ರಾಮಾಯಣವನ್ನು ಮಕ್ಕಳು ನೋಡುವಂತಿಲ್ಲ ಎಂದರೆ.. ಅಚ್ಚರಿಯಾಗುವುದು ನಿಜ. ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ರಾಮಾಯಣವನ್ನು ಮಕ್ಕಳಿಂದಲೇ ಹೇಳುವ ಪರಿಪಾಠವಿದೆ. ಅಂತಹ ರಾಮಾಯಣವನ್ನು ಆಸ್ಟ್ರೇಲಿಯಲ್ಲಿ ಮಕ್ಕಳೇ ನೋಡುವಂತಿಲ್ಲ ಎಂದರೆ.. ಏನಾಗಿದೆ ಆಸ್ಟ್ರೇಲಿಯಾಗೆ ಅಂತೀರೇನೋ.. ಆದರೆ ವಾಸ್ತವ ಹೌದು. ಆಸ್ಟ್ರೇಲಿಯಾದಲ್ಲಿ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ 34 ನಿಮಿಷಗಳ ವಿಶೇಷ ಫುಟೇಜ್ಗೆ ಅಲ್ಲಿನ ಸೆನ್ಸಾರ್ ಮಂಡಳಿ ‘M’ (ಮ್ಯಾಚ್ಯೂರ್) ರೇಟಿಂಗ್ ನೀಡಿದೆ. ಭಾರತದಲ್ಲಿ U/A ಸರ್ಟಿಫಿಕೇಟ್ ಅಂತಾರಲ್ಲ.. ಹೆಚ್ಚೂ ಕಡಿಮೆ ಹಾಗೆಯೇ ಇದೆ. ಇಷ್ಟಕ್ಕೂ ಈ ಸಿನಿಮಾದಲ್ಲಿ ಮಕ್ಕಳು ನೋಡಬಾರದ ದೃಶ್ಯ, ಸಂಭಾಷಣೆಗಳಾದರೂ ಏನಿದೆ..?
ರಾಮಾಯಣದಲಿ ರಾಮ-ರಾವಣ, ಕುಂಭಕರ್ಣ, ಇಂದ್ರಜಿತ್ ನಡುವೆ ಯುದ್ಧ ನಡೆಯುವ ಸನ್ನಿವೇಶಗಳಿವೆ. ಇನ್ನೂ ಕೆಲವು ವಾರ್ ಸೀನ್ಸ್ ಇದಾವೆ. ಇದು ಆಸ್ಟ್ರೇಲಿಯಾ ಸೆನ್ಸಾರ್ ಬೋರ್ಡ್ ಪ್ರಕಾರ ಕ್ರೌರ್ಯ. ಚಿತ್ರದಲ್ಲಿರುವ ಕ್ರೂರತ್ವ ಹಾಗೂ ಯುದ್ಧದ ಹಿಂಸಾಚಾರದ (Moderate Violence) ದೃಶ್ಯಗಳ ಕಾರಣದಿಂದಾಗಿ, 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಇದನ್ನು ನೋಡದಂತೆ ಅಲ್ಲಿನ ಮಂಡಳಿ ಸಲಹೆ ನೀಡಿದೆ. ಭಾರತದಲ್ಲಿ ಚಿತ್ರದ ಟ್ರೈಲರ್ಗೆ ‘U’ (ಯುನಿವರ್ಸಲ್) ಸರ್ಟಿಫಿಕೇಟ್ ಸಿಕ್ಕಿದ್ದರೂ, ಆಸ್ಟ್ರೇಲಿಯಾದಲ್ಲಿ ಈ ‘M’ ರೇಟಿಂಗ್ ಸಿಕ್ಕಿದೆ.
ಹಾಗಾದರೆ ಆಸ್ಟ್ರೇಲಿಯದಲ್ಲಿ ಮಕ್ಕಳು ರಾಮಾಯಣವನ್ನು ನೋಡುವುದೇ ಇಲ್ವಾ..?
ರಾಮಾಯಣವು ಮಹಾಯುದ್ಧದ ಕಥೆಯಾಗಿದ್ದರಿಂದ, ಅದರಲ್ಲಿರುವ ಅಸ್ತ್ರಗಳ ಸಂಘರ್ಷ ಮತ್ತು ತೀವ್ರ ಆಕ್ಷನ್ ದೃಶ್ಯಗಳು ಅಲ್ಲಿನ ಮಂಡಳಿಗೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೂಕ್ತವಲ್ಲ ಎಂದು ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಗೆ ಅನಿಸಿದೆ. ಅದಕ್ಕೇ ಎಂ ಸರ್ಟಿಫಿಕೇಟ್ ಕೊಟ್ಟಿದೆ.
ಆಸ್ಟ್ರೇಲಿಯಾದ ಸೆನ್ಸಾರ್ ವ್ಯವಸ್ಥೆಯಲ್ಲಿ ಸಲಹಾತ್ಮಕ ರೇಟಿಂಗ್ಗಳು (Advisory Ratings)ನ್ನಷ್ಟೇ ನೀಡಲಾಗುತ್ತದೆ. G (ಎಲ್ಲರಿಗೂ), PG (ಪೋಷಕರ ಮಾರ್ಗದರ್ಶನ), ಮತ್ತು M (ಮ್ಯಾಚ್ಯೂರ್). ರಾಮಾಯಣ ಚಿತ್ರಕ್ಕೆ ಸಿಕ್ಕಿರುವುದು ಇದೇ ‘M’ ರೇಟಿಂಗ್. ಇದು ಕೇವಲ ಒಂದು ಸಲಹೆ (Not Recommended). ಅಂದರೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಹ ಪೋಷಕರೊಂದಿಗೆ ಈ ಚಿತ್ರವನ್ನು ಕಾನೂನುಬದ್ಧವಾಗಿ ಚಿತ್ರಮಂದಿರದಲ್ಲಿ ನೋಡಬಹುದು. ನಿರ್ಬಂಧ ಇಲ್ಲ.
ಅಕಸ್ಮಾತ್ ಕಾನೂನುಬದ್ಧ ನಿರ್ಬಂಧಿತ ರೇಟಿಂಗ್ (Legally Restricted) ಕೊಟ್ಟಿದ್ದರೆ ಅಂದರೆ, MA 15+ (15 ವರ್ಷದೊಳಗಿನವರಿಗೆ ಪೋಷಕರಿಲ್ಲದೆ ಪ್ರವೇಶವಿಲ್ಲ) ಮತ್ತು R 18+ (ಹಿರಿಯರಿಗೆ ಮಾತ್ರ). ಇವುಗಳನ್ನು ಮೀರಿ ಅತಿಯಾದ ಹಿಂಸೆ ಇದ್ದರೆ ಚಿತ್ರವನ್ನು ನಿಷೇಧಿಸಲಾಗುತ್ತದೆ (Refused Classification – RC) ಕೊಟ್ಟಿದ್ದರೆ ಆಗ ರಾಮಾಯಣವನ್ನು ಮಕ್ಕಳು ನೋಡುವಂತೆಯೇ ಇರಲಿಲ್ಲ. ಆಸ್ಟ್ರೇಲಿಯಾ ಸೆನ್ಸಾರ್ ಮಂಡಳಿಯು ಕೇವಲ ಭಾರತದಂತೆ ಕತ್ತರಿ (Cuts) ಹಾಕುವ ಬದಲು, ಪ್ರೇಕ್ಷಕರು ತಮಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳಲು ಇಂತಹ ರೇಟಿಂಗ್ ಮತ್ತು ಗ್ರಾಹಕ ಸಲಹೆಗಳನ್ನು (Consumer Advice) ನೀಡುತ್ತದೆ.
ರಾಮಾಯಣ ಇದೇ ವರ್ಷ ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನೂ ಟ್ರೇಲರ್ ರಿಲೀಸ್ ಆಗಿಲ್ಲ. ರಾವಣನಾಗಿ ಯಶ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಈ ವರ್ಷ ಬಿಡುಗಡೆ ಆಗುವ ಮೊದಲ ಭಾಗದಲ್ಲಿ ಅವರಿಗೆ ಹೆಚ್ಚು ಸ್ಕ್ರೀನ್ಸ್ಪೇಸ್ ಸಿಕ್ಕಿಲ್ಲ. ಕಾರಣ ಸೀತಾಪಹರಣದವರಗೆ ಮಾತ್ರ ಕಥೆ ಹೇಳಲಾಗ್ತಿದೆ. ರಾವಣನ ಹಿನ್ನೆಲೆಯನ್ನು ಕಟ್ಟಿಕೊಡುವ ಒಂದಷ್ಟು ದೃಶ್ಯಗಳು , ವಿದ್ಯುಜ್ಜಿಹ್ವನ ಜೊತೆಗಿನ ಹೋರಾಟದ ಸನ್ನಿವೇಶ ಇರುತ್ತದೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ಧಾರೆ. 2ನೇ ಭಾಗದಲ್ಲಿ ರಾವಣನಾಗಿ ಯಶ್ ಬಹಳ ತೆರೆಮೇಲೆ ಅಬ್ಬರಿಸಲಿದ್ದಾರೆ. ಎ. ಆರ್ ರಹಮಾನ್ ಹಾಗೂ ಹನ್ಸ್ ಜಿಮ್ಮರ್ ಸಂಗೀತ ನೀಡಿದ್ದಾರೆ.



