ರೋಹಿಣಿ ಸಿಂಧೂರಿ. ಐಎಎಸ್ ಅಧಿಕಾರಿ…
ಈಕೆಯ ಹೆಸರನ್ನು ಇಡೀ ರಾಜ್ಯದ ಕನ್ನಡಿಗರು ಮೊತ್ತಮೊದಲಿಗೆ ಕೇಳಿದ್ದು ಐಎಎಸ್ ಆಫೀಸರ್ ಡಿ.ಕೆ.ರವಿ ಅತ್ಮಹತ್ಯೆ ಪ್ರಕರಣದಲ್ಲಿ. ಆದರೆ ಅದಕ್ಕೂ ಮೊದಲೇ ಕರ್ನಾಟಕದಲ್ಲಿ ಡ್ಯೂಟಿ ಮಾಡುತ್ತಿದ್ದರು ರೋಹಿಣಿ. ಮೂಲತಃ ಆಂಧ್ರಪ್ರದೇಶದವರು. 2009ನೇ ಕೇಡರ್ ಆಫೀಸರ್. ಕರ್ನಾಟಕದಲ್ಲಿ ವೃತ್ತಿ ಶುರುವಾಗಿದ್ದು ತುಮಕೂರು ಜಿಲ್ಲೆಯಿಂದ. ಅದಾದ ಮೇಲೆ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ.
ರೋಹಿಣಿ ಸಿಂಧೂರಿ : ಎ. ಮಂಜು, ಹೆಚ್.ಡಿ. ರೇವಣ್ಣ ಜೊತೆ ಹಾಸನದಲ್ಲೂ ಫೈಟ್
ರೋಹಿಣಿ ಸಿಂಧೂರಿ ಹಾಸನದಲ್ಲಿದ್ದಾಗ ಸಿದ್ದರಾಮಯ್ಯ ಸರ್ಕಾರವಿತ್ತು. ಆಗ ಹಾಸನದ ಉಸ್ತುವಾರಿ ಸಚಿವರಾಗಿದ್ದವರು ಎ.ಮಂಜು. ಈಗ ಬಿಜೆಪಿಯಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಜೆಡಿಎಸ್`ಗೆ ಹೋಗಲಿದ್ದಾರೆ. ಆಗ ಮಂಜು ಜೊತೆ ಜಟಾಪಟಿ ಶುರುವಾಗಿತ್ತು. ಅಷ್ಟೇ ಅಲ್ಲ, ಹೆಚ್.ಡಿ.ರೇವಣ್ಣ ಮತ್ತು ರೋಹಿಣಿ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು.


ವಿಶೇಷವೆಂದರೆ ಆಗ ಸಚಿವ ಎ.ಮಂಜು ಒತ್ತಾಯ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಿಸಿದ್ದರು. ಅದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೆಎಟಿ ಮೆಟ್ಟಿಲೇರಿದ್ದರು. ಆಗ ಇದೇ ಐಪಿಎಸ್ ರೂಪಾ ಹೇಳುವಂತೆ ರೋಹಿಣಿ ಅವರ ಪರ ನಿಂತಿದ್ದವರು ಅವರೇ. ಕೆಎಟಿಯಲ್ಲಿ ಹೇಗೆ ವಾದಿಸಬೇಕು ಎಂದು ಹೇಳಿಕೊಟ್ಟಿದ್ದೂ ಅವರೇ. ಈಗ ಅದೇ ರೂಪಾ ಮತ್ತು ರೋಹಿಣಿ ಮಧ್ಯೆ ಸಮರ ನಡೆಯುತ್ತಿದೆ. ವಿಚಿತ್ರವೆಂದರೆ ಆಗ ಹೆಚ್.ಡಿ.ರೇವಣ್ಣ, ರೋಹಿಣಿ ಸಿಂಧೂರಿ ಪರ ನಿಂತಿದ್ದರು. ಕೊನೆಗೆ ಕೆಎಟಿಯಲ್ಲಿ ರೋಹಿಣಿ ಗೆದ್ದು ಮತ್ತೆ ವಾಪಸ್ ಬಂದಾಗ ಅದೇ ರೇವಣ್ಣ, ಈ ರೋಹಿಣಿಯನ್ನು ಜಿಲ್ಲೆಯಿಂದ ಹೊರಕಳಿಸಿದರೆ ಸಾಕು ಎಂಬಷ್ಟು ರೋಸಿ ಹೋಗಿದ್ದರು.
ಮೈಸೂರಿನಲ್ಲಿ ಆಯುಕ್ತೆ ಶಿಲ್ಪಾ ನಾಗ್ ವಿರುದ್ಧವೂ ಹೋರಾಟ
2020ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡರು. ಜೂನ್ 2021ರ ವರೆಗೆ ಹುದ್ದೆಯಲ್ಲಿ ಮುಂದುವರೆದ ಅವರು, ಮೈಸೂರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗಿನ ವಿವಾದದ ಬಳಿಕ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಲಾಯಿತು.

ಚಾಮರಾಜನಗರ ಆಕ್ಸಿಜನ್ ಸಿಲಿಂಡರ್ ವಾರ್
ಚಾಮರಾಜನಗರದಲ್ಲಿ ಸಂಭವಿಸಿದ್ದ ಆಮ್ಲಜನಕ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಮೃತಪಟ್ಟದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಕಾಲಕ್ಕೆ ಆಮ್ಲಜನಕ ನೀಡದೆ ತಡೆದಿದ್ದೇ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಿಸಿದ್ದರು. 

ಸಾ.ರಾ.ಮಹೇಶ್ ಮತ್ತು ರೋಹಿಣಿ ಸಂಧಾನದ ಮಾತಿನ ಹಿಂದೆ..
ಮೈಸೂರಿನ ಕೆಆರ್ ನಗರ ಶಾಸಕ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ಸಂಘರ್ಷ ಮಾಡಿಕೊಂಡಿದ್ದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಐಶಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರಿ ಹಣ ದುರುಪಯೋಗ, ಕೋವಿಡ್ ಸಂದರ್ಭದ ಕಾರ್ಯವೈಖರಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ.

ಕೊನೆಗೆ ರೋಹಿಣಿಯವರೇ, ಸಾ.ರಾ.ಮಹೇಶ್ ಅವರ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ರೂಪಾ ಅವರು ಕೇಳಿದ್ದೂ ಇದೇ ಪ್ರಶ್ನೆಗಳನ್ನ. ಸಂಧಾನ ಏಕೆ ಎನ್ನುವುದೇ ಅವರ ಪ್ರಶ್ನೆ. ಪತ್ರಿಕೆಗಳಲ್ಲಿ ವರದಿ ಬಂದಾಗ ಮೌನವಾಗಿದ್ದ ಸಾ.ರಾ.ಮಹೇಶ್, ರೂಪಾ ಪ್ರಶ್ನೆ ಎತ್ತಿದ ಬಳಿಕ ನಾನು ಸಂಧಾನದ ಮಾತುಕತೆ ನಡೆಸಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಫೋಟೋ ತೋರಿಸಿದಾಗ ನಾನು ಶಾಸಕ, ಅವರು ಅಧಿಕಾರಿ. ಸರ್ಕಾರಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ತೆಗೆದಿರುವ ಫೋಟೋ ಅದು ಎಂದಿದ್ದರು. ಗೊಂದಲ ಬಗೆಹರಿದಿಲ್ಲ. ಅನುಮಾನಕ್ಕೆ ಉತ್ತರವೂ ಸಿಕ್ಕಿಲ್ಲ.
ಮೈಸೂರು ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದೆ. ಯಾವುದೇ ಹೊಸ ಕಟ್ಟಡ ಕಾಮಗಾರಿಯನ್ನು ಅಲ್ಲಿ ಮಾಡುವಂತಿಲ್ಲ. ಆದರೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು 5 ವರ್ಷಗಳ ಹಿಂದಿನ ಯೋಜನೆಯಾಗಿದೆ. ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ” ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದರು.
ಸಾಧನೆಯ ಇತಿಹಾಸವೂ ಜೊತೆಯಲ್ಲಿದೆ..
ತುಮಕೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ (ತುಮಕೂರಿನಲ್ಲೇ ಮೊದಲ ಪೋಸ್ಟಿಂಗ್) ತೆರಿಗೆ ಸಂಗ್ರಹದ ಗಣಕೀಕರಣ, ನಿಗಮ ಭೂಮಿ ಸ್ವಾಧೀನ, ಜನನಿಬಿಡ ರಸ್ತೆಗಳಲ್ಲೂ ಯಶಸ್ವಿ ರಸ್ತೆ ಕಾಮಗಾರಿ ಇತ್ಯಾದಿ ಜನಪರ ಕಾರ್ಯಗಳಿಗೆ ಇಂದಿಗೂ ತುಮಕೂರಿನ ಜನತೆ ರೋಹಿಣಿಯವರನ್ನು ಸ್ಮರಿಸುತ್ತಾರೆ. 2014 ರ ಒಂದೇ ವರ್ಷದಲ್ಲಿ ರೋಹಿಣಿಯವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅತ್ಯಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ದೇಶದ ಟಾಪ್ ಮೂರು ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿತ್ತು.
ಆದರೆ ಈ ಎರಡು ವಿಷಯ ಹೊರತುಪಡಿಸಿದರೆ ರೋಹಿಣಿ ಸಿಂಧೂರಿ ಎಂಬ ಅಧಿಕಾರಿಯೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು.



