ಒಂದು ಮಾತು.. ಏನೋ ಹೇಳೋಕೆ ಹೋಗಿ ಮಾಡಿಕೊಂಡ ಒಂದು ಎಡವಟ್ಟು.. ರಾಹುಲ್ ಗಾಂಧಿಯನ್ನು ನೇರವಾಗಿ ಜೈಲಿನ ಬಾಗಿಲಿಗೆ ಎಳೆದುಕೊಂಡು ಹೋಗಿದೆ. ಎಲ್ಲ ಕಳ್ಳರ ಹೆಸರಿನ ಸರ್`ನೇಮ್ ಕೂಡಾ ಮೋದಿಯೇ ಆಗಿರುತ್ತದೆ ಏಕೆ..? ಎಂದು ಮಾತನಾಡಿದ್ದರು ರಾಹುಲ್ ಗಾಂಧಿ. ತೀರಾ ಹಿಂದೇನಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ಆಗಿತ್ತಲ್ಲ.. ಆಗ ಕೋಲಾರಕ್ಕೆ ಬಂದು ಪ್ರಚಾರ ಮಾಡುವಾಗ ರಾಹುಲ್ ಈ ಮಾತು ಹೇಳಿದ್ದರು. ಈಗ ಅದೇ ಕೇಸಲ್ಲಿ ಜೈಲು ಶಿಕ್ಷೆಯಾಗಿದೆ. ಒಂದಲ್ಲ.. ಎರಡು ವರ್ಷ. ಜೊತೆಗೆ ದಂಡ ಬೇರೆ. ಆದರೆ.. ಇಲ್ಲಿ ರಾಹುಲ್ ಗಾಂಧಿಗೆ ರಾಹುಲ್ ಗಾಂಧಿಯೇ ವಿಲನ್ ಆಗಿದ್ದು ಹೇಗೆ ಅನ್ನೋಕೆ ಕಾರಣವೂ ಇದೆ.
ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದರು ರಾಹುಲ್ ಗಾಂಧಿ :
ಅದು 2013ನೇ ಇಸವಿ. ಲಾಲೂ ಪ್ರಸಾದ್ ಯಾದವ್ ಮೇಲಿನ ಮೇವು ಹಗರಣದ ತೀರ್ಪು ಬರುವ ಸಮಯವಾಗಿತ್ತು. ತೀರ್ಪು ಹೊರಬೀಳುವ ಒಂದು ದಿನ ಮೊದಲು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಒಂದು ಸುಗ್ರೀವಾಜ್ಞೆ ಹೊರತಂದಿದ್ದರು. ಯಾವುದೇ ಜನಪ್ರತಿನಿಧಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತನಗೆ ಲಭ್ಯವಿರುವ ಎಲ್ಲಾ ಕಾನೂನಿನ ಅವಕಾಶ ಬಳಸಿಕೊಳ್ಳುವ ತನಕವೂ ಹುದ್ದೆಯಿಂದ ಅನರ್ಹವಾಗದಂತೆ ರಕ್ಷಣೆ ನೀಡುವ ಕಾಯ್ದೆಯನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ಸಿಂಗ್ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು. ಈ ಮಸೂದೆ ರಾಷ್ಟ್ರಪತಿ ಬಳಿಗೆ ಹೋಗಿದ್ದ ವೇಳೆ ದಿಢೀರನೆ ಪತ್ರಿಕಾಗೋಷ್ಠಿ ಕರೆದಿದ್ದ ರಾಹುಲ್, ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿ, ಅದರ ಪ್ರತಿಗಳನ್ನು ಹರಿದು ಹಾಕಿದ್ದರು. ಹೀಗಾಗಿ ಸುಗ್ರೀವಾಜ್ಞೆ ಜಾರಿಗೆ ಬಂದಿರಲಿಲ್ಲ. ಯಾವಾಗ ಖುದ್ದು ರಾಹುಲ್ ಗಾಂಧಿ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿದರೋ.. ಸುಗ್ರೀವಾಜ್ಞೆಯೂ ಜಾರಿಗೆ ಬರಲಿಲ್ಲ


2013ರಲ್ಲಿಯೂ ರಾಹುಲ್ ಗಾಂದಿ ಮಿಶ್ರ ಪ್ರತಿಕ್ರಿಯೆ ಎದುರಿಸಿದ್ದರು ರಾಹುಲ್ ಗಾಂಧಿ. ಮನಮೋಹನ್ ಸಿಂಗ್ ಅವರಿಗೆ ವೈಯಕ್ತಿಕವಾಗಿ ಹೇಳಬಹುದಿತ್ತು. ಅವರದ್ದೇ ಪಕ್ಷದ ಹೇಳಿದ್ದನ್ನು ಕೇಳುವ ಪ್ರಧಾನಿಯಾಗಿದ್ದರು ರಾಹುಲ್ ಗಾಂಧಿ. ಸೋನಿಯಾ ಗಾಂಧಿಯವರ ಮೂಲಕವೇ ಆ ಮಾತು ಹೇಳಿಸಬಹುದಿತ್ತು ಎಂಬ ಮಾತು ಒಂದು ಕಡೆಯಿಂದ ಬಂದಿದ್ದರೆ, ಇನ್ನೊಂದು ಕಡೆಯಿಂದ ಭ್ರಷ್ಟಾಚಾರದ ವಿರುದ್ಧ ರಾಹುಲ್ ಗಾಂಧಿ ಕ್ಲಿಯರ್ ಆಗಿದ್ದಾರೆ ಎಂದು ಹೊಗಳಲಾಗಿತ್ತು. ಪಕ್ಷ, ಅಧಿಕಾರಕ್ಕಿಂತ ಕ್ಲೀನ್ ಇಮೇಜ್ ಮುಖ್ಯ ಎಂದು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎನ್ನಲಾಗಿತ್ತು. ಅದು ಅಣ್ಣಾ ಹಜಾರೆ ಹೋರಾಟ ತೀವ್ರಗೊಳ್ಳುತ್ತಿದ್ದ ಸಮಯ. ಎಲೆಕ್ಷನ್ ಹತ್ತಿರದಲ್ಲಿತ್ತು. ಆ ವೇಳೆಗೆ ಹೊಸ ಇಮೇಜ್ ಸೃಷ್ಟಿಸಿಕೊಳ್ಳೋ ತಂತ್ರಗಾರಿಕೆ ಎಂಬ ಮಾತುಗಳೂ ಕೇಳಿ ಬಂದಿದ್ದವು.


ರಾಹುಲ್ ಗಾಂಧಿ ದೋಷಿ ಎಂದಿರುವ ಕೋರ್ಟ್ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದೆ. ನಿಯಮದ ಪ್ರಕಾರವೇ ಹೋದಲ್ಲಿ ರಾಹುಲ್ ಗಾಂಧಿ ಅನರ್ಹರಾಗುತ್ತಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. 2013ರ ಜುಲೈ 10 ರಂದು ಲಿಲಿ ಥಾಮಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಯಾವುದೇ ಸಂಸದರು, ಎಂಎಲ್ಎ ಅಥವಾ ಎಂಎಲ್ಸಿ ಅಪರಾಧದಲ್ಲಿ ತಪ್ಪಿತಸ್ಥರೆಂದು ಮತ್ತು ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದರೆ, ತಕ್ಷಣವೇ ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.
ಆದರೆ, ಇದರ ನಿರ್ಧಾರ ಮಾಡುವ ಹಕ್ಕು ಸ್ಪೀಕರ್ಗೆ ಇರುತ್ತದೆ. ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರ ಪ್ರಕಾರ, ಯಾವುದೇ ಅಪರಾಧದ ಅಪರಾಧಿ ಮತ್ತು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಬಿಡುಗಡೆಯಾದ ಮುಂದಿನ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗುತ್ತದೆ.
ಸಂಸದ ಸ್ಥಾನ ಅಮಾನತು ಸದ್ಯಕ್ಕೆ ಸಾಧ್ಯವಿಲ್ಲ :
ಸಂಸತ್ ಸದಸ್ಯ ಸ್ಥಾನದಿಂದ ತಕ್ಷಣವೇ ಅವರು ಅನರ್ಹರಾಗೋದಿಲ್ಲ. ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದ್ದರೂ ಇದು ತಕ್ಷಣವೇ ಜಾರಿಗೆ ಬರೋದಿಲ್ಲ. ಮುಂದಿನ 30 ದಿನಗಳು ರಾಹುಲ್ ಗಾಂಧಿ ಪಾಲಿಗೆ ಪ್ರಮುಖವಾದುದಾಗಿದೆ. ಸಂಸತ್ ಸದಸ್ಯರಾಗಿ ಮುಂದುವರಿಯಲು ಸೂರತ್ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶವನ್ನು ಮೇಲಿನ ಕೋರ್ಟ್ಗೆ ತೆರಳು ರದ್ದು ಮಾಡಿಸಬೇಕು ಅಥವಾ ತಡೆಯಾಜ್ಞೆ ತರಬೇಕು. ತಡೆಯಾಜ್ಞೆ ತರದೇ ಹೋದರೆ, ಈ ತೀರ್ಪನ್ನು ಅಮಾನತಿನಲ್ಲಿಡಲು ಹೈಕೋರ್ಟ್ ಒಪ್ಪದಿದ್ದರೆ ಜೈಲು ಖಾಯಂ.
ರಾಹುಲ್ ಗಾಂಧಿ ತಪ್ಪಿತಸ್ಥರಾಗಿದ್ದೇಕೆ?
ರಾಹುಲ್ ಗಾಂಧಿ ಹೇಳಿಕೆ ಪ್ರಕಾರ ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಇರುತ್ತದೆ ಯಾಕೆ ಎನ್ನುವುದು. ಆದರೆ ಮೋದಿ ಎನ್ನುವುದು ಒಂದು ಸಮುದಾಯದಲ್ಲಿ ಹೆಚ್ಚು ಜನ ಇಡುವ ಹೆಸರು. ಅದು ಸಮುದಾಯವನ್ನೂ ತೋರಿಸುತ್ತದೆ. ಒಬ್ಬ ಸಂಸದರಾಗಿ ಒಂದು ಸರ್ ನೇಮ್ ಇಟ್ಟುಕೊಂಡ ಸಮುದಾಯದವರನ್ನು ಹಾಗೆ ಕರೆಯುವುದು, ಜರಿಯುವುದು ಎರಡೂ ತಪ್ಪು. ಹೀಗಾಗಿಯೇ ನ್ಯಾಯಾಲಯ ಈ ರೀತಿ ತೀರ್ಪು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಕಾರಣಕ್ಕಲ್ಲ, ಬದಲಿಗೆ ಮೋದಿ ಎಂಬ ಕಮ್ಯುನಿಟಿಯನ್ನು ಕಳ್ಳರು ಎಂದ ಕಾರಣಕ್ಕೆ.



