KPSC. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (KPSC) ನೇಮಕಾತಿ ಅಕ್ರಮಗಳು ಹಾಗೂ ಅಮಾನತುಗಳಿಗೆ ದೊಡ್ಡ ಹಿಸ್ಟರಿಯೇ ಇದೆ. ಇದೇನು ಈಗ ಆಗಿರುವ ಕಥೆ ಅಲ್ಲ. 1998ರಿಂದಲೂ ಇದೆ. ಹಾಗಂತ ಅದಕ್ಕೆ ಮೊದಲು ಇರಲಿಲ್ಲ ಎಂದಲ್ಲ.. ಬಹಿರಂಗವಾಗಿದ್ದು 1998ರಲ್ಲಿ. ಹಾಗೆ ಬಹಿರಂಗವಾದ ಮೇಲೂ ನೇಮಕಾತಿಯಲ್ಲಿ ಅಕ್ರಮಗಳಾಗಿವೆ. ಬಹಿರಂಗವೂ ಆಗಿವೆ. ಆದರೆ.. ಶಿಕ್ಷೆಯ ಪ್ರಮಾಣ ನೋಡಿದರೆ.. ನಾಚಿಕೆಯಾಗುವಂತಿದೆ. ನಾಚಿಕೆಯಾಗುವುದು ನೋಡಿದವರಿಗೆ ಮಾತ್ರ.. ಅಕ್ರಮ ಮಾಡಿದವರಿಗೆ ಅಲ್ಲ. ಏಕೆಂದರೆ ಅವರು ಕಾನೂನು ಪ್ರಕಾರ ನಿರಪರಾಧಿಗಳು. ಕೋರ್ಟು ಅವರನ್ನು ವಿಚಾರಣೆ ನಡೆಸುವಾಗ ಬೈದಿತು, ಟೀಕಿಸಿತು ಎನ್ನುವುದಷ್ಟೇ ಸಮಾಧಾನದ ವಿಷಯ. ಅಂದಹಾಗೆ ಕೆಪಿಎಸ್ಸಿ ನೇಮಕಾತಿಯ ಅಕ್ರಮಗಳ ಹಿಸ್ಟರಿ ಇಲ್ಲಿದೆ.
1998, 1999 ಮತ್ತು 2004ರ ಕೆಎಎಸ್ (KAS) ಹಗರಣ
ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ನಕಲಿ ದಾಖಲೆ ಸೃಷ್ಟಿ, ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಬಳಕೆ ಹಾಗೂ ಮೌಲ್ಯಮಾಪನದಲ್ಲಿ ಭಾರಿ ಅಕ್ರಮ ನಡೆದಿತ್ತು. ಈ ಹಗರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ (CID) ತನಿಖೆ ನಡೆದು, ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಸೇರಿದಂತೆ ಹಲವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯವು ದಶಕಗಳ ಬಳಿಕ ತಾಂತ್ರಿಕ ಆಧಾರದ ಮೇಲೆ ಕೆಲವರನ್ನು ಖುಲಾಸೆಗೊಳಿಸಿತ್ತು. ನೇಮಕಾತಿಯಲ್ಲಿ ಅಕ್ರಮ ಆಗಿದ್ದು ಸತ್ಯ. ಆದರೆ ಯಾರೂ ಹೊಣೆಗಾರರಲ್ಲ.
2001ರ ‘Frontline’ ಇತಿಹಾಸ ಪತ್ರಿಕೆ ಹಗರಣ
2001ರ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಕುಳಿತಿದ್ದ ನಾಲ್ವರು ಅಭ್ಯರ್ಥಿಗಳ ‘ಇತಿಹಾಸ’ ಐಚ್ಛಿಕ ಪತ್ರಿಕೆಯ ಉತ್ತರಗಳು ಅಕ್ಷರಶಃ ಒಂದೇ ಆಗಿದ್ದವು. ತನಿಖೆಯ ವೇಳೆ ಇನ್ವಿಜಿಲೇಟರ್ ಸಹಿಯಿಲ್ಲದ ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ತಂದು ಸೇರಿಸಿರುವುದು ಪತ್ತೆಯಾಯಿತು. ಮುಖ್ಯ ಮೌಲ್ಯಮಾಪಕರು ಹಾಗೂ ಕೆಪಿಎಸ್ಸಿ ಕಾರ್ಯದರ್ಶಿ ಶಾಮೀಲಾಗಿ ಅಂಕ ಹೆಚ್ಚಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಯಿತು. ಆದರೆ ಮುಂದೇನಾಯ್ತು ಎಂಬ ಬಗ್ಗೆ ಇವತ್ತಿಗೂ ಮಾಹಿತಿ ಇಲ್ಲ.
2011ರ ಕೆಎಎಸ್ ಮಹಾ ಹಗರಣ (ಡಾ. ಮೈತ್ರಿ ವಿವಾದ)
2013ರಲ್ಲಿ ಮಾಧ್ಯಮಗಳು ನಡೆಸಿದ ಸ್ಟಿಂಗ್ ಆಪರೇಷನ್ ಮೂಲಕ “ಹಣ ಕೊಟ್ಟರೆ ಮಾತ್ರ ಹುದ್ದೆ” ಎಂಬ ಕೆಪಿಎಸ್ಸಿಯ ಕರಾಳ ಮುಖ ಬಯಲಿಗೆ ಬಂದಿತು. ಅಭ್ಯರ್ಥಿ ಡಾ. ಮೈತ್ರಿ ಅವರಿಗೆ ಕೆಪಿಎಸ್ಸಿ ಸದಸ್ಯರೊಬ್ಬರು ತಮಗೆ ತಹಶೀಲ್ದಾರ್ ಹುದ್ದೆ ಬೇಕಾದರೆ ದುಡ್ಡು ಕೊಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದರು. ನಂತರ ನಡೆದ ಸಿಐಡಿ ತನಿಖೆಯಲ್ಲಿ ಸಂದರ್ಶನದಲ್ಲಿ ತಾರತಮ್ಯ ಎಸಗಿರುವುದು, ಉತ್ತರ ಪತ್ರಿಕೆ ತಿದ್ದಿರುವುದು ದೃಢಪಟ್ಟಿತು. ಪರಿಣಾಮ: ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇಡೀ 2011ರ ಬ್ಯಾಚ್ನ 362 ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನೇ ರದ್ದುಗೊಳಿಸಿತು, ಅಷ್ಟೇ ಹೊರತು ಮತ್ತೇನೂ ಆಗಲಿಲ್ಲ.
2024-25ರ ಎಇಇ (AEE) ಒಎಂಆರ್ ಶೀಟ್ ತಿದ್ದುಪಡಿ
ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಮಹತ್ವದ ಅಕ್ರಮವನ್ನು ಬಯಲಿಗೆಳೆಯಿತು. ಪರೀಕ್ಷೆ ಮುಗಿದ ನಂತರ ಆಯ್ದ 10 ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತಿದ್ದಿ ಅಂಕ ಹೆಚ್ಚಿಸಿರುವುದು ತನಿಖಾ ಸಮಿತಿಯ 500 ಪುಟಗಳ ವರದಿಯಲ್ಲಿ ಸಾಬೀತಾಯಿತು. ಮುಂದೇನಾಯ್ತು.. ಮಾಹಿತಿ ಇಲ್ಲ.
2026ರ ಪಶುವೈದ್ಯಾಧಿಕಾರಿ ಹಾಗೂ ಸ್ವಜನಪಕ್ಷಪಾತ ಹಗರಣ
ಇದು ಈಗಿನದ್ದು. ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಇಬ್ಬರು ಪುತ್ರಿಯರ ನೇಮಕಾತಿಗಾಗಿ ₹40,000 ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿ ಒಬಿಸಿ ಮೀಸಲಾತಿ ಪಡೆದ ಆರೋಪ ಮತ್ತು 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ತಲಾ ₹80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕ್ಲಿಪ್ಗಳು ಮತ್ತು ಒಎಂಆರ್ ತಿದ್ದುಪಡಿ ಆರೋಪ. ರಾಜ್ಯಪಾಲರು ಕೆಪಿಎಸ್ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿದ್ದು, ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಂಪೂರ್ಣವಾಗಿ ಮುಂದೇನಾಗಬಹುದು..?
ಐದೋ ಹತ್ತೋ ವರ್ಷಗಳ ವಿಚಾರಣೆ ನಡೆಯುತ್ತದೆ. ಕೊನೆಗೆ ಶಿವಶಂಕರಪ್ಪ ವಿರುದ್ಧ ಸಾಕ್ಷಿಗಳಿಲ್ಲ ಎಂದೋ.. ನೇಮಕವಾಗಿರುವವರು ಇಷ್ಟು ವರ್ಷ ಈಗಾಗಲೇ ಸೇವೆ ಸಲ್ಲಿಸಿದ್ದಾರೆ ಎಂದೋ.. ಏನೋ ಒಂದು ಆಗಿ ಖುಲಾಸೆಯಾಗುತ್ತಾರೆ. ಶಿಕ್ಷೆಯಾಗುವುದಿಲ್ಲ ಎನ್ನುವುದಂತೂ ಸತ್ಯ.


