ಎಲೆಕ್ಷನ್ ಮುಗಿದು ರಿಸಲ್ಟ್ ಬಂದಿದ್ದೇ ತಡ, ಕಾಂಗ್ರೆಸ್ ಹಣೆಬರಹವೇ ಬದಲಾಗಿ ಹೋಯ್ತು. ಎಲೆಕ್ಷನ್ನಿಗೆ ಮುಂಚೆ ಜೋಡೆತ್ತುಗಳಂತೆ ಓಡಾಡುತ್ತಿದ್ದ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಚೇಂಜ್ ಆದರು. ಚುನಾವಣೆಗೆ ಮುಂಚೆ ಒಗ್ಗಟ್ಟಿನ ಮಂತ್ರ ಜಪಿಸಿದವರು ಇವರೇನಾ ಎಂದು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡರು. ಈ 4 ದಿನಗಳಲ್ಲಿ ಸಿಎಂ-ಡಿಸಿಎಂ ವಿವಾದ ಇತ್ಯರ್ಥವಾಗುವವರೆಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಒಬ್ಬರನ್ನೊಬ್ಬರು ಮುಖ ನೋಡಲಿಲ್ಲ. ಫೋನ್ ಕನೆಕ್ಷನ್`ನಲ್ಲಿದ್ದರಾ.. ಗೊತ್ತಿಲ್ಲ. ಜೊತೆಯಲ್ಲಿರುವವರ ಪ್ರಕಾರ ಫೋನ್ ಸಂಭಾಷಣೆಯೂ ಇವರಿಬ್ಬರ ನಡುವೆ ನಡೆದಿರಲಿಲ್ಲ. ಅಂತಹ ಏಟು-ಎದಿರೇಟುಗಳ ಕಥೆ ಇದು. ಇನ್`ಸೈಡ್ ಸ್ಟೋರಿ.
ಏಟು ಎದಿರೇಟು : 01
ಮೊದಲಿಗೆ ಸಿದ್ದರಾಮಯ್ಯ ಶಾಸಕರ ಬೆಂಬಲ ಇದ್ದವರಿಗೇ ಸಿಎಂ ಪಟ್ಟ ಎಂದರು. ಅವರಿಗೆ ಗೆದ್ದಿರುವ ಶಾಸಕರಲ್ಲಿ ಬಹುತೇಕರು ನನ್ನ ಬೆಂಬಲಿಗರು ಎಂಬುದು ಗೊತ್ತಿತ್ತು. ಹೀಗಾಗಿಯೇ ಸೀಕ್ರೆಟ್ ವೋಟಿಂಗ್ ಕೂಡಾ ನಡೀತು. ಆದರೆ ಡಿಕೆಗೆ ಇದು ಗೊತ್ತಿತ್ತು. ಡಿಕೆಶಿ ಬಲ ಹೈಕಮಾಂಡ್. ಹೀಗಾಗಿಯೇ ಅವರು ನಿರ್ಧಾರ ಹೈಕಮಾಂಡಿಗೆ ಬಿಟ್ಟಿದ್ದು. ಎಲ್ಲ ಶಾಸಕರೂ ನನ್ನವರೇ ಎಂಬ ಎಮೋಷನಲ್ ಅಸ್ತ್ರ ಪ್ರಯೋಗಿಸಿದರು.


ಸಿದ್ದು ಬಣದ ಎಂಬಿ ಪಾಟೀಲ್, ಮಹದೇವಪ್ಪ, ಕೆ.ಎನ್.ರಾಜಣ್ಣ ಮೊದಲಾದವರು ಓಪನ್ ಆಗಿ ಆದರೆ ಪರೋಕ್ಷವಾಗಿ ಸಿದ್ದು ಪರ ಬ್ಯಾಟ್ ಬೀಸಿದರು. ಅದೂವರೆಗೆ ಬಹಿರಂಗ ಹೇಳಿಕೆ ನೀಡದೇ ಇದ್ದ ಡಿ.ಕೆ.ಸುರೇಶ್ ಅಣ್ಣ ಸಿಎಂ ಆಗಬೇಕು ಎಂದರು. ಆಗ ಡಿಕೆಶಿ ಬಣದ ಕೆಲವು ಶಾಸಕರೂ ಬಹಿರಂಗವಾಗಿ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಬಣದ ಶಾಸಕರು ಸ್ವಲ್ಪ ಮೌನವಾದರು.
ಏಟು ಎದಿರೇಟು : 03
ಎಲ್ಲರೂ ಅಂದುಕೊಂಡಿದ್ದದ್ದು, ಸಿದ್ದರಾಮಯ್ಯ ಸಿಎಂ ಆಗ್ತಾರೆ. ಡಿಕೆಶಿ ಸಂಧಾನಕ್ಕೆ ಬಂದು, ಒಪ್ಪಂದಕ್ಕೆ ಬರ್ತಾರೆ ಅಂತಾ. ಏಕೆಂದರೆ ಆರಂಭದಲ್ಲಿ ಅಧಿಕಾರ ಹಂಚಿಕೆ ಸೂತ್ರ, ಸಂಧಾನಕ್ಕೆ ಡಿಕೆಶಿ ಒಪ್ಪಲೇ ಇಲ್ಲ. ಶ್ರಮ ಪಟ್ಟಿದ್ದೇನೆ, ಕೂಲಿ ಕೊಡಿ ಎಂದೇ ಹಠಕ್ಕೆ ಬಿದ್ದರು. ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ಹೇಳುತ್ತಿದ್ದಂತೆಯೇ ಸಿದ್ದರಾಮಯ್ಯ ದೆಹಲಿಗೆ ಹೊರಟರು. ಆದರೆ ಡಿಕೆ ಹೊಟ್ಟೆನೋವಿನ ನೆಪ ಹೇಳಿ ಒಂದು ದಿನ ಕಾಯಿಸಿದರು. ಯೆಸ್, ಗೇಮ್ ಶುರುವಾಗಿದ್ದೇ ಆಗ..


ಇಬ್ಬರನ್ನೂ ಕರೆಸಿ ಎದುರಾಬದುರು ಕೂರಿಸಿ ಮಾತುಕತೆ ನಡೆಸಿ ಮುಗಿಸಿಬಿಡೋಣ ಎಂದುಕೊಂಡವರಿಗೆ ಪರಿಸ್ಥಿತಿ ಅಷ್ಟು ಈಸಿಯಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಅಲರ್ಟ್ ಆಗಿದ್ದು ರಾಹುಲ್ ಗಾಂಧಿ. ತಕ್ಷಣ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೂಚನೆ ಕೊಟ್ಟು, ಇಬ್ಬರೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ ನಂತರ ತಮ್ಮ ಬಳಿಗೆ ಬರುವಂತೆ ಸೂಚನೆ ಕೊಟ್ಟರು. ಡಿಕೆ ಶಿವಕುಮಾರ್ ಗೇಮ್ ಕೆಲಸ ಮಾಡಿತ್ತು. ಸಿದ್ದರಾಮಯ್ಯ ಬಣದಲ್ಲಿ ಸಣ್ಣಗೊಂದು ಅಸಹನೆ ಶುರುವಾಯ್ತು. ಅದು ಸಿದ್ದರಾಮಯ್ಯನವರ ಮುಖಭಾವದಲ್ಲೂ ವ್ಯಕ್ತವಾಯ್ತು.
ಏಟು ಎದಿರೇಟು : 05
ಒಂದಿಡೀ ದಿನ ದೆಹಲಿಯಲ್ಲಿ ಮಾತುಕತೆಗಳು ನಡೆದರೂ ಪಟ್ಟು ಸಡಿಲವಾಗಲಿಲ್ಲ. ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಟೀಮಿನ ಶಾಸಕರು ವಾಸ್ತವ್ಯ ಹೂಡಿದ್ದ ಹೋಟೆಲ್ಲಿನಲ್ಲಿ ರೂಮುಗಳಿಗೆ ಬರ ಇರಲಿಲ್ಲ. ಆದರೆ ಡಿಕೆಶಿ ಹೋಗಿದ್ದು, ಸಂಸದರೂ ಆಗಿರುವ ಡಿ.ಕೆ.ಸುರೇಶ್ ಮನೆಗೆ. ತಮ್ಮ ಜೊತೆ ಯಾರನ್ನೂ ಕರೆದೊಯ್ಯಲಿಲ್ಲ. ಶಾಸಕರಂತೂ ಇರಲೇ ಇಲ್ಲ. ದೆಹಲಿಯಲ್ಲಿ ಓಡಾಡಿದ್ದು ಸುರೇಶ್ ಮಾತ್ರ. ಆ ಮೂಲಕ ತಾವು ಗುಂಪು ಕಟ್ಟಿಕೊಂಡು ಬರುವವರಲ್ಲ ಎಂಬ ಸಂದೇಶ ಕೊಟ್ಟರು.


ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿಕೊಂಡ ಮೇಲೆ ನಡೆದದ್ದು ಇನ್ನೊಂದು ಗೇಮ್. ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ. ಸಭೆಯ ಒಳಗಿನ ಮಾತುಗಳು ಹೊರಬರುವುದು ಬೇಡ ಎಂಬ ಸಂದೇಶ ಕೊಟ್ಟಿದ್ದರೂ, ಸಿದ್ದರಾಮಯ್ಯ ಬಣದ ಕೆಲವರು ಸಿದ್ದರಾಮಯ್ಯ ಸಿಎಂ ಆಗಿಬಿಟ್ಟರು ಎಂದು ಸುದ್ದಿ ಹಬ್ಬಿಸಿತು. ಮೂಲಗಳ ಪ್ರಕಾರ ಅಷ್ಟು ಹೊತ್ತಿಗೆ ಸೋನಿಯಾ ಜೊತೆ ಮಾತನಾಡಿದ್ದ ಡಿಕೆಶಿ ಒಪ್ಪಿದ್ದರಾದರೂ, ಸಿದ್ದು ಬಣದವರಿಗೆ ಏಟು ಕೊಡುವ ಹಠಕ್ಕೆ ಬಿದ್ದರು. ಆಗ ಅನಿವಾರ್ಯವಾಗಿ ಸುರ್ಜೇವಾಲ ಹೊರಗೆ ಬಂದು ಇನ್ನೂ ಫೈನಲ್ ಆಗಿಲ್ಲ. ವದಂತಿಗಳನ್ನು ನಂಬಬೇಡಿ ಎಂದು ಹೇಳಿದ್ದಷ್ಟೇ ಅಲ್ಲ, ಅಶೋಕ್ ಪಟ್ಟಣ್, ಪುಷ್ಪ ಅಮರನಾಥ್ ಅವರಿಗೆ ನೋಟಿಸ್ ಕೊಡಬೇಕಾಯ್ತು. ಸಿದ್ದರಾಮಯ್ಯ ಬೆಂಬಲಿಗರಿಗೂ ಬಿಸಿ ಮುಟ್ಟಿತು.
ಏಟು ಎದಿರೇಟು : 07
ಈಗ ನಿರ್ಧಾರವೇನೋ ಆಗಿದೆ. ದೆಹಲಿಯಲ್ಲಿ 4 ದಿನ ಇದ್ದರೂ ಒಬ್ಬರನ್ನೊಬ್ಬರು ಮುಖ ನೋಡದಿದ್ದರೂ ಒಟ್ಟಿಗೇ ಸರ್ಕಾರ ನಡೆಸುವ ತೀರ್ಮಾನಕ್ಕೆ ಬಂದಾಗಿದೆ. ಡಿಕೆಶಿಯಾಗಲೀ, ಸಿದ್ದು ಆಗಲೀ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಪ್ರಕಾರ ಡಿಸಿಎಂ ಪೋಸ್ಟ್ ಕೊಡುವುದೇ ಇಷ್ಟ ಇರಲಿಲ್ಲ. ಕೊಡುವುದಾದರೆ ದಲಿತರಿಗೆ ಒಂದು. ಲಿಂಗಾಯತರಿಗೆ ಒಂದು, ಮುಸ್ಲಿಮರಿಗೆ ಒಂದು ಹಾಗೂ ಒಕ್ಕಲಿಗರಿಗೆ ಒಂದು ಕೊಡಿ. ಒಬ್ಬ ಸಿಎಂ ಹಾಗೂ 4 ಡಿಸಿಎಂ ಇರಲಿ ಎಂದಿದ್ದರು. ಆ ಮೂಲಕ ನಂ.2 ಎಂದರೆ ಡಿಕೆ ಒಬ್ಬರೇ ಅಲ್ಲ ಎಂಬ ಮೆಸೇಜ್ ತಲುಪಿಸಲು ಮುಂದಾಗಿದ್ದರು. ಆದರೆ ಅಷ್ಟೊಂದು ಜನ ಡಿಸಿಎಂ ಆದರೆ, ಎಲ್ಲರೂ ಉತ್ತರದಾಯಿತ್ವಕ್ಕೆ ಹಕ್ಕು ಮಂಡಿಸುತ್ತಾರೆ ಎಂಬ ಅರಿವಿದ್ದ ಡಿಕೆ, ಅದಕ್ಕೆ ಬ್ರೇಕ್ ಹಾಕಿದರು. ಒಬ್ಬರೇ ಡಿಸಿಎಂ ಎಂಬ ಸುದ್ದಿ ಹೊರಬರುವಂತೆ ನೋಡಿಕೊಂಡರು.


ಇನ್ನು ಸಂಪುಟದಲ್ಲಿ ವಿಶೇಷ ಅಧಿಕಾರ ಇಲ್ಲದಿದ್ದರೂ ಪ್ರಬಲ ಖಾತೆಗಳಿಗಾಗಿ ಡಿಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇಂಧನ ಮತ್ತು ನೀರಾವರಿ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವ ಹಾಗೂ ತಮ್ಮ ಬೆಂಬಲಿಗರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ ಮೊದಲಾದವರಿಗೂ ಪ್ರಬಲ ಖಾತೆ ಸಿಗುವಂತೆ ನೋಡಿಕೊಳ್ಳುವುದು ಡಿಕೆ ಪ್ಲಾನ್. ಆಗ ಎದಿರೇಟು ಕೊಡಲಿರುವುದು ಸಿದ್ದರಾಮಯ್ಯ. ಏನ್ ಕೊಡ್ತಾರೋ.. ಗೊತ್ತಿಲ್ಲ.
ಒಟ್ಟಿನಲ್ಲಿ ಏಟು-ಎದಿರೇಟುಗಳ ಮರ್ಮಯುದ್ಧವಂತೂ ಸಖತ್ತಾಗಿದೆ.



