ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ವಲಸೆ ಹೋದವರೂ ಪಕ್ಷಕ್ಕೆ ಬರಬಹುದು. ಎಲ್ಲರಿಗೂ ಸ್ವಾಗತವಿದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ನಿಯಮಗಳನ್ನು ಒಪ್ಪಿ ಯಾರು ಬೇಕಾದರೂ ಅರ್ಜಿ ಹಾಕಿಕೊಳ್ಳಬಹುದು. ಅಲ್ಲಂ ವೀರಭದ್ರಪ್ಪ ನೇತೃತ್ವದ ಕಮಿಟಿ ಪರಿಶೀಲನೆ ನಡೆಸಿ ಅವರನ್ನು ಸೇರಿಸಿಕೊಳ್ಳಬೇಕೋ ನಿರ್ಧಾರ ಮಾಡುತ್ತದೆ. ಈ ಮಾತನ್ನು ನಾನು ಅಧ್ಯಕ್ಷನಾಗಿ ಹೇಳುತ್ತಿದ್ದೇನೆ.
ಈ ಮಾತು ಹೇಳಿರೋದು ಡಿ.ಕೆ.ಶಿವಕುಮಾರ್. ರಾಜ್ಯ ಕಾಂಗ್ರೆಸ್ ಅಧ್ಯಕ್ಷ. ಡಿಕೆ ಈ ಮಾತು ಹೇಳುತ್ತಲೇ ಸಿದ್ದರಾಮಯ್ಯನವರು ಮಾತನಾಡುವುದಕ್ಕಿಂತ ಮೊದಲೇ ಧ್ವನಿಯೆತ್ತಿದ್ದು ಬಿಜೆಪಿ. ಸಿದ್ದರಾಮೋತ್ಸವ, ಭಾರತ್ ಜೋಡೋ ಯಾತ್ರೆಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಕಾಂಗ್ರೆಸ್ ಮುಖವಾಡ ಮತ್ತೊಮ್ಮೆ ಕಳಚುತ್ತಿದೆ. ಪಕ್ಷದಲ್ಲಿ ಸದನದಲ್ಲಿಯೇ ಅಬ್ಬರಿಸಿದ್ದರು. ಈಗ ಸಿದ್ದರಾಮಯ್ಯ ಮಾತನ್ನು ತಪ್ಪಿಸಲು ಡಿಕೆ ಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಬಲವಂತವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಸಿದ್ದು-ಡಿಕೆ ಇಬ್ಬರನ್ನೂ ಒಟ್ಟಿಗೇ ಇರುವಂತೆ ಮಾಡಿದ್ದರು ಎಂದು ಕಟುಕಿದೆ ಬಿಜೆಪಿ.
ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ಬಿಜೆಪಿಗೆ ಹಾರಿ ಹೋದಾಗ ಸಿದ್ದು ಮೇಲೆಯೇ ಆರೋಪ ಕೇಳಿ ಬಂದಿದ್ದು ಹೌದು. ಏಕೆಂದರೆ ಅವರಲ್ಲಿ ಬಹುತೇಕರು ಸಿದ್ದು ಕ್ಯಾಂಪಿನಲ್ಲಿದ್ದವರೇ. ಇವತ್ತಿಗೂ.. ಬಿಜೆಪಿಯಲ್ಲಿದ್ದರೂ ಕೆಲವರು ಬೀಡುಬೀಸಾಗಿ ಸಿದ್ದರಾಮಯ್ಯ ನಮ್ಮ ನಾಯಕ ಎನ್ನುತ್ತಾರೆ. ಸಿದ್ದರಾಮಯ್ಯ ಬೈದರೆ ಮಹಾಪ್ರಸಾದ ಎಂದು ಕಣ್ಣಿಗೊತ್ತಿಕೊಳ್ಳುವ ಬಿಜೆಪಿಗರಲ್ಲಿ ವಲಸಿಗರೇ ಹೆಚ್ಚು. ಆದರೆ ಸಿದ್ದರಾಮಯ್ಯ ಆಗ ಸದನದಲ್ಲಿನ ಪ್ರತಿಜ್ಞೆ ಹಿಂದಿ ಇನ್ನೊಂದು ರಾಜಕೀಯ ಆಟವೂ ಇದೆ. ಇತ್ತು. ಆ ಮಾತಿನ ಹಿಂದೆ ಮೂರು ಮೂರು ಬಾರಿ ತಲೆ ಮೇಲೆ ತಲೆ ಬಿದ್ದರೂ, ಪ್ರಪಂಚವೇ ಪ್ರಳಯವಾದರೂ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲ್ಲ ಎಂಬ ಮಾತಿನ ಹಿಂದೆ ಕೆಲಸ ಮಾಡಿದ್ದುದು ರಮೇಶ್ ಕುಮಾರ್ ತಂತ್ರಗಾರಿಕೆ.
ರಮೇಶ್ ಕುಮಾರ್ ಮತ್ತು ಕೆ. ಸುಧಾಕರ್ ನಡುವಿನ ಖೋಖೋ ಕಬಡ್ಡಿ ರಾಜಕೀಯದಲ್ಲಿ ಗೊತ್ತಿಲ್ಲದ್ದೇನೂ ಅಲ್ಲ. ಮೊದ ಮೊದಲು ಒಳಗೊಳಗೇ ನಡೆಯುತ್ತಿದ್ದ ವಾರ್ ಪಕ್ಷಗಳು ಬದಲಾದ ಮೇಲೆ ರಣರಂಗಕ್ಕೆ ಬಂದಿದೆ ಅಷ್ಟೆ. ಸಿದ್ದರಾಮಯ್ಯ ಅವರನ್ನು ಮಾತಿನ ಇಕ್ಕಳದಲ್ಲಿ ಸಿಕ್ಕಿಸುವ ಮೂಲಕ ಸುಧಾಕರ್ ಅವರನ್ನು ಪಕ್ಷಕ್ಕೆ ಮತ್ತೆ ಕರೆತರದಂತೆ ತಡೆಯುವ ತಂತ್ರವೂ ಆಗ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಿಂದ ಕೆಲಸ ಮಾಡಿತ್ತು.
ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆಯೇ ಅದಾಗಲೇ ರಾಜ್ಯ ರಾಜಕೀಯ ಉಲ್ಟಾಪಲ್ಟಾ ತಿರುಗುತ್ತಿದೆ. ಮೈಸೂರು ಭಾಗದ ಪ್ರಭಾವಿ ಮುಖಂಡ ಜೆಡಿಎಸ್ನಲ್ಲಿದ್ದುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಯಾವುದು ಬೆಸ್ಟು ಎಂದು ಹುಡುಕುತ್ತಿದ್ದ ಜಿ.ಟಿ.ದೇವೇಗೌಡ, ದೊಡ್ಡಗೌಡ್ರು ಎಂಟ್ರಿಯಾಗುತ್ತಿದ್ದಂತೆಯೇ ಜೆಡಿಎಸ್ನಲ್ಲೇ ಉಳಿದುಕೊಂಡಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಅತ್ತ ಸಿದ್ದರಾಮಯ್ಯ ಕೋಲಾರವೋ.. ಚಾಮರಾಜಪೇಟೆಯೋ.. ಎಂಬ ಗೊಂದಲದಲ್ಲಿರುವಾಗಲೇ ಡಿಕೆ ಆಡಿರುವ ಮಾತು ಸಂಚಲನ ಸೃಷ್ಟಿಸಿದೆ.

ಆದರೆ ಅದಕ್ಕಿಂತ ಹೆಚ್ಚ ತಳಮಳ ಸೃಷ್ಟಿಯಾಗಿರೋದು ಬಿಜೆಪಿಯಲ್ಲಿ. ಯಾರು ಹೋಗುತ್ತಾರೆ.. ಯಾರು ಇರುತ್ತಾರೆ.. ಎಂಬ ಬಗ್ಗೆ ಬಿಜೆಪಿ ನಾಯಕರಲ್ಲಿ ಕ್ಲಾರಿಟಿ ಇಲ್ಲ. ಕೇಳೋಣ ಎಂದರೆ.. ದೊಡ್ಡ ದೊಡ್ಡ ಸ್ಥಾನದಲ್ಲಿರೋ ನಾಯಕರಿಗೆ ಹೀಗೆ ಅಸಮಾಧಾನಗೊಂಡಿರುವವರ ಜೊತೆ ಸಂಪರ್ಕವೂ ಇಲ್ಲ. ಸಂಬಂಧವೂ ಇಲ್ಲ. ಯಾರ ಮೂಲಕ ಯಾರನ್ನು ಮಾತನಾಡಿಸಬೇಕು ಎಂಬಷ್ಟು ಗೊಂದಲವಿದೆ. ಅಷ್ಟರಮಟ್ಟಿಗೆ ಕನೆಕ್ಷನ್ ಲೈನ್ ಕಟ್ ಮಾಡಿಕೊಂಡಿರೋ ನಾಯಕರು ಎಲೆಕ್ಷನ್ನಿಗೆ ರೆಡಿಯಾಗುತ್ತಿದ್ದಾರೆ.
ಅತ್ತ ಸಿದ್ದರಾಮಯ್ಯ ವಿರುದ್ಧ ಏನೇ ಬೇಗುದಿಗಳಿದ್ದರೂ ಪಕ್ಷವನ್ನು ಮೊದಲು ಗೆಲ್ಲಿಸೋಣ ಎಂಬ ವಿಷಯದಲ್ಲಿ ಡಿಕೆಗೆ ಕನ್ಫ್ಯೂಷನ್ ಇಲ್ಲ. ಇನ್ನು ಪರಮೇಶ್ವರ್ ವಿರುದ್ಧ ಅವರದ್ದೇ ಕೊರಟಗೆರೆ ಕ್ಷೇತ್ರದಲ್ಲಿ ತಂತ್ರಗಾರಿಕೆ ಮಾಡಿದಂತೆ ತಂತ್ರಗಾರಿಕೆ ಮಾಡಲು ಕನಕಪುರದಲ್ಲಿ ಸಾಧ್ಯವಿಲ್ಲ.
ಬೇರೆ ಪಕ್ಷದಲ್ಲಿರುವವರನ್ನು ಪಕ್ಷಕ್ಕೆ ಕರೆತರುವ ವಿಚಾರದಲ್ಲಿ ಸಿದ್ದು ಅವರ ಒಂದು ಅಭಿಪ್ರಾಯಕ್ಕೆ ಡಿಕೆ 100% ಸಪೋರ್ಟ್ ಕೊಟ್ಟಿರೋದು ವಿಶೇಷ. ಬರುವವರು ಬರಲಿ. ಆದರೆ ನಾವು ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬರಲಿ. ನಾವು, ನಮ್ಮವರೇ ಗೆಲ್ಲುವ ಕ್ಷೇತ್ರಕ್ಕೆ ಬೇರೆಯವರನ್ನು ಕರೆತಂದು ಗೆಲ್ಲಿಸುವುದೇಕೆ? ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಕ್ಷೇತ್ರಕ್ಕೆ ಬೇರೆ ಪಕ್ಷದವರನ್ನು ಕರೆತರುವುದು ಬೇಡ ಎನ್ನುವುದು ಸಿದ್ದು ಒನ್ ಲೈನ್ ಆರ್ಡರ್. ಈ ಮಾತಿಗೆ ಡಿಕೆ ಹೂಂಹೂಂ ಅಂದಿದ್ದಾರೆ ಅನ್ನೋದು ಕಾಂಗ್ರೆಸ್ ಪಾಳೆಯದ ಸುದ್ದಿ.
ಜೊತೆಗೆ ರಾಹುಲ್ ಗಾಂಧಿ ಬಂದು ಹೋದ ನಂತರ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬೆಳೆದಿರುವುದು ನಿಜ. ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗುತ್ತಿರುವುದೂ ನಿಜ. ಈ ಬಾರಿ ಸಿದ್ದು ಮತ್ತು ಡಿಕೆ ಇಬ್ಬರೂ ಜೊತೆಗೂಡಿ ಯಾತ್ರೆ ಹೊರಟಿದ್ದಾರೆ. ಫೆಬ್ರವರಿ ಹೊತ್ತಿಗೆ ಯಾತ್ರೆ, ರ್ಯಾಲಿಗಳನ್ನೆಲ್ಲ ಮುಗಿಸಿ ಚುನಾವಣೆ ಘೋಷಣೆಯಾದ ನಂತರ ಕೇವಲ ಪ್ರಚಾರಕ್ಕೆ ಸೀಮಿತವಾಗಬೇಕು ಎನ್ನುವುದು ಡಿಕೆ ಯೋಜನೆ. ಈ ಪ್ಲಾನಿಗೆ ಸಿದ್ದು ಕೂಡಾ ಓಕೆ ಎಂದಿದ್ದಾರೆ.
ಸದ್ಯಕ್ಕಂತೂ ಡಿಕೆ ಸಿಡಿಸಿರೋ ಪಟಾಕಿ ಎಲ್ಲೆಲ್ಲೋ ಹೊಗೆ ಬರುವಂತೆ ಮಾಡಿದೆ. ಆದರೆ ಡಿಕೆ ನಿರೀಕ್ಷಿಸಿದ್ದ ಕಡೆಯೇ ಹೊಗೆ ಎದ್ದಿರುವುದೂ ಅವರಿಗೂ ಖುಷಿ ಕೊಟ್ಟಿದೆ. ಕೌಂಟರ್ ಪಟಾಕಿ ಸಿಡಿಸಬೇಕಾದವರು ಪಟಾಕಿಯ ಮದ್ದಿಗೆ ಕೆಂಡ ಅಂಟಿಸುವ ಕೆಲಸ ಯಾರು ಮಾಡಬೇಕು ಅನ್ನೋ ಗೊಂದಲದಲ್ಲೇ ಇದ್ದಾರೆ.



