ಇದು ಅಚ್ಚರಿ. ಆಘಾತ. ಅನಿರೀಕ್ಷಿತ. ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ನಟ, ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯರಾಗಿರುವ ಕಮಲ್ ಹಾಸನ್ ಸಪೋರ್ಟ್ ಮಾಡಿದ್ಧಾರೆ. ಬಿಜೆಪಿ ಅಥವಾ ಮೋದಿಯವರ ಯಾವುದೇ ನಿರ್ಧಾರವನ್ನು ಹಿಂದೆ ಮುಂದೆ ಯೋಚಿಸದೆ ಟೀಕಿಸುವವರೇ ಹೆಚ್ಚಾಗಿರುವಾಗ ಇದು ಅಚ್ಚರಿಯೆನಿಸುವುದೂ ಹೌದು. ವಿಶೇಷ ಎಂದರೆ ಕಮಲ್ ಹಾಸನ್ ಅವರು ಮೋದಿಗೆ ಜೈ ಎಂದಿರುವ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಟರಾದ ಪ್ರಕಾಶ್ ರೈ, ಕಿಶೋರ್, ಸಚಿವರಾದ ಸಂತೋಷ್ ಲಾಡ್, ಶಾಸಕರಾದ ಬಿಕೆ ಹರಿಪ್ರಸಾದ್ ಮೊದಲಾದವರೆಲ್ಲ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಯುದ್ಧದ ಕಾರ್ಮೋಡ ಕವಿದು, ತೈಲ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿರುವ ಈ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ‘ಇಂಧನ ಉಳಿತಾಯ’ ಮಂತ್ರಕ್ಕೆ ಕಮಲ್ ಹಾಸನ್ ಭರ್ಜರಿ ಬೆಂಬಲ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿರುವ ನಾಲ್ಕು ನಿಮಿಷಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
“ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಜವಾಬ್ದಾರಿಯು ಪಕ್ಷ ರಾಜಕಾರಣಕ್ಕಿಂತ ಮಿಗಿಲಾಗಿರಬೇಕು” ಎನ್ನುವ ಮೂಲಕ ಅವರು ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರುತ್ತಿರುವುದು ಕೇವಲ ಅಂಕಿ-ಅಂಶಗಳಲ್ಲ, ಅದು ನಮ್ಮ ಅಡುಗೆಮನೆಯಿಂದ ಹಿಡಿದು ರೈತನ ಹೊಲದವರೆಗೂ ಪರಿಣಾಮ ಬೀರುತ್ತದೆʼʼ ಎಂದು ಹೇಳಿರುವ ಕಮಲ್ ಹಾಸನ್, ಹಿಂದೆ ಪ್ರಧಾನಿಗಳ ಜೊತೆ ದೇಶ ನಿಂತಿದ್ದನ್ನು ನೆನಪಿಸಿಕೊಂಡಿದ್ದಾರೆ.
1962ರ ಚೀನಾ ಯುದ್ಧದ ಸಮಯದಲ್ಲಿ ಗಡಿಯಲ್ಲಿರುವ ಸೈನಿಕರಿಗಾಗಿ ಭಾರತದ ಸಾಮಾನ್ಯ ಕುಟುಂಬಗಳು ತಮ್ಮಲ್ಲಿದ್ದ ಚಿನ್ನವನ್ನು ದಾನ ಮಾಡಿದ್ದವು. 1965ರಲ್ಲಿ ಆಹಾರದ ಕೊರತೆ ಎದುರಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಒಂದು ಕರೆಗೆ ಓಗೊಟ್ಟು ಇಡೀ ದೇಶವೇ ವಾರಕ್ಕೆ ಒಂದು ಹೊತ್ತಿನ ಊಟವನ್ನು ಬಿಟ್ಟಿತ್ತು. ನಮ್ಮ ಹಿರಿಯರು ದೇಶಕ್ಕಾಗಿ ಅಷ್ಟೊಂದು ದೊಡ್ಡ ತ್ಯಾಗ ಮಾಡಿರುವಾಗ, ನಮಗೆ ಇಂದು ಇಂಧನ ಉಳಿಸುವುದು ದೊಡ್ಡ ಕೆಲಸವೇ? ಎಂದು ಪ್ರಶ್ನಿಸಿರುವ ಕಮಲ್ ಹಾಸನ್ ವಿವಿಧ ದೇಶಗಳ ಉದಾಹರಣೆಯನ್ನೂ ಕೊಟ್ಟಿದ್ದಾರೆ.
ಭಾರತ ಮಾತ್ರವಲ್ಲದೆ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯದ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ನಾವು ಇಂದು ಉಳಿಸುವ ಪ್ರತಿ ಯುನಿಟ್ ಇಂಧನವೂ ನಾಳಿನ ಬಲಿಷ್ಠ ಭಾರತಕ್ಕೆ ಅಡಿಪಾಯ ಎಂದಿದ್ಧಾರೆ.
ನಟ ಕಿಶೋರ್, ಪ್ರಕಾಶ್ ರೈ ಮೊದಲಾದ ನಟರು ಲೇವಡಿ ಮಾಡುವುದನ್ನೇ ವೃತ್ತಿ ಮಾಡಿಕೊಂಡು ವಿಶ್ಲೇಷಣೆಯನ್ನೂ ಮಾಡದೆ ಉಸಿರಾಟ ಕಡಿಮೆ ಮಾಡಿ, ಊಟವನ್ನೇ ಬಿಟ್ಟು ಬಿಡಿ ಎಂಬ ಬೇಸ್ ಲೆಸ್ ಟೀಕೆ ಮಾಡುತ್ತಿರುವಾಗ ಕಮಲ್ ಹಾಸನ್ ಅವರು ಲಾಜಿಕಲ್ ಆಗಿ ಮಾತನಾಡಿರುವುದೇ ವಿಶೇಷ.



