ವಾಲ್ಮೀಕಿ ಅಭವೃದ್ಧಿ ನಿಗಮ ಹಗರಣದಲ್ಲಿ ಅರೆಸ್ಟ್ ಆಗಿ, ಜೈಲಿಗೂ ಹೋಗಿ ಬಂದಿರುವ ಮಾಜಿ ಸಚಿವ ಬಿ ನಾಗೇಂದ್ರ, ಈಗ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸುದ್ದಿಯಾಗಿದ್ದಾರೆ. ಬೆದರಿಕೆ ಎದುರಿಸುತ್ತಿರುವ ಪತ್ರಕರ್ತನ ಹೆಸರು ಮಲ್ಲಯ್ಯ ಮೋಕಾ.
ಮಲ್ಲಯ್ಯ ಮೋಕಾ ಅವರು ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದು, ಪ್ರಸ್ತುತ ಬಳ್ಳಾರಿ ಪತ್ರಕರ್ತರ ಸಂಘದ ಅಡಾಕ್ ಸಮಿತಿಯ (Ad-hoc Committee) ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆ ವಾಣಿ ಮಲ್ಲಯ್ಯ ಎಂದೇ ಫೇಮಸ್ ಆಗಿರುವ ಇವರು ತಮ್ಮ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟ ಮಾಡುತ್ತಾರೆ. ಆದರೆ ಆ ಸುದ್ದಿ ನಾಗೇಂದ್ರಗೆ ಇಷ್ಟ ಆಗುವುದಿಲ್ಲ. ನೇರವಾಗಿ ಮಲ್ಲಯ್ಯ ಮೋಕಾ ಅವರಿಗೆ ಫೋನ್ ಮಾಡಿ ಪ್ರಶ್ನೆ ಮಾಡಿದ್ಧಾರೆ.
ವಾಲ್ಮೀಕಿ ಹಗರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ ಈ ಹೊಸ ಬೆದರಿಕೆ ಆರೋಪ ಕೇಳಿಬಂದಿದ್ದರೂ, ಘಟನೆ ಯಾವ ಸಂದರ್ಭದಲ್ಲಿ ನಡೆಯಿತು, ಫೋನ್ ಮೂಲಕ ಅಥವಾ ನೇರವಾಗಿ ಬೆದರಿಕೆ ಹಾಕಲಾಗಿದೆಯೇ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆಯೇ ಎಂಬ ಅಧಿಕೃತ ವಿವರಗಳು ಇನ್ನೂ ಸಾರ್ವಜನಿಕವಾಗಿ ವರದಿಯಾಗಿಲ್ಲ.
ಹೀಗಿದ್ದರೂ ಬಿಜೆಪಿ ಘಟಕ ನಾಗೇಂದ್ರ ವಿರುದ್ಧ ಆರೋಪ ಮಾಡಿದ್ದಷ್ಟೇ ಅಲ್ಲದೆ, ಆಡಿಯೋವನ್ನೂ ಕೂಡಾ ಬಿಡುಗಡೆ ಮಾಡಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ದರ್ಪ ಮಿತಿ ಮೀರಿದ್ದು, ಪತ್ರಕರ್ತರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಇವರು ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೆಯ ವಾಲ್ಮೀಕಿ ಸಮುದಾಯದ ಹಿರಿಯ ಪತ್ರಕರ್ತರೊಬ್ಬರಿಗೆ ಕಾಂಗ್ರೆಸ್ನ ಭ್ರಷ್ಟಾಚಾರಿ ಆರೋಪಿ ಶಾಸಕ ನಾಗೇಂದ್ರ ಏಕವಚನದಲ್ಲಿ ಮಾತನಾಡಿರುವುದಲ್ಲದೆ, ಬೆದರಿಸಿ ದರ್ಪ ಮೆರೆದಿರುವುದು ಕಳವಳಕಾರಿ ಸಂಗತಿ. ಪತ್ರಕರ್ತರಿಗೂ ಸುರಕ್ಷತೆ ಇಲ್ಲದ ರಾಜ್ಯದಲ್ಲಿ ಜನಸಾಮಾನ್ಯರ ಪರಿಸ್ಥಿತಿಯೇನು ? #CongressFailsKarnataka ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದೆ.
ವಿಶೇಷ ಎಂದರೆ ನಾಗೇಂದ್ರ ಅವರು ಬೆದರಿಸಿರುವ ಪತ್ರಕರ್ತ ಮಲ್ಲಯ್ಯ ಮೋಕಾ ಕೂಡಾ ವಾಲ್ಮೀಕಿ ಸಮುದಾಯದವರೇ. ಮಲ್ಲಯ್ಯ ಅವರ ಜಾತಿ ಕೇಳಿ ಬಯ್ಯುವ ನಾಗೇಂದ್ರ, ಮುಂದೆ ನೋಡಿಕೊಳ್ಳುತ್ತೇನೆ ಎಂಬ ಅರ್ಥದ ಮಾತುಗಳನ್ನಾಡುತ್ತಾರೆ. ಆಡಿಯೋದಲ್ಲಿ ಮಲ್ಲಯ್ಯ ಮೋಕಾ ಕ್ಷಮೆ ಕೂಡಾ ಕೇಳ್ತಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಮಾಸ್ಟರ್ಮೈಂಡ್ ಬಿ. ನಾಗೇಂದ್ರ ಎಂದು ಈಗಾಗಲೇ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿವೆ. ಈ ಭ್ರಷ್ಟಾಚಾರದ ಪ್ರಕರಣದ ತನಿಖೆ ಮತ್ತು ದಾಳಿಗಳು ಚುರುಕಾಗಿರುವ ಸಂದರ್ಭದಲ್ಲೇ, ಹಗರಣದ ವರದಿಗಾರಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಮೇಲೆ ಶಾಸಕರು ಈ ರೀತಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಗರಣದ ತನಿಖೆಯು ಪ್ರಸ್ತುತ ಅಂತಿಮ ಹಂತ ತಲುಪಿದ್ದು, ಸಿಬಿಐ (CBI) ನ್ಯಾಯಾಲಯಕ್ಕೆ ಅಧಿಕೃತ ಚಾರ್ಜ್ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದೆ. ಇದರಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿ (A1) ಮತ್ತು ಮುಖ್ಯ ಸಂಚುಕೋರ ಎಂದು ಹೆಸರಿಸಲಾಗಿದೆ. ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಅವರ ಆಪ್ತ ಸಹಚರ ನೆಕ್ಕಂಟಿ ನಾಗರಾಜ್, ನಿಗಮದ ಮಾಜಿ ಎಂಡಿ ಪದ್ಮನಾಭ ಜೆ.ಜಿ, ಹೈದರಾಬಾದ್ ಉದ್ಯಮಿ ಸತ್ಯನಾರಾಯಣ ವರ್ಮಾ ಹಾಗೂ ಯೂನಿಯನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು 30 ಆರೋಪಿಗಳ ವಿರುದ್ಧ ಸಾಕ್ಷ್ಯಧಾರ ಸಮೇತ ಚಾರ್ಜ್ಶೀಟ್ ಹಾಕಲಾಗಿದೆ.
ನಿಗಮದ ಒಟ್ಟು ಹಣದಲ್ಲಿ ₹89.63 ಕೋಟಿ ರೂಪಾಯಿಗಳನ್ನು ನಕಲಿ ಚೆಕ್ಗಳು ಮತ್ತು ಆರ್ಟಿಜಿಎಸ್ (RTGS) ಮೂಲಕ ಸುಮಾರು 600 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ನಂತರ ನಗದು, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಸಚಿವ ನಾಗೇಂದ್ರ ಅವರು ಟೆಂಡರ್ ಮಂಜೂರಾತಿಗಾಗಿ ₹1.20 ಕೋಟಿ ರೂಪಾಯಿ ಲಂಚ (ಕಿಕ್ಬ್ಯಾಕ್) ಪಡೆದಿದ್ದು, ಆ ಹಣವನ್ನು ಅವರ ಕುಟುಂಬದವರ ಖಾತೆಗೆ ವರ್ಗಾಯಿಸಲಾಗಿತ್ತು ಹಾಗೂ ಇದೇ ಹಣದಲ್ಲಿ ಬೆನಾಮಿ ವಾಹನ ಖರೀದಿಸಲಾಗಿತ್ತು ಎಂದು ಸಿಬಿಐ ದಾಖಲೆ ಒದಗಿಸಿದೆ. ನಾಗೇಂದ್ರ ಅವರ ಖಾತೆಯಿಂದ ಮುಂಬೈನ ಮಹಿಳೆಯೊಬ್ಬರ ಖಾತೆಗೆ ₹2.50 ಕೋಟಿ ಹಣ ವರ್ಗಾವಣೆಯಾಗಿದೆ. ಆಕೆ ತನ್ನ ದಾಖಲೆಗಳಲ್ಲಿ ತಾನು ನಾಗೇಂದ್ರ ಅವರ ಪತ್ನಿ ಎಂದು ಉಲ್ಲೇಖಿಸಿದ್ದಾಳೆ ಎಂದು ಸಿಬಿಐ ಇತ್ತೀಚೆಗೆ ಹೈಕೋರ್ಟ್ಗೆ ತಿಳಿಸಿದೆ.



