ರಾಜ್ಯದಲ್ಲಿ ಅಧಿಕಾರ ಹಂಚಿಕೆ, ಕುರ್ಚಿ ಬದಲಾವಣೆ ವಿಷಯ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗುತ್ತಿದೆ. 5 ರಾಜ್ಯಗಳ ಎಲೆಕ್ಷನ್ ಕೂಡಾ ಮುಗಿದಿದೆ. ಅಲ್ಲಿನ ಅಧಿಕಾರ ಯಾರಿಗೆ ಎಂದು ಹೇಳುವುದಕ್ಕೆ ಕಾಂಗ್ರೆಸ್ಸಿಗೆ ಗೆದ್ದಿದ್ದು ಒಂದೇ ರಾಜ್ಯ. ಅದನ್ನೂ ಕೂಡಾ ಸುದೀರ್ಘ ಸಮಯ ತೆಗೆದುಕೊಂಡು ನಿರ್ಧಾರ ಮಾಡಿ ನಿಟ್ಟುಸಿರು ಬಿಟ್ಟಿದೆ ಕಾಂಗ್ರೆಸ್ ಹೈಕಮಾಂಡ್. ಈ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಬಳಿ ನಿಮ್ಮ ಭೇಟಿಗೆ ಸಮಯ ಕೊಡಿ ಎಂದಿರುವುದು ಸಂಚಲನ ಮೂಡಿಸಿದೆ.
‘ನಿಮ್ಮ ಜತೆ ಮಾತನಾಡಬೇಕು ಟೈಮು ಕೊಡಿ’ ಅಂತ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾರಂತೆ. ಯಾಕೆ.. ಯಾವ ವಿಷಯ ಎನ್ನುವುದು ಗುಟ್ಟೇನಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನದಿಂದಲೂ ನಡೆಯುತ್ತಿರುವ ಹಾವು ಸಾಯದ.. ಕೋಲು ಮುರಿಯದ ಯುದ್ಧಕ್ಕೆ ಇತಿಶ್ರೀ ಹಾಡಬೇಕು ಎನ್ನುವುದು ಸಿದ್ದರಾಮಯ್ಯ ಪ್ಲಾನ್.
ಅಂದಹಾಗೆ ಸಿದ್ದರಾಮಯ್ಯ ಹೀಗೆ ಟೈಂ ಕೇಳುತ್ತಿರುವುದಕ್ಕೆ ಮೂಲ ಕಾರಣ ಕಾಂಗ್ರೆಸ್ ಕ್ಯಾಂಪಿನೊಳಗೆ ಹಬ್ಬಿರುವ ವದಂತಿಯಂತೆ. ಅದನ್ನು ಹಬ್ಬಿಸುತ್ತಿರುವುದು ಡಿಕೆ ಶಿವಕುಮಾರ್ ಎನ್ನುವುದು ಸಿದ್ದರಾಮಯ್ಯ ಟೀಂನ ಅನುಮಾನ. ಆ ವದಂತಿಗಳ ಪ್ರಕಾರ ಸಿಎಂ ಹುದ್ದೆಯಿಂದ ಕೆಳಗಿಳಿಯಲಿರುವ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಪ್ಲಾನ್ ಹೈಕಮಾಂಡ್ ಬಳಿ ಇದೆಯಂತೆ. ಸಿದ್ದು ರಾಜ್ಯಸಭೆಗೆ ಹೋದರೆ ಪ್ರಾಬ್ಲಂ ಇಲ್ಲ ಎನ್ನುವ ಸುದ್ದಿಯನ್ನು ಡಿಕೆ ಟೀಂನವರೇ ತೇಲಿ ಬಿಡುತ್ತಿದ್ಧಾರೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ದೆಹಲಿಗೆ ಶಿಫ್ಟ್ ಆಗುವ ಮಾತನ್ನು ಕೇಳುವುದಕ್ಕೂ ಸಿದ್ದು ಆಪ್ತರು ಸಿದ್ಧರಾಗಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ಬಳಿ ಮೀಟಿಂಗ್ಗೆ ಟೈಂ ಕೇಳಿದ್ಧಾರಂತೆ.
ಆದರೆ ಸಿದ್ದರಾಮಯ್ಯ ನೇರವಾಗಿ ಕೇಳಿದರೂ ರಾಹುಲ್ ಗಾಂಧಿ ಇದುವರೆಗೆ ಟೈಮು ಕೊಟ್ಟಿಲ್ಲ. ಆದರೆ ಅವರು ಟೈಮು ಕೊಟ್ಟಿಲ್ಲ ಅಂತ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹೋದಾಗ ಅಲ್ಲಿ ಸಿಗುವ ರಾಹುಲ್ ಗಾಂಧಿಯವರ ಬಳಿ ಟೈಮು ಕೊಡಿ ಅಂತ ಪುನಃ ಕೇಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ರಾಹುಲ್ ಗಾಂಧಿ ಅವರ ಬಳಿ ಸಿದ್ದರಾಮಯ್ಯ ಉತ್ತರ ಬಯಸಿರುವುದು ಒಂದೇ ಒಂದು ಪ್ರಶ್ನೆಗೆ. ‘ನಾನು ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕೋ ಬೇಡವೋ’ ಎನ್ನುವುದೇ ಆ ಪ್ರಶ್ನೆ. ರಾಹುಲ್ ಗಾಂಧಿ ಎಸ್ ಎಂದರೆ.. ನಾನು ರೆಡಿ. ಆದರೆ ಆ ಜಾಗಕ್ಕೆ ಪರಮೇಶ್ವರ್ ಬರಬೇಕು. ಇಲ್ಲದೇ ಹೋದರೆ ಮುಂದಿನ ಬೆಳವಣಿಗಗಳಿಗೆ ನಾನು ಜವಾಬ್ದಾರಿ ಅಲ್ಲ ಎನ್ನುವುದು.
ಆದರೆ ರಾಹುಲ್ ಗಾಂಧಿ ಅಧಿಕಾರ ತ್ಯಾಗದ ಮಾತನಾಡದೆ ‘ನಿಮ್ಮ ಪಾಡಿಗೆ ನೀವು ನೆಮ್ಮದಿಯಾಗಿರಿ’ ಎಂದರೆ ‘ಸಂಪುಟ ಪುನರ್ರಚನೆಗೆ ಗ್ರೀನ್ ಸಿಗ್ನಲ್ ಕೊಡಿ. ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆಗಾರಿಕೆಯಿಂದ ಸುರ್ಜೇವಾಲಾ ಅವರನ್ನು ಬಿಡುಗಡೆ ಮಾಡಿ’ ಅಂತ ಕೇಳುವುದು ಸಿದ್ದು ಪ್ಲಾನ್. ರಾಹುಲ್ ಗಾಂಧಿಯವರೂ ಇಕಟ್ಟಿಗೆ ಬಿದ್ದಿದ್ದಾರೆ. ಡಿಕೆ ಶಿವಕುಮಾರ್ ಅವರಾದರೆ ಹೇಗೋ ಸಮಾಧಾನ ಮಾಡಬಹುದು. ದ್ದರಾಮಯ್ಯ ಭಿನ್ನಮತೀಯರಾದರೆ ಅಪಾಯ ಜಾಸ್ತಿ ಎಂಬ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.



