ನೆಪೋಟಿಸಂ. ಒಂದೇ ಕುಟುಂಬದವರು ಒಬ್ಬರ ನಂತರ ಒಬ್ಬರಂತೆ ಸಾಮ್ರಾಜ್ಯ ಸ್ಥಾಪಿಸುವ ಪ್ರಕ್ರಿಯೆ. ರಾಜಕೀಯ, ಸಿನಿಮಾ, ಉದ್ಯಮ ಅಥವಾ ಇನ್ಯಾವುದೇ ಪ್ರಭಾವಿ ಕ್ಷೇತ್ರದಲ್ಲಿ ತನಗಿರುವ ಅಧಿಕಾರ, ಸ್ಥಾನಮಾನ ಮತ್ತು ಪ್ರಭಾವವನ್ನು ಬಳಸಿಕೊಂಡು, ಅರ್ಹತೆ ಇಲ್ಲದಿದ್ದರೂ ತನ್ನ ಸ್ವಂತ ಕುಟುಂಬದವರಿಗೆ, ಸಂಬಂಧಿಕರಿಗೆ ಅಥವಾ ಮಕ್ಕಳಿಗೆ ಸುಲಭವಾಗಿ ಉನ್ನತ ಅವಕಾಶಗಳನ್ನು ಅಥವಾ ಕೆಲಸಗಳನ್ನು ಕೊಡಿಸುವುದನ್ನು ‘ನೆಪೋಟಿಸಂ’ ಅಂತಾರೆ. ಡಾ.ರಾಜ್ ಅವರ ಕುಟುಂಬ ಅರ್ಹತೆ ಇಲ್ಲದಿದ್ದರೂ ಇಂತಹ ಪ್ರಯತ್ನ ಮಾಡಿದೆಯಾ..? ಮಾಡುತ್ತಿದೆಯಾ..? ಪ್ರಶ್ನೆ ಹುಟ್ಟು ಹಾಕಿರೋದು ಕಿಚ್ಚು ಸುದೀಪ್ ಅವರು ಕೇಳಿರುವ ಒಂದು ಪ್ರಶ್ನೆ. ಅಫ್ಕೋರ್ಸ್.. ಆ ಪ್ರಶ್ನೆಗೆ ಕಾರಣವಾಗಿದ್ದೂ ಕೂಡಾ ಇನ್ನೊಂದು ಪ್ರಶ್ನೆ.
ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಇದೆ. ಚಿತ್ರ ನೋಡಿದವರು ಚಿತ್ರವನ್ನು ಮೆಚ್ಚಿಕೊಂಡಿದ್ಧಾರೆ. ಪಚ್ಚ ಸಂಚಿತ್ ಸಂಜೀವ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರಿಗೆ ನೆಪೋಟಿಸಂ ಪ್ರಶ್ನೆ ಎದುರಾಗಿದೆ. ಆಗ ಗರಂ ಆಗಿರುವ ಸುದೀಪ್ ಶಿವಣ್ಣನಿಗೂ ಇದೇ ಪ್ರಶ್ನೆ ಕೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಸಂಚಿತ್ ಅವರಿಗೆ, “ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ನಡೀತಿದೆ. ಸುದೀಪ್ ಅವರ ಕುಟುಂಬದಿಂದಲೂ ಈಗ ಮತ್ತೊಬ್ಬರು ಬಂದಿದ್ದಾರೆ” ಎಂಬ ಅರ್ಥದಲ್ಲಿ ಪ್ರಶ್ನೆ ಕೇಳಿದ್ದಾರೆ. ಸ್ವಲ್ಪ ಉರಿಸುವ ರೀತಿಯಲ್ಲೇ ಇದ್ದ ಪ್ರಶ್ನೆಗೆ ಸುದೀಪ್ ಅವರೇ ಡೈರೆಕ್ಟ್ ಉತ್ತರ ಕೊಟ್ಟಿದ್ದಾರೆ.
“ಇದೇ ಪ್ರಶ್ನೆಯನ್ನು ನೀವು ಎಲ್ಲರಿಗೂ ಕೇಳ್ತೀರಾ? ನೆಪೋಟಿಸಂ ಅನ್ನೋದಾದ್ರೆ ಅದು ದೊಡ್ಮನೆಯಿಂದಲೇ ಸ್ಟಾರ್ಟ್ ಆಯ್ತಲ್ಲಾ? ನೀವು ಎಂದಾದರೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಈ ಪ್ರಶ್ನೆ ಕೇಳಿದ್ದೀರಾ? ನೆಪೋಟಿಸಂ ಅನ್ನೋದಾದ್ರೆ ರಾಜ್ಕುಮಾರ್ ಅವರ ಮಕ್ಕಳಿಗೂ ನೀವು ಇದೇ ಪ್ರಶ್ನೆ ಕೇಳಬೇಕಲ್ಲ?” ಇದು ಸುದೀಪ್ ಅವರ ಪ್ರಶ್ನೆ. ಅಷ್ಟೇ ಅಲ್ಲ ಅದಕ್ಕೆ ಉತ್ತರವನ್ನೂ ಸುದೀಪ್ ಅವರೇ ಕೊಟ್ಟಿದ್ಧಾರೆ.
ನೆಪೋಟಿಸಂ ಅನ್ನೋದು ಬಾಲಿವುಡ್ ಪದ. ಅಲ್ಲಿನ ಕಥೆಯನ್ನ ಇಲ್ಲಿ ಎಳೆದು ತರಬೇಡಿ. ಡಾ.ರಾಜ್ ಕುಮಾರ್ ಕಾಲದಿಂದಲೂ ಅಷ್ಟೇ, ಅರ್ಹತೆ, ಯೋಗ್ಯತೆ ಇದ್ದವರಷ್ಟೇ ಚಿತ್ರರಂಗದಲ್ಲಿ ಉಳಿದಿದ್ಧಾರೆ. ಚಿತ್ರರಂಗ ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇಂದು ಶಿವಣ್ಣ ಅವರ ಸ್ಫೂರ್ತಿಯಿಂದ ಚಿತ್ರರಂಗದಲ್ಲಿ ಹಲವರು ಬೆಳೀತಿದ್ದಾರೆ. ಪುನೀತ್ ರಾಜ್ಕುಮಾರ್ (ಅಪ್ಪು) ಇಂದು ನಮ್ಮ ಜೊತೆ ಇಲ್ಲದೇ ಇರಬಹುದು, ಆದರೆ ಅವರು ಅದ್ಭುತವಾದ ಪ್ರತಿಭೆ.. ಹೀಗೆಲ್ಲ ಹೇಳಿದ್ದಾರೆ ಕಿಚ್ಚ ಸುದೀಪ್.
ಅಂದಹಾಗೆ ಚಿತ್ರರಂಗದಲ್ಲಿ ಒಂದು ಕುಟುಂಬದ ಹಲವರು ಹೀರೋ, ಡೈರೆಕ್ಟರ್, ಪ್ರೊಡ್ಯೂಸರ್, ಡೈರೆಕ್ಟರ್ ಹೀಗೆ ಇರುವುದು ಹೊಸದೇನಲ್ಲ. ಎಲ್ಲರ ಕಣ್ಣಿಗೂ ಡಾ.ರಾಜ್ ಕುಟುಂಬ ಬೀಳುತ್ತೆ. ಆದರೆ.. ಅದನ್ನ ಹೊರತುಪಡಿಸಿ ನೋಡಿದರೆ ಎಷ್ಟು ಫ್ಯಾಮಿಲಿಗಳಿವೆ ಗೊತ್ತೇ..
ಡಾ.ರಾಜ್ ಕುಟುಂಬ : ಡಾ.ರಾಜ್, ಪಾರ್ವತಮ್ಮ ರಾಜ್ ಕುಮಾರ್, ವರದಪ್ಪ, ಎಸ್ ಎ ಗೋವಿಂದರಾಜ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್
ರಾಮ್ ಕುಮಾರ್ : ಇವರು ಡಾ.ರಾಜ್ ಕುಮಾರ್ ಅವರ ಅಳಿಯ. ಪೂರ್ಣಿಮಾ ಅವರನ್ನ ಮದುವೆಯಾಗಿದ್ಧಾರೆ. ಇವರ ಮಕ್ಕಳಾದ ಧನ್ಯಾ ರಾಮ್ ಕುಮಾರ್, ಧೀರನ್ ರಾಮ್ ಕುಮಾರ್
ಚಿನ್ನೇಗೌಡರ ಕುಟುಂಬ : ಎಸ್ ಎ ಚಿನ್ನೇಗೌಡ, ವಿಜಯ್ ರಾಘವೇಂದ್ರ, ಶ್ರೀಮುರಳಿ
ವೀರಾಸ್ವಾಮಿ ಕುಟುಂಬ : ವಿ ರವಿಚಂದ್ರನ್, ವಿ ಬಾಲಾಜಿ, ಮನೋರಂಜನ್ ರವಿಚಂದ್ರನ್, ವಿಕ್ರಮ್ ರವಿಚಂದ್ರನ್
ತೂಗುದೀಪ ಶ್ರೀನಿವಾಸ್ : ದರ್ಶನ್, ದಿನಕರ್, ವಿನೀಶ್
ಲೋಕೇಶ್ ಫ್ಯಾಮಿಲಿ : ಲೋಕೇಶ್, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಪೂಜಾ ಲೋಕೇಶ್
ದೇವರಾಜ್ ಕುಟುಂಬ : ‘ ದೇವರಾಜ್ ಮತ್ತು ಚಂದ್ರಕಲಾ ದೇವರಾಜ್, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್
ಸುಂದರ ರಾಜ್ ಕುಟುಂಬ : ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಮೇಘನಾ ರಾಜ್
ಅರ್ಜುನ್ ಸರ್ಜಾ ಕುಟುಂಬ : ಶಕ್ತಿಪ್ರಸಾದ್, ಅರ್ಜುನ್ ಸರ್ಜಾ, ಉಷಾ, ಚಿರಂಜೀವಿ ಸರ್ಜಾ, ಕಿಶೋರ್ ಸರ್ಜಾ, ಧ್ರುವ ಸರ್ಜಾ, ಐಶ್ವರ್ಯಾ
ಉಪೇಂದ್ರ : ಉಪೇಂದ್ರ, ಪ್ರಿಯಾಂಕಾ, ನಿರಂಜನ್ ಸುಧೀಂದ್ರ
ವಿಷ್ಣುವರ್ಧನ್ : ವಿಷ್ಣುವರ್ಧನ್, ಭಾರತಿ, ಅನಿರುದ್ಧ
ಅಂಬರೀಷ್ : ಅಂಬರೀಷ್, ಸುಮಲತಾ, ಅಭಿಷೇಕ್ ಅಂಬರೀಷ್
ಸಿಂಗ್ ಬಾಬು : ಡಿ. ಶಂಕರ್ ಸಿಂಗ್, ಪ್ರತಿಮಾ ದೇವಿ ಮೊದಲನೇ ತಲೆಮಾರು. ಎಸ್ ವಿ ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮಿ ಸಿಂಗ್, ಜೈ ಜಗದೀಶ್ 2ನೇ ಜನರೇಷನ್. ಆದಿತ್ಯ, ರಿಷಿಕಾ ಸಿಂಗ್, ವೈಭವಿ, ವೈನಿಧಿ ಮತ್ತು ವೈಶಾಖ ಸಿಸ್ಟರ್ಸ್
ದುನಿಯಾ ವಿಜಯ್ : ವಿಜಯ್, ಮಕ್ಕಳಾದ ಮೋನಿಷಾ ಮತ್ತು ರಿತನ್ಯಾ
ಲಿಸ್ಟ್ ದೊಡ್ಡದಾಗಿಯೇ ಇದೆ.



