ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದವರು. ದೇವೇಗೌಡರ ತಂದೆಯಾಗಲೀ, ಅವರ ಕುಟುಂಬದವರಾಗಲೀ ಅಧಿಕಾರದಲ್ಲಿ ಇದ್ದವರಲ್ಲ. ಅವರದ್ದು ಸೆಲ್ಫ್ ಮೇಡ್ ಹೋರಾಟ. ಹೋರಾಟವೂ ಅವರದ್ದೇ. ಬೆಳವಣಿಗೆಯೂ ಅವರದ್ದೇ. ಸಿಕ್ಕ ಅಧಿಕಾರವೂ ಅವರದ್ದೇ. ದೇವೇಗೌಡರಿಗೆ ಅಧಿಕಾರ ಎನ್ನುವುದು ಹಿಡಿಯಾಗಿ ಸಿಗುವ ಹೊತ್ತಿಗೆ ರಾಜಕೀಯದಲ್ಲಿದ್ದವರು ಹೆಚ್.ಡಿ.ರೇವಣ್ಣ. ಅದಾದ ಮೇಲೆ ಬಂದವರು ಹೆಚ್.ಡಿ.ಕುಮಾರಸ್ವಾಮಿ. ಇದೀಗ 3ನೇ ತಲೆಮಾರು ಬಂದಿದೆ. ಆದರೆ, ಅಧಿಕಾರ ಸಿಕ್ಕಂತೆ ಸಿಕ್ಕು, ಕೈ ಜಾರಿ ಹೋಗುತ್ತಿದೆ. ಕಾರಣ ಏನು ಎಂದು ನೋಡಿದರೆ.. ದೇವೇಗೌಡರೇ ಕಾಣುತ್ತಾರೆ.
ಸುಮ್ಮನೆ ನೋಡಿ, ದೇವೇಗೌಡರು ರಾಜಕೀಯಕ್ಕೆ ತಂದಂತಹ ಮೊದಲ ಮಗ ರೇವಣ್ಣ. ರೇವಣ್ಣ ಅವರು ತಂದೆ ಪ್ರಧಾನಿ, ಮುಖ್ಯಮಂತ್ರಿಯಾದರೂ ತಮ್ಮ ಹಾಸನ ಜಿಲ್ಲೆಯನ್ನು ಹೊರಗೆ ಬರಲಿಲ್ಲ. ಬರುವ ಪ್ರಯತ್ನವನ್ನೂ ಮಾಡಲಿಲ್ಲ. ಹಾಸನ ಜಿಲ್ಲೆಯ ಹೊರಗೆ ರೇವಣ್ಣ ಪರಿಚಯ ಇರುವುದು ಗೌಡರ ಮಗ ಎಂದೇ.
ಆದರೆ ಕುಮಾರಸ್ವಾಮಿ ಹಾಗಲ್ಲ. ಅವರು ರಾಜಕೀಯಕ್ಕೆ ಬರುವ ಮೊದಲು ಕಾಂಟ್ರಾಕ್ಟರ್ ಆಗಿ, ಸಿನಿಮಾ ನಿರ್ಮಾಪಕರಾಗಿ, ವಿತರಕರಾಗಿ ದುಡಿದಿದ್ದವರು. ರಾಜಕೀಯಕ್ಕೆ ಹೊರತಾದ ಬೇರೊಂದು ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದವರು. ಗೆದ್ದವರು. ಸೋತವರು. ಇದೆಲ್ಲ ಅನುಭವ ಆದ ಮೇಲೆ ರಾಜಕೀಯಕ್ಕೆ ಬಂದ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರು. ಈಗ ಕೇಂದ್ರ ಸಚಿವರೂ ಆಗಿದ್ದಾರೆ.
ಆದರೆ ಇದೇ ರೀತಿಯ ಅನುಭವ ಉಳಿದವರಿಗೆ ಇಲ್ಲ. ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ವರ್ಚಸ್ಸಿನಿಂದ ಗೆದ್ದರು. ಆದರೆ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲಿಲ್ಲ. ಭವಾನಿಯವರದ್ದೂ ಅಷ್ಟೇ, ಈಗ ಅವರ ಇಬ್ಬರೂ ಮಕ್ಕಳು ಎದುರಿಸುತ್ತಿರುವ ಪ್ರಕರಣಗಳಲ್ಲಿ ಭವಾನಿಯವರ ವ್ಯಕ್ತಿತ್ವದ ಕೊಡುಗೆಯೂ ಇದೆ.
ಏಕೆಂದರೆ ಪ್ರಜ್ವಲ್ ರೇವಣ್ಣ ಅವರಾಗಲೀ, ಸೂರಜ್ ಅವರಾಗಲೀ ಕಷ್ಟಪಟ್ಟು ಕಾರ್ಯಕರ್ತರೊಂದಿಗೆ ಬೆಳೆದು ನಾಯಕರಾದವರಲ್ಲ. ನಾಯಕರಾಗಿಯೇ ಕಾರ್ಯಕರ್ತರ ನಡುವೆ ಹೋದವರು. ಜೆಡಿಎಸ್ನಲ್ಲಿ ಅವರನ್ನು ಏಕವಚನದಲ್ಲಿ ಕರೆದು ಮಾತನಾಡಿಸುವ ಆತ್ಮೀಯತೆ ಯಾರಿಗೂ ಇಲ್ಲ. ಹಿರಿಯ ನಾಯಕರಿಗೂ ಇಲ್ಲ. ಕುಮಾರಸ್ವಾಮಿ, ರೇವಣ್ಣ ಅವರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾದ ನಾಯಕರೂ ಕೂಡಾ ಅವರನ್ನು ಸಣ್ಣ ಗೌಡ್ರೇ, ಚಿಕ್ ಗೌಡ್ರೇ ಎಂದೇ ಮಾತನಾಡಿಸುತ್ತಾರೆ.
ಇದು ನಿಖಿಲ್ ಅವರಿಗೂ ಇದೆ. ಅವರೂ ಕೂಡಾ ಹಾಗೆಯೇ. ನಿಖಿಲ್, ರಾಜಕೀಯ ಹೊರತಾದ ಸಿನಿಮಾಗೆ ಬಂದರಾದರೂ, ಅಲ್ಲಿಯೂ ಅದೇ ರೀತಿಯ ವ್ಯಕ್ತಿತ್ವ ರೂಢಿಸಿಕೊಂಡವರು. ಹೀಗಾಗಿ ಅವರಿಗೂ ಕೂಡಾ ತಮ್ಮ ಸುತ್ತ ಟೀಕೆ ಮಾಡುವವರನ್ನು ಇಟ್ಟುಕೊಳ್ಳುವುದು ಇಷ್ಟವಾಗುವುದಿಲ್ಲ. ಹೀಗಾಗಿಯೇ ಚನ್ನಪಟ್ಟಣದಲ್ಲಿ ಸೋಲಿನ ಕಾರಣ ಹೇಳಲು ಬಂದವರನ್ನು ದೂರವೇ ಇಟ್ಟ ನಿಖಿಲ್, ಎರಡು ಬಾರಿ ಸೋತಿದ್ದೇನೆ, ಈ ಬಾರಿ ಖಂಡಿತಾ ಗೆಲ್ಲಿಸುತ್ತಾರೆ ಎಂದು ಎಮೋಷನಲ್ ಆಗಿಯೇ ಉಳಿದುಹೋದರು. ಅವರ ಜೊತೆಗಿದ್ದವರು ಕೂಡಾ ಅಷ್ಟೇ.
ದೇವೇಗೌಡರಿಗೇ ಸಿಕ್ಕದಷ್ಟು, ದೇವೇಗೌಡರ ಮಗನಿಗೂ ಸಿಕ್ಕದಷ್ಟು ಒಕ್ಕಲಿಗರ ವೋಟು ದೇವೇಗೌಡರ ಮೊಮ್ಮಗನಿಗೆ ಸಿಗುತ್ತಾ.. ಎಂಬ ನ್ಯಾಚುರಲ್ ಪ್ರಶ್ನೆ ಯಾರಿಗೂ ಮೂಡಲಿಲ್ಲ. ಬಿಜೆಪಿ ಜೊತೆ ಹೋಗಿರುವ ಕಾರಣಕ್ಕೆ ದೂರವಾಗಿರುವ ಮುಸ್ಲಿಮರ ಮತಗಳ ಬಗ್ಗೆಯಾಗಲೀ, ಸಿದ್ದರಾಮಯ್ಯ ಕಾರಣದಿಂದ ಜಾರಿ ಹೋಗಿರುವ ಕುರುಬರ ಮತಗಳ ಬಗ್ಗೆಯಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ. ಚನ್ನಪಟ್ಟಣದಲ್ಲಿ ನಿಖಿಲ್ ಲೆಕ್ಕಾಚಾರವನ್ನು ಎಮೋಷನಲ್ ಆಗಿ ಮಾಡಿದರೇ ಹೊರತು, ಪ್ರಾಕ್ಟಿಕಲ್ ಆಗಿ ಮಾಡಲಿಲ್ಲ.
ಇದು ನಿಖಿಲ್ ಕಥೆಯಾದರೇ, ಹಾಸನದಲ್ಲಿ ಪ್ರಜ್ವಲ್ ಮತ್ತು ಸೂರಜ್ ಅವರದ್ದು ಬೇರೆಯದ್ದೇ ಕಥೆ. ಅವರ ಪತನದ ಹಿಂದೆ ಇರುವುದು ಅಹಂಕಾರದ ವರ್ತನೆ ಎನ್ನುತ್ತಾರೆ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು. ಅಂತರಂಗದ ಭಾವನೆ ಏನೇ ಇರಬಹುದು, ಜೆಡಿಎಸ್ ಕಾರ್ಯಕರ್ತರ ಜೊತೆ ಇವತ್ತಿಗೂ ದೇವೇಗೌಡರು ಅಹಂಕಾರದಿಂದ ಮಾತನಾಡುವುದಿಲ್ಲ. ಕುಮಾರಸ್ವಾಮಿ ಒಮ್ಮೊಮ್ಮೆ ಮಿಸ್ಟೇಕ್ ಮಾಡ್ತಾರೆ ಎನ್ನುವುದು ಬಿಟ್ಟರೆ, ಆ ವಿಷಯದಲ್ಲಿ ಬ್ಯಾಲೆನ್ಸ್ ಮಾಡುತ್ತಾರೆ. ಆದರೆ ಇದು ರೇವಣ್ಣ ಅವರಿಗೆ ಅನ್ವಯಿಸುವುದಿಲ್ಲ. ರೇವಣ್ಣ ಅವರದ್ದು ಅನುಕೂಲ ಸಿಂಧು ವ್ಯಕ್ತಿತ್ವ. ಆದರೆ ಅವರ ಮಕ್ಕಳಾದ ಪ್ರಜ್ವಲ್, ಸೂರಜ್ ಬಹುತೇಕ ಕಾರ್ಯಕರ್ತರು ದೂರವಾಗಿದ್ದೇ ಅಹಂಕಾರದಿಂದ. ಬುದ್ದಿ ಹೇಳುವವರನ್ನು ದೂರ ಇಟ್ಟ ಪರಿಣಾಮವನ್ನು ಅವರೀಗ ಅನುಭವಿಸುತ್ತಿದ್ದಾರೆ. ಆದರೆ ನಿಖಿಲ್ ಹಾಗಲ್ಲ, ಅವರಿಗೆ ಗೆಲುವು ಇನ್ನೂ ಸಿಕ್ಕಿಲ್ಲ. ಮಂಡ್ಯದಲ್ಲಿ ನಿಂತಾಗ ಇದ್ದ ವರ್ತನೆ, ರಾಮನಗರಕ್ಕೆ ನಿಲ್ಲುವ ವೇಳೆಗೆ ಸ್ವಲ್ಪ ಬದಲಾಗಿತ್ತು. ಚನ್ನಪಟ್ಟಣದಲ್ಲಿ ಇನ್ನೂ ಮಾಗಿದಂತಿತ್ತು. ಆದರೆ ಅದು ಸಾಕಾಗಲಿಲ್ಲ. ಕೇವಲ ಮಾತುಗಳಲ್ಲಿ ಬದಲಾದ ನಿಖಿಲ್, ಅಪಥ್ಯ ಮಾತುಗಳನ್ನಾಡುವವರನ್ನು ದೂರ ಇಟ್ಟರು. ಚನ್ನಪಟ್ಟಟಣದಲ್ಲಿ ತಾವು ಗೆಲ್ಲುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ಪ್ರಾಕ್ಟಿಕಲ್ ಆಗಿ ಮಾತನಾಡುವವರನ್ನು ಕೇಳಿ, ಕಾರ್ಯೋನ್ಮುಖರಾಗಬೇಕಿತ್ತು. ಅದಾಗಲಿಲ್ಲ.
ದೇವೇಗೌಡರ 3ನೇ ತಲೆಮಾರಿನ ನಾಯಕರ ಪ್ರಾಬ್ಲಮ್ಮೇ ಇದು. ಅವರು ಯಾವುದನ್ನೂ ಕೇಳುತ್ತಿಲ್ಲ. ಕೇವಲ ಹೇಳುತ್ತಿದ್ದಾರೆ. ಹೀಗಾಗಿ.. ಜನರೂ ಕೇಳುತ್ತಿಲ್ಲ. ಫಲಿತಾಂಶಗಳಲ್ಲಿ ತೋರಿಸುತ್ತಿದ್ದಾರೆ.



