾಕೂರ್, ಬಿಜೆಪಿ ಸರ್ಕಾರಕ್ಕೆ ಒಂದು ಭಯ ಹುಟ್ಟಿಸಿದ್ದ. 2017ರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿ ಶಾಸಕನೂ ಆಗಿದ್ದ ಅಲ್ಪೇಶ್, ಅಲ್ಪ ಅವಧಿಯಲ್ಲೇ ಆ ಪಕ್ಷಕ್ಕೆ ರಾಜೀನಾಮೆ ಕೊಟ್ಟ. ಈತ ಈಗ ಬಿಜೆಪಿ ಶಾಸಕ. ಬಿಜೆಪಿಯ ಪ್ರಮುಖ ಒಬಿಸಿ ಮುಖ.
ನಂ.2 ಹಾರ್ದಿಕ್ ಪಟೇಲ್
ಪಾಟೀದಾರ್ ಸಮುದಾಯದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಬೇಕೆಂದು ‘ಪಾಟೀದಾರ್ ಅನಾಮತ್ ಆಂದೋಲನ ಸಮಿತಿ’ (PAAS) ಸಂಘಟನೆ ಹುಟ್ಟು ಹಾಕಿದ್ದ ಹಾರ್ದಿಕ್ ಪಟೇಲ್. ಪಾಟೀದಾರ್ ಆಂದೋಲನದ ಮೂಲಕ ಕೇವಲ 22ನೇ ವಯಸ್ಸಿನಲ್ಲೇ ದೇಶದ ಗಮನ ಸೆಳೆದಿದ್ದ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಬಿಜೆಪಿ ಸರ್ಕಾರಕ್ಕೆ ಭಾರಿ ರಾಜಕೀಯ ಸವಾಲು ಒಡ್ಡಿದ್ದ ಯುವ ನಾಯಕ. 2015ರ ಆಗಸ್ಟ್ 25ರಂದು ಅಹಮದಾಬಾದ್ನ ಜಿಎಂಡಿಸಿ ಮೈದಾನದಲ್ಲಿ ಈತ ಆಯೋಜಿಸಿದ್ದ ಬೃಹತ್ ರ್ಯಾಲಿಗೆ 5 ಲಕ್ಷಕ್ಕೂ ಹೆಚ್ಚು ಪಾಟೀದಾರ್ ಯುವಕರು ಜಮಾಯಿಸಿದ್ದರು. ಇದು ಸ್ವಾತಂತ್ರ್ಯಾನಂತರ ಗುಜರಾತ್ ಕಂಡ ಅತಿ ದೊಡ್ಡ ಪ್ರತಿಭಟನೆಗಳಲ್ಲಿ ಒಂದಾಗಿತ್ತು. 2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಬಿರುಸಿನ ಪ್ರಚಾರ ನಡೆಸಿದ್ದ ಹಾರ್ದಿಕ್ ಪಟೇಲ್ನ್ನು ರಾಹುಲ್ ಗಾಂಧಿಯೇ ಪಕ್ಷಕ್ಕೆ ಬರಮಾಡಿಕೊಂಡಿದ್ದರು. 2020ರಲ್ಲಿ ಈತನಿಗೆ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ (GPCC) ಕಾರ್ಯಾಧ್ಯಕ್ಷನಾಗಿದ್ದ ಹಾರ್ದಿಕ್ ಪಟೇಲ್, ಈಗ ಬಿಜೆಪಿಯಲ್ಲಿ ಶಾಸಕ.
ನಂ.3. ಶೆಹ್ಲಾ ರಶೀದ್
ಶೆಹ್ಲಾ ರಶೀದ್ ಸಿಪಿಐ ಪಕ್ಷದ ವಿದ್ಯಾರ್ಥಿ ವಿಭಾಗವಾದ AISA (All India Students’ Association) ಮೂಲಕ ಜೆಎನ್ಯು (JNU) ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿದ್ದ ಹೆಣ್ಣು ಮಗಳು. 2016ರಲ್ಲಿ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ದೇಶದ್ರೋಹದ ಆರೋಪದಡಿ ಜೈಲು ಪಾಲಾದಾಗ, ಜೆಎನ್ಯು ಕ್ಯಾಂಪಸ್ನಲ್ಲಿ ಇಡೀ ಆಂದೋಲನದ ನೇತೃತ್ವ ವಹಿಸಿದ್ದಾಕೆ. ಶೆಹ್ಲಾ ರಶೀದ್ ಜಮ್ಮು ಕಾಶ್ಮೀರದ ಶ್ರೀನಗರದ ಮುಸ್ಲಿಂ ಕುಟುಂಬದ ಹೆಣ್ಣು ಮಗಳು. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370ನ್ನು ಮೋದಿ ಸರ್ಕಾರ 2019ರ ಆಗಸ್ಟ್ನಲ್ಲಿ ರದ್ದು ಮಾಡಿದಾಗ, ಅದನ್ನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದವರು. ಈಗ ಮೋದಿಯವರ ಕಟ್ಟಾ ಅಭಿಮಾನಿ. ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರದಲ್ಲಿ ರಕ್ತಪಾತ ನಿಂತಿದೆ, ಕಲ್ಲು ತೂರಾಟ ನಿಂತಿದೆ, ಶಾಂತಿ ನೆಲೆಸಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ದೂರದೃಷ್ಟಿಯಿಂದಾಗಿ ಕಾಶ್ಮೀರದಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಿರುವ ಈಕೆ ಬಿಜೆಪಿ ಸೇರಿಲ್ಲ. ಆದರೆ ಬಿಜೆಪಿ ಪ್ರಚಾರಕಿಯಂತೆ ಕೆಲಸ ಮಾಡ್ತಿದ್ಧಾರೆ.
ಇಂತಹ ಇನ್ನೂ ಹತ್ತು ಹಲವು ಪ್ರಕರಣಗಳನ್ನು ಉದಾಹರಣೆ ಕೊಡಬಹುದು. ಹಾಗೆ ನೋಡಿದರೆ ವಿರೋಧಿಗಳು ವಿರೋಧ ಮಾಡುತ್ತಲೇ ಬಿಜೆಪಿಗೆ, ಮೋದಿಗೆ ಸಹಾಯ ಮಾಡುತ್ತಲೂ ಇದ್ಧಾರೆ. 2021ರ ಜನವರಿ 26ರ ಗಣರಾಜ್ಯೋತ್ಸವದಂದು ರೈತ ಹೋರಾಟದ ಹೆಸರಿನಲ್ಲಿ ಕೆಂಪುಕೋಟೆಗೆ ದಾಳಿ ಮಾಡಿದ್ದ ಪ್ರಕರಣದಲ್ಲಿ ಟಿಕಾಯತ್ ಅವರಷ್ಟೇ ಅಲ್ಲ, ಗುರುನಾಮ್ ಸಿಂಗ್ ಚಾರುಣಿ ಎಂಬ ಹೋರಾಟಗಾರನೂ ಇದ್ದ. ಆತ ಸಂಯುಕ್ತ ಸಂಘರ್ಷ್ ಪಾರ್ಟಿ ಎಂಬ ಪಕ್ಷ ಸ್ಥಾಪಿಸಿದ. ನಂತರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಜತೆ ಕೈ ಜೋಡಿಸಿದ. ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ಬಿಜೆಪಿ ಸೇರಿಕೊಂಡರು.
ಹಾಗೆಯೇ ಸೋನಿಯಾ ಗಾಂಧಿಯವರ ರೈಟ್ ಹ್ಯಾಂಡ್ ಎಂದೇ ಕರೆಸಿಕೊಂಡಿದ್ದ ಅಹ್ಮದ್ ಪಟೇಲ್, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಜ್ಯೋತಿರಾಧಿತ್ಯ ಸಿಂಧಿಯಾ, ಹಿಮಂತ ಬಿಸ್ವಾಸ್ ಶರ್ಮಾ, ಸುವೇಂದು ಅಧಿಕಾರಿ.. ಹೀಗೆ ದೊಡ್ಡ ಲಿಸ್ಟ್ ಕೊಡಬಹುದು. ಅಷ್ಟೆಲ್ಲ ಯಾಕೆ, ಕರ್ನಾಟಕದವರೇ ಆದ ದೇವೇಗೌಡ, ಕುಮಾರಸ್ವಾಮಿಯವರೂ ಇದ್ಧಾರೆ. ಇದೀಗ ಪ.ಬಂಗಾಳದ 20+ ಸಂಸದರು ಸೇರ್ಪಡೆಯಾಗಿದ್ಧಾರೆ.



