ಕೋಲಾರದಲ್ಲಿ ನಿಲ್ಲುತ್ತೇನೆ ಎಂಬ ಒಂದೇ ಒಂದು ಘೋಷಣೆ ಸಂಚಲನವನ್ನೇ ಸೃಷ್ಟಿಸಿದೆ. ಕೋಲಾರದಲ್ಲಿ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ರಾಜಕೀಯ ಗೊತ್ತಿದ್ದರೂ ಸಿದ್ದರಾಮಯ್ಯ ಕೋಲಾರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎನ್ನುವುದೇ ಒಂದು ವಿಸ್ಮಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅವಕಾಶಗಳಿವೆ.



ಕೋಲಾರ ಕ್ಷೇತ್ರದ ಜಾತಿ ಲೆಕ್ಕಾಚಾರ
ಒಟ್ಟು ಮತದಾರರ ಸಂಖ್ಯೆ : ಸುಮಾರು 2.31 ಲಕ್ಷ
ಒಕ್ಕಲಿಗರು : 40 ಸಾವಿರ
ಅಲ್ಪಸಂಖ್ಯಾತರು : 40 ಸಾವಿರ
ಕುರುಬರು : 20 ಸಾವಿರ
ಬಲಿಜಿಗ : 20 ಸಾವಿರ
ಇತರೆ ಜಾತಿಯ ಮತದಾರರು : ಸುಮಾರು 10 ಸಾವಿರ
ಹೀಗಿರುವ ಕ್ಷೇತ್ರದಲ್ಲೀಗ ಸಿದ್ದು ಹವಾ ಏಳಬೇಕು. ಸಿದ್ದರಾಮಯ್ಯ ಜೊತೆ ರಮೇಶ್ ಕುಮಾರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಶ್ರೀನಿವಾಸ ಗೌಡ, ಕೊತ್ತನೂರು ಮಂಜುನಾಥ್, ಡಾ.ಸುಧಾಕರ್, ಸಿ.ಎಂ.ಮುನಿಯಪ್ಪ ಹಾಗೂ ನಜೀರ್ ಅಹ್ಮದ್ ಸಿದ್ದು ಬೆನ್ನಿಗೆ ನಿಂತಿದ್ದಾರೆ. ಶ್ರೀನಿವಾಸ ಗೌಡ, ಹಾಲಿ ಶಾಸಕ. ಕಳೆದ ಬಾರಿ 82,788 ಮತಗಳನ್ನು ಪಡೆದಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್ ಪಡೆದಿದ್ದ ಮತಗಳು 38,537. ಗೆಲುವಿನ ಅಂತರ 44,251. ಆಗ ಪಕ್ಷೇತರ ಅಭ್ಯರ್ಥಿಯಾಗಿದ್ದ ವರ್ತೂರು ಪ್ರಕಾಶ್, ನಮ್ಮ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿ, ನಿಂತು 35,544 ಮತಗಳನ್ನು ಪಡೆದಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ವೆಂಕಟಾಚಲಪತಿ 12,458 ಮತಗಳನ್ನು ಮಾತ್ರ.


ಕೋಲಾರದಲ್ಲಿ ಹೆಚ್ಚಿರುವುದು ಅಲ್ಪಸಂಖ್ಯಾತರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಮತ ಕಾಂಗ್ರೆಸ್ಸಿಗೆ ಎನ್ನುವ ನಂಬಿಕೆ ಇದೆ. ಅಲ್ಲದೆ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್, ಇಲ್ಲಿ ಸಿದ್ದು ಗೆಲುವಿಗೆ ಪಣ ತೊಟ್ಟಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು ಒಕ್ಕಲಿಗರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಹಾಲಿ ಶಾಸಕ ಶ್ರೀನಿವಾಸ ಗೌಡರ ಮೂಲಕ ಒಕ್ಕಲಿಗ ಮತಗಳೂ ತಮಗೇ ಬೀಳುತ್ತವೆ ಎಂಬ ಲೆಕ್ಕಾಚಾರ.
ಕೆ.ಎಚ್.ಮುನಿಯಪ್ಪ ಅವರೊಂದಿಗೆ ವಿಶ್ವಾಸ ಕುದುರಿಸಿಕೊಂಡಿರುವ ಸಿದ್ದರಾಮಯ್ಯ ದಲಿತ ಮತಗಳೂ ತಮಗೇ ಬೀಳುವಂತೆ ಶ್ರಮ ವಹಿಸುತ್ತಾರೆ. ಕುರುಬರ ಮತಗಳಂತೂ ವರ್ಗಾವಣೆಯಾಗುವ ಮಾತೇ ಇಲ್ಲ. ಅದು ತಮ್ಮದೇ ಎಂಬುದು ಸಿದ್ದರಾಮಯ್ಯ ವಿಶ್ವಾಸ.
ಪ್ರತಿಸ್ಪರ್ಧಿ ವರ್ತೂರು ಪ್ರಕಾಶ್ ಪ್ರಭಾವಿಯಾಗಿದ್ದರೂ, ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವಿಯಲ್ಲ. ಭದ್ರನೆಲೆಯೂ ಇಲ್ಲ.
ಸಿದ್ದು ಮೈನಸ್ ಆಗಲಿರುವ ಅಂಶಗಳು
ಹಾಲಿ ಶಾಸಕ ಶ್ರೀನಿವಾಸ ಗೌಡ ಶಾಸಕರಾಗಿರುವುದು ಜೆಡಿಎಸ್ನಿಂದ. ಆದರೆ ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿದ್ದಾರೆ. ಹಾಗೂ ಮಾಡುತ್ತಲೇ ಇದ್ದಾರೆ. ಹೀಗಾಗಿ ಗೌಡರ ಮತಗಳು ಶ್ರೀನಿವಾಸ ಗೌಡರ ಮೂಲಕ ಸಿದ್ದುಗೆ ಬರುತ್ತವೆ ಎಂಬುದರ ಬಗ್ಗೆ ಸಂಶಯವಿದೆ. ಈಗಲೂ ದೇವೇಗೌಡರ ಕುಟುಂಬ, ಒಕ್ಕಲಿಗರ ಆಸ್ಮಿತೆಯಾಗಿ ಉಳಿದುಕೊಂಡಿದೆ.

ಸ್ವತಃ ಗೆಲ್ಲಲು ಸಾಧ್ಯವಾಗದ ನಜೀರ್ ಅಹ್ಮದ್ ನೇತೃತ್ವವೇ ಪಕ್ಷಕ್ಕೆ ಮುಳುವಾಗಬಹುದು ಎಂಬ ಮಾತುಕತೆ ಚಾಲ್ತಿಗೆ ಬಂದಿದೆ. ರಾಜ್ಯದ ಮಟ್ಟಿಗೆ ಸಿದ್ದು ಪ್ರಭಾವಿಯೇ ಇರಬಹುದು, ಕ್ಷೇತ್ರದ ಒಳಗೆ ವರ್ತೂರು ಪ್ರಕಾಶ್ ಪ್ರಭಾವವೇ ಬೇರೆ. 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದವರು. ಆಗ ಈಗಿರುವ ಹಾಲಿ ಶಾಸಕರನ್ನೇ, ಜೆಡಿಎಸ್ ಅಭ್ಯರ್ಥಿಯನ್ನೇ ಮಣಿಸಿದ್ದರು. 2018ರಲ್ಲಿ ಕೂಡಾ ಪಕ್ಷೇತರರಾಗಿ ಪ್ರಬಲ ಪೈಪೋಟಿ ಒಡ್ಡಿದ್ದರು.
ವರ್ತೂರು ಪ್ರಕಾಶ್ ಕೂಡಾ ಕುರುಬ ಸಮುದಾಯದವರು. ಹೀಗಾಗಿ ಕುರುಬರ ಮತಗಳು ಒಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಕೋಲಾರದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಗಟ್ಟಿಯಾಗಿದೆ. ಇತ್ತೀಚಿನ ಪಂಚರತ್ನ ಯಾತ್ರೆಯಲ್ಲೂ ಅದು ಗೊತ್ತಾಗಿತ್ತು.
ಅಲ್ಪಸಂಖ್ಯಾತರ ಮತಗಳಿರುವ ಕಾರಣಕ್ಕೆ ತಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರು ಎಂಬ ಅಭಿಪ್ರಾಯ ಮೂಡಿಸಿದರೆ, ಸಿದ್ದರಾಮಯ್ಯ ಅವರಿಗಿರುವ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಮುಳ್ಳಾಗಲೂಬಹುದು. ಸಿದ್ದರಾಮಯ್ಯ ಅವರ ಬಗ್ಗೆ ಒಕ್ಕಲಿಗರಲ್ಲಿ ಪ್ರೀತಿಯೇನೂ ಇಲ್ಲ. ಜೊತೆಗೆ ಸಿದ್ದರಾಮಯ್ಯ ಗೆದ್ದರೆ ತಮ್ಮ ಸಮುದಾಯದ ಡಿಕೆ ಶಿವಕುಮಾರ್ ಅವರಿಗೆ ಪೈಪೋಟಿ ಒಡ್ಡುತ್ತಾರೆ ಎನ್ನಿಸಿದರೆ ಅದು ಉಲ್ಟಾ ಆಗಲೂಬಹುದು.
ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ಮಧ್ಯೆ ಹೊಡೆದಾಟಗಳೇ ಆಗಿ ಹೋಗಿವೆ. ಈಗ ಸಿದ್ದರಾಮಯ್ಯ ಅವರಿಂದಾಗಿ ಏನೇ ಒಗ್ಗಟ್ಟು ಪ್ರದರ್ಶನ ಮಾಡಿದರೂ, ತಳಮಟ್ಟದಲ್ಲಿ ಇಬ್ಬರೂ ನಾಯಕರ ಪರವಾಗಿ ಕೈಕೈ ಮಿಲಾಯಿಸಿದ್ದವರು ಒಂದಾಗುವುದು ಅಷ್ಟು ಸುಲಭವಲ್ಲ.
ಇಷ್ಟಿದ್ದರೂ ಇಷ್ಟು ವರ್ಷಗಳಲ್ಲಿ 224ರಲ್ಲಿ ಒಂದು ಎಂದಾಗುತ್ತಿದ್ದ ಕೋಲಾರ, ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಇಡೀ ರಾಜ್ಯದ ಗಮನ ಸೆಳೆಯಲಿದೆ. ಅಂದಹಾಗೆ 2004ಲ್ಲಿ ಗೆದ್ದಿದ್ದೇ ಕೊನೆ, ಆಗಿನಿಂದ ಇಲ್ಲಿ ಗೆದ್ದಿರುವುದು ಪಕ್ಷೇತರರು ಮತ್ತು ಜನತಾ ಪರಿವಾರದವರು. ಕಾಂಗ್ರೆಸ್ 2ನೇ, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 2004ರಲ್ಲಿ ಗೆದ್ದ ಶ್ರೀನಿವಾಸ ಗೌಡರೂ ಕೂಡಾ ಒಮ್ಮೆ ಪಕ್ಷೇತರರಾಗಿ, ಮತ್ತೊಮ್ಮೆ ಜೆಡಿಯುನಿಂದ ಕಾಂಗ್ರೆಸ್ನ್ನು ಸೋಲಿಸಿದ್ದವರೇ. ಅದಾದ ಮೇಲೆ ಕಳೆದ ಎಲೆಕ್ಷನ್ನಿನಲ್ಲಿ ಜೆಡಿಎಸ್ನಿಂದ ನಿಂತು ಕಾಂಗ್ರೆಸ್ನ್ನು ಸೋಲಿಸಿದ್ದವರು. ಈಗ ಅವರು ತಾವೇ ಸೋಲಿಸಿದ್ದ ಪಕ್ಷಕ್ಕೆ ವೋಟ್ ಹಾಕಿ ಎಂದರೆ ಕಾಂಗ್ರೆಸ್ ಗೆಲ್ಲುತ್ತಾ? ಈ ಬಾರಿ ಮ್ಯಾಜಿಕ್ ನಡೆಯುತ್ತಾ?



