ಮಂಡ್ಯದಲ್ಲಿ ಮಂಡ್ಯದವರಿಗಾಗಿ ಒಂದು ಪ್ರತ್ಯೇಕ ಔತಣಕೂಟ ನಡೆಸುತ್ತೇವೆ ಎಂದಿದ್ದರು ಸುಮಲತಾ. ಅಭಿಷೇಕ್-ಅವಿವಾ ಬೀಗರೂಟಕ್ಕೆ ಸಿದ್ಧತೆಯೂ ಜೋರಾಗಿದ್ದು, 14 ಟನ್ ಚಿಕನ್..ಮಟನ್.. ವ್ಯವಸ್ಥೆಯಾಗಿದೆ. ಅಪ್ಪಟ ಬೀಗರೂಟ. ಗೌಡರ ಬೀಗರೂಟ.
ಮದುವೆ..ಆರತಕ್ಷತೆ..ಸಂಗೀತ ಸಂಜೆ.. ಹೀಗೆ ಬಂಧುಗಳೊಡನೆ ಎಲ್ಲವನ್ನೂ ಸಂಭ್ರಮದಿಂದಲೇ ಮುಗಿಸಿರುವ ಸುಮಲತಾ. ಒಬ್ಬನೇ ಒಬ್ಬ ಮಗನ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ಬದುಕಲ್ಲಿ ಅವಿವಾ ಸೊಸೆಯಾಗಿ ಹೆಜ್ಜೆಯಿಟ್ಟಿದ್ದಾರೆ. ಈಗ ಅಂಬರೀಷ್ ಅತೀ ಹೆಚ್ಚು ಪ್ರೀತಿಸುತ್ತಿದ್ದ ಮಂಡ್ಯದ ಜನರ ಮನಸ್ಸನ್ನು ತಣಿಸುವ ಸರದಿ. ಮಂಡ್ಯದಲ್ಲಿ ಅದ್ಧೂರಿ ಬೀಗರೂಟಕ್ಕೆ ಸಿದ್ಧತೆ ನಡೆದಿದೆ.
ಜೂನ್ 16ರಂದು ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಬೀಗರೂಟ ಸಮಾರಂಭ ನಡೆಯಲಿದೆ. ಬೀಗರೂಟಕ್ಕಾಗಿಯೇ ಸುಮಾರು 7 ಟನ್ ಮಟನ್ ಮತ್ತು 7 ಟನ್ ಚಿಕನ್ ತರಿಸಲಾಗಿದೆ. ಈಗಾಗಲೇ ಗಜ್ಜಲಗೆರೆಯಲ್ಲಿ ಸಿದ್ಧತೆ ಆರಂಭವಾಗಿದ್ದು, ಸುಮಾರು 1 ಲಕ್ಷ ಜನರಿಗೆ ಬೀಗರೂಟ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಅಕಸ್ಮಾತ್ ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ಜರ್ಮನ್ ಟೆಂಟ್ ಹಾಕಲಾಗುತ್ತಿದೆ.
ವಿಐಪಿ ಹಾಗೂ ಸಾಮಾನ್ಯ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೀಗರೂಟಕ್ಕೆ ಬಂದ ಜನರು ವಧು- ವರರಿಗೆ ಶುಭಕೋರಲು ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿ ವೇದಿಕೆ ಅಂತ ಇರೋದಿಲ್ಲ. ಜನರು ಊಟ ಮಾಡುವ ಪಂಕ್ತಿಯಲ್ಲೇ ಸುಮಲತಾ ಅಂಬರೀಶ್, ಅಭಿಷೇಕ್, ಅವಿವಾ ಅವರು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಂಡ್ಯ ಶೈಲಿಯಲ್ಲಿಯೇ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ.
ಇನ್ನು, ಊಟದಲ್ಲಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್ ಫ್ರೈ, ಎರಡು ರೀತಿ ಚಿಕನ್ ವೆರೈಟಿ, ಘೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆ ಹಣ್ಣು, ಬೀಡಾ, ನಂದಿನಿ ಐಸ್ ಕ್ರೀಂ ಇರಲಿದೆ.



