ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ರಾಜ್ಯಸಭಾ ಅವಧಿ ಇದೇ ಜೂನ್ 25ಕ್ಕೆ ಮುಗಿಯಲಿದೆ. ಆನಂತರ ದೇವೇಗೌಡ ಅವರು ಸಂಸತ್ ಅಥವಾ ವಿಧಾನಮಂಡಲ ಯಾವುದರಲ್ಲೂ ಸದಸ್ಯರಾಗಿ ಇರುವುದಿಲ್ಲ. ಕರ್ನಾಟಕದಿಂದ ದೇವೇಗೌಡರನ್ನು ಆಯ್ಕೆ ಮಾಡುವುದಕ್ಕೆ ಜೆಡಿಎಸ್ ಬಳಿ ಅಗತ್ಯ ಶಾಸಕರ ಬಲ ಇಲ್ಲ. ಮಿತ್ರ ಪಕ್ಷ ಬಿಜೆಪಿಯೂ ದೇವೇಗೌಡರನ್ನು ಪರಿಗಣಿಸಿಲ್ಲ. ಈ ನಡುವೆ ದೇವೇಗೌಡರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದೂ ಇಲ್ಲ, ಸಾಧ್ಯವಿಲ್ಲ ಎಂಬ ವರದಿಗಳು ಬರುತ್ತಿವೆ.
ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದರಿಂದ, ಹಿರಿಯ ರಾಜಕಾರಣಿಯಾದ ದೇವೇಗೌಡರನ್ನು ಸಂಸತ್ತಿನಲ್ಲಿ ಉಳಿಸಿಕೊಳ್ಳಲು ಬಿಜೆಪಿ ನಾಯಕತ್ವವು ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ ಎಂಬ ವದಂತಿ ಹರಡಿತು. ಮುಂಬರುವ ನವೆಂಬರ್ 2026 ರಲ್ಲಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ 11 ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. ಹಾಗಾಗಿ ಇವುಗಳಲ್ಲಿ ಒಂದು ಸ್ಥಾನವನ್ನು ದೇವೇಗೌಡರಿಗೆ ನೀಡಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೇಲಿಬಂದವು.
ಭಾರತದ ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ದೇಶದ ಯಾವುದೇ ರಾಜ್ಯದಿಂದಲಾದರೂ ರಾಜ್ಯಸಭೆಗೆ ಸ್ಪರ್ಧಿಸಬಹುದು. ಅವರು ಭಾರತದ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರಬೇಕು. ಅಷ್ಟೇ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವುದರಿಂದ, ಹೈಕಮಾಂಡ್ ತೀರ್ಮಾನಿಸಿದರೆ ದೇವೇಗೌಡರನ್ನು ಅಲ್ಲಿಂದ ಸುಲಭವಾಗಿ ಗೆಲ್ಲಿಸಿಕೊಂಡು ಬರಲು ಸಾಧ್ಯವಿದೆ.
ದೇವೇಗೌಡರಿಗೆ ಪ್ರಸ್ತುತ 93 ವರ್ಷ ವಯಸ್ಸಾಗಿದೆ. ವಯಸ್ಸು ಮತ್ತು ಆರೋಗ್ಯದ ಕಾರಣಗಳಿಂದಾಗಿ ಅವರೇ ದೂರ ಉಳಿಯಲು ಬಯಸಿದ್ದಾರೆ. ಇದು ಒಂದು ವಾದವಾದರೆ ಪಕ್ಕದ ರಾಜ್ಯಗಳಿಂದಲೂ ಆಫರ್ ಇತ್ತು. ಮಹಾರಾಷ್ಟ್ರದಿಂದ ಆಯ್ಕೆಯಾಗಬಹುದಿತ್ತು. ಆದರೆ ಕರ್ನಾಟಕದ ಗಡಿ ಮತ್ತು ನೀರಾವರಿ ವಿಷಯಗಳಲ್ಲಿ ಮಹಾರಾಷ್ಟ್ರದೊಂದಿದೆ ವಿವಾದಗಳಿವೆ. ಇದು ಮುಂದೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ದೇವೇಗೌಡರು ನಿರಾಕರಿಸಿದರು.
ಈ ಮಧ್ಯೆ ಸ್ವತಃ ದೇವೇಗೌಡರೇ “ನನಗೆ ರಾಜ್ಯಸಭೆಗೆ ಹೋಗುವ ಯಾವುದೇ ಆಸೆ ಇಲ್ಲ. ಮಾಧ್ಯಮಗಳು ಬೇಕಾದ ಕಥೆಗಳನ್ನು ಸೃಷ್ಟಿಸಿಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನನ್ನ ಬಾಂಧವ್ಯ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ. ಅದು ನಾನು ಸಾಯುವವರೆಗೂ ಇರುತ್ತದೆʼʼ ಎಂದು ಹೇಳಿದ್ಧಾರೆ.
ತಾಂತ್ರಿಕವಾಗಿ ಉತ್ತರ ಪ್ರದೇಶದಿಂದ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮತ್ತು ಸಾಧ್ಯತೆಗಳಿದ್ದರೂ, ಸ್ವತಃ ದೇವೇಗೌಡರೇ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಮತ್ತು ತಮಗೆ ಆಸಕ್ತಿ ಇಲ್ಲ ಎಂದು ಅಧಿಕೃತವಾಗಿ ಹೇಳಿರುವುದರಿಂದ ಈ ಸುದ್ದಿ ಕೇವಲ ರಾಜಕೀಯ ಚರ್ಚೆಯಾಗಿಯೇ ಉಳಿಯುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಇದೆ. ಆದರೆ ಸ್ವತಃ ದೇವೇಗೌಡರೇ ಈ ಸುದ್ದಿಯನ್ನು ನಿರಾಕರಿಸಿದ್ದು, ತಮಗೆ ಮತ್ತೆ ರಾಜ್ಯಸಭೆ ಪ್ರವೇಶಿಸುವ ಯಾವುದೇ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



