ಸಿದ್ದರಾಮಯ್ಯ ಕೋಲಾರದಲ್ಲೇ ನಿಲ್ಲೋದಾಗಿ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಒಂದಲ್ಲ.. ಎರಡಲ್ಲ.. ಹಲವು ಬಾರಿ ಹೇಳಿಕೆ ನೀಡಿ, ಕ್ಷೇತ್ರ ಸುತ್ತಾಡಿ.. ವಾಸ್ತುಪ್ರಕಾರದ ಮನೆಯನ್ನೂ ಹುಡುಕಿಕೊಂಡು ಕೋಲಾರವೇ ರಣರಂಗ ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಆದರೆ, ಕ್ಷೇತ್ರ ಫೈನಲ್ ಮಾಡುವ ಮುನ್ನ ಕಾಣುತ್ತಿದ್ದ ಅಂಶಗಳೇ ಬೇರೆ.. ಇದೇ ನನ್ನ ಕ್ಷೇತ್ರ ಎಂದು ಘೋಷಿಸಿದ ಮೇಲೆ ಕಾಣುತ್ತಿರುವ ಅಂಶಗಳೇ ಬೇರೆ. ಕೊಲಾರ ಫೈನಲ್ ಮಾಡಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಕೋಲಾರಕ್ಕೆ 4 ಬಾರಿ ಭೇಟಿ ನೀಡಿದ್ದಾರೆ. ವಾರ್ ರೂಂ ಕೂಡಾ ಸ್ಥಾಪನೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯಗೆ ಅವರದ್ದೇ ಆಪ್ತರ ಬಳಗ ಕೊಟ್ಟಿರುವ ರಿಪೋರ್ಟ್ ಆತಂಕಕಾರಿಯಾಗಿಯೇ ಇದೆ.

ಸೀಕ್ರೆಟ್ ವರದಿಯ ಪ್ರಕಾರ..
ಕಾಂಗ್ರೆಸ್ಗೆ ಕೋಲಾರ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ, ಅದರಲ್ಲೂ ಅತ್ಯಂತ ಕೆಳಗಿನ ಹಂತದಲ್ಲಿ ಕೆಲಸ ಮಾಡುವ ಬೂತ್ ಮಟ್ಟದ ನಾಯಕರಿಲ್ಲ. ವೋಟ್ ಕೃಡೀಕರಿಸುವ ಬೂತ್ ಮಟ್ಟದ ನಾಯಕರ ಕೊರತೆ ಇದೆ. ಅಹಿಂದ ಮತಗಳು ಚದುರಿ ಹೋಗಿವೆ. 2 ಲಕ್ಷ 31 ಸಾವಿರ ಮತಗಳಲ್ಲಿ 1ಲಕ್ಷ 70 ಸಾವಿರ ಅಹಿಂದ ಮತಗಳು ವಿಭಜನೆಯಾಗಿ ಜೆಡಿಎಸ್-ಬಿಜೆಪಿ ಪಾಲಾಗಿವೆ. ಅಹಿಂದ ಮತಗಳನ್ನೆ ನಂಬಿಕೊಂಡರೇ ಸಿದ್ದರಾಮಯ್ಯ ಗೆಲುವು ಕಷ್ಟ.
ಕ್ಷೇತ್ರದಲ್ಲಿ ನಡೆದ ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಪ್ರಚಾರ ನಿಧಾನವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಇರುವಾಗ, ದಲಿತ ವಿರೋಧಿ ಆರೋಪ ಕೆಲಸ ಮಾಡಿದರೆ ಕಷ್ಟ ಕಷ್ಟ. ಕೇವಲ ಕುರುಬರು ಹಾಗೂ ಮುಸ್ಲಿಮರ ಮತಗಳನ್ನೇ ನಂಬಿಕೊಂಡು ಎಲೆಕ್ಷನ್ ಮಾಡಲು ಬರುವುದಿಲ್ಲ.
ಹಾಲಿ ಶಾಸಕ ಜೆಡಿಎಸ್`ನ ಶ್ರೀನಿವಾಸ ಗೌಡ. ಅವರೀಗಾಗಲೇ ಜೆಡಿಎಸ್ ಬಿಟ್ಟು, ಕುಮಾರಸ್ವಾಮಿ, ದೇವೇಗೌಡರನ್ನು ಟೀಕಿಸುವ ಮೂಲಕ ಒಕ್ಕಲಿಗರನ್ನೂ ಎದುರು ಹಾಕಿಕೊಂಡಿದ್ದಾರೆ. ಅವರ ಜೊತೆ ಹೋದರೆ ಗೆಲುವು ಕಷ್ಟ. ಅಲ್ಲದೆ ವೈರಲ್ ಆಗಿರುವ ಆಡಿಯೋದಲ್ಲಿ 17 ಕೋಟಿಯ ಲೆಕ್ಕ, ಮಂತ್ರಿಪಟ್ಟದ ಮಾತುಗಳು ನೆಗೆಟಿವ್ ಆಗುವ ಸಾಧ್ಯತೆಗಳೂ ಇವೆ.
ಕೋಲಾರದಲ್ಲಿ ನಿಜಕ್ಕೂ ಪ್ರಭಾವಿಯಾಗಿರುವುದು ಕೆ.ಎಚ್.ಮುನಿಯಪ್ಪ. ಅವರನ್ನು ಯಾವುದೇ ಕಾರಣಕ್ಕೂ ದೂರ ಇಡಬೇಡಿ ಎಂದಿದೆಯಂತೆ ವರದಿ. ಆದರೆ ಮುನಿಯಪ್ಪ ಕಳೆದ ಬಾರಿ ತಮ್ಮನ್ನು ಸೋಲಿಸಿದ್ದು ಸಿದ್ದರಾಮಯ್ಯ ಬೆಂಬಲಿಗರು ಎಂದು ಹೇಳಿಕೊಂಡಿದ್ದರು. 

ರಮೇಶ್ ಕುಮಾರ್ ತಮ್ಮ ಗೆಲುವಿಗಾಗಿ ಸಿದ್ದರಾಮಯ್ಯರನ್ನು ಬಳಸಿಕೊಂಡರೇ ಎಂಬ ಅನುಮಾನಗಳೂ ಇವೆ. ಶ್ರೀನಿವಾಸಪುರದಲ್ಲಿ ನಿಲ್ಲಬೇಕಿರುವ ರಮೇಶ್ ಕುಮಾರ್ ಅವರಿಗೆ ಗೆಲುವು ಸುಲಭವಲ್ಲ. ಸಿದ್ದರಾಮಯ್ಯ ಪಕ್ಕದ ಕ್ಷೇತ್ರದಲ್ಲಿ ನಿಂತರೆ ಅದರ ಪ್ರಭಾವದಿಂದ ತಾವೂ ಗೆಲ್ಲಬಹುದು ಎಂಬ ಲೆಕ್ಕ ಹಾಕಿದ್ದಾರೆ ಎಂಬ ವಾದವಿದೆ.


ಯಾವ ರಿಪೋರ್ಟ್ ಕೂಡಾ ಇಲ್ಲ :
ಇದು ಸಿದ್ದರಾಮಯ್ಯ ಕೊಡುತ್ತಿರುವ ಸ್ಪಷ್ಟನೆ. ಕ್ಷೇತ್ರಕ್ಕೆ ನಿಲ್ಲುತ್ತೇನೆ ಎಂದ ಮೇಲೆ ಕ್ಷೇತ್ರಕ್ಕೆ ಬರಲೇಬೇಕು. ಮತದಾರರನ್ನು ಮಾತನಾಡಿಸಬೇಕು. ಹೀಗಾಗಿ ಬರುತ್ತಿದ್ದೇನೆ. ವರ್ತೂರು ಪ್ರಕಾಶ್ ಒಬ್ಬ ಚಿಲ್ಲರೆ. ಅವನ ಬಗ್ಗೆ ನಾನೇನು ಮಾತನಾಡೋದು ಎಂದಿದ್ದಾರೆ ಸಿದ್ದರಾಮಯ್ಯ.
ಇಂಟೆಲಿಜೆನ್ಸ್ ರಿಪೋರ್ಟ್ ಪ್ರಕಾರ :
ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು 50:50. ಸಿದ್ದರಾಮಯ್ಯ ಆಪ್ತರ ವರದಿ ಪ್ರಕಾರ 60:40. ಆದರೆ ಯಾವ ವರದಿಗಳಲ್ಲೂ ಕ್ಷೇತ್ರದಲ್ಲಿ ಹಾಲಿ ಗೆದ್ದಿದ್ದ ಜೆಡಿಎಸ್ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕ್ಷೇತ್ರದ ಮತದಾರರಂತೂ ಮಾತನಾಡುತ್ತಿದ್ದಾರೆ. ಎಲೆಕ್ಷನ್ ವರದಿಗಳ ಮೇಲೆ ನಡೆಯುವುದಿಲ್ಲ. ಅಖಾಡದಲ್ಲಿ ನಡೆಯುತ್ತದೆ.
ಬಾದಾಮಿಗೆ ಬನ್ನಿ ಪ್ಲೀಸ್ : ಈ ಮಧ್ಯೆ ಸಿದ್ದರಾಮಯ್ಯರನ್ನು ಮತ್ತೆ ಬಾದಾಮಿಗೆ ಕರೆದುಕೊಂಡು ಹೋಗೋಕೆ ದೊಡ್ಡ ಸೈನ್ಯವೇ ಬಾದಾಮಿಯಿಂದ ಹೊರಟಿದೆ. ಬಾದಾಮಿ ಕ್ಷೇತ್ರದ ವ್ಯಾಪ್ತಿಗೆ ಬರುವ ಕಟಗೇರಿ, ನಂದಿಕೇಶ್ವರ, ಮುಷ್ಟಿಗೇರಿ, ನೀಲಗುಂದ, ಜಾಲಿಹಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಿಂದ 200ಕ್ಕೂ ಹೆಚ್ಚು ವಾಹನ, ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರು ನಗರಗಳಿಂದ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಮನೆಗೆ ಬರಲಿದ್ದಾರೆ. ಇದು ಅಭಿಮಾನಿಗಳ ಮತ್ತಿಗೆ.



