ಮಂಡ್ಯ ಜಿಲ್ಲೆಯ ಬದರಿಕೊಪ್ಪಲು ಗ್ರಾಮ ಈಗ ಇಡೀ ರಾಜ್ಯದ ಜನರಿಗೆ ಗೊತ್ತಾಗಿದೆ. ಆ ಊರಿನಲ್ಲಿ ಎಲ್ಲಿಂದ ಎಲ್ಲಿಗೇ ಹೋದರೂ.. ಒಬ್ಬರೂ ಗಂಡಸರೂ ಕಾಣೋದಿಲ್ಲ. ವಯಸ್ಸಾಗಿರುವ ಅಜ್ಜಂದಿರು, ಬಾಲಕರಷ್ಟೇ ಇದ್ಧಾರೆ. ೧೫ ದಾಟಿದ ಹುಡುಗರೂ ಸೇರಿದಂತೆ ಎಲ್ಲ ಗಂಡು ಮಕ್ಕಳೂ ಊರು ಬಿಟ್ಟಿದ್ದಾರೆ. ಹೆಣ್ಣು ಮಕ್ಕಳೇ ಇಡೀ ಮನೆಯನ್ನು ನೋಡಿಕೊಳ್ಳುತ್ತಿದ್ಧಾರೆ. ಎಲ್ಲವೂ ಕೋಮು ಗಲಭೆಯ ಪರಿಣಾಮ. ಯಾಕಾದರೂ ಗಣೇಶನನ್ನು ಇಟ್ಟು ಹಬ್ಬ ಮಾಡಿದೆವೋ.. ಎಂದು ಪರಿತಪಿಸುವ ಸ್ಥಿತಿ ಎದುರಾಗಿದೆ. ಗಣೇಶನನ್ನು ಇಟ್ಟವರು, ಮನೆಯಲ್ಲಿ ಮಲಗಿದ್ದವರನ್ನೂ ಹುಡುಕಿಕೊಂಡು ಬಂದು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ. ಏನು ಮಾಡಲಿ ಎಂಬ ಗ್ರಾಮಸ್ಥರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಆತಂಕಕ್ಕೆ ಪರಿಹಾರ ಸಿಕ್ಕಿಲ್ಲ.
ಯಾರೂ ಹೆದರಬೇಡಿ, ನಿಮ್ಮ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಾನು ಭರವಸೆ ಕೊಡುತ್ತೇನೆ. ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುತ್ತೇನೆ. ವಕೀಲರನ್ನು ನಾನೇ ನೇಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ.
ಗಣೇಶ ವಿಸರ್ಜನೆ ಸಂದರ್ಭ ಗಲಭೆ ನಡೆದ ನಾಗಮಂಗಲದ ಬದರಿಕೊಪ್ಪಲಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಮ್ಮವರಲ್ಲಿ ಹಲವರು ಜೈಲು ಸೇರಿದ್ದಾರೆ. ಗಂಡಸರು ಊರು ಬಿಟ್ಟಿದ್ದಾರೆ. ಬಂಧನಕ್ಕೆ ಹೆದರಿ ಯುವಕರು ಊರನ್ನೇ ತೊರೆದಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವೇ ಇಲ್ಲ. ವಯಸ್ಸಾದವರನ್ನು ಆರೈಕೆ ಮಾಡುವವರಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯನ್ನು ನಾವೆಂದೂ ಎದುರಿಸಿರಲಿಲ್ಲ ಎಂದು ಸಚಿವರ ಎದುರು ಗ್ರಾಮದ ನಿವಾಸಿಗಳು ಕಣ್ಣೀರಿಟ್ಟಾಗ ಮರುಗಿದ ಕುಮಾರಸ್ವಾಮಿ ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನ ಜೈಲಿನಿಂದ ಬಿಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ಕುಟುಂಬ ನಿರ್ವಹಣೆಯ ಖರ್ಚನ್ನು ಭರಿಸುವುದೂ ಕಷ್ಟವಾಗಿದೆ. ಗಂಡಸರಿಲ್ಲದ ಕಾರಣ ಒಂದು ವಾರಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ತಂದಿಟ್ಟುಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳು ಯಾವ ತಪ್ಪನ್ನೂ ಮಾಡಿಲ್ಲ. ಅವರನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಏನು ಕಷ್ಟ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುವ ದಾರಿಯೇ ಕಾಣುತ್ತಿಲ್ಲ. ಹೇಗಾದರೂ ನಮಗೆ ಸಹಾಯ ಮಾಡಿ. ಇಂತಹ ಸ್ಥಿತಿಯಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲಲು ಯಾರೂ ಇಲ್ಲ ಎಂದು ಕುಮಾರಸ್ವಾಮಿ ಅವರ ಎದುರು ಮಹಿಳೆಯರು ಕಣ್ಣೀರು ಹಾಕಿದ್ದಾರೆ.
ಇತ್ತ ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ ಈ ಘಟನೆಯಿಂದ ಕಾಂಗ್ರೆಸ್ ಸರ್ಕಾರದ ಮನಸ್ಥಿತಿ, ಧೋರಣೆಗಳು ಹಾಗೂ ಹಿಂದು ವಿರೋಧಿ ನಿಲುವು ಸ್ಪಷ್ಟವಾಗಿ ಬಯಲಾಗಿದೆ. ಗಣೇಶೋತ್ಸವವನ್ನು ಒಂದು ಧರ್ಮದವರು ವಿರೋಧಿಸುತ್ತಾರೆ, ಆಡಚಣೆ ಮಾಡುತ್ತಾರೆ ಎಂದರೆ ಏನರ್ಥ? ಗಲಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ನ ಕೆಲವು ಕಾರ್ಯಕರ್ತರನ್ನು ಬಿಟ್ಟು ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿಜವಾದ ಆರೋಪಿಗಳನ್ನು ಬಿಟ್ಟು ಕೇರಳ ಮೂಲದವರನ್ನು ಆರೋಪಿಗಳನ್ನಾಗಿಸಲಾಗಿದೆ ಎಂದು ಆರೋಪಿಸಿದ್ಧಾರೆ.
ಹೇಗಿದೆ ಬದರಿಕೊಪ್ಪಲು ಪರಿಸ್ಥಿತಿ..?
ಗಣಪತಿ ಉತ್ಸವದ ಮೆರವಣಿಗೆಯಲ್ಲಿದ್ದ ಬದರಿ ಕೊಪ್ಪಲು ಯುವಕರು ಗ್ರಾಮ ತೊರೆದಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಯುವಕರು ಕಾಣುತ್ತಿಲ್ಲ, ವಯಸ್ಸಾದ ತಂದೆ – ತಾಯಿಗಳು ಮಾತ್ರ ಇದ್ದಾರೆ. ‘ಪೊಲೀಸರ ಭಯದಿಂದ ನಮ್ಮ ಮಕ್ಕಳು ಊರು ಬಿಟ್ಟಿದ್ದಾರೆ’ ಎಂದು ಗ್ರಾಮದ ಹಿರಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ದರಿ ಕೊಪ್ಪಲು ಮತ್ತು ಎಲ್ಲಮ್ಮನ ಗುಡಿ ದೇವಾಲಯದ ಬಳಿ ಗಣಪತಿ ಪ್ರತಿಷ್ಠಾಪಿಸಿದ್ದ ಯುವಕರನ್ನೇ ಘಟನೆಯಲ್ಲಿ ‘ಎ1’ ನಿಂದ ‘ಎ22’ರವರೆಗೆ ಆರೋಪಿಗಳು. ಇದು ಹಿಂದೂಗಳ ಆಕ್ರೋಶಕ್ಕೂ ಕಾರಣವಾಗಿದೆ. ಗಲಭೆ ಸೃಷ್ಟಿಸಿದವರನ್ನು ಬಿಟ್ಟು ಅಮಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ.. ಒಂದಂತೂ ಸತ್ಯ. ಬದರಿಕೊಪ್ಪಲು ಈಗ ವಯಸ್ಸಾದ ವೃದ್ಧರ, ಅಶಕ್ತರ ಹಾಗೂ ಹೆಣ್ಣು ಮಕ್ಕಳು ಮಾತ್ರವೇ ಇರುವ ಗ್ರಾಮವಾಗಿದೆ.



