ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮುಖಾಮುಖಿಗೆ ಕ್ಷಣಗಣನೆ ಶುರುವಾಗಿದೆ. ಭಾರತೀಯರ ಹ್ಯಾಪಿ ಮತ್ತು ಬಿಪಿ ಎರಡೂ ಜಾಸ್ತಿಯಾಗಿದೆ. ಅದಕ್ಕೆ ಕಾರಣ ಕಳೆದ ವರ್ಷದ ವಿಶ್ವಕಪ್ನಲ್ಲಿ ಮಿಸ್ ಆಗಿದ್ದ ಸೆಮಿಫೈನಲ್ ಎಂಟ್ರಿ. ಈ ಬಾರಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಜಿಂಬಾಬ್ವೆ ವಿರುದ್ಧದ ಮ್ಯಾಚ್ ಬಿಟ್ಟರೆ ಉಳಿದ ಎಲ್ಲ ಮ್ಯಾಚುಗಳೂ ರೋಚಕ ಹೋರಾಟದಲ್ಲಿ ಗೆದ್ದ ಪಂದ್ಯಗಳೇ. ವಿರಾಟ್-ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ರಾಹುಲ್ 2 ಹಾಫ್ ಸೆಂಚುರಿ ಹೊಡೆದಿದ್ದರೂ ಮೊದಲ ಓವರ್ ಮೇಡನ್ ಕೊಡುತ್ತಿರುವುದು, ಡಾಟ್ ಬಾಲ್ ಹೆಚ್ಚಾಗುತ್ತಿರುವ ಟೆನ್ಷನ್ ಒಂದು ಕಡೆ. ಒಂದು ಅರ್ಧ ಶತಕ ಬಾರಿಸಿದ್ದರೂ ಲಯಕ್ಕೆ ಬಾರದ ರೋಹಿತ್ ಶರ್ಮಾ ಮತ್ತೊಂದು ಕಡೆ. ಭರವಸೆ ಹುಟ್ಟಿಸಿರುವುದು ಸೂರ್ಯ-ಕೊಹ್ಲಿ ಅಬ್ಬರ. ಬೌಲಿಂಗ್ನಲ್ಲಿ ಅರ್ಶ್ದೀಪ್, ಭುವನೇಶ್ವರ್, ಶಮಿ, ಹಾರ್ದಿಕ್, ಅಶ್ವಿನ್ ಅತ್ತ ಅದ್ಭುತವೂ ಅಲ್ಲ, ಇತ್ತ ತೆಗೆದುಹಾಕುವಂತೆಯೂ ಇಲ್ಲ ಎಂಬ ರೀತಿ ಬೌಲಿಂಗ್ ಮಾಡುತ್ತಿದ್ದಾರೆ.
ಇದರ ನಡುವೆ ಇನ್ನೊಂದು ಖುಷಿ ವಿಚಾರ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಂ ಮತ್ತು ನ್ಯೂಜಿಲ್ಯಾಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಲಯಕ್ಕೆ ಬಂದಿರುವುದು. ಅದೇ ರೀತಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಡಾ ಹಿಟ್ ಮ್ಯಾನ್ ಬಿರುದು ಉಳಿಸಿಕೊಂಡರೆ ಭಾರತಕ್ಕೆ ಟೆನ್ಷನ್ ಫ್ರೀ. ದಿನೇಶ್ ಕಾರ್ತಿಕ್ ಆಡುತ್ತಾರಾ? ರಿಷಬ್ ಪಂತ್ ಆಡುತ್ತಾರಾ? ಎಂಬ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲವಿದೆ. ಕೋಚ್ ರಾಹುಲ್ ದ್ರಾವಿಡ್ಗೆ ಕನ್ಫ್ಯೂಸ್ ಇದ್ದಂತಿಲ್ಲ. ಈ ಕ್ಷಣದವರೆಗೂ ಇವರಿಬ್ಬರಲ್ಲಿ ಯಾರು ಅನ್ನೋ ಬಗ್ಗೆ ಖಾತರಿಯಿಲ್ಲ. ಆದರೂ.. ಭಾರತಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಅದು ಅಂಪೈರ್ ಕಡೆಯಿಂದ.
ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ಗೆ ಅಂಪೈರ್ ಆಗಿರುವುದು ಕುಮಾರ ಧರ್ಮಸೇನಾ ಮತ್ತು ಪೌಲ್ ರಿಫೆಲ್. ಕ್ರಿಸ್ ಗ್ಯಾಫನೆ ಮತ್ತು ರಾಡ್ ಟಕ್ಕರ್ ಥರ್ಡ್ ಅಂಪೈರ್ ಆಗಿ ಆಡುತ್ತಿದ್ದಾರೆ. ಇದರಲ್ಲಿ ಫ್ಯಾನ್ಸ್ ಖುಷಿ ಪಡೋಕೆ ಕಾರಣವಿದೆ. ಕೆಟಲ್ ಬ್ರೋ ಅಂಪೈರ್ ಈ ಪಂದ್ಯಕ್ಕೆ ಅಂಪೈರ್ ಆಗಿಲ್ಲದೇ ಇರುವುದು. ಆತನನ್ನು ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ ಅಪಶಕುನದ ಅಂಪೈರ್ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣವೂ ಇದೆ.
ಭಾರತ 2014ರಲ್ಲಿ 20-20 ವಿಶ್ವಕಪ್ ಫೈನಲ್ ತಲುಪಿತ್ತು. ಆ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ವಿರಾಟ್ ಕೊಹ್ಲಿ 77 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 29 ರನ್ ಹೊಡೆದಿದ್ದರು. ಭಾರತದ 130 ರನ್ ಟಾರ್ಗೆಟ್ನ್ನು ಶ್ರೀಲಂಕಾ ಇನ್ನೂ 13 ಎಸೆತ ಇರುವಂತೆಯೇ ಗೆದ್ದಿತ್ತು. ಆಗ ಅಂಪೈರ್ ಆಗಿದ್ದವರು ಕೆಟಲ್ ಬ್ರೋ.
2015 ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ. ಆಸ್ಟ್ರೇಲಿಯಾದ 328 ರನ್ಗೆ ಉತ್ತರವಾಗಿ ಭಾರತ 233 ರನ್ಗೆ ಆಲೌಟ್ ಆಗಿತ್ತು. ಆಡಿದ್ದುದು ಧೋನಿ ಮಾತ್ರ. ಆಗ ಅಂಪೈರ್ ಆಗಿದ್ದವರೂ ಕೂಡಾ ಕೆಟಲ್ ಬ್ರೋ.
2016ರ 20-20 ವಿಶ್ವಕಪ್ನಲ್ಲೂ ಅಷ್ಟೇ. ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯಾ ರೋಹಿತ್, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ನಿಂದ 192 ರನ್ ಗಳಿಸಿತ್ತು. ಆದರೆ ವೆಸ್ಟ್ ಇಂಡೀಸ್ ಆ ಮೊತ್ತವನ್ನೂ ಚೇಸ್ ಮಾಡಿ ಗೆದ್ದಿತ್ತು. ಆ ಮ್ಯಾಚಿನಲ್ಲೂ ಅಂಪೈರ್ ಆಗಿದ್ದವರು ಕೆಟಲ್ ಬ್ರೋ.

2017ರ ಏಕದಿನ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಎದುರಾಳಿಯಾಗಿದ್ದುದು ಪಾಕಿಸ್ತಾನ. ಪಾಕಿಸ್ತಾನ ಭರ್ಜರಿಯಾಗಿ 338 ರನ್ ಗಳಿಸಿದ್ದರೆ, ಭಾರತ ಕೇವಲ 158 ರನ್ನಿಗೆ ಆಲೌಟ್ ಆಗಿತ್ತು. ಆಡಿದ್ದವರು ಹಾರ್ದಿಕ್ ಪಾಂಡ್ಯ ಮಾತ್ರ. ಒನ್ಸ್ ಎಗೇನ್ ಆ ಪಂದ್ಯಕ್ಕೂ ಅಂಪೈರ್ ಆಗಿದ್ದವರು ಕೆಟಲ್ ಬ್ರೋ.
ಅದಾದ ಮೇಲೆ ಭಾರತ ಸೆಮಿಫೈನಲ್ ತಲುಪಿದ್ದು 2019ರ ಏಕದಿನ ವಿಶ್ವಕಪ್ನಲ್ಲಿ. ಆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರೋಹಿತ್ ಶರ್ಮಾ 1 ರನ್ನಿಗೆ ಔಟ್ ಆದರು. ಎದುರಿಗೆ 239 ರನ್ನುಗಳ ಸ್ಕೋರ್ ಇತ್ತು. ದುರದೃಷ್ಟವಶಾತ್ ಮಳೆ ಬಂತು ಮಾರನೇ ದಿನ ಮ್ಯಾಚ್ ನಡೆದಾಗ ಭಾರತದ ಬ್ಯಾಟ್ಸ್ಮನ್ಗಳು ತೊಪತೊಪನೆ ಬಿದ್ದರು. ಕಡೆಗೆ ಧೋನಿ, ರವೀಂದ್ರ ಜಡೇಜಾ ಅರ್ಧ ಶತಕದ ನಡುವೆಯೂ ಭಾರತ 18 ರನ್ನಿಂದ ಸೋತಿತ್ತು. ಅಪಶಕುನದ ಅಂಪೈರ್ ಎಂದೇ ಕರೆಸಿಕೊಳ್ಳುತ್ತಿರೋ ಕೆಟಲ್ ಬ್ರೋ ಆ ಪಂದ್ಯಕ್ಕೂ ಅಂಪೈರ್.
ಈಗ ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯಬೇಕು. ಈ ಪಂದ್ಯಕ್ಕೆ ಕೆಟಲ್ ಇಲ್ಲ. ಹೀಗಾಗಿ ಭಾರತಕ್ಕೆ ಅಪಶಕುನವೂ ಇಲ್ಲ. ಹೀಗಾಗಿ ಪಂದ್ಯ ಗೆದ್ದೇ ಗೆಲ್ಲಲಿದೆ ಎಂಬುದು ಟೀಂ ಇಂಡಿಯಾ ಫ್ಯಾನ್ಸ್ ನಿರೀಕ್ಷೆ.



