ವರುಣಾ. ಇದ್ದಕ್ಕಿದ್ದಂತೆ ಸಿದ್ದರಾಮಯ್ಯನವರ ಡಾರ್ಲಿಂಗ್ ಕ್ಷೇತ್ರವಾಗಿ ಹೋಗಿದೆ. ಅಫ್ಕೋರ್ಸ್, ಇದು ಅವರದ್ದೇ ಕ್ಷೇತ್ರ. ಈ ಕ್ಷೇತ್ರದಿಂದ ಗೆದ್ದಾಗಲೇ ಸಿದ್ದು ಸಿಎಂ ಆಗಿದ್ದುದು. ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳನ್ನು ಸಿದ್ದರಾಮಯ್ಯ ಮರೆಯುವ ಹಾಗೇ ಇಲ್ಲ. ಚಾಮುಂಡೇಶ್ವರಿ, ಸಿದ್ದರಾಮಯ್ಯಗೆ ಪುನರ್ಜನ್ಮ ಕೊಟ್ಟಿದ್ದ ಕ್ಷೇತ್ರವೇ ಆದರೂ, ಕಳೆದ ಚುನಾವಣೆಯಲ್ಲಿ ಅದೇ ಚಾಮುಂಡೇಶ್ವರಿ ಸಿದ್ದುರನ್ನು ಸೋಲಿಸಿ ಕಳಿಸಿತ್ತು. ಕಳೆದ ಬಾರಿ ಸೋಲಿನ ವಾಸನೆ ಸಿಕ್ಕು ಎರಡು ಕಡೆ ಚುನಾವಣೆಗೆ ನಿಲ್ಲದೇ ಹೋಗಿದ್ದರೆ ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕರಾಗುವುದಿರಲಿ, ಶಾಸಕರೂ ಆಗೋಕೆ ಆಗುತ್ತಿರಲಿಲ್ಲ ಅನ್ನೋದು ವಾಸ್ತವ. ಹಾಗೆಂದು ಬಾದಾಮಿ ಕೂಡಾ ಅವರಿಗೆ ಸೇಫಲ್ಲ. ಕಳೆದ ಬಾರಿ ಗೆದ್ದಿದ್ದಾರಾದರೂ ಗೆಲುವಿನ ಅಂತರ ಸಾವಿರದ ಚಿಲ್ಲರೆ. ತುಸು ಯಾಮಾರಿದ್ದರೆ ಅಲ್ಲಿಯೂ ಸೋಲುವ ಎಲ್ಲ ಲಕ್ಷಣಗಳೂ ಇದ್ದವು. ಈಗ ಮತ್ತೆ ವರುಣಾ ಫಿಕ್ಸ್ ಎಂಬ ಮಾತು ಕೇಳಿ ಬರುತ್ತಿದೆ.
ಬೇರೆ ಕ್ಷೇತ್ರಗಳನ್ನು ಕೈಬಿಟ್ಟಿದ್ದೇಕೆ?
ಕೋಲಾರ : ಕೋಲಾರದಲ್ಲಿ ರೌಂಡ್ಸ್ ಹೊಡೆದರಾದರೂ ಸಿದ್ದು ರಿಟರ್ನ್ ಆದ ಮೇಲೆ ನಡೆದ ಬೆಳವಣಿಗೆಗಳು ಸ್ವತಃ ಸಿದ್ದುಗೇ ಶಾಕ್ ಕೊಟ್ಟಿರುವುದು ದಿಟ. ಮುನಿಯಪ್ಪ ಬಣ, ರಮೇಶ್ ಕುಮಾರ್ ಬಣದ ಗುದ್ದಾಟದಲ್ಲಿ ಸೋಲಿನ ವಾಸನೆ ಹೊಡೆದಂತಿದೆ. ಅಲ್ಲದೆ, ಮುನಿಯಪ್ಪ-ಸಿದ್ದುರಾಮಯ್ಯ ಸಂಬಂಧವ ಅಷ್ಟಕ್ಕಷ್ಟೆ.
ಚಾಮರಾಜಪೇಟೆ : ಇನ್ನು ಚಾಮರಾಜಪೇಟೆಯಲ್ಲಿ ನಿಂತು ಗೆದ್ದರೂ ಕ್ರೆಡಿಟ್ ಹೋಗುವುದು ಜಮೀರ್ ಅಹ್ಮದ್ ಅವರಿಗೆ. ಸಿದ್ದು ಏನೇ ಚಾಮರಾಜಪೇಟೆ ಅಳಿಯ ಎಂದು ಹೇಳಿಕೊಂಡರೂ ಇಡೀ ಕ್ಷೇತ್ರದಲ್ಲಿ ಜಮೀರ್ ಹವಾ ಹಾಗಿದೆ.
ಕೊಪ್ಪಳ : ಕೊಪ್ಪಳದಲ್ಲಿ ಕುರುಬರ ಸಂಖ್ಯೆ ಹೆಚ್ಚು. ಸಿದ್ದು ರಾಜಕೀಯ ಜೀವನ ಶುರುವಾಗಿದ್ದೇ ಕೊಪ್ಪಳದಿಂದ. ಹೀಗಿದ್ದರೂ ಕೊಪ್ಪಳಕ್ಕೆ ಓಕೆ ಎನ್ನಲು ಮನಸ್ಸಿಲ್ಲ. ಬಾದಾಮಿ ದೂರ ಎಂಬ ಕಾರಣ ಕೊಟ್ಟು ದೂರ ಬಂದಿರೋ ಸಿದ್ದು, ಕೊಪ್ಪಳ ಆಯ್ಕೆ ಮಾಡಿಕೊಂಡರೆ ಎದುರಾಳಿಗಳಿಗೆ ಅಸ್ತ್ರ ಕೊಟ್ಟಂತಾಗುತ್ತದೆ ಎನ್ನುವುದೂ ಒಂದು ಕಾರಣ. ಏಕೆಂದರೆ ಕೊಪ್ಪಳವೂ ಬೆಂಗಳೂರಿಗೆ ಹೊಂದಿಕೊಂಡಿರೋ ಜಿಲ್ಲೆಯೇನೂ ಅಲ್ಲವಲ್ಲ.
ಚಾಮುಂಡೇಶ್ವರಿ : ಆಗಿದ್ದಾಗಲೀ.. ಇಲ್ಲೇ ಸೋತಿದ್ದೇನೆ, ಇಲ್ಲೇ ಗೆದ್ದೂ ತೋರಿಸುತ್ತೇನೆ ಎನ್ನವುದಕ್ಕೂ ಸೋಲಿನ ಭಯವಿದೆ. ಎರಡು ಕಡೆ ನಿಲ್ಲೋಕೆ ಆಗಲ್ಲ. ಅಕಸ್ಮಾತ್ ಸೋತರೆ, ಮತ್ತೆ ಸಿಎಂ ಆಗುವುದಕ್ಕೆ ಆಗಲ್ಲ ಎನ್ನುವುದೂ ಒಂದು ಕಾರಣ. ಹೀಗಾಗಿಯೇ..
ತಮ್ಮದೇ ಹಳೆಯ ಕ್ಷೇತ್ರ, ತಮ್ಮ ಮಗ ಶಾಸಕರಾಗಿರುವ ಕ್ಷೇತ್ರದಲ್ಲೇ ನಿಂತರೆ ಬೆಟರ್ ಎನ್ನವುದು ಸಿದ್ದು ಲೆಕ್ಕ. ಹಾಗಾದರೆ ಯತೀಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಬ್ರೇಕ್ ಹಾಕುವ ಅನಿವಾರ್ಯತೆ ಎದುರಾಗುತ್ತದೆ ಇದರ ನಡುವೆಯೇ ಬಿಜೆಪಿಯಂದ ಮರಿ ರಾಜಾಹುಲಿಯ ಘರ್ಜನೆ ಮೊಳಗಿದೆ.


ವರುಣಾದಲ್ಲಿ ನಿಲ್ಲುವುದಕ್ಕೇನೂ ಸಮಸ್ಯೆ ಇಲ್ಲ. ನಾನು ಇಡೀ ರಾಜ್ಯಕ್ಕೆ ಪರಿಚಿತನಾಗಿದ್ದೇ ವರುಣಾದಿಂದ. ಅವಕಾಶ ಸಿಕ್ಕರೆ ಸ್ಪರ್ಧಿಸಲು ಸಿದ್ಧ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಘೋಷಿಸಿದ್ದಾರೆ ವಿಜಯೇಂದ್ರ ಯಡಿಯೂರಪ್ಪ. ಕಳೆದ ಬಾರಿ ಕೂಡಾ ವಿಜಯೇಂದ್ರ ಅವರ ಹೆಸರು ವರುಣಾದಲ್ಲಿ ಕೇಳಿ ಬಂದಿತ್ತು. ವಿಜಯೇಂದ್ರ ನಿಂತಿದ್ದರೆ ಮೈಸೂರು ಭಾಗದ ಸಮರಕ್ಕೆ ಕಳೆಯೂ ಬರುತ್ತಿತ್ತು. ಆದರೆ ಆರ್.ಎಸ್.ಎಸ್.ನ ಕೆಲವು ನಾಯಕರು ಅದಕ್ಕೆ ಅಡ್ಡಗಾಲು ಹಾಕಿದರು. ಕಟ್ಟ ಕಡೆಯ ಕ್ಷಣದಲ್ಲಿ ಬಸವರಾಜು ಎಂಬುವವರನ್ನು ನಿಲ್ಲಿಸಿದರು. ಬಿಜೆಪಿಯ ಖಾಯಂ ಮತಗಳು ಎನ್ನಬಹುದಾದ 37 ಸಾವಿರ ಚಿಲ್ಲರೆ ವೋಟು ಬಂದವು. ಸಿದ್ದರಾಮಯ್ಯ ಮಗ ಯತೀಂದ್ರ 58 ಸಾವಿರ ಮತಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದರು. ಈ ಬಾರಿಯೂ ಹಾಗೆಯೇ ಆದರೆ.. ಈ ಕಾರಣಕ್ಕಾಗಿಯೇ ವಿಜಯೇಂದ್ರ ಹೈಕಮಾಂಡ್ ಹೆಗಲಿಗೆ ಹೊಣೆ ಹಾಕಿದ್ದಾರೆ.

ವರುಣಾ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡಿದರೆ ಲಿಂಗಾಯತರೂ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. 70 ಸಾವಿರಕ್ಕಿಂತ ಹೆಚ್ಚಿದ್ದಾರೆ. ಒಕ್ಕಲಿಗರ ಸಂಖ್ಯೆಯೂ 20 ಸಾವಿರದ ಅಸುಪಾಸಿನಲ್ಲಿದೆ. ಪ.ಜಾತಿ ಮತ್ತು ಪ.ಪಂಗಡದ ಸುಮಾರು 75 ಸಾವಿರ ಮತಗಳಿವೆ. ಕುರುಬರ ಸಂಖ್ಯೆಯೂ ಆಜುಬಾಜು 40 ಸಾವಿರದಲ್ಲಿದೆ. ಇದು ಸಿದ್ದು ಟೆನ್ಷನ್ನಿಗೂ ಕಾರಣ. ಲಿಂಗಾಯತ ಮತಗಳು ಯಡಿಯೂರಪ್ಪ ಮಗ ಎಂಬ ಒಂದೇ ಕಾರಣಕ್ಕೆ ಶಿಫ್ಟ್ ಆಗಿಬಿಟ್ಟರೆ ಎಂಬ ಭಯ, ಒಕ್ಕಲಿಗರ ಮತಗಳು ಸಿದ್ದುಗೆ ಪ್ರಬಲ ಎದುರಾಳಿ ಎಂಬ ಕಾರಣಕ್ಕೇ ದೂರ ಹೋಗುವ ಭೀತಿ.. ಜೊತೆಗೆ ವಿಜಯೇಂದ್ರ ಅವರ ಚುನಾವಣಾ ತಂತ್ರಗಾರಿಕೆ. ವಿಜಯೇಂದ್ರ ರಾಜಕೀಯ ಹೆಜ್ಜೆಗಳನ್ನು ಫಾಲೋ ಮಾಡೋದು ಸುಲಭವಲ್ಲ. ಹೀಗಾಗಿಯೇ.. ಈಗ ಒಂದು ಪ್ರಶ್ನೆ ಎದುರಾಗಿದೆ.. ಸಿದ್ದುಗೀಗ ಹೊಸ ಟೆನ್ಷನ್ ಶುರುವಾಗುತ್ತಾ?


