ಕೇರಳದಲ್ಲಿ ಕಂಡು ಕೇಳರಿಯದ ದುರಂತದ ಹಿಂದೆ ಮಾರಿಯಮ್ಮನ ಶಾಪ ಅಥವಾ ಮುನಿಸು ಕಾರಣವಾಗಿದೆಯೇ.. ನೂರಾರು ಜನರನ್ನು ಬಲಿ ಪಡೆದ ಪ್ರಕರಣದ ಹಿಂದೆ ಕೇವಲ ಪ್ರಾಕೃತಿಕ ವಿಕೋಪ ಅಷ್ಟೇ ಅಲ್ಲ, ಮನುಷ್ಯನ ದುರಾಸೆ, ಅತಿಯಾದ ಲಾಭಕೋರತನದ ಜೊತೆಗೆ ದೈವದ್ರೋಹವೂ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದು ತಾಂಬೂಲ ಪ್ರಶ್ನೆಯಲ್ಲೂ ಬಯಲಾಗಿದೆ. ಇಷ್ಟಕ್ಕೂ ಮೊದಲಿಗೆ ತಾಂಬೂಲ ಪ್ರಶ್ನೆ ಎಂದರೆ ಏನು ಅನ್ನೋದನ್ನ ನೋಡೋಣ.
ತಾಂಬೂಲ ಪ್ರಶ್ನೆ ಎಂದರೆ..
ತಾಂಬೂಲ ಪ್ರಶ್ನೆಶಾಸ್ತ್ರವು ಫಲ ಜ್ಯೋತಿಷ್ಯದ ಒಂದು ಮಹತ್ವಪೂರ್ಣ ಅಂಗ. ಇದರಲ್ಲಿ ಜನ್ಮ ಪತ್ರಿಕೆಯಂಥ ಯಾವುದೇ ಪ್ರಯೋಗವಿಲ್ಲದೆಯೇ, ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಂಗಚೇಷ್ಟೆ ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ. ಪ್ರಶ್ನೆಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸುವ ವಿಧಾನಗಳೂ ಪ್ರಚಲಿತದಲ್ಲಿರುತ್ತವೆ. ಅವುಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ. ಪ್ರಶ್ನೆಕರ್ತನು ಕೊಡುವ ತಾಂಬೂಲದ (ವೀಳ್ಯದೆಲೆ) ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ.
ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತ ಕೊಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸುವ ಮೂಲಕ ಲಗ್ನಾದಿ ಹನ್ನೆರಡು ಭಾವಗಳ ಕಲ್ಪಿಸಲಾಗುತ್ತದೆ. ಎಣಿಕೆ ಮಾಡುವಾಗ ಮೊದಲನೆಯ ಎಲೆ ಲಗ್ನವಾದರೆ, ಎರಡನೆಯದು ಧನ ಭಾವ, ಮೂರನೆಯದು ಸಹಜ ಭಾವ.. ಹೀಗೆ ಹನ್ನೆರಡನೆಯ ಎಲೆಯ ವ್ಯಯ ಭಾವವಾಗುತ್ತದೆ. ಯಾವ ಭಾವದ ಸೂಚಕವಾದ ಎಲೆಯು ಬಾಡಿರುವುದೋ, ಹರಿದಿರುವುದೋ, ಛಿದ್ರವಾಗಿರುವುದೋ ಆ ಭಾವದ ಫಲಗಳು ಅನಿಷ್ಟವಾಗಿರುತ್ತವೆ. ಯಾವ ಭಾವ ಸಂಬಂಧಿ ಎಲೆಯು ವಿಶಾಲವಾಗಿದ್ದು, ನಿರ್ಮಲವಾಗಿದ್ದು ನಳನಳಿಸುವ ಕಾಂತಿಯುತವಾಗಿರುವುದೋ ಆ ಭಾವದ ಫಲವು ಶುಭ ಮತ್ತು ವೃದ್ಧಿಯಾಗುತ್ತದೆ ಎಂದು ತಿಳಿಯಬೇಕು.
ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡು ಪಟ್ಟು ಮಾಡಿ ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು. ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂದು ತಿಳಿಯಬೇಕು. ಈ ಪ್ರಕಾರ ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಬೇಕು.
ಸೂರ್ಯನು ಉದಯವಾದರೆ ದುಃಖದಾಯಕ, ಚಂದ್ರ ಉದಯವಾದರೆ ಸುಖದಾಯಕ, ಮಂಗಲ ಉದಯವಾದರೆ ಕಲಹಕಾರಕ. ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥಸಿದ್ಧಿದಾಯಕ ಮತ್ತು ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕವಾಗಿರುತ್ತದೆ. ಇದು ಸಹಜವಾಗಿ ನಡೆಯುವ ತಾಂಬೂಲ ಪ್ರಶ್ನೆ. ಪ್ರಶ್ನೆಗಳ ಆಧಾರದಲ್ಲಿ ಲೆಕ್ಕಾಚಾರವೂ ಬದಲಾಗುತ್ತದೆ. ಈಗ ಮತ್ತೆ ಕೇರಳದ ವಿಷಯಕ್ಕೆ ಬರೋಣ.
ಏನಿದು ಮಾರಿಯಮ್ಮನ ಮುನಿಸಿನ ಕಥೆ..?
ಚೋರಲ್ ಮಲೈ ಅನ್ನೋದು ಭೂಕುಸಿತ ಸಂಭವಿಸಿದ ೨ನೇ ಅತಿದೊಡ್ಡ ಗ್ರಾಮ. ಮುಂಡಕೈ ಅನ್ನೋ ಊರಿನಿಂದ ಆರಂಭವಾದ ಭೂಕುಸಿತದಲ್ಲಿ ಮುಕ್ಕಾಲು ಪಾಲು ಊರೇ ಕೊಚ್ಚಿ ಹೋಗಿದೆ. ಆ ಗ್ರಾಮಗಳ ಸರಣಿಯಲ್ಲಿ ಮುಂಡಕೈ ನಂತರ ಬರುವ ಗ್ರಾಮವೇ ಚೋರಲ್ ಮಲೈ. ಅಲ್ಲಿನ ಸ್ಥಳೀಯರ ಪ್ರಕಾರ ಇದಕ್ಕೆಲ್ಲ ಕಾರಣ ಮಾರಿಯಮ್ಮನ ಮುನಿಸು.
ಭೂ ಕುಸಿತ ದುರಂತದಲ್ಲಿ ಶಿವನ ದೇವಾಲಯ ನಾಶವಾದ ಸ್ಥಳದಲ್ಲೇ ಇದ್ದ ಮಾರಿಯಮ್ಮ ದೇವಾಲಯವನ್ನು ಕೆಡವಿ ಶಿವನ ದೇವಾಲಯ ನಿರ್ಮಾಣ ಮಾಡಿದ್ದರಂತೆ ಗ್ರಾಮಸ್ಥರು. ಇದು ಅಳಿದುಳಿದಿರುವ ಸ್ಥಳೀಯರು ಹೇಳುತ್ತಿರುವ ಮಾತು. ಮಾರಿಯಮ್ಮ ದೇವಾಲಯ ಇದ್ದ ಸ್ಥಳದಲ್ಲೇ ಎರಡು ವರ್ಷಗಳ ಹಿಂದೆ ಶಿವನ ದೇವಾಲಯ ನವೀಕರಣ ಕಾರ್ಯ ಮಾಡಿದ್ರು. ಒಂದೂವರೆಗೆ ಕೋಟಿ ರೂ. ವೆಚ್ಚದಲ್ಲಿ ಶಿವನ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಶಿವನ ದೇವಾಲಯ ನಿರ್ಮಾಣ ಮಾಡಿದ ನಂತರ ಹಲವು ಸಮಸ್ಯೆಗಳು ಉದ್ಬವಿಸಲಾರಂಭಿಸಿದವು. ಹಲವು ಸಮಸ್ಯೆಗಳು ಬರಲಾರಂಭಿಸಿದ್ದರಿಂದ ಅಷ್ಟ ಮಂಗಲ ಪ್ರಶ್ನೆ ಕೇಳಿದ್ದ ಚೋರಲ್ ಮಲೈ ಗ್ರಾಮಸ್ಥರು. ಈ ವೇಳೆ ನದಿ ತಿರುವು ಬದಲಾಗುತ್ತೆ, ದೇವಸ್ಥಾನಕ್ಕೆ ಧಕ್ಕೆಯಾಗುತ್ತೆ ಎಂಬ ಉತ್ತರ ನೀಡಿತ್ತು ದೇವರು. ಆದರೂ ದೈವದ ಉತ್ತರವನ್ನು ನಿರ್ಲಕ್ಷ್ಯ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದ ಜನರು. ಈಗ ದುರ್ಘಟನೆ ನಂತರ ತಾಂಬೂಲ ಪ್ರಶ್ನೆಗಳ ವಿಚಾರಗಳನ್ನ ನಂಬಬೇಕಿತ್ತು. ತಪ್ಪು ಮಾಡಿದೆವು ಎನ್ನುತ್ತಿರುವ ಗ್ರಾಮಸ್ಥರು. ತಾಂಬೂಲ ಪ್ರಶ್ನೆಯಲ್ಲೂ ಇದೇ ಉತ್ತರ ಬಂದಿತ್ತಂತೆ.
ಆದರೆ.. ಯಾವ ಅಷ್ಟಮಂಗಲ, ತಾಂಬೂಲ ಪ್ರಶ್ನೆಗಳೂ ದುರಂತ ತಪ್ಪಿಸಲು ಆಗಲಿಲ್ಲ ಎನ್ನುವುದೇ ದುರಂತ.



