ಬಿಬಿಸಿ ಎಂಬ ಬ್ರಿಟಿಷ್ ಚಾನೆಲ್ ಒಂದು ಡಾಕ್ಯುಮೆಂಟರಿ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸಿದೆ. ಒಂದಲ್ಲ.. ಮೂರು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ಕೊಟ್ಟ ತೀರ್ಪಿಗೆ ವಿರುದ್ಧವಾಗಿ ಸಾಕ್ಷ್ಯಚಿತ್ರ ಸಿದ್ಧ ಮಾಡಿ ಜಗತ್ತಿನ ಮುಂದಿಟ್ಟು ನಾವು ಹೇಳುತ್ತಿರುವುದೇ ಸತ್ಯ ಎಂದು ಬೊಬ್ಬೆ ಹೊಡೆಯುತ್ತಿದೆ. ಗುಜರಾತ್ ಗಲಭೆಯಲ್ಲಿ ಮೋದಿಯವರ ಕೈವಾಡವಿತ್ತು ಎನ್ನುವುದು ಬಿಬಿಸಿ ಹೇಳೋಕೆ ಹೊರಟಿರುವ ವಿಷಯ. 

ಬಿಬಿಸಿ ಷೇರ್ ಹೆಚ್ಚಾಗಿದ್ಧೇಕೆ?
2019ರ ಮಾರ್ಚ್ ಹಾಗೂ 2021ರ ಮಾರ್ಚ್ ನಡುವೆ ಭಾರತದಲ್ಲಿ ಬಿಬಿಸಿ ಷೇರುಗಳ ಮೌಲ್ಯ ಶೇ.173ರಷ್ಟು ಹೆಚ್ಚಾಗಿದೆ. ಜಗತ್ತಿನ ಬಿಬಿಸಿ ಷೇರುಗಳ ಮೌಲ್ಯಕ್ಕಿಂತ ಭಾರತದಲ್ಲಿ ಬಿಬಿಸಿ ಷೇರುಗಳ ಮೌಲ್ಯ 5 ಪಟ್ಟು ಹೆಚ್ಚು. ಷೇರುಗಳ ಗ್ರೋಥ್ ಅರ್ಥಾತ್ ಬೆಳವಣಿಗೆಯ ವೇಗ ಇಡೀ ಜಗತ್ತು ಒಂದು ವೇಗದಲ್ಲಿದ್ದರೆ, ಭಾರತದಲ್ಲಿ ಮಾತ್ರ ಶೇ.35ರಷ್ಟು ಹೆಚ್ಚು. ಬಿಬಿಸಿ ಷೇರುಗಳಲ್ಲಿ ಭಾರತದ ಷೇರುಗಳ ಮೌಲ್ಯ 2019ರ ಮಾರ್ಚ್ನಲ್ಲಿ ಶೇ.11.14ರಷ್ಟಿತ್ತು. 2021ರ ಮಾರ್ಚ್ನಲ್ಲಿ ಶೇ.23.11 ರಷ್ಟಕ್ಕೆ ಏರಿತು. ಇದು ವಿಶ್ಲೇಷಣಕಾರ ಅಮೋಲ್ ಪಾರ್ಥ್ ಹೇಳುತ್ತಿರುವ ಅಂಕಿ ಸಂಖ್ಯೆಗಳ ವಿವರ. ಹಾಗಾದರೆ ಭಾರತದಲ್ಲಿ ಭಾರತ ದ್ವೇಷಕ್ಕೆ ದುಡ್ಡು ಹುಟ್ಟುತ್ತಿದೆಯಾ?
ಎರಡೂ ಕಡೆಯಿಂದ ಲಾಭ ಹೇಗೆ?
2020ರ ದೆಹಲಿ ಗಲಭೆಯಲ್ಲಿ ಬಿಬಿಸಿಯೂ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದ ವಿರುದ್ಧ ದ್ವೇಷವನ್ನೇ ಕಾರಿದ್ದು ಕೂಡಾ ಜನರ ನೆನಪಿನಲ್ಲಿದೆ. ಆದರೆ ಅದು ಮಾರ್ಕೆಟಿಂಗ್ ಸ್ಟಂಟ್. ಆ ಮೂಲಕ ಭಾರತದ ಬಗ್ಗೆ ದ್ವೇಷ ಇರುವ ಭಾರತೀಯರಲ್ಲಿಯೇ ಇರುವ ಹೂಡಿಕೆ ಮಾಡುವವರನ್ನು ಸೆಳೆಯುವ ಟೆಕ್ನಿಕ್ ಎನ್ನುವುದು ಒಂದು ವರ್ಗದ ವಾದ. ಅದರ ಜೊತೆಯಲ್ಲೇ ಹೆಚ್ಚು ಹೆಚ್ಚು ಹಿಟ್ಸ್, ವ್ಯೂವ್ಸ್ ಪಡೆಯುವ ತಂತ್ರವೂ ಇದೆ. ಈ ರೀತಿ ಮಾಡಿದರೆ ಬಿಬಿಸಿಯನ್ನು ಭಾರತ ದ್ವೇಷಕ್ಕಾಗಿಯೇ ಪ್ರೀತಿಸುವವರು ಖಂಡಿತವಾಗಿಯೂ ನೋಡುತ್ತಾರೆ. ಇನ್ನು ಬಿಬಿಸಿಯನ್ನು ಟೀಕಿಸುವವರೂ ಕೂಡಾ ಏನು ಮಾಡಿದ್ದಾರೆ ಎಂದು ಟೀಕಿಸುವುದಕ್ಕಾಗಿಯಾದರೂ ನೋಡುತ್ತಾರೆ. ಅತ್ತ ಹೂಡಿಕೆಯೂ ಬಂತು. ಇತ್ತ ವೀಕ್ಷಕರೂ ಬಂದರು. ಎಲ್ಲದರ ಜೊತೆ ಕೋಟಿ ಕೋಟಿ ಸುರಿದರೂ ಸಿಗದ ಪ್ರಚಾರವೂ ಸಿಕ್ಕಿತು. ಏನೇ ಆದರೂ ಬಿಬಿಸಿಗೆ ಲಾಭ.
ಬಿಬಿಸಿ ಟಾರ್ಗೆಟ್ ಮಾರ್ಕೆಟ್ ಯಾರು?
ಅಚ್ಚರಿ ಎನಿಸಿದರೂ ಸತ್ಯ. ದೇಶದಲ್ಲಿ ಅತೀ ಹೆಚ್ಚು ಇಂಗ್ಲಿಷ್ ಬಳಸುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನವಿದೆ. ಅಮೆರಿಕದಲ್ಲಿ ಅತೀ ಹೆಚ್ಚು ಜನ ಇಂಗ್ಲಿಷ್ ಬಳಸುತ್ತಾರೆ. ಅದನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವುದು ನೈಜೀರಿಯಾ. (ನೆನಪಿರಲಿ, ಅತೀ ಹೆಚ್ಚು ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಬ್ರಿಟನ್ನಿಗಿಂತ ಭಾರತದಲ್ಲೇ ಹೆಚ್ಚಿದೆ. ಬ್ರಟನ್ನಿನ ಒಟ್ಟಾರೆ ಜನಸಂಖ್ಯೆಗಿಂತ ಡಬಲ್ ಸಂಖ್ಯೆ ಜನ ಭಾರತದಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ) ಭಾರತದಲ್ಲಿ 130 ಮಿಲಿಯನ್ ಜನ ಇಂಗ್ಲಿಷ್ ಬಳಸುತ್ತಾರೆ. 130 ಮಿಲಿಯನ್ ಎಂದರೆ 13 ಕೋಟಿ ಜನ ಇಂಗ್ಲಿಷ್ ಮಾತನಾಡುತ್ತಾರೆ. ಈ ದೊಡ್ಡ ಮಾರುಕಟ್ಟೆಯನ್ನು ಕ್ಯಾಪ್ಚರ್ ಮಾಡುವ ತಂತ್ರ ಬಿಬಿಸಿಯದ್ದು ಎನ್ನುವುದು ಮತ್ತೊಂದು ವಾದ.
ಖರ್ಚಿಲ್ಲದೆ ಪ್ರಚಾರಕರೂ ಸಿಗ್ತಾರೆ
ಈಗಾಗಲೇ ಡಾಕ್ಯುಮೆಂಟರಿಯನ್ನು ಭಾರತ ನಿಷೇಧಿಸಿದೆ. ಆದರೆ ಇಂಟರ್`ನೆಟ್ ಯುಗದಲ್ಲಿ ಡಾಕ್ಯುಮೆಂಟರಿಯನ್ನು ರೀಚ್ ಮಾಡಿಸುವುದು ಅಸಾಧ್ಯ ವಿಷಯವೇನಲ್ಲ. ಈಗಾಗಲೇ ದೆಹಲಿಯ ಜೆಎನ್,ಯು, ತೆಲಂಗಾಣದ ಹೈದರಾಬಾದ್ನಲ್ಲಿರೋ ಸೆಂಟ್ರಲ್ ವಿವಿಯಲ್ಲಿ, ಕೇರಳದ ತಿರುವನಂತಪುರಂನಲ್ಲಿರೋ ಲಾ ಕಾಲೇಜಿನಲ್ಲಿ ದಿ ಮೋದಿ ಕ್ವಶ್ಚನ್ಸ್ ಸಾಕ್ಷ್ಯಚಿತ್ರ ಪ್ರಸಾರವಾಗಿದೆ. ಜೆಎನ್ಯುನಲ್ಲಿ ಪ್ರಸಾರಕ್ಕೆ ನಡೆಯುತ್ತಿದ್ದ ಸಿದ್ಧತೆಯನ್ನು ಸೋಮವಾರ ಆಡಳಿತ ಮಂಡಳಿ ನಿರ್ಬಂಧಿಸಿತ್ತು. ಮಂಗಳವಾರ ಕದ್ದೂ ಮುಚ್ಚಿ ನಡೆಯುತ್ತಿದ್ದ ಪ್ರದರ್ಶನಕ್ಕೆ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಗಳು ಕಲ್ಲು ತೂರಿದ್ದರು. ಹೈದರಾಬಾದ್ನಲ್ಲಿ ಯಾವ ಭಯವೂ ಇಲ್ಲದೆ ಓಪನ್ ಥಿಯೇಟರ್ ಮಾದರಿಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಕೇರಳದಲ್ಲಿ ಎಸ್`ಎಫ್`ಐ, ಡಿವೈಎಫ್`ಐ ಸೇರಿದಂತೆ ಹಲವು ಎಡ ಪಕ್ಷ ಹಾಗೂ ಕಾಂಗ್ರೆಸ್ ಪರ ವಿದ್ಯಾರ್ಥಿ ಸಂಘಟನೆಗಳು, ಪ್ರತಿ ಕಾಲೇಜಿನಲ್ಲೂ ಪ್ರದರ್ಶನ ಮಾಡುವುದಾಗಿ ಚಳವಳಿಯನ್ನೇ ಆರಂಭಿಸಿವೆ.


ಕಾಂಗ್ರೆಸ್`ನಲ್ಲೇ ಭಿನ್ನಮತ
ವಿಶೇಷವೆಂದರೆ ಈ ಡಾಕ್ಯುಮೆಂಟರಿ ಪರ ಖುದ್ದು ರಾಹುಲ್ ಗಾಂಧಿ ಮಾತನಾಡಿದ್ದರೆ, ಅವರದ್ದೇ ಪಕ್ಷದ ಪ್ರಭಾವಿ ನಾಯಕ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಪುತ್ರ ಅನಿಲ್ ಆಂಟನಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೊಂದಿಗೆ ನನಗೆ ಭಿನ್ನಾಭಿಪ್ರಾಯವಿದೆ. ಆದರೆ ಬಿಬಿಸಿಯ ಈ ಡಾಕ್ಯುಮೆಂಟಿರಿಗೆ ಸಪೋರ್ಟ್ ಮಾಡಿದರೆ ನಮ್ಮ ಮೇಲೆ ಬೇರೆಯವರ ಸಾರ್ವಭೌಮತೆಯನ್ನು ಹೇರಿಕೊಂಡಂತೆ. ಬಿಬಿಸಿ ಅಭಿಪ್ರಾಯ ಹಾಗೂ ಬ್ರಿಟನ್ ಮಾಜಿ ವಿದೇಶಾಂಗ ಸಚಿವ ಜಾಕ್ ಸ್ಟ್ರಾ ಅವರ ನಿಲುವು ಬೆಂಬಲಿಸುವುದು ಅಪಾಯಕಾರಿ ನಡೆ ಎಂದಿದ್ದಾರೆ.



