ಸ್ಮಶಾನಕ್ಕೆ ಹೋದ ಹೆಣ.. ಸರ್ಕಾರದವರಿಗೆ ಕೊಟ್ಟ ಹಣ ವಾಪಸ್ ಬರೋದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಗಾದೆ. ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ. ಅಲ್ವಾ.. ಆದರೆ.. ಆ ಗಾದೆಯೂ ಸುಳ್ಳಾಗಿರುವುದು ಪ.ಬಂಗಾಳದಲ್ಲಿ. ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ದುಡ್ಡು ಪಡೆದುಕೊಂಡಿದ್ದ ಟಿಎಂಸಿ ನಾಯಕರು ಈಗ ಆ ಹಣವನ್ನ ವಾಪಸ್ ಮಾಡ್ತಿದ್ದಾರೆ. ಇದು ಅಚ್ಚರಿ.. ವಿಸ್ಮಯ.. ಕುತೂಹಲ.. ಪ್ರಳಯ ಕಾಲ ಎಂದರೂ ತಪ್ಪಿಲ್ಲ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಬಾಂಗ್ಲಾ ವಲಸಿಗರು ದೇಶ ತೊರೆಯುತ್ತಿದ್ದಾರೆ. ಟಿಎಂಸಿ ಸಂಸದರ ಮೇಲೇ ಅಟ್ಯಾಕ್ ಆಗುತ್ತಿವೆ. ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿಯನ್ನೇ ಜನರೇ ಕಲ್ಲು, ಮೊಟ್ಟೆ ಹೊಡೆದು ಓಡಿಸಿದ್ದಾರೆ. ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ ವಾಪಸ್ ಕೊಡ್ತಿದ್ಧಾರೆ.
ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಸಾಕಷ್ಟು ಹಣ ವಸೂಲಿ ಮಾಡಿದ್ದರು. ಇದಕ್ಕೆ ‘ಕಟ್ ಮನಿ’ ಅಥವಾ ‘ಕಮಿಷನ್ ಹಣ’ ಅಥವಾ ‘ಸುಲಿಗೆ ಹಣ’ ಎಂದೂ ಕರೀತಾ ಇದ್ರು. ಆದರೆ ಹಾಗೆ ಹಣ ಪಡೆದಿದ್ದವರು ಈಗ ಭಯ ಬಿದ್ದಿದ್ದಾರೆ.
ಸರ್ಕಾರದ ಕಾನೂನು ಕ್ರಮ ಮತ್ತು ಜನರಿಂದ ದಾಳಿಯ ಭೀತಿ ಎರಡೂ ಕಾರಣ. ಟಿಎಂಸಿ ನಾಯಕರು ಹೀಗೆ ಲಂಚದ ಹಣ ಮರಳಿಸುತ್ತಿರುವ ಅತ್ಯರೂಪದ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಬಂಗಾಳದ ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಕೆಲ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಜತೆಗೆ ಈ ಹಿಂದೆ ಹಣಕ್ಕೆ ಗೂಂಡಾಗಿರಿ ಮಾಡಿದ್ದ ಹಲವು ಟಿಎಂಸಿ ನಾಯಕರ ಮೇಲೆ ಜನರೇ ದಾಳಿ ನಡೆಸಿದ ಹಲವು ಘಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ವಸೂಲಿ ಮಾಡಿದ ಕಮಿಷನ್ ಹಣವನ್ನು ತಾವಾಗಿಯೇ ಹಿಂತಿರುಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಂಪ್ಲೇಂಟ್ ಕೊಡಬೇಡಿ, ದೂರು ನೀಡಬೇಡಿ ಎಂದು ಜನರ ಕಾಲಿಗೆ ಬೀಳುತ್ತಿದ್ಧಾರೆ.
ದಕ್ಷಿಣ-24 ಪರಗಣ ಜಿಲ್ಲೆ ನಾಮ್ಖಾನಾದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, ‘ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ಕೊಡಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ 45 ಮಂದಿಯಿಂದ ಕಮಿಷನ್ ರೂಪದಲ್ಲಿ ತಲಾ 5000 ರು. ಸುಲಿಗೆ ಮಾಡಿದ್ದರು. ಇದೀಗ ಆ ನಾಯಕ, ತಾನು ಪೀಕಿದ್ದ ತಲಾ 5000 ರು. ಹಣವನ್ನು, ಎಲ್ಲ 45 ಫಲಾನುಭವಿಗಳಿಗೂ ಸೋಮವಾರ ಬಹಿರಂಗವಾಗಿಯೇ ವಾಪಸ್ ನೀಡಿದ್ದಾನೆ. ಇನ್ನು ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಎಂಬಲ್ಲಿ ಪಂಚಾಯತ್ ಸದಸ್ಯನೊಬ್ಬ ಶಾಲಾ ಮೈದಾನದಲ್ಲಿ ಜನರನ್ನು ಒಟ್ಟು ಸೇರಿಸಿ ಹಣ ಮರಳಿಸಿದ್ದಾನೆ. ಇನ್ನೂ ಕೆಲವು ಕಡೆ ಸುಲಿಗೆ ಹಣ ಪಡೆದಿದ್ದ ಟಿಎಂಸಿ ನಾಯಕರು ನಾಪತ್ತೆಯಾಗಿದ್ದಾರೆ. ಆದರೆ ಬಂಧನ ಮತ್ತು ಜನರ ಭಯಕ್ಕೆ ಬಿದ್ದ ಅವರ ಪೋಷಕರು ಫಲಾನುಭವಿಗೆ ಹಣ ಮರಳಿಸಿದ್ದಾರಂತೆ. ಹೀಗಾಗಿಯೇ ಗೆದ್ದಿರುವ ಬಹುತೇಕ ಶಾಸಕರು ಮಮತಾ ಬ್ಯಾನರ್ಜಿ ಅವರ ಜೊತೆ ಗುರುತಿಸಿಕೊಳ್ಳೋಕೆ ಹೆದರುತ್ತಿದ್ದಾರೆ.



