ಕಾಂತಾರ ಚಿತ್ರದಲ್ಲಿ ಕಥೆ ನಡೆಯುವುದೇ ಕಾಡಿಗಾಗಿ. ಒಂದು ಕಡೆ ನೆಮ್ಮದಿಯ ಹುಡುಕಾಟ.. ಇನ್ನೊಂದು ಕಡೆ ಕಾಡಿನ ರಕ್ಷಣೆಗೆ ಪೊಲೀಸ್ ಆಫೀಸರ್ ಹೋರಾಟ.. ಮತ್ತೊಂದೆಡೆ ಬದುಕಿಗಾಗಿ ಕಾಡನ್ನೇ ನಂಬಿಕೊಂಡಿÀರುವವರ ಜೀವನದ ಆಟ.. ಈ ಎಲ್ಲವನ್ನೂ ದೈವದ ಕ್ಲೈಮಾಕ್ಸ್ನಲ್ಲಿ ತೋರಿಸಿ ಕಾಡಿನ ರಕ್ಷಣೆ ಒಬ್ಬರ ಕೆಲಸ ಅಲ್ಲ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿ ಗೆದ್ದಿದ್ದರು ರಿಷಬ್ ಶೆಟ್ಟಿ. ಈಗ ಕಾಂತಾರ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್, ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದೈವನರ್ತಕರಿಗೆ ಮತ್ತು ಅವರ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ಜನಪದ ಕಲೆಗಳು ಮತ್ತು ಜನಪದರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಕಾಡಿನ ಪಕ್ಕದಲ್ಲೇ ವಾಸಿಸುವ ಅನೇಕರಿಗೆ ಏನೆಲ್ಲ ಕಷ್ಟ ಪಡುತ್ತಿದ್ದಾರೆ, ಅವರಿಗೆ ಏನೆಲ್ಲ ಪರಿಹಾರ ನೀಡಬಹುದು ಹಾಗೂ ಕಾಡು ಪ್ರಾಣಿಗಳಿಂದ ಯಾವ ರೀತಿಯಲ್ಲಿ ತೊಂದರೆ ಆಗುತ್ತಿದೆ ಮತ್ತು ಅರಣ್ಯ ಸಿಬ್ಬಂದಿ ಎಷ್ಟೆಲ್ಲ ಸಂಕಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ. ಸಿಎಂ ಕೂಡ ಕೂಡಲೇ ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರಂತೆ.
ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಂದಹಾಗೆ ರಿಷಬ್ ಶೆಟ್ಟಿ ಸದ್ಯಕ್ಕೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಹಭಾಗಿತ್ವದ ಸೇವ್ ವೈಲ್ಡ್ ಲೈಫ್ ಅಬಿಯಾನದ ರಾಯಭಾರಿಯಾಗಿದ್ದಾರೆ. ಕಾಂತಾರ 2 ಚಿತ್ರದ ಪ್ರಿ-ಪ್ರೊಡಕ್ಷನ್ ಮಧ್ಯೆಯೇ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲೂ ಪಾಲ್ಗೊಳ್ಳುತ್ತಿದ್ದಾರೆ.



