ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಮೃತಪಟ್ಟಿದ್ಧಾರೆ. ಈ ನಟನ ವೊರಿಜಿನಲ್ ಹೆಸರು ಸಿದ್ಧಾರ್ಥ ಆದರೂ, ಸಿದ್ದು ಎಂದೇ ಫೇಮಸ್ ಆಗಿದ್ದ ಕಲಾವಿದ. ಬೀದರ್ನ ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದೆ. ಈತನ ಸಾವು ಸಹಜ ಸಾವಲ್ಲ. ಆಕಸ್ಮಿಕವೋ.. ಕೊಲೆಯೋ.. ಆತ್ಮಹತ್ಯೆಯೋ.. ಯಾವುದೂ ಗೊತ್ತಾಗಿಲ್ಲ. ಪ್ರಶ್ನೆಗಳು ಹಾಗೆಯೇ ಇವೆ. ಪ್ರಾಥಮಿಕ ತನಿಖೆಯ ಪ್ರಕಾರ ಸಾವಿಗೆ ಕಾಣುತ್ತಿರುವ ಅಂಶಗಳೇ ಬೇರೆ.
ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ ಅವರಿಗೆ 36 ವರ್ಷ. ಜೂನ್ 13 ರಂದು ಸ್ನೇಹಿತರೊಂದಿಗೆ ಮನೆಯಿಂದ ಹೋಗಿದ್ದ ಸಿದ್ದು 3 ದಿನಗಳ ಬಳಿಕ ಶವವಾಗಿ ಸಿಕ್ಕಿದ್ದಾರೆ. 3 ದಿನವಾದರೂ ಮನೆಗೆ ಬಾರದ ಸಿದ್ದಾರ್ಥ ಅವರ ಬಗ್ಗೆ ಸೋಮವಾರ ಬೆಳಗ್ಗೆಯಷ್ಟೇ ಕುಟುಂಬಸ್ಥರು ಮಿಸ್ಸಿಂಗ್ ದೂರು ದಾಖಲಿಸಿದ್ದರು. ಮೊಬೈಲ್ ಟವರ್ ಲೊಕೆಶನ್ ಆಧರಿಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಬಳಿಕ ಶವ ಪರೀಕ್ಷೆಗಾಗಿ ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನೆ ಮಾಡಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಸಿದ್ದು ಅವರಿಗೆ ಮಜಾಭಾರತ ರಿಯಾಲಿಟಿ ಶೋ ಭಾರೀ ಖ್ಯಾತಿ ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. ‘ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ಹೆಸರಾಗಿದ್ದ ಸಿದ್ದು ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗ ಇತ್ತು. ಬ್ರಹ್ಮಗಂಟು ಸೀರಿಯಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಾಸ್ಯಕ್ಕೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅದುಲ್ಲದೇ ಸೋಶಿಯಲ್ ಮೀಡಿಯಾ ಮೂಲಕ ಜನರನ್ನ ನಗಿಸುವ ಕಾಯಕ ಮಾಡುತ್ತಿದ್ದರು. ಬೀದರ್ ಜಿಲ್ಲೆಯ ಹುಮನಾಬಾದ್ ಮೂಲದವರಾದ ಇವರು, ಅಲ್ಲಿನ ಟೀಚರ್ಸ್ ಕಾಲೋನಿನಲ್ಲಿ ವಾಸ ಮಾಡುತ್ತಿದ್ದರು.
ಮೃತದೇಹವು ಬೀದರ್ ಜಿಲ್ಲೆಯ ಹುಮನಾಬಾದ್ನ ಹನುಕುಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುತ್ತದೆ. ಕರೆಂಟ್ ಹಿಡಿದು ಮೃತಪಟ್ಟಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಿದ್ದಾರ್ಥ ಸಾ*ವಿನ ಬಗ್ಗೆ ಕುಟುಂಬಸ್ಥರು ಕೊ*ಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹುಮ್ನಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅತ್ಯಂತ ಕಷ್ಟದ ಹಿನ್ನೆಲೆಯಿಂದ ಬಂದು, ತಮ್ಮ ವಿಶಿಷ್ಟ ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಮತ್ತು ಅತ್ಯುತ್ತಮ ಟೈಮಿಂಗ್ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಸಿದ್ದಾರ್ಥ್, ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಸಕ್ರಿಯರಾಗಿದ್ದರು. ಎಲ್ಲರನ್ನ ನಕ್ಕು ನಲಿಸುತ್ತಾ, ಕೊಟ್ಟ ಪಾತ್ರಗಳಿಗೆ ಕಾಮಿಡಿ ಟಚ್ ಕೊಟ್ಟು ಹಾಸ್ಯದ ಸವಿ ನೀಡುತ್ತಿದ್ದ ನಟ, ಅನಾಥ ಶವದಂತೆ ಕಾಡಿನಲ್ಲಿ ಪತ್ತೆಯಾದ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಕನ್ನಡ ಕಿರುತೆರೆಯ ಈ ಉದಯೋನ್ಮುಖ ಪ್ರತಿಭೆಯ ಸಾವು ನಿಜಕ್ಕೂ ತುಂಬಲಾರದ ನಷ್ಟ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ.



