SIR. ಇದು ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ. ಮೃತಪಟ್ಟವರನ್ನು ತೆಗೆಯುವ, ಎರಡು ಕಡೆ ವೋಟ್ ಹಾಕ್ತಿರೋವ್ರನ್ನು ಒಂದು ಕಡೆ ಡಿಲೀಟ್ ಮಾಡುವ, ಅಕ್ರಮ ವಲಸಿಗರನ್ನು ತೆಗೆದುಹಾಕುವ ಪ್ರಕ್ರಿಯೆ. ಆದರೆ ಇದೇ SIR ಮೂಲಕ ಅಕ್ರಮ ವಲಸಿಗರನ್ನು ರಕ್ಷಿಸುವ, ಅವರಿಗೆ ಮತದಾರರ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ನಡೆಯುತ್ತಿದೆಯೇ.. ಅಂತಾದ್ದೊಂದು ಅನುಮಾನಕ್ಕೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ. ಅದೂ ವಿಡಿಯೋ ಸಾಕ್ಷಿ ಸಮೇತ. ಕುಮಾರಸ್ವಾಮಿ ಬಯಲಿಗೆಳೆದ ವಿಡಿಯೋವನ್ನು ರೀ-ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಉಗ್ರ ಅತ್ಯುಗ್ರ ಹೋರಾಟ ನಡೆಸಿದರು.
ರಾಮನಗರ ಟೌನ್ ನಗರಸಭೆಯ ವಾರ್ಡ್ ನಂಬರ್-23ರ ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಬಿಎಲ್ಒ (BLO) ಅಧಿಕಾರಿಗಳು ಸಾರ್ವಜನಿಕರನ್ನು ಒಟ್ಟುಗೂಡಿಸಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ಧಾರೆ. ಮನೆ-ಮನೆಗೆ ಹೋಗಿ ಅರ್ಜಿ ಹಂಚಬೇಕಾದ ಅಧಿಕಾರಿಗಳು ಕಲ್ಯಾಣ ಮಂಟಪದಲ್ಲಿ “ಎಸ್ಐಆರ್ ಜಾತ್ರೆ” ಮಾಡುತ್ತಿದ್ದಾರೆ. ಹೀಗೇಕೆ.. ಇದು ಕುಮಾರಸ್ವಾಮಿ ಪ್ರಶ್ನೆ.
ನಿಯಮಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸಬೇಕು. ಆದರೆ, ರಾಮನಗರದ ಟಿಪ್ಪುನಗರದ ಕಲ್ಯಾಣ ಮಂಟಪವೊಂದರಲ್ಲಿ ನಿಯಮ ಉಲ್ಲಂಘಿಸಿ ನೂರಾರು ಜನರನ್ನು ಒಟ್ಟಿಗೆ ಸೇರಿಸಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.
24 ವರ್ಷಗಳ ಬಳಿಕ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ವಲಸಿಗರನ್ನು, ವಿಶೇಷವಾಗಿ ಬಾಂಗ್ಲಾದೇಶದ ನಾಗರಿಕರಿಗೆ ʻಭಾರತೀಯ ಮತದಾರರ ಗುರುತಿನ ಚೀಟಿʼ ನೀಡುವ ಸಂಚು ಎನ್ನುವ ಅನುಮಾನ ಮೂಡುತ್ತಿದೆ.
ಕುಮಾರಸ್ವಾಮಿ ಇದನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದರೆ ಗುರುವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಆರೋಪಕ್ಕೆ ಸಂಬಂಧಿಸಿ ವಿಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಿಯಮದಂತೆ ಬಿಎಲ್ಒಗಳು ಮನೆ-ಮನೆಗೆ ಹೋಗಬೇಕು. ಆದರೆ, ರಾಮನಗರದಲ್ಲಿ ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಕೂರಿಸಿ ಎಸ್ಐಆರ್ ಜಾತ್ರೆ ನಡೆಸುತ್ತಿದ್ದಾರೆ. ಈ ಮುಖಾಂತರ ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ನುಸುಳುಕೋರರನ್ನು ಪೋಷಿಸಿ ಅವರಿಗೆ ಮತದಾನದ ಹಕ್ಕು ಕೊಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ದೂರಿದರು.
ರಾಮನಗರ ಸೇರಿ ರಾಜ್ಯದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಳುಮಾಡಲು ಹೊರಟಿದೆ. ಅದಕ್ಕೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವೇ ಸಾಕ್ಷಿ. ಒಂದು ಕೈಯಲ್ಲಿ ಸಂವಿಧಾನ ಹಿಡಿದು ಶೋ ಮಾಡುವ ಪಕ್ಷದ ಹೀನ ಕೆಲಸ ಇದಾಗಿದೆ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇದಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿರುವ ಎಲ್ಲಾ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಆರೋಪ ಮಾಡಿದರು. ಸುದ್ದಿಗೋಷ್ಟಿ ಮಾಡಿದರು. ಇದಕ್ಕೆ ಬಿಜೆಪಿ ನಾಯಕರೂ ದನಿ ಗೂಡಿಸಿದರು. ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದ ವಿಡಿಯೋವನ್ನು ರೀ-ಟ್ವೀಟ್, ಶೇರ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಿದರು.



