ಮಂಡ್ಯದ ಒಂದು ಪ್ರಕರಣ ಈಗ ರಾಜ್ಯದ ಸುದ್ದಿಯಾಗಿದೆ. ಮಂಡ್ಯ, ಲಾಗಾಯ್ತಿನಿಂದಲೂ ರಾಜಕೀಯವಾಗಿ ಮಹತ್ವದ ಕ್ಷೇತ್ರ. ಮಂಡ್ಯದ ಜನ ಪೊಲಿಟಿಕಲಿ ಜ್ಞಾನಿಗಳು. ಆಕ್ಟಿವ್ ಇರುವವರು. ಅಂತಹ ಮಂಡ್ಯ ಆಗಾಗ್ಗೆ ರಾಜಕೀಯವಾಗಿ ಸುದ್ದಿ ಮತ್ತು ಸದ್ದು ಮಾಡುತ್ತಲೇ ಇರುತ್ತದೆ. ರಾಜ್ಯ ರಾಜಕೀಯದ ದಿಕ್ಸೂಚಿ ತೋರಿಸುವ ಜಿಲ್ಲೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಂತಹ ಮಂಡ್ಯ ಈಗ ಮತ್ತೊಮ್ಮೆ ಸೆನ್ಸೇಷನ್ ಸೃಷ್ಟಿಸಿದೆ.
ಮಂಡ್ಯ ಕಂಡಕ್ಟರ್/ಡ್ರೈವರ್ ಆತ್ಮಹತ್ಯೆ ಯತ್ನ. ನಿಜಕ್ಕೂ ನಡೆದದ್ದೇನು ?
ಮಂಡ್ಯ ಜಿಲ್ಲೆಯ ನಾಗಮಂಗಲ ಬಸ್ ಡಿಪೋ ಚಾಲಕ ಕಂ ನಿರ್ವಾಹಕ ಜಗದೀಶ್ ಅವರನ್ನು ಮದ್ದೂರಿಗೆ ವರ್ಗಾವಣೆ ಮಾಡಲಾಗಿತ್ತು. ಅದಕ್ಕೆ ಸಚಿವ ಚೆಲುವರಾಯಸ್ವಾಮಿ (Cheluvaraya Swamy) ಅವರೇ ಕಾರಣ ಎಂದು ಸೂಸೈಡ್ ನೋಟ್ ಬರೆದು ವಿಷ ಸೇವಿಸಿದ್ದರು. ಸೂಸೈಡ್ ನೋಟಿನಲ್ಲಿ ಚೆಲುವರಾಯಸ್ವಾಮಿ (Cheluvaraya Swamy) ಹೆಸರು ಬರೆದಿಟ್ಟಿದ್ದರು. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದೀಯ ಎಂದು ಹೇಳಿದ್ದ ಟಿಸಿ, ಅದೇ ಕಾರಣಕ್ಕೆ ಟ್ರಾನ್ಸ್`ಫರ್ ಮಾಡಿದ್ದೇನೆ ಎಂದು ಹೇಳಿದ್ದರು. ಆದರೆ ಆರೋಪದಿಂದ ನೊಂದ ಜಗದೀಶ್, ಯಾವಾಗ ಆತ್ಮಹತ್ಯೆಗೆ ಯತ್ನಿಸಿದರೋ.. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು. ಇದು ಆಡಳಿತಾತ್ಮಕ ವರ್ಗಾವಣೆ ಎಂದರು ಅಧಿಕಾರಿಗಳು. ಆದರೆ, ಜನರಲ್ ಟ್ರಾನ್ಸ್ಫರ್ ಎಂದರೆ ಜಗದೀಶ್ ಒಬ್ಬರದ್ದೇ ಟ್ರಾನ್ಸ್ಫರ್ ಏಕೆ ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಏಕೆಂದರೆ ಟ್ರಾನ್ಸ್ಫರ್ ಆಗಿದ್ದುದು ಜಗದೀಶ್ ಮಾತ್ರ. ಮೇಲ್ನೋಟಕ್ಕೇ ಇದು ಜನರಲ್ ಟ್ರಾನ್ಸ್ಫರ್ ಅಲ್ಲ ಎಂಬುದು ಗೊತ್ತಾಯ್ತು. ಅಲ್ಲದೆ ಜಗದೀಶ್ ವಿರುದ್ಧ ಮಹಿಳೆಯರ ಜೊತೆ ಅಸಭ್ಯ ವರ್ತನೆಯ ಪ್ರಕರಣಗಳೂ ಇರಲಿಲ್ಲ.
ಕೆಂಡಾಮಂಡಲವಾದ ಕುಮಾರಸ್ವಾಮಿ. ಉತ್ತರಿಸಲು ಸರ್ಕಾರದ ಪರದಾಟ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಮಯಸ್ವಾಮಿ (Cheluvaraya Swamy) ವಿರುದ್ಧ ಮಗಿಬಿದ್ದ ಕುಮಾರಸ್ವಾಮಿ ( H D kumaraswamy) ಸದನದಲ್ಲಿ ಕೆಂಡಾಮಂಡಲವಾಗಿಬಿಟ್ಟರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ( Basavaraja Bommai) ಚೆಲುವರಾಯಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಪ್ರಕರಣದ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರೆ, ಕುಮಾರಸ್ವಾಮಿ ( H D kumaraswamy)ಹಿಂದಿನ ಸಂಪೂರ್ಣ ಕಥೆಯನ್ನು ಬಿಚ್ಚಿಟ್ಟರು. ಜಗದೀಶ್ ಪತ್ನಿ ಕಾಂತಾಪುರ ಗ್ರಾಮ ಪಂಚಾಯತಿಯ ಸದಸ್ಯೆ. ಆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಲು ಬೆಂಬಲ ನೀಡುವಂತೆ ಆಕೆಗೆ ತಿಳಿಸಲಾಗಿತ್ತು. ಬೆಂಬಲ ನೀಡದಿದ್ದರೆ ಜಗದೀಶ್ರನ್ನು ಬೇರೆ ಡಿಪೋಗೆ ವರ್ಗಾವಣೆ ಮಾಡುತ್ತೇವೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕಿದ್ದರು. ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಅವರ ಬೆಂಬಲವೂ ಇತ್ತು. ಇದಾದ ನಂತರ ಜಗದೀಶ್ರನ್ನು (Nagamangala) ನಾಗಮಂಗಲದಿಂದ ಮದ್ದೂರು (Madduru) ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಸಂಪೂರ್ಣ ಕಥೆಯನ್ನೇ ಹೇಳಿದರು. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ. ಹೀಗಾಗಿ ಸಾಕ್ಷ್ಯ ನಾಶ, ದಾಖಲೆಗಳನ್ನು ತಿರುಚುವ ಕೆಲಸಗಳಾಗುತ್ತಿವೆ. ಕೂಡಲೆ ಎಫ್ಐಆರ್ ದಾಖಲಿಸಿ, ಸೂಕ್ತ ರೀತಿಯ ತನಿಖೆ ನಡೆಯಬೇಕು. ತನಿಖಾ ವರದಿ ಬರುವವರೆಗೆ ಚೆಲುವರಾಯಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಚೆಲುವರಾಯ ಸ್ವಾಮಿ ನನಗೆ ಜಗದೀಶ್ ಗೊತ್ತಿಲ್ಲ. ಅವರ ಪತ್ನಿ ಜೆಡಿಎಸ್ ಸದಸ್ಯರು ಎಂಬುದೂ ಗೊತ್ತಿಲ್ಲ. ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ ಎಂದರೂ ಕುಮಾರಸ್ವಾಮಿ ತಣ್ಣಗಾಗಲಿಲ್ಲ. ಇಂತಹ ಕೊಲೆಗಡುಕ ರಾಜಕಾರಣ ಮಾಡಬೇಡಿ ಎಂದು ರೋಷಾವೇಶದಿಂದಲೇ ಮಾತನಾಡಿದರು. ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದವು. ಏಕವಚನಕ್ಕೂ ಬಂದವು.
ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನ ಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಬೇಕು. ಅವರ ಕುಟುಂಬದ ಪರಿಸ್ಥಿತಿಯೂ ಸರಿ ಇಲ್ಲ. ಒಬ್ಬ ಮಗ ಹೃದ್ರೋಗದಿಂದ ಬಳಲುತ್ತಿದ್ದಾನೆ. ಆತನ ಪತ್ನಿಗೆ ಕಿಡ್ನಿ ಸಮಸ್ಯೆ ಇದ್ದು ಡಯಾಲಿಸಿಸ್ ಮಾಡಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ವರ್ಗಾವಣೆ ಮಾಡುವುದು ಸರಿಯಲ್ಲ. ಆ ವ್ಯಕ್ತಿಯ ವರ್ಗಾವಣೆ ರದ್ದುಪಡಿಸಿ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕಾರ್ಯನಿರ್ವಹಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪರಿಶೀಲಿಸುವ ಭರವಸೆ ಸರ್ಕಾರದಿಂದ ದೊರೆತ ನಂತರ ವಿಷಯಕ್ಕೆ ತೆರೆ ಬಿತ್ತು. ಇನ್ನು ಪ್ರಕರಣದ ಬಗ್ಗೆ ತನಿಖೆ ನಡೆಸುವ ಭರವಸೆ ಕೊಟ್ಟ ಮೇಲೆ ವಿವಾದ ತಣ್ಣಗಾಯ್ತು.



