ಸುದೀಪ್ ರಾಜಕೀಯ ಪ್ರವೇಶ ಮಾಡುತ್ತೇನೆ. ಅದೂ ಸಿಎಂ ಬೊಮ್ಮಾಯಿ ಹಾಗೂ ಅವರ ಪರ ಇದ್ದವರಿಗೆ. ಅವರು ಹೇಳಿದವರಿಗೆ ಮಾತ್ರ. ಉಳಿದಂತೆ ನಾನು ಯಾವ ಪಕ್ಷಕ್ಕೂ ಸೇರಿಲ್ಲ. ಸೇರುತ್ತಿಲ್ಲ ಎಂದು ಹೇಳುತ್ತಿದ್ದಾರಾದರೂ, ದಾಳಿಗಂತೂ ಗುರಿಯಾಗಿದೆ. ಚಿತ್ರರಂಗದವರೇ ಆಗಿರುವ ಪ್ರಕಾಶ್ ರೈ ಒಂದು ಕಡೆ, ಅಹಿಂಸಾ ಚೇತನ್ ಇನ್ನೊಂದು ಕಡೆ ಮುಗಿಬಿದ್ದಿದ್ದರೆ, ಅತ್ತ ರಾಜಕೀಯ ನಾಯಕರೆಲ್ಲ ಅಟ್ಯಾಕ್ ಮಾಡೋಕೆ ಶುರು ಮಾಡಿದ್ದಾರೆ. ಪರ ವಿರೋಧಗಳು ಹೆಚ್ಚಾಗಿದೆ. ಇದೀಗ ಕಿಚ್ಚ ಸುದೀಪ್ ಅವರ ಚಿತ್ರಗಳ ಪ್ರಸಾರ, ಜಾಹೀರಾತುಗಳ ಪ್ರಸಾರಕ್ಕೆ ತಡೆ ಕೋರಬೇಕೆಂದು ಜೆಡಿಎಸ್, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಸುದೀಪ್ ಅವರ ಯಾವುದೇ ಚಿತ್ರ, ಜಾಹೀರಾತು, ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ.
ಇದಕ್ಕೂ ಮೊದಲು ಶಿವಮೊಗ್ಗದ ವಕೀಲ ಕೆಪಿ ಶ್ರೀಪಾಲ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಿಚ್ಚ ಸುದೀಪ್ ಬೆಜಿಪಿಗೆ ಬೆಂಬಲ ಘೋಷಿಸಿದ ದಿನವೇ ಶ್ರೀಪಾಲ, ಆಯೋಗಕ್ಕೆ ಪತ್ರ ಬರೆದಿದ್ದರು. ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಅವರ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ, ಟಿವಿಗಳಲ್ಲಿ ಪ್ರದರ್ಶನವಾಗಬಾರದು. ಸುದೀಪ್ ನಡೆಸಿಕೊಡುವ ಟಿವಿ ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು ಎಂದು ಶ್ರೀಪಾಲ ದೂರಿನಲ್ಲಿ ಉಲ್ಲೇಖಿಸಿದ್ದರು.


ಸುದೀಪ್ ಅವರಿಗೆ ಇದು ಅನ್ವಯವಾದರೆ ಆಗ ಬೇರೆಯದೇ ಸಮಸ್ಯೆ ಸೃಷ್ಟಿಯಾಗಲಿದೆ. ಉಪೇಂದ್ರ, ಪ್ರಜಾಕೀಯ ಪಕ್ಷದ ಅಧ್ಯಕ್ಷರು. ರಮ್ಯಾ, ತಾರಾ, ಶೃತಿ, ಜಯಮಾಲಾ, ಜಗ್ಗೇಶ್, ಉಮಾಶ್ರೀ, ಬಿಸಿ ಪಾಟೀಲ್, ಸಿಪಿ ಯೋಗೀಶ್ವರ್. ಸಾಧು ಕೋಕಿಲ, ನಿಖಿಲ್ ಕುಮಾರಸ್ವಾಮಿ ಭಾವನಾ ರಾಮಣ್ಣ, ಮಧು ಬಂಗಾರಪ್ಪ ಎಲ್ಲರೂ ಸಿನಿಮಾದವರೇ. ಇವರಲ್ಲಿ ಉಮಾಶ್ರೀ, ಬಿಸಿ ಪಾಟೀಲ್, ಸಿಪಿ ಯೋಗೀಶ್ವರ್, ನಿಖಿಲ್ ಚುನಾವಣಾ ಅಭ್ಯರ್ಥಿಗಳೂ ಹೌದು. ಏನ್ ಮಾಡುತ್ತೆ ಎಲೆಕ್ಷನ್ ಕಮಿಷನ್..?
ಅಭ್ಯರ್ಥಿಗಳು ಸಿನಿಮಾದವರಾಗಿದ್ದರೆ ಅದನ್ನು ಸ್ಥಗಿತಗೊಳಿಸಬಹುದು. ಹೀಗೆ ಈ ರೀತಿ ಪಕ್ಷದಲ್ಲಿರುವವರೆನ್ನೆಲ್ಲ ನಿಷೇಧ ಮಾಡುತ್ತಾ ಹೋದರೆ, ಟಿವಿ ಚಾನೆಲ್ಲುಗಳು ಪ್ರಸಾರವನ್ನೇ ನಿಲ್ಲಿಸಬೇಕಾಗುತ್ತೆ. ಅಭ್ಯರ್ಥಿಗಳಾಗಿದ್ದರೂ ಅಷ್ಟೆ, ಮತದಾನಕ್ಕೆ ಎರಡು ದಿನ ಮೊದಲು ಸ್ಥಗಿತ ಮಾಡಿಸಬಹುದು. ಅಷ್ಟೇ ಹೊರತಾಗಿ ಸ್ಟಾರ್ ಪ್ರಚಾರಕರೆಲ್ಲರ ಸಿನಿಮಾ ಜಾಹೀರಾತು ಪ್ರಸಾರವನ್ನು ಸ್ಥಗಿತಗೊಳಿಸುವುದು ಕಾರ್ಯಸಾಧ್ಯವಲ್ಲದ ವಿಷಯ. ಆದರೆ, ಆಯೋಗಕ್ಕೆ ಪರಮಾಧಿಕಾರವಂತೂ ಇದೆ. ಏನು ಮಾಡಲಿದೆಯೋ..



