ಬೆಳಗಾವಿ ಜಿಲ್ಲೆಯೇ ಇಡೀ ರಾಜ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. 2018ರಿಂದ ಶುರುವಾದ ಬೆಳಗಾವಿ ಸೆಂಟರ್ ಪಾಲಿಟಿಕ್ಸಿ, ಈ ಬಾಗಿ ಇನ್ನಷ್ಟು ಎತ್ತರಕ್ಕೆ ತಲುಪಿದೆ. ಕುಮಾರಸ್ವಾಮಿ ಸರ್ಕಾರದ ಪತನ ಆರಂಭವಾಗಿದ್ದು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ. ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮುನಿಸು, ವಾಗ್ಯುದ್ಧ.. ಆನಂತರ ಸಿಡಿ ಹಗರಣ, ಬೆತ್ತಲೆ ಗೇಮ್`ನಲ್ಲಿ ರಾಜೀನಾಮೆ ಕೊಟ್ಟ ರಮೇಶ್ ಜಾರಕಿಹೊಳಿ ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಗೆ ಪಣ ತೊಟ್ಟು ನಿಂತಿದ್ದಾರೆ. ಆ ಆಟದ ಮುಂದುವರಿದ ಭಾಗವೇ ಆಪರೇಷನ್ ಲಕ್ಷ್ಮಣ ಸವದಿ. ಡಿಕೆ ಶಿವುಕಮಾರ್ ಗೇಮ್.. ಸಿದ್ದರಾಮಯ್ಯ ಫೋನ್ ಇತ್ಯಾದಿ..ಇತ್ಯಾದಿ..
ಬಿಜೆಪಿ ಪಟ್ಟಿಯಲ್ಲಿ ಸವದಿ ಹೆಸರಿಲ್ಲ ಎನ್ನುತ್ತಿದ್ದಂತೆಯೇ ಅಲರ್ಟ್ ಆದವರು ಡಿಕೆ ಶಿವಕುಮಾರ್. ಕುಮಾರಸ್ವಾಮಿ ಕಾಂಟ್ಯಾಕ್ಟ್ ಮಾಡುವುದಕ್ಕೂ ಮೊದಲೆ ಸವದಿ ಸಂಪರ್ಕಕ್ಕೆ ಬಂದ ಡಿಕೆ, ಬೆಳಗಾವಿಯಲ್ಲಿನ ಪರಿಸ್ಥಿತಿ ನಿಭಾಯಿಸುವ ಹೊಣೆಗಾರಿಕೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ಕೊಟ್ಟರು. ವಿಶೇಷ ವಿಮಾನ ಸಿದ್ದಗೊಳಿಸಿದರು. ಸಿದ್ದರಾಮಯ್ಯ ಅವರಿಗೆ ಅಲರ್ಟ್ ಕೊಟ್ಟರಾದರೂ ಅಖಾಡಕ್ಕೆ ಇಳಿದಿದ್ದು ಡಿಕೆ ಬಣವೇ. ಬೆಳಗಾವಿ ಕಾಂಗ್ರೆಸ್ಸಿನ ಪ್ರಭಾವಿ ಕಾಂಗ್ರೆಸ್ಸಿಗ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿಯನ್ನು ದೂರವೇ ಇಟ್ಟ ಡಿಕೆ, ಲಕ್ಷ್ಮಣ ಸವದಿಯವರ ಸುತ್ತ ಕೋಟೆ ಕಟ್ಟಿಬಿಟ್ಟರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸವದಿಯವರ ಜೊತೆಯಲೇ ಬೆಂಗಳೂರಿಗೆ ಬಂದರು. ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಇಡೀ ಆಪರೇಷನ್`ನ ಬೆಳಗಾವಿ ಉಸ್ತುವಾರಿ ಹೊತ್ತಿದ್ದರೆ, ಬೆಂಗಳೂರಿನಿಂದಲೇ ಆಪರೇಟ್ ಮಾಡುತ್ತಾ ಹೋದವರು ಡಿಕೆ.


ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಡಿಕೆ ಶಿವಕುಮಾರ್, ಈ ಮೂಲಕ ತಮ್ಮ ಆಪ್ತ ಬಳಗದಲ್ಲಿರೋ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸವಾಲು ಹಾಕಿದವರಿಗೆ ಪ್ರತಿ ಸವಾಲ್ ಹಾಕಿದ್ದಾರೆ. ಬೆಳಗಾವಿ ಮತ್ತೊಬ್ಬ ಪ್ರಭಾವಿ ಲಿಂಗಾಯತ ನಾಯಕ ಲಕ್ಷ್ಮಣ ಸವದಿಯನ್ನು ಕಾಂಗ್ರೆಸ್ಸಿಗೆ ಕರೆತಂದು ಆ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಬಲ ಹೆಚ್ಚಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ನೇತೃತ್ವ ಮೂಲಕ ಬೆಳಗಾವಿಯ ನಂ.1 ಲೀಡರ್ ಯಾರು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ತಮ್ಮನ್ನು ಕೆಣಕಿದವರಿಗೆ ಸುಮ್ಮನೆ ಬಿಡಲ್ಲ ಎಂಬ ಸಂದೇಶ ನೀಡಿರುವುದು ರಮೇಶ್ ಜಾರಕಿಹೊಳಿಯವರಿಗೆ.
ಮತ್ತೂ ಒಂದು ಮೆಸೇಜ್ ಇದೆ. ಲಕ್ಷ್ಮಣ ಸವದಿ ಮೂಲತಃ ಬಿಜೆಪಿಯವರಲ್ಲ. ಜಾತ್ಯತೀತ ಜನತಾ ದಳದಲ್ಲಿದ್ದವರು. ಜೆಡಿಎಸ್`ನ ಕುಮಾರಸ್ವಾಮಿ, ಸವದಿ ಅವರ ಸಂಪರ್ಕಕ್ಕೆ ಬರದಂತೆ ನೋಡಿಕೊಂಡಿದ್ದಾರೆ. ಬಹುಶಃ ದೇವೇಗೌಡರು ಆಕ್ಟಿವ್ ಆಗಿದ್ದರೆ ಏನಾಗುತ್ತಿತ್ತೋ.. ಏನೋ.. ಒಟ್ಟಿನಲ್ಲಿ ಈ ಬಾರಿಯ ಯುದ್ಧದಲ್ಲಿ ಗೆದ್ದಿರುವದು ಡಿಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್.





