ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದು ನಿಜಕ್ಕೂ ಅಚ್ಚರಿಯ ಆಯ್ಕೆಯೇ ಸರಿ. ಸ್ಪೀಕರ್ ಹುದ್ದೆಗೆ ಕೇಳಿ ಬರುತ್ತಿದ್ದುದು ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ ಮತ್ತು ಹೆಚ್.ಕೆ.ಪಾಟೀಲ್ ಹೆಸರುಗಳು. ಯು.ಟಿ.ಖಾದರ್ ಹೆಸರು ಲಿಸ್ಟಿನಲ್ಲೇ ಇರಲಿಲ್ಲ. ಆದರೆ ದಿಢೀರನೆ ಖಾದರ್ ಹೆಸರು ಬಂದಿರುವುದು ವಿಶೇಷ. ಯು.ಟಿ.ಖಾದರ್ ಸ್ಪೀಕರ್ ಹುದ್ದೆಗೇರಿದರೆ ಕರ್ನಾಟಕ ರಾಜ್ಯ ವಿಧಾನಸಭೆಯ ಮೊದಲ ಸ್ಪೀಕರ್ ಎನಿಸಿಕೊಳ್ಳಲಿದ್ದಾರೆ.
ಈಗಾಗಲೇ ಅಲ್ಪ ಸಂಖ್ಯಾತ ಸಮುದಾಯದ ಜಮೀರ್ ಅಹ್ಮದ್ ಅವರನ್ನು ಮಿನಿಸ್ಟರ್ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಸ್ಪೀಕರ್ ಹುದ್ದೆಯನ್ನೂ ಮುಸ್ಲಿಮರಿಗೇ ಕೊಟ್ಟಿದೆ.
ಯು.ಟಿ.ಖಾದರ್ ಮಂಗಳೂರಿನ ಉಳ್ಳಾಲದವರು. ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪ್ರಬಲವಾಗಿದ್ದರೂ, ಯು.ಟಿ.ಖಾದರ್ ಹಿಂದೂಗಳ ವಿಶ್ವಾಸ ಗೆದ್ದುಕೊಂಡೇ ಗೆಲ್ಲುತ್ತಿದ್ದಾರೆ. ವಲಸೆ ಬಂದವರಲ್ಲ, ಮೂಲತಃ ಕಾಂಗ್ರೆಸ್ಸಿಗರು. ಈ ಸಲ ಗೆದ್ದಿದ್ದು ಸತತ 5ನೇ ಬಾರಿ. ಈ ಮೊದಲು ಸೋತವರೇ ಅಲ್ಲ. 2007ರಲ್ಲಿ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ನಿಧನರಾದಾಗ ಸ್ಪರ್ಧಿಸಿ ಶಾಸಕರಾದವರು ಯು.ಟಿ.ಖಾದರ್. ಅದಾದ ಮೇಲೆ ಸತತವಾಗಿ 2008, 2013, 2018 ಹಾಗೂ ಈಗ 2023ರಲ್ಲಿ ಗೆದ್ದಿದ್ದಾರೆ.
ಎನ್ಎಸ್ಯುಐ ಸಂಘಟನೆಯ ಮೂಲಕ ಪಕ್ಷಕ್ಕೆ ಬಂದ ಯು.ಟಿ.ಖಾದರ್, ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದವರು. ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ-ನಾಗರಿಕ ಪೂರೈಕೆ ಖಾತೆ ನಿರ್ವಹಿಸಿದ್ದವರು. 2018ರಲ್ಲಿ ಕರಾವಳಿಯಲ್ಲಿ ಗೆದ್ದಿದ್ದ ಏಕೈಕ ಕಾಂಗ್ರೆಸ್ ನಾಯಕ ಯು.ಟಿ.ಖಾದರ್.
ಇವರ ಆಯ್ಕೆಯ ಹಿಂದೆಯೂ ಒಂದು ಸ್ಟೋರಿ ಇದೆ. ಸ್ಪೀಕರ್ ಆಯ್ಕೆ ಫೈನಲ್ ಮಾಡುವುದಕ್ಕಾಗಿಯೇ ದೆಹಲಿಯಿಂದ ವೀಕ್ಷಕರ ತಂಡ ಬಂದಿತ್ತು. ವೀಕ್ಷಕರ ತಂಡದಲ್ಲಿ ವೇಣುಗೋಪಾಲ್, ಸುರ್ಜೇವಾಲಾ ಬಂದಿದ್ದರು. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಯಾರು ಪ್ರಯತ್ನಿಸಿದರೂ ರುತ್ತಿದ್ದುದು ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ ಮತ್ತು ಹೆಚ್.ಕೆ.ಪಾಟೀಲ್ ಒಪ್ಪಲಿಲ್ಲ. ಟಿ.ಬಿ.ಜಯಚಂದ್ರ ಫೋನ್ ಕೂಡಾ ತೆಗೆಯದೆ ಕುಳಿತಾಗ ಯು.ಟಿ.ಖಾದರ್ ಅವರನ್ನು ಒಪ್ಪಿಸಿದರು ಎನ್ನಲಾಗಿದೆ. ಅಷ್ಟೇ ಅಲ್ಲ, 2 ವರ್ಷದ ನಂತರ ಮತ್ತೆ ಮಂತ್ರಿ ಮಾಡುವ ಭರವಸೆಯನ್ನೂ ಕೊಟ್ಟಿದ್ದಾರಂತೆ. ಹೀಗಾಗಿ ಇಷ್ಟವಿಲ್ಲದಿದ್ದರೂ ಸ್ಪೀಕರ್ ಹುದ್ದೆಗೆ ಖಾದರ್ ಒಪ್ಪಿಕೊಂಡಿದ್ದಾರಂತೆ.
ಯು.ಟಿ.ಖಾದರ್ ಎಲ್ಎಲ್ಬಿ ಪದವೀಧರ. ಕಾಂಗ್ರೆಸ್ನಲ್ಲೀಗ ನಂ.1 ಮುಸ್ಲಿಂ ನಾಯಕರಾಗಿರುವ ಜಮೀರ್ ಅಹ್ಮದ್ ಮಾದರಿಯ ನಾಯಕರಲ್ಲ. ಮಾತು ಮೃದು, ಹಾಗಂತ ಹಿಂಜರಿಯುವವರೂ ಅಲ್ಲ. ಆದರೆ ಮೂಲಭೂತವಾದಿ ಮುಸಲ್ಮಾನರಿಗೆ ಅಪಥ್ಯ. ಅತ್ತ ಕಟ್ಟರ್ ಹಿಂದೂಗಳಿಗೂ ಅಪಥ್ಯ. ಹಿಜಾಬ್ ಗಲಾಟೆ ವಿಷಯದಲ್ಲಿ ಅತ್ತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ, ಇತ್ತ ವಿದ್ಯಾರ್ಥಿಗಳನ್ನು ಹಿಜಾಬ್`ಗಿಂತ ಶಿಕ್ಷಣ ಮುಖ್ಯ. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ ಎಂದಿದ್ದರು. ವಿನಾಕಾರಣ ವಿವಾದ ಹುಟ್ಟುಹಾಕಿದ್ದೀರಿ ಎಂದು ಬಿಜೆಪಿಯನ್ನು ಟೀಕಿಸುತ್ತಲೇ, ಇತ್ತ ವಿದ್ಯಾರ್ಥಿನಿಯರಿಗೆ ನೀವು ಇಂಡಿಯಾದಲ್ಲಿದ್ದೀರಿ, ಇಲ್ಲಿರುವಷ್ಟು ಸ್ವಾತಂತ್ರ್ಯ, ಸವಲತ್ತು ಎಲ್ಲೂ ಇಲ್ಲ. ವಿದ್ಯಾಭ್ಯಾಸಕ್ಕೆ ಗಮನ ಕೊಡಿ ಎಂದು ಬುದ್ದಿವಾದ ಹೇಳಿದ್ದರು. ಇಂತಹ ವ್ಯಕ್ತಿ ಸ್ಪೀಕರ್ ಹುದ್ದೆಗೆ ಘನತೆ ತಂದುಕೊಡುವುದರಲ್ಲಿ ಅನುಮಾನವೇ ಇಲ್ಲ.



