ಆರ್ಥಿಕವಾಗಿ ಹಿಂದುಳಿದವರಗಿ ಶೇ.10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆಯೂ ಸಿಕ್ಕಿತ್ತು.
ಶಿಕ್ಷಣ , ಉದ್ಯೋಗದಲ್ಲಿ ಸಮಾನತೆ ತರುವ ಉದ್ದೇಶದಿಂದ ಮೇಲ್ವರ್ಗದ ಬಡವರಿಗೆ 10% ಮೀಸಲಾತಿಗಾಗಿ ಕಾಯ್ದೆ ಜಾರಿ ತರಲಾಗಿತ್ತು. ಒಟ್ಟು ಮೀಸಲಾತಿಗೆ ಇರುವ 50% ಮಿತಿಗೆ ಹೊರತುಪಡಿಸಿ ಪ್ರತ್ಯೇಕವಾಗಿ ಮೀಸಲಾತಿ ನೀಡಲಾಗಿತ್ತು. ಮೇಲ್ವರ್ಗದಲ್ಲಿದ್ದು, ಮೀಸಲಾತಿ ಪಡೆಯದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ನೀಡುವ ಉದ್ದೇಶದಿಂದ 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತರಲಾಗಿತ್ತು. 3 ವರ್ಷಗಳ ಹಿಂದೆ ಮೀಸಲು ನೀಡಿದ್ದರೂ, 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂಕೋರ್ಟ್ಗೆ ಹೋಗಿದ್ದವು. ಸಂವಿಧಾನದ 103ನೇ ತಿದ್ದುಪಡಿ ಸಿಂಧುತ್ವವನ್ನೇ ಪ್ರಶ್ನಿಸಿದ್ದವು. ಸೆಪ್ಟಂಬರ್ನಲ್ಲಿ ಆರೂವರೆ ದಿನಗಳ ಕಾಲ ವಿಚಾರಣೆಯೂ ನಡೆದಿತ್ತು. ಈಗ ಸರ್ಕಾರದ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಆರ್ಥಿಕ ಮೀಸಲಾತಿ ಪರ ಮೂವರು ಜಡ್ಜ್ಗಳು ತೀರ್ಪು ನೀಡಿದ್ದಾರೆ. ನ್ಯಾ.ದಿನೇಶ್ ಮಹೇಶ್ವರಿ ನ್ಯಾ. ಎಸ್.ಕೆ. ಪರ್ದಿವಾಲಾ ಹಾಗೂ ನ್ಯಾ. ಬೆಲಾ ತ್ರಿವೇದಿ ಆರ್ಥಿಕ ಮೀಸಲಾತಿ ಪರ ತೀರ್ಪು ನೀಡಿದ್ದರೆ, ಆರ್ಥಿಕತೆ ಆಧರಿತ ಮೀಸಲಾತಿಯೇ ಅಸಂವಿಧಾನಿಕ ಎಂದು ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸಿಜೆ ಯು.ಯು. ಲಲಿತ್ ಹಾಗೂ ನ್ಯಾ. ರವೀಂದ್ರ ಭಟ್ ತೀರ್ಪು ವಿರುದ್ಧ ತೀರ್ಪು ನೀಡಿದವರು.
ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತಬೇಕು. ಇದು ಯಾವುದೇ ಸರ್ಕಾರದ ಜವಾಬ್ದಾರಿ. ಹಿಂದುಳಿದವರಿಗೆ ಮೀಸಲಾತಿ ಅಸಂವಿಧಾನಿಕ ಅಲ್ಲ ಎಂದು ನ್ಯಾ. ಬೆಲಾ ತ್ರಿವೇದಿ ತೀರ್ಪಿನಲ್ಲಿ ಹೇಳಿದ್ದರೆ, ಮೀಸಲಾತಿ ಆರಂಭ. ಸಮಸ್ಯೆಯ ಕೊನೆ ಪರಿಹಾರ ಅಲ್ಲ
ನ್ಯಾಯಮೂರ್ತಿ ಎಸ್ ಕೆ ಪರಡಿ ವಾಲಾ ಅಭಿಪ್ರಾಯಪಟ್ಟಿದ್ದಾರೆ. ಪರಿಶಿಷ್ಟ ಜಾತಿ ,ಪಂಗಡ, ಹಿಂದುಳಿದವರನ್ನು ಹೊರಗಿಟ್ಟು, ಮೇಲ್ಜಾತಿಗಳಿಗೆ ಆರ್ಥಿಕ ಮಾನದಂಡದಂತೆ ಮೀಸಲಾತಿ ನೀಡುವುದು ಅಸಂವಿಧಾನಿಕ ಎನ್ನುವುದು ನ್ಯಾ. ರವೀಂದ್ರ ಭಟ್ ವಾದ. ಬಹುಮತದ ಆಧಾರದ ಮೇಲೆ ತೀರ್ಪು ಕೇಂದ್ರದ ಪರವಾಗಿಯೇ ಬಂದಿದೆ. ಈಗ ಎಲ್ಲರಿಗೂ ಗೊತ್ತಾಗಬೇಕಿರುವ ಅಂಶವೆಂದರೆ ಯಾರು?
ಆರ್ಥಿಕ ವಾಗಿ ಹಿಂದುಳಿದವರು ಎಂದರೆ ಯಾರು ?
1.ಜನರಲ್ ಕೋಟಾ ಗೆ ಸೇರಿದವರು ಇರಬೇಕು. ಯಾವುದೇ ಜಾತಿ ಆಧಾರಿತ ಮೀಸಲಾತಿ ಪಟ್ಟಿಯಲ್ಲಿ ಇರಬಾರದು.
2.ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. 8 ಲಕ್ಷಕ್ಕಿಂತ ಹೆಚ್ಚಿದ್ದರೆ ಈ ವರ್ಗಕ್ಕೆ ಸೇರುವುದಿಲ್ಲ.
3.ಕೃಷಿ ಜಮೀನು 5 ಎಕರೆ ಗಿಂತ ಕಡಿಮೆ ಇರಬೇಕು. ಇಡೀ ಕುಟುಂಬದ ಅಡಿಯಲ್ಲಿ ವಿಭಾಗವಾಗಿಲ್ಲದೆ ಇದ್ದರೂ ಇದು ಅನ್ವಯಿಸುವುದಿಲ್ಲ.
4. ಸ್ವಂತ ಮನೆ ಇದ್ದರೂ ಸಮಸ್ಯೆಯಿಲ್ಲ. ಆದರೆ ಸ್ವಂತ ಮನೆ 1000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರಬೇಕು.

ಇನ್ನೂ ಈ ತೀರ್ಪಿನ ಪರಿಣಾಮಗಳನ್ನು ನೋಡುವುದಾದರೆ, ರಾಜ್ಯಗಳು ಕೂಡ ಮೀಸಲಾತಿ ಪ್ರಸ್ತಾವನೆ ಇಡಬಹುದು. ಮರಾಠಾ, ಜಾಟ್, ಪಟೇಲ್ ಸಮುದಾಯಗಳಿಗೆ ಆಯಾ ರಾಜ್ಯ ಸರ್ಕಾರಗಳು ನೀಡಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಅಂತಹ ರಾಜ್ಯಗಳು ಈಗ ಆರ್ಥಿಕ ಕೋಟಾದಡಿಯಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು. ಮುಂದುವರಿದ ಜಾತಿಗಳಿಗೆ ಆರ್ಥಿಕ ಹಿಂದುಳಿದ ಕೋಟಾದಡಿ ಮೀಸಲಾತಿ ಕೊಡಲು ರಾಜಕೀಯ ಒತ್ತಡ ಜಾಸ್ತಿ ಆಗಬಹುದು. ಸರಳವಾಗಿ ಹೇಳಬೇಕೆಂದರೆ ಇದು ಇನ್ನೊಂದು ವಿವಾದಕ್ಕೆ ಮುನ್ನುಡಿಯೂ ಆಗಬಹುದು.
ಸದ್ಯಕ್ಕೇನೋ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ಕತ್ತಿಯ ಮೇಲಿನ ನಡಿಗೆ ಶುರುವಾಗಿದೆ.
ವಿಶೇಷವೆಂದರೆ ಈ ತೀರ್ಪಿನ ಪರಿಣಾಮ ರಾಜ್ಯದ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೂ ಅನ್ವಯವಾಗಲಿದೆ. ಅಷ್ಟೇ ಅಲ್ಲ ಪ್ರತೀ ವರ್ಷ ಸುಮಾರು 90 ಸಾವಿರ ಕೇಂದ್ರ ಸರ್ಕಾರಿ ನೌಕರಿಗಳು ಭರ್ತಿಯಾಗುತ್ತಿರುತ್ತವೆ. ಆ ರೀತಿಯಲ್ಲಿ ನೋಡಿದರೆ ಕೇಂದ್ರದಲ್ಲಿಯೇ ವಾರ್ಷಿಕ ಸುಮಾರು 9 ಸಾವಿರ ನೌಕರಿಗಳು ಆರ್ಥಿಕವಾಗಿ ಹಿಂದುಳಿದವರಿಗೆ ದೊರೆಯಲಿವೆ.
ಬಗೆಹರಿಯದ ಗೊಂದಲ : ಸಾಮಾನ್ಯವಾಗಿ ಸರ್ಕಾರಿ ನೌಕರಿ ಮೀಸಲು ಸ್ಥಾನಗಳಲ್ಲಿ ಅನುಸರಿಸುವ ನಿಯಮದ ಪ್ರಕಾರ 10 ಹುದ್ದೆಗಳಿಗೆ ಕೆಲಸಕ್ಕೆ ಕರೆ ಮಾಡಿದ್ದರೆ ಜನರಲ್ ಕೆಟಗರಿಗೂ 5 ಸ್ಥಾನಗಳಿರುತ್ತವೆ. ಆದರೆ ಆ ಸ್ಥಾನಗಳಿಗೆ ಕೇವಲ ಜನರಲ್ ಕೆಟಗರಿಯವರನ್ನಷ್ಟೇ ಆಯ್ಕೆ ಮಾಡಲ್ಲ. ಆ ಕೆಟಗರಿಯಲ್ಲಿ ಮೆರಿಟ್ ಆಧಾರದ ಮೇಲೆ ಮೀಸಲಾತಿಯವರೂ ಸ್ಥಾನ ಪಡೆಯಬಹುದು. ಜನರಲ್ ಕೆಟಗರಿಗೆ ಆಯ್ಕೆಯಾಗುವ ಸ್ವಾತಂತ್ರ್ಯ ಮತ್ತು ಹಕ್ಕು ಮೀಸಲಾತಿಯವರಿಗೂ ಇರುತ್ತದೆ. ಇಲ್ಲೂ ಹಾಗೆಯೇ ಅಗುತ್ತಾ? ಅಷ್ಟೇ ಅಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗವನ್ನು ಗುರುತಿಸುವ ನೀತಿ ನಿಯಮ ಸ್ಪಷ್ಟವಾಗಬೇಕಿದೆ.



