ದೂತ. ಇಂತಾದ್ದೊಂದು ಯೂಟ್ಯೂಬ್ ಚಾನೆಲ್ಲಿನಲ್ಲಿ ಧುತ್ತನೆ ಸೌಜನ್ಯ ಪ್ರಕರಣಕ್ಕೆ ಜೀವ ಬಂದುಬಿಟ್ಟಿದೆ. ಸೌಜನ್ಯ ಅವರ ರೇಪ್ ಅಂಡ್ ಮರ್ಡರ್ ಕೇಸಿನಲ್ಲಿ ಯೂಟ್ಯೂಬರ್ ಸಮೀರ್ ಎಂಡಿ ಎಂಬ ವ್ಯಕ್ತಿ ಸುದೀರ್ಘ ವಿಡಿಯೋ ಮಾಡಿದ್ದು ಸಂಚಲನ ಸೃಷ್ಟಿಸಿದೆ. ಇದ್ದಕ್ಕಿದ್ದಂತೆ ಸಮೀರ್ ವಿಡಿಯೋ ಎಷ್ಟರಮಟ್ಟಿಗೆ ವೈರಲ್ ಆಯಿತೆಂದರೆ ಕೇವಲ ಒಂದು ವಾರದಲ್ಲಿ ಕೋಟ್ಯಂತರ ಮಂದಿ ವಿಡಿಯೋ ನೋಡಿ ರೆಕಾರ್ಡ್ ಸೃಷ್ಟಿಯಾಗಿದೆ. ಆದರೆ ಅಷ್ಟೇ ವೇಗವಾಗಿ ವಿಡಿಯೋ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಕೌಂಟರ್ ಕೊಟ್ಟಿದ್ದು, ಬಳ್ಳಾರಿ ಜಿಲ್ಲೆಯ ಕೌಲ್ಬಝಾರ್ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ವಿಡಿಯೋ ನೋಡಿದಾಗ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹ ಎಂಬ ವಾದ ಕೇಳಿ ಬರುತ್ತದಾದರೂ, ಧರ್ಮಸ್ಥಳದ ವಿರುದ್ಧ ಸಂಚು ಎಂಬ ಸಂಶಯವೇ ಕಾಣುತ್ತದೆ. ಅದಕ್ಕೆ ಕಾರಣಗಳೂ ಇವೆ.
ವಿಷಯ ಏನಂದ್ರೆ, ವಿಡಿಯೋದಲ್ಲಿ ಈ ಸಮೀರ್ ಸೌಜನ್ಯ ಕೇಸಿನಲ್ಲಿ ಹೊಸ ತನಿಖೆ ಅಥವಾ ಸಂಶೋಧನೆಯನ್ನೇನೂ ಮಾಡಿಲ್ಲ. ಹಳೆಯ ಕಥೆಯನ್ನೇ ಹೇಳುತ್ತಾನೆ. ಇದುವರೆಗೆ ಪೇಪರುಗಳಲ್ಲಿ, ಟಿವಿಗಳಲ್ಲಿ ಬಂದಿರುವ ಕಥೆಯನ್ನೇ ಸ್ವಲ್ಪ ಗ್ರಾಫಿಕ್ಸ್, ಎಐ ಟೆಕ್ನಾಲಜಿ ಇಟ್ಟುಕೊಂಡು ಹೇಳ್ತಾನೆ.ಅದು 39 ನಿಮಿಷ, 08 ಸೆಕೆಂಡ್ ವಿಡಿಯೋ.
ಆದರೆ ಅಲ್ಲಿ ಸೌಜನ್ಯ ಕೇಸಿಗಿಂತ ಸಮೀರ್ ಹೆಚ್ಚು ಆಸಕ್ತಿ ತೋರಿಸುವುದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಮಂಜುನಾಥನ ವಿಷಯದಲ್ಲಿ.
ಏನ್ ಮಾಡ್ತಾನೇ ಅಂದ್ರೆ, ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ನಿಶ್ಚಲ್ ಜೈನ್ ವಿರುದ್ಧ ಸೌಜನ್ಯ ಕುಟುಂಬಸ್ಥರು ಆರೋಪ ಮಾಡಿದ್ದರು. ಪೊಲೀಸ್ ಕೇಸಿನಲ್ಲಿ ಆರೋಪಿಗಳು ಅಂತಾ ಆಗಿ, ವಿಚಾರಣೆಯೂ ಆಗಿತ್ತು. ಆದರೆ ಸೌಜನ್ಯ ಪ್ರಕರಣ ನಡೆದಾಗ ನಿಶ್ಚಲ್ ಜೈನ್ ಅಮೆರಿಕದಲ್ಲಿ ಓದುತ್ತಿದ್ದರು ಎಂಬ ವಿಷಯ ದಾಖಲೆ ಸಮೇತ ಬಹಿರಂಗವಾಗಿ ಪೊಲೀಸರು ನಿಶ್ಚಲ್ ಜೈನ್ ಅಲಿಯಾಸ್ ನಿಶ್ಚಲ್ ಧರ್ಮಸ್ಥಳ ಅವರನ್ನು ಆರೋಪ ಪಟ್ಟಿಯಿಂದ ತೆಗೆದಿದ್ದೂ ಆಯ್ತು. ಇನ್ನು ಧರ್ಮಸ್ಥಳ ಕ್ಷೇತ್ರದ ಕೆಲವರ ಬಗ್ಗೆ ಮೂಡಿದ್ದ ಆರೋಪಗಳು, ವಿಡಿಯೋ ಸಾಕ್ಷಿ ಸಮೇತ ಋಜುವಾತಾಗಿದೆ. ಆದರೆ ಈ ವಿಡಿಯೋದಲ್ಲಿ ಸಮೀರ್, ಪದೇ ಪದೇ ಕೋರ್ಟಿನಲ್ಲಿ ಸುಳ್ಳೆಂದು ಸಾಬೀತಾಗಿರುವ ಕಥೆಗಳನ್ನೇ ಮತ್ತೆ ಹೇಳ್ತಾನೆ.
ಪೊಲೀಸರು ಸೀರಿಯಸ್ ಆಗಿರುವುದು ಇದೇ ಕಾರಣಕ್ಕೆ. ಕೋರ್ಟಿನಲ್ಲಿ ತನಿಖೆಯಾಗಿ, ವಿಚಾರಣೆಯಾಗಿ ಸುಳ್ಳು ಎಂದು ಸಾಬೀತಾಗಿರುವ ಕಥೆಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳ್ತಿರೋದು ಯಾಕೆ..? ಅಲ್ಲದೆ ಧರ್ಮಸ್ಥಳದಲ್ಲಿರುವುದು ಮಂಜುನಾಥೇಶ್ವರ ಸ್ವಾಮಿ ದೇವಾಲಯ. ಇನ್ನೊಂದು ಅಣ್ಣಪ್ಪ ಸ್ವಾಮಿ ದೈವ. ಎರಡೂ ಕೂಡಾ ಹಿಂದೂಗಳದ್ದು. ಹೆಗ್ಗಡೆಯವರು ಜೈನರು. ಅವರಿಗೇನಿದೆ ಅಧಿಕಾರ ಎನ್ನುವ ಪ್ರಶ್ನೆಯೂ ದೂತ ವಿಡಿಯೋದಲ್ಲಿದೆ.
ಸೌಜನ್ಯ ಕೇಸಿನಲ್ಲಿ ಆರೋಪಿ ಸಿಕ್ಕಿಲ್ಲ. ಸಿಕ್ಕಿದ್ದ ಆರೋಪಿ ಸಾಕ್ಷ್ಯಗಳು ಪ್ರಬಲವಾಗಿಲ್ಲ. ಆತನೇ ಅಪರಾಧಿ ಎಂದು ಸಾಬೀತು ಪಡಿಸೋದ್ರಲ್ಲಿ ವಿಫಲವಾಗಿವೆ ಎಂದು ಕೋರ್ಟ್ ಹೇಳಿ, ಆರೋಪಿ ಸಂತೋಷ್ ರಾವ್ʻ ಅವರನ್ನ ಖುಲಾಸೆ ಮಾಡಿದೆ. ಪ್ರಶ್ನೆ ಮಾಡಬೇಕಿರೋದು ಪೊಲೀಸರನ್ನ, ಸರ್ಕಾರವನ್ನ. ಸೌಜನ್ಯ ಕೇಸಿಗೆ ನ್ಯಾಯ ಕೊಡಿಸಿ, ಅಪರಾಧಿಯನ್ನು ಪತ್ತೆ ಹಚ್ಚಿ ಎನ್ನಬೇಕಿರುವವರು ವಿಡಿಯೋದಲ್ಲಿ ಹೇಳೋದೇ ಬೇರೆ.
ಈ ಸಮೀರನ ಪ್ರಕಾರ ಧರ್ಮಸ್ಥಳದ ಹೆಗ್ಗಡೆ ಕುಟುಂಬದವರು, ಜೊತೆಯಲ್ಲಿರುವವರು ಅಪರಾಧಿಗಳು. ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಬೇಕು. ಸ್ವಾಮಿ ಸಮೀರ್ ಅವರೇ.. ನಿಮ್ಮ ನಿಮ್ಮ ಸುಳ್ಳು ನಂಬಿಕೆಗಳು ಕೋರ್ಟ್ ಅಲ್ಲ. ನಿಮ್ಮ ನಂಬಿಕೆಗಳೇ ತೀರ್ಪೂ ಅಲ್ಲ. ಕೋರ್ಟಿನಲ್ಲಿ ಸುಳ್ಳೆಂದು ಸಾಬೀತಾಗಿದ್ದರೂ, ಮತ್ತೆ ಮತ್ತೆ ಅದನ್ನೇ ಹಿಡಿದು ಜೀಕುತ್ತಿರುವ ಒಂದಿಷ್ಟು ಜನ, ಈ ವಿಡಿಯೋಗೆ ಉಘೇ ಉಘೇ ಎನ್ನುತ್ತಿದ್ದಾರೆ.
ಆದರೆ ಅನುಮಾನಗಳು ಎಷ್ಟಿವೆ ಗೊತ್ತಾ..? ಈಗ ರಿಲೀಸ್ ಆಗಿರೋ ಸಮೀರ್ ಎಂಬುವವನೇನೂ ದೊಡ್ಡ ಸೆಲಬ್ರಿಟಿ ಅಲ್ಲ. ಇವನು ಈ ಯೂಟ್ಯೂಬ್ ಚಾನೆಲ್ಲಿಗೆ ಮೊದಲ ವಿಡಿಯೋ ಅಪ್ ಲೋಡ್ ಮಾಡಿದ್ದು ಸರಿಯಾಗಿ ತಿಂಗಳ ಹಿಂದೆ. ಕೇವಲ 5 ತಿಂಗಳಲ್ಲಿ ಏಳೂವರೆ ಲಕ್ಷ ಸಬ್ ಸ್ಕ್ರೈಬರ್ಸ್ ಪಡೆದಿರುವ ಈ ಸಮೀರ್ ಎಂಬುವವನ ದೂತ ಯೂಟ್ಯೂಬ್ ಚಾನೆಲ್ಲು, ಕೇವಲ ಒಂದು ವಾರದಲ್ಲಿ ಒಂದೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿರುವುದರ ಬಗ್ಗೆಯೇ ಅನುಮಾನಗಳಿವೆ.
ಏಕೆಂದರೆ ಸಮೀರ್ ವಿಷಯವನ್ನು ಜನ ಮಾತನಾಡಿಕೊಳ್ತಿರೋದೇ ಈಗ. ಇವನನ್ನ ಧ್ರುವ ರಾಠಿಗೆ ಹೋಲಿಸೋವರೂ ಇದ್ಧಾರೆ. ಆದರೆ ಧ್ರುವ ರಾಠಿ, ಯೂಟ್ಯೂಬಿಗೆ ಎಂಟ್ರಿ ಕೊಟ್ಟಿದ್ದು 2016ರಲ್ಲಿ. ಆತನ ವಿಡಿಯೋಗಳನ್ನ ಅತ್ತ ಬಿಜೆಪಿಯ ದಿಗ್ಗಜರು, ಇತ್ತ ಕಾಂಗ್ರೆಸ್ಸಿನ ದೊಡ್ಡ ದೊಡ್ಡ ಲೀಡರುಗಳು ಮಾತನಾಡ್ತಾರೆ. ಆದರೆ ಈ ಸಮೀರ್ ಎಂಬ ವ್ಯಕ್ತಿಯ ಹೆಸರನ್ನ ಜನ ಕೇಳ್ತಿರೋದೇ ಈಗ.
ಟೋಟಲ್ಲಾಗಿ ಸಮೀರನ ವಿಡಿಯೋ ನೋಡಿದವರಿಗೆ ಅನ್ನಿಸೋದು ಏನಂದ್ರೆ, ಆತ ಹೇಳ್ತಿರೋದರ ಉದ್ದೇಶ ಸರಿ ಇಲ್ಲ. ಸೌಜನ್ಯ ಕೇಸಿನಲ್ಲಿ ನ್ಯಾಯ ಕೇಳೋದು ಓಕೆ. ಆದರೆ ಧರ್ಮಸ್ಥಳದ ನಂಬಿಕೆಯನೇ ಪ್ರಶ್ನೆ ಮಾಡೋದು ಯಾಕೆ..? ಅಲ್ಲದೆ ಆತನ ವಿಡಿಯೋಗೆ ಸಿಕ್ಕ ಸಬ್ ಸ್ಕ್ರೈಬರ್ಸ್ ಮತ್ತು ವ್ಯೂವ್ಸ್ ಆರ್ಗಾನಿಕ್ ಅಂತಾ ಅನ್ನಿಸ್ತಾ ಇಲ್ಲ. ನ್ಯಾಚುರಲ್ ಅಲ್ಲ. ಸಂಥಿಂಗ್ ಸಂಥಿಂಗ್ ಡೌಟ್ ಅಂತೂ ಇದೆ.



