ಮಾರ್ಚ್ 17 :
7 ತಿಂಗಳ ಹಿಂದೆ ಒಂದು ಬಿಬಿಎಂಪಿ ವರದಿ ಬಂದಿತ್ತು. ಸಿಎಜಿ ವರದಿ ಅದು. ಆ ವರದಿ ಪ್ರಕಾರ ಪ್ರತಿ 1 ಕಿ.ಮೀ.ಗೆ 20 ಅಪಾಯಗಳಿರುತ್ತವೆ. ವಿನ್ಯಾಸ ದೋಷ, ಸೈನ್ಬೋರ್ಡ್ ಸಮಸ್ಯೆ, ಸ್ಪೀಡ್ ಬ್ರೇಕರ್ ಪ್ರಾಬ್ಲಂ, ಫುಟ್ಪಾತ್ ಪ್ರಾಬ್ಮಂ, ಒಳಚರಂಡಿ, ರಸ್ತೆ ಗುಂಡಿ ಎಲ್ಲವನ್ನೂ ಸೇರಿಸಿ ಲೆಕ್ಕ ಹಾಕಿ ಸರಾಸರಿ ಹೇಳಿದ್ದ ವರದಿ ಅದು. ಬಿಬಿಎಂಪಿ ವ್ಯಾಪ್ತಿಯಲ್ಲೇ 90 ಕಿಮೀ ರಸ್ತೆಯಲ್ಲಿ 1,737 ಅಪಾಯಗಳನ್ನು ಅಧಿಕೃತವಾಗಿ ಗುರುತಿಸಿತ್ತು.

ಏಪ್ರಿಲ್ 19 : ಇದು 6 ತಿಂಗಳ ಹಿಂದೆ
ಇನ್ನು 36 ಗಂಟೆಗಳಲ್ಲಿ ರಸ್ತೆಗುಂಡಿ ಮುಚ್ಚಲು ಕಾರ್ಯಾದೇಶ ನೀಡಿ ಎಂದು ಹೈಕೋರ್ಟ್ ಹೇಳಿತ್ತು. ಇಲ್ಲದೇ ಹೋದರೆ ರಸ್ತೆ ಗುಂಡಿ ನಿರ್ವಹಣೆ ಹೊಣೆಯನ್ನು ಮಿಲಿಟರಿಗೆ ವಹಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿತ್ತು.ಎಂಜಿನಿಯರುಗಳಿಗೆ ಕ್ಲಾಸ್ ತೆಗೆದುಕೊಂಡಿತ್ತು.
ಏಪ್ರಿಲ್ 22 : ಮತ್ತೊಮ್ಮೆ ಹೈಕೋರ್ಟ್ ಆದೇಶ
ತಕ್ಷಣವೇ ಕೆಲಸ ಆರಂಭಿಸಿ ಎಂದು ಹೈಕೋರ್ಟ್ ಆದೇಶ ಕೊಟ್ಟಿತ್ತು. ತಾತ್ಕಾಲಿಕ ಆದೇಶ ನೀಡಿದ್ದೇವೆ ಎಂದು ಬಿಬಿಎಂಪಿ ಹೇಳಿತ್ತು.
ಜೂನ್ 28 : ಮಿಲಿಟರಿಗೆ ವಹಿಸಬೇಕಾ ಎಂದು ಕೇಳಿತ್ತು ಹೈಕೋರ್ಟ್
ಏ.19 ಮತ್ತು ಏ.22ರ ಆದೇಶದ ನಂತರವೂ ಕೆಲಸ ಆಗಿರಲಿಲ್ಲ. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಕಿವಿಗೆ ಹಾಕಿಕೊಳ್ಳದ ಪಾಲಿಕೆಯನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿತ್ತು. ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್ಟಿಎಸ್) ಸಂಸ್ಥೆಯೊಂದಿಗೆ ಆಗಲೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಅದೇ ನೆಪ ಹೇಳಿದ್ದ ಬಿಬಿಎಂಪಿಗೆ ಛೀಮಾರಿ ಹಾಕಿತ್ತು ಮತ್ತೆ ಒಂದೇ ದಿನ ಟೈಂ ಕೊಟ್ಟು ಕೆಲಸ ಮಾಡಿಸಿ ಎಂದಿತ್ತು.
ಜೂನ್ 30 : ವರದಿ ಸಲ್ಲಿಸಲು ಕಾಲಾವಕಾಶ ಕೇಳಿತ್ತು ಬಿಬಿಎಂಪಿ
ಅನುಪಾಲನಾ ವರದಿ ತಯಾರಿಸೋಕೆ ಸಮಯ ಬೇಕು. ವಸ್ತು ಸ್ಥಿತಿ ತಿಳಿಯೋಕೆ ಅಧಿಕಾರಿಗಳು ಹೋಗಬೇಕು ಎಂದಿತ್ತು ಬಿಬಿಎಂಪಿ. ಆಗಸ್ಟ್ 3ರವರೆಗೆ ಸಮಯಾವಕಾಶ ಕೊಟ್ಟಿತ್ತು. ಅಷ್ಟು ದಿನ ಬಿಬಿಎಂಪಿ ಆಫೀಸರ್ಸ್ ಏನು ಮಾಡುತ್ತಿದ್ದರು ಗೊತ್ತಿಲ್ಲ. ಇದು 2 ತಿಂಗಳ ಹಿಂದಿನ ಕಥೆ.
ಸೆಪ್ಟೆಂಬರ್ 05 : ನವೆಂಬರ್ ಅಂತ್ಯಕ್ಕೆ ಗುಂಡಿ ಮುಕ್ತ
ಈ ನಿರ್ಧಾರ ತೆಗೆದುಕೊಂಡಿದ್ದು ಬಿಬಿಎಂಪಿ. ಬೆಂಗಳೂರು ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸಲು ಪ್ರತಿಜ್ಞೆ ಮಾಡಿದ್ದರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್.
ಸೆ.22 : ಬಾಕಿ 221 ಗುಂಡಿ ಮುಚ್ಚಿದರೆ ಎಲ್ಲ ಮುಗಿದಂತೆ ಎಂದಿತ್ತು ಬಿಬಿಂಪಿ.
ಅಷ್ಟೇನಾ ಎಂದು ಅಚ್ಚರಿ ಪಟ್ಟಿದ್ದರು ಜನ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರೋ ರಸ್ತೆಗುಂಡಿ ಇಷ್ಟೆ. 221 ಗುಂಡಿ ಮುಚ್ಚಿದರೆ ಕ್ಲಿಯರ್ ಎಂದು ಬಿಬಿಎಂಪಿ ವರದಿ ಕೊಟ್ಟಿದ್ದು ನ್ಯಾಯಾಲಯಕ್ಕೆ.

ಈಗ.. ಇಷ್ಟೆಲ್ಲ ಆಗಿ ಇಷ್ಟು ದಿನಗಳ ನಂತರ ಮತ್ತೊಂದು ರಸ್ತೆ ಗುಂಡಿಗೆ ಹೆಣ ಬೀಳುವ ಹಂತಕ್ಕೆ ಹೋಗಿ ತಪ್ಪಿದೆ. ಓಕಳಿಪುರಂನಲ್ಲಿ ಗುಂಡಿಯನ್ನ ತಪ್ಪಿಸಿಕೊಂಡು ಗಾಡಿ ಓಡಿಸೋಕೆ ಹೋಗಿದ್ದೇ ಆಕೆ ಮಾಡಿದ್ದ ತಪ್ಪು. ತಾಯಿ ಮಗಳು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕೆಳಗೆ ಬಿದ್ದು ತಾಯಿಗೆ ಗಂಭೀರ ಗಾಯ ಆಗಿದೆ. ಇಎಸ್ಐ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರನೇ ದಿನದ ಹೊತ್ತಿಗೆ ಸಾವನ್ನಪ್ಪಿದರು.ಇನ್ನೊಂದೆಡೆ ಕಾರ್ಪೊರೇಷನ್ ಬಳಿಯ ಮಿಷನ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಬೈಕ್ ಸವಾರನ ಕಾಲಿಗೆ ಏಟಾಗಿದ್ದು, ಪಾದಗಳ ಚರ್ಮಗಳು ಕಿತ್ತು ಹೋಗಿವೆ. ಸಾವುಗಳು ಹಿಂದೆಯೂ ಆಗಿವೆ. ಮುಂದೆಯೂ ಆಗುತ್ತವೆ. ಅನುಮಾನವೇ ಇಲ್ಲ. 

ಹಾಗಾದರೆ ಇದು ಮುಗಿಯೋದು ಯಾವಾಗ? ಗುಂಡಿಗಳಿಲ್ಲದ ರಸ್ತೆಗಳನ್ನು ಬೆಂಗಳೂರಿನಲ್ಲಿ ನೋಡೋದು ಅಸಾಧ್ಯವಾ? ಗೊತ್ತಿಲ್ಲ. ಮುಂದೊಮ್ಮೆ ಪ್ರಳಯವಾಗಿ ಭೂಮಿಯೆಲ್ಲ ನಾಶವಾಗುತ್ತೆ ಅಂತಾರಲ್ಲ. ಆಗ ಸರಿ ಹೋಗಬಹುದಾ? ಗೊತ್ತಿಲ್ಲ. ಕಲ್ಲುಕೋಳಿ ಕೊಕ್ಕೊಕ್ಕೋಕ್ಕೋ ಅಂದರೆ ಪ್ರಳಯವಾಗುತ್ತಂತೆ. ಇನ್ನೆಲ್ಲೋ ಕಲ್ಲು ಬಸವ ಎದ್ದು ಕೂರುತ್ತಾನಂತೆ. ಆಗ ಪ್ರಳಯವಾಗುತ್ತಂತೆ. ಮತ್ತೆಲ್ಲೋ ಮರುಭೂಮಿಯಲ್ಲಿ ನದಿಯೊಂದು ಉಕ್ಕಿ ಹರಿದಾಗ ಪ್ರಳಯವಾಗುತ್ತಂತೆ. ಅನುಮಾನವೇ ಇಲ್ಲ, ಬೆಂಗಳೂರು ಅಥವಾ ರಾಜ್ಯದ ಕೋಟಿ ಕೋಟಿಯ ರಸ್ತೆಗಳು ಗುಂಡಿ ಬೀಳದೆ ಸುಸಜ್ಜಿತವಾಗಿ ಇದ್ದ ದಿನ ಪ್ರಳಯವಾಗುತ್ತಂತೆ.

ಹೈಕೋರ್ಟ್ ಛೀಮಾರಿಗೇ ಬಗ್ಗದವರು, ಅರೆಸ್ಟ್ ಮಾಡಿಸುತ್ತೇನೆ ಎಂದರೂ ಕ್ಯಾರೇ ಎನ್ನದವರು, ಪ್ರತಿಭಟನೆಗೆ ಬಗ್ಗದವರು, ಹೋರಾಟಗಳಿಗೆ ಹೋಗತ್ಲಾಗೆ ಎಂದು ಹೋದವರು.. ಕಾಮಿಡಿ ಮಾಡಿದರೆ ರಸ್ತೆಗಳನ್ನ ಗುಂಡಿ ಇಲ್ಲದಂತೆ ಮಾಡ್ತಾರಾ? ಇನ್ನು ಒಂದು ವರ್ಷದ ನಂತರವೂ.. ಈಗಿರುವ ಸರ್ಕಾರ ಹೋಗಿ ಹೊಸ ಸರ್ಕಾರ ಬಂದರೂ.. ಆ ಸರ್ಕಾರವೂ ವರ್ಷ ಪೂರೈಸಿದರೂ.. ಪರಿಸ್ಥಿತಿ ಬದಲಾಗಲ್ಲ. ಇದು ಸತ್ಯ. ಇದು ಸತ್ಯ. ಇದು ಸತ್ಯ.



