ಮಾಜಿ ಪ್ರಧಾನಿ ದೇವೇಗೌಡರ ಪಾರ್ಲಿಮೆಂಟ್ ಜರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿಯೂ ಅಭ್ಯರ್ಥಿಗಳನ್ನು ಘೋಷಿಸಿದೆ. ಆ ಪಟ್ಟಿಯಲ್ಲಿ ದೇವೇಗೌಡರ ಹೆಸರಿಲ್ಲ. ರಾಜ್ಯ ಬಿಜೆಪಿಯ ಮಾಜಿ ಉಪಾಧ್ಯಕ್ಷ ಪ್ರೊ.ಎಂ ನಾಗರಾಜ್ ಎಂಬುವವರನ್ನು ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅಲ್ಲಿಗೆ ದೇವೇಗೌಡರು ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ದೇವೇಗೌಡರು ತಮ್ಮ ಜೀವಿತ ಅವಧಿಯಲ್ಲಿ ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಸದಸ್ಯರಾಗಿದ್ದ ದೇವೇಗೌಡರು, ಅಧಿಕಾರ ಕೇಂದ್ರದಿಂದ ಹೊರ ಹೋಗುತ್ತಿದ್ದಾರೆ. ಜೂನ್ 25, ಸಂಸತ್ನಲ್ಲಿ ದೇವೇಗೌಡರ ಕೊನೆಯ ದಿನ ಎನ್ನಬಹುದು.
ಎನ್ಡಿಎ ಮೈತ್ರಿಕೂಟದ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ದೇವೇಗೌಡರಿಗೆ ಮತ್ತೊಂದು ಅವಕಾಶ ನೀಡಲು ಒಲವು ತೋರಿರಲಿಲ್ಲ. ಬದಲಾಗಿ, ಜೆಡಿಎಸ್ ಬಳಿ ಕಡಿಮೆ ಶಾಸಕರಿದ್ದುಕೊಂಡು ರಾಜ್ಯಸಭಾ ಸ್ಥಾನಕ್ಕೆ ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕೂಡ ಅಭಿಪ್ರಾಯಪಟ್ಟಿದ್ದರು. ರಾಜ್ಯಸಭೆ ಅಭ್ಯರ್ಥಿ ಗೆಲ್ಲಬೇಕು ಎಂದರೆ ಕನಿಷ್ಠ 43-44 ಮತಗಳು ಬೇಕು. ಆದರೆ : ಜೆಡಿಎಸ್ ಪಕ್ಷವು ಕೇವಲ 18 ಶಾಸಕರನ್ನು ಹೊಂದಿದ್ದು, ಸ್ವಂತ ಬಲದ ಮೇಲೆ ರಾಜ್ಯಸಭಾ ಸ್ಥಾನ ಗೆಲ್ಲಲು ಸಾಧ್ಯವಿರಲಿಲ್ಲ. ಮರು ಆಯ್ಕೆಯಾಗಲು ಅವರು ಸಂಪೂರ್ಣವಾಗಿ ಬಿಜೆಪಿಯ ಬೆಂಬಲವನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಬಿಜೆಪಿ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರಿಂದ ದೊಡ್ಡಗೌಡರಿಗೆ ಎನ್ಡಿಎ ಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯಾಗುವ ಅವಕಾಶ ಸಿಗಲಿಲ್ಲ.
ಜೂನ್ 25ಕ್ಕೆ ಎಚ್.ಡಿ. ದೇವೇಗೌಡ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಳ್ಳಲಿದೆ. ಕರ್ನಾಟಕದ ಒಟ್ಟು 4 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ 3 ಸ್ಥಾನಗಳನ್ನು ಹಾಗೂ ಬಿಜೆಪಿ 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿವೆ.
1962 ರಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ಅವರು ಬಹುತೇಕ ಸಮಯ ಯಾವುದಾದರೊಂದು ಸದನದ ಸದಸ್ಯರಾಗಿಯೇ ಮುಂದುವರಿದಿದ್ದರು. ಆದರೆ 1989 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಸೋತಿದ್ದರು. ಈ ವೇಳೆ ಲೋಕಸಭೆಯಲ್ಲೂ ಸೋತಿದ್ದರು. 1989 ರ ನವೆಂಬರ್ನಿಂದ 1991 ರ ಜೂನ್ನಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವವರೆಗಿನ ಸುಮಾರು ಒಂದೂವರೆ ವರ್ಷಗಳ ಕಾಲ ಅವರು ಶಾಸಕರೂ ಆಗಿರಲಿಲ್ಲ, ಸಂಸದರೂ ಆಗಿರಲಿಲ್ಲ. ಅದನ್ನು ಹೊರತುಪಡಿಸಿದರೆ ಈಗ ಮುಕ್ತಾಯವಾಗುತ್ತಿರುವ ರಾಜ್ಯಸಭಾ ಅವಧಿಗೆ ಮುನ್ನ 2019 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆ ಸೋಲಿನ ನಂತರ ಮೇ 2019 ರಿಂದ ಜೂನ್ 2020 ರಲ್ಲಿ ರಾಜ್ಯಸಭೆಗೆ ಮರು ಆಯ್ಕೆಯಾಗುವವರೆಗಿನ ಸುಮಾರು 1 ವರ್ಷದ ಅವಧಿಯಲ್ಲಿ ಅವರು ಯಾವುದೇ ಸದನದ ಸದಸ್ಯರಾಗಿರಲಿಲ್ಲ. ಇದೀಗ ರಾಜ್ಯಸಭಾ ಅವಧಿಯೂ ಮುಗಿಯುತ್ತಿದೆ.
ಆಂಜನೇಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆರಂಭವಾದ ರಾಜಕೀಯ ಜೀವನ ಪ್ರಧಾನಿ ಹುದ್ದೆಯವರೆಗೂ ಕೊಂಡೊಯ್ದಿತ್ತು. ಹೊಳೆನರಸೀಪುರ ಕ್ಷೇತ್ರದಿಂದ 1962 ರಿಂದ ಸತತವಾಗಿ 6 ಬಾರಿ ಹಾಗೂ 1994 ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಹೊಳೆನರಸೀಪುರ ಹಾಗೂ ಹಾಸನ ಕ್ಷೇತ್ರಗಳಿಂದ ಒಟ್ಟು 6 ಬಾರಿ ಲೋಕಸಭೆಗೆ ಮತ್ತು 2 ಬಾರಿ ರಾಜ್ಯಸಭೆಗೆ (1996 ಮತ್ತು 2020) ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಕರ್ನಾಟಕ ವಿಧಾನಪರಿಷತ್ (MLC) ಸದಸ್ಯರಾಗಿರಲಿಲ್ಲ. ಈ ಎಲ್ಲ ಇತಿಹಾಸಕ್ಕೆ ಈಗ ಫುಲ್ ಸ್ಟಾಪ್ ಇಡುವ ಸಮಯ.



