ದೇವರು ಒಬ್ಬನಿಗೆ ಒಂದು ಕೋಳಿ ಕೊಡುತ್ತಾನೆ. ಆ ಕೋಳಿ ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತೆ. ಆದರೆ.. ಆತನಿಗೋ ದುರಾಸೆ. ದಿನಕ್ಕೊಂದು ಚಿನ್ನದ ಮೊಟ್ಟೆಗಾಗಿ ಕಾಯುವುದೇಕೆ ಎಂದು ಆಸೆ ಬಿದ್ದವನು, ಕೋಳಿಯ ಹೊಟ್ಟೆಯನ್ನೇ ಕೊಯ್ದು ಬಿಡುತ್ತಾನೆ. ಅತ್ತ ದಿನಕ್ಕೊಂದು ಮೊಟ್ಟೆಯೂ ಇಲ್ಲ. ಮೊಟ್ಟೆ ಇಡುವ ಕೋಳಿಯೂ ಇಲ್ಲ. ಕನ್ನಡ ಚಿತ್ರರಂಗದ ಸ್ಥಿತಿ ಹಾಗೆಯೇ ಆಗಿದೆ.
ಒಂದೇ ಸಿನಿಮಾದಲ್ಲಿ 5 ಸಿನಿಮಾಗಳಷ್ಟು ದುಡಿಯುವ ಆಸೆ ಇಟ್ಟುಕೊಂಡು ಹೊರಟಿರುವ ಸ್ಟಾರ್ ಹೀರೋಗಳು, ತಮ್ಮ ಸಿನಿಮಾ ರಿಲೀಸ್ ಮಾಡುವ ರಿಲೀಸ್ ಮಾಡುವ ಹೊತ್ತಿಗೆ ರಿಲೀಸ್ ಮಾಡುವುದಕ್ಕೆ ಮಾರುಕಟ್ಟೆಯೇ ಇರಲ್ಲ. ಅಂತಹ ಸ್ಥಿತಿ ಎದುರಾಗಿದೆ.
ಒಳ್ಳೆಯ ಚಿತ್ರಗಳಿಂದಲೇ ಚಿತ್ರರಂಗ ಉಳಿಯುತ್ತೆ. ಬೆಳೆಯುತ್ತೆ ಅನ್ನೋದು ಎಷ್ಟು ಸತ್ಯವೋ.. ಸ್ಟಾರ್ ಚಿತ್ರಗಳಿಂದ ಚಿತ್ರರಂಗ ಸದಾ ಆಕ್ಟಿವ್ ಆಗಿರುತ್ತೆ ಎನ್ನುವುದೂ ಅಷ್ಟೇ ಸತ್ಯ. ಆದರೆ.. ಕನ್ನಡದ ಸ್ಟಾರ್ ನಟರಿಗೆ ಏನಾಗಿದೆ.. ಅವರ ಚಿತ್ರಗಳು ಏನಾಗಿವೆ.. ಅರ್ಥವಾಗುತ್ತಿಲ್ಲ. ಒಂದೇ ಸಿನಿಮಾದಲ್ಲಿ 10 ಸಿನಿಮಾ ಬಿಸಿನೆಸ್ ಮಾಡುವ ಗುರಿ ಇಟ್ಟುಕೊಂಡು ಸಿನಿಮಾ ಮಾಡುವ ಸ್ಟಾರ್ ನಟರು, ತಮ್ಮ ಸಿನಿಮಾ ರಿಲೀಸ್ ಮಾಡುವ ಹೊತ್ತಿಗೆ ಮಾರುಕಟ್ಟೆಯೇ ಇರೋದಿಲ್ಲ.
ಥಿಯೇಟರ್ಸ್ ಬಂದ್ : ಥಿಯೇಟರುಗಳು ಅಷ್ಟು ವೇಗವಾಗಿ ಬಾಗಿಲು ಮುಚ್ಚುತ್ತಿವೆ. ಸಿಂಗಲ್ ಸ್ಕ್ರೀನ್ ಥಿಯೇಟರುಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿವೆ. ಮಲ್ಟಿಪ್ಲೆಕ್ಸಿನವರೂ ಸ್ಕ್ರೀನ್ʻಗಳನ್ನು ಆಗಲೇ ಬೇರೆ ಬೇರೆ ಈವೆಂಟ್ʻಗಳಿಗೆ ಕೊಡುವುದಕ್ಕೆ ಶುರು ಮಾಡಿದ್ಧಾರೆ.
ಟಿವಿಯವರು ಕನ್ನಡ ಸಿನಿಮಾ ಖರೀದಿಸ್ತಿಲ್ಲ : ಸ್ಯಾಟಲೈಟ್ ಹಕ್ಕು ಕೊಳ್ಳುವ ಟಿವಿಯವರು ಕನ್ನಡದ ಸಿನಿಮಾಗಳತ್ತ ತಿರುಗಿಯೂ ನೋಡ್ತಿಲ್ಲ. ಅವರಿಗೆ ಡಬ್ಬಿಂಗ್ ಆದ ಚಿತ್ರಗಳೇ ಸಾಕು. ಕನ್ನಡ ಸಿನಿಮಾಗಳೆಂದರೆ.. ಅಲ್ಲಿಯೂ ರಾಮ್ ಚರಣ್, ಅಲ್ಲು ಅರ್ಜುನ್, ರವಿತೇಜ, ಅಜಿತ್, ವಿಜಯ್, ಮಮ್ಮೂಟಿ, ಮೋಹನ್ ಲಾಲ್.. ಮೊದಲಾದವರ ಡಬ್ಬಿಂಗ್ ಚಿತ್ರಗಳೇ ಇವೆ.
ಓಟಿಟಿಗಳಲ್ಲೂ ಡಿಮ್ಯಾಂಡ್ ಇಲ್ಲ : ಉದಾಹರಣೆ ಹೇಳಬೇಕೆಂದರೆ.. ಇತ್ತೀಚೆಗೆ ಯುವ ಚಿತ್ರದ ಸಕ್ಸಸ್ ಮೀಟ್ ವೇಳೆ ಯುವ ಚಿತ್ರ ಯಾವ ಒಟಿಟಿ ಎಂಬ ಬಗ್ಗೆ ಹೊಂಬಾಳೆಯವರ ಬಳಿಯೇ ಸ್ಪಷ್ಟ ಉತ್ತರ ಇರಲಿಲ್ಲ. ಹೊಂಬಾಳೆಯಂತಹ ಸಂಸ್ಥೆ, ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೇ ಹೀಗಾದರೆ.. ಉಳಿದವರ ಪರಿಸ್ಥಿತಿ ಊಹಿಸಿಕೊಳ್ಳಿ. ಒಳ್ಳೆಯ ವಿಮರ್ಶೆ ಪಡೆದ ಕನ್ನಡ ಚಿತ್ರಗಳಿಗೂ ಒಟಿಟಿಯಲ್ಲಿ ಬೇಡಿಕೆ ಇಲ್ಲ. ಅಲ್ಲಿಯೂ ತೆಲುಗು, ತಮಿಳು, ಮಲಯಾಳಂ ಡಬ್ಬಿಂಗ್ ಚಿತ್ರಗಳ ದರ್ಬಾರು.
ಈ ವರ್ಷದ ಲೆಕ್ಕವನ್ನೇ ನೋಡಿದರೆ.. ರಿಲೀಸ್ ಆಗಿದ್ದು ಹತ್ತಿರತ್ತಿರ ನೂರು ಚಿತ್ರಗಳಾದರೂ.. ಟಿವಿಯವರು ಖರೀದಿಸಿದ ಚಿತ್ರಗಳ ಸಂಖ್ಯೆ 20ರ ಗಡಿಯಲ್ಲೇ ಇದೆ. ಸಕ್ಸಸ್ ಆದರೆ ನೋಡೋಣ ಎನ್ನುವ ಲೆಕ್ಕ ಟಿವಿಯವರದ್ದು. ಅಫ್ʻಕೋರ್ಸ್ ಟಿವಿಯವರು ಖರೀದಿಸುವಾಗ ದರಿದ್ರ ಚಿತ್ರಗಳನ್ನು ಸುತ್ತಿ ಮಾರಿ ಆ ಮಾರುಕಟ್ಟೆಯನ್ನು ಕೆಡಿಸಿಕೊಂಡ ಖ್ಯಾತಿಯೂ ಕನ್ನಡ ಚಿತ್ರರಂಗದವರದ್ದೇ. ಒಟಿಟಿಯಲ್ಲೂ ಇದೇ ರೀತಿ ಆಗಿದೆ.
ಇನ್ನು ಯಶ್ ಸಿನಿಮಾ ಬಂದು ಎರಡೂವರೆ ವರ್ಷವಾಗಿದೆ. ಹೊಸ ಸಿನಿಮಾ ಈ ವರ್ಷವೂ ಇಲ್ಲ. ಟಾಕ್ಸಿಕ್ ಬರೋದು ಮುಂದಿನ ವರ್ಷಕ್ಕೆ.
ಧ್ರುವ ಸರ್ಜಾ ಸಿನಿಮಾ ಕಥೆ ಹೇಳೋದೇ ಬೇಡ. 2021ರ ಫೆಬ್ರವರಿಯಲ್ಲಿ ರಿಲೀಸ್ ಆಗಿದ್ದ ಪೊಗರು ನಂತರ ಹೆಚ್ಚೂ ಕಡಿಮೆ 4 ವರ್ಷ (38 ತಿಂಗಳು) ಕಳೆದು ಹೋಗಿದೆ. ಮಾರ್ಟಿನ್ ಮತ್ತು ಕೆಡಿ ಚಿತ್ರಗಳು ಕಂಪ್ಲೀಟ್ ಆಗಿದ್ದರೂ.. ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ.
ದುನಿಯಾ ವಿಜಯ್ ಅವರ ಚಿತ್ರವೂ ಅಷ್ಟೆ. 30 ತಿಂಗಳಾಗಿದೆ. ಭೀಮ ಯಾವಾಗ.. ಗೊತ್ತಿಲ್ಲ.
ಉಪೇಂದ್ರ ಅವರ ಯುಐ ಆಲ್ಮೋಸ್ಟ್ ಕಂಪ್ಲೀಟ್ ಆಗಿದೆ. ಕಬ್ಜ ರಿಲೀಸ್ ಆಗಿ 1 ವರ್ಷ ಕಳೆದು ಹೋಗಿದೆ.
ರಿಷಬ್ ಶೆಟ್ಟಿಯವರ ಕಾಂತಾರ ರಿಲೀಸ್ ಆಗಿ 2 ವರ್ಷ ಕಳೆದಿದೆ. ಕಾಂತಾರ 2 ಶೂಟಿಂಗ್ ಅಪ್ʻಡೇಟ್ ಸಿಕ್ಕುತ್ತಿಲ್ಲ.
ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ಯಾವ ಸಿನಿಮಾ ಬರುತ್ತೆ ಅನ್ನೋದು ಗೊತ್ತಿಲ್ಲ. ರಾಜ್ ಬಿ ಶೆಟ್ಟಿಯವರ ಚಿತ್ರಗಳ ಹೊಸ ಅಪ್ʻಡೇಟ್ ಇಲ್ಲ.
ಪ್ರಜ್ವಲ್ ದೇವರಾಜ್ ಅವರ ಚಿತ್ರಗಳೆಲ್ಲ ಚಿತ್ರೀಕರಣದಲ್ಲಿಯೇ ಬ್ಯುಸಿ. ಹೊಸ ಸಿನಿಮಾ ರಿಲೀಸ್ ಯಾವಾಗ..?
ಗಣೇಶ್ ಚಿತ್ರಗಳದ್ದೂ ಇದೇ ಕಥೆ.
ಹೀಗೆ ಈ ಎಲ್ಲ ಸ್ಟಾರ್ ನಟರ ಮಧ್ಯೆ ದರ್ಶನ್ ಅವರ ಡೆವಿಲ್ ಮುಂದಿನ ವರ್ಷ ರಿಲೀಸ್ ಆಗಲಿದೆ. ಶಿವಣ್ಣ ಅವರ ಸಿನಿಮಾಗಳು ಬರಲಿವೆ. ಆದರೆ.. ಉಳಿದವರ ಕಥೆಯೇ ಅರ್ಥವಾಗುವುದಿಲ್ಲ.
ದೊಡ್ಡ ದೊಡ್ಡ ಸ್ಟಾರ್ ನಟರು ಎರಡೋ.. ಮೂರೋ.. ನಾಲ್ಕು ವರ್ಷಕ್ಕೋ.. ಒಂದು ಸಿನಿಮಾ ಮಾಡಬಹುದು. ಅದೃಷ್ಟವಿದ್ದರೆ.. ಅದೊಂದೇ ಸಿನಿಮಾ 1000 ಕೋಟಿ.. 2000 ಕೋಟಿ ವ್ಯವಹಾರ ಮಾಡಬಹುದು. ಆದರೆ.. ವ್ಯವಹಾರ ಮಾಡುವುದಕ್ಕೆ ಮಾರುಕಟ್ಟೆ ಇರಬೇಕಷ್ಟೇ.
ಕನ್ನಡದಲ್ಲಿ ಆ ರೀತಿ ಬಿಸಿನೆಸ್ ಮಾಡಿದ್ದು ಕೆಜಿಎಫ್ ಮತ್ತು ಕಾಂತಾರ ಬಿಟ್ಟರೆ ಮಿಕ್ಕ ಯಾವ ಚಿತ್ರಗಳೂ ಆ ರೀತಿ ಬಿಸಿನೆಸ್ ಮಾಡಿಲ್ಲ.
ಆದರೆ.. ಎಲ್ಲರೂ ಆ ದುಡ್ಡಿನ ಮೇಲೆ ಕಣ್ಣಿಟ್ಟು ಹೊರಟಿದ್ದಾರೆ. ಶಿವಣ್ಣ ಬಿಟ್ಟರೆ.. ಮಿಕ್ಕ ಸ್ಠಾರ್ ನಟರ ಚಿತ್ರಗಳು ವರ್ಷಕ್ಕೊಂದು ಬರೋದಿಲ್ಲ.
ಧ್ರುವ ಸರ್ಜಾ ಅವರು ಅದ್ಯಾವ ಗುರಿ ಇಟ್ಟುಕೊಂಡು ಸಿನಿಮಾ ಮಾಡ್ತಾರೋ ಗೊತ್ತಾಗಲ್ಲ. ಬಹುಶಃ ಶೂಟಿಂಗ್ ಶುರು ಮಾಡಿದ ಮೇಲೆ ಕಥೆ ಹುಡುಕ್ತಾರೇನೋ..
ಉಪೇಂದ್ರ ಅವರು ಮಾರ್ಕೆಟ್ಟು ಎಷ್ಟು ಅನ್ನೋದನ್ನ ಕಬ್ಜ ತೋರಿಸಿಕೊಟ್ಟಿದ್ದಷ್ಟೇ ಅಲ್ಲ, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನೇ ಮಕಾಡೆ ಮಲಗಿಸಿದ್ದನ್ನ ಚಿತ್ರರಂಗದವರೇ ಒಪ್ಪಿಕೊಳ್ತಾರೆ. ಅಷ್ಟೊಂದು ನಿರೀಕ್ಷೆ ಮೂಡಿಸಿದ್ದ ಸಿನಿಮಾ ರಿಲೀಸ್ ಆದಾಗ ಢಮಾರ್ ಎನಿಸಿದಾಗ.. ಹಾಗಾಗುವುದು ಸಹಜ.
ಸುದೀಪ್ ಅವರದ್ದೂ ಅಷ್ಟೇ. ಇದಕ್ಕೆ ಇಷ್ಟು ವರ್ಷ ಬೇಕಾ ಅನ್ನಿಸಿದ್ರೆ.. ಅದು ಪ್ರೇಕ್ಷಕರ ತಪ್ಪಲ್ಲ.
ದರ್ಶನ್ ಅವರ ಕಾಟೇರ ಹಿಟ್ ಆಗಿದೆ, ನಿಜ. ಹಾಗಂತ ಕ್ರಾಂತಿ ಎಂಬ ಸಿನಿಮಾದ ಮಾಡೆಲ್ಲಿನಲ್ಲೇ ಹೊರಟರೆ.. ಕಷ್ಟ ಕಷ್ಟ.
ಈ ಹಿಂದೆಲ್ಲ ಹೀಗಿರಲಿಲ್ಲ. ಡಾ.ರಾಜ್, ವಿಷ್ಣು, ಅಂಬರೀಷ್, ಅನಂತ್ ನಾಗ್, ರವಿಚಂದ್ರನ್ ಚಿತ್ರಗಳು ಬರುತ್ತಲೇ ಇದ್ದವು. ಹಿಟ್ ಅಥವಾ ಫ್ಲಾಪ್ ಆಗುತ್ತಿದ್ದವು. ಆದರೆ.. ಥಿಯೇಟರಿಗೆ ಜನ ಬರುವಂತೆ ಮಾಡುತ್ತಿದ್ದರು. ಆದರೆ.. ಈಗ.. ಒಟ್ಟಿನಲ್ಲಿ ಸ್ಟಾರ್ ಸಿನಿಮಾ ಬರುವ ಹೊತ್ತಿಗೆ.. ಪ್ರೇಕ್ಷಕ ಸಿನಿಮಾಗಳ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾನೆ. ಆಗ.. ಬಾಯ್ ಬಾಯ್ ಬಡ್ಕೋಬೇಕು. ಅಷ್ಟೇ.



