ಮೈಸೂರಿನಲ್ಲಿ ಬಿಜೆಪಿ ಸ್ಪರ್ಧಿಯಾಗಿರುವ ಯದುವೀರ್ ಒಡೆಯರ್ ರಾಜವಂಶಸ್ಥರೇ ಅಲ್ಲ ಎಂಬುದೊಂದು ದೊಡ್ಡ ಬಾಣವನ್ನೇ ಎಸೆದಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್. ಲಕ್ಷ್ಮಣ್ ಅವರ ಪ್ರಕಾರ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೂಲತಃ ರಾಜರ ಕುಡಿಯಲ್ಲ. ಅವರು ಕೇವಲ ಮೈಸೂರು ರಾಜರ ದತ್ತುಪುತ್ರ. ಅದು ನಿಜವೂ ಹೌದು.
ಯದುವೀರ್ ಒಡೆಯರ್ ಅವರ ಮೂಲ ಹೆಸರು ಯದುವೀರ್ ಗೋಪಾಲ್ ರಾಜ್ ಅರಸ್. ಸ್ವರೂಪ್ ಆನಂದ್ ಗೋಪಾಲ್ ರಾಜ್ ಅರಸ್ ಹಾಗೂ ತ್ರಿಪುರ ಸುಂದರಿ ದೇವಿಯವರ ಮಗ. ಇವರಿಗೆ ಜಯತ್ಮಿಕ ಲಕ್ಷ್ಮಿ ಎಂಬ ಸೋದರಿಯೂ ಇದ್ದಾರೆ. ಇದೇನು ಗುಟ್ಟಿನ ವಿಷಯವಲ್ಲ. ಜನರಿಗೆ ಗೊತ್ತಿಲ್ಲದೆ ಮುಚ್ಚಿಟ್ಟುಕೊಂಡಿದ್ದ ಸತ್ಯವೂ ಅಲ್ಲ.
ಒಡೆಯರ್ ವಂಶದಲ್ಲಿ ಮಕ್ಕಳಾಗದೆ ಇರುವುದು ಹಾಗೂ ದತ್ತು ತೆಗೆದುಕೊಳ್ಳುವುದು ಕೂಡಾ ಸಂಪ್ರದಾಯವೇನೋ ಎಂಬಂತೆ ನಡೆದು ಬಂದಿದೆ. ಆದರೆ.. ಯದುವೀರ್ ರಾಜವಂಶದವರೇ ಅಲ್ಲ ಎನ್ನುವುದು ಸುಳ್ಳು. ಯದುವೀರ್ ಅವರ ಮುತ್ತಾತ ಸರ್ದಾರ್ ಗೋಪಾಲ್ ರಾಜ್ ಅರಸ್ ಅವರು, ೪ನೇ ಚಾಮರಾಜೇಂದ್ರ ಒಡೆಯರ್ ಅವರಿಗೆ ಸೋದರರಾಗಬೇಕು. ಇನ್ನು ಯದುವೀರ್ ಅವರ ಅಜ್ಜಿ ಶ್ರೀಕಂಠದತ್ತ ಒಡೆಯರ್ ಅವರ ಸೋದರಿ. ಶ್ರೀಕಂಠದತ್ತ ಒಡೆಯರ್ ಅವರಿಗೆ ಗಂಡು ಸಂತಾನ ಇರಲಿಲ್ಲ. ಹೀಗಾಗಿ.. ಅವರ ಸೋದರಿಯ ಕುಟುಂಬದಲ್ಲಿದ್ದ ಯದುವೀರ್ ಅವರನ್ನು ೨೦೧೫ರಲ್ಲಿ ದತ್ತು ಸ್ವೀಕರಿಸಿದರು. ಇದರಲ್ಲಿ ಗುಟ್ಟುಗಳೇನಿಲ್ಲ. ಎಲ್ಲರ ಸಮ್ಮುಖದಲ್ಲಿಯೇ ನಡೆದಿದೆ. ದತ್ತು ಪಡೆದ ಯದುವೀರ್ ಅವರನ್ನು ಮೈಸೂರಿನ ಜನ ರಾಜ ಮನೆತನದವರಿಗೆ ಕೊಡುವ ಗೌರವವನ್ನೇ ಕೊಡುತ್ತಾರೆ. ಆದರೂ.. ಲಕ್ಷ್ಮಣ್ ಅವರು ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೂಲತಃ ರಾಜರ ಕುಡಿಯಲ್ಲ. ಅವರು ಕೇವಲ ಮೈಸೂರು ರಾಜರ ದತ್ತುಪುತ್ರ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ತಲೆಯ ಲೆಕ್ಕಕ್ಕಾಗಿ ಯದುವೀರ್ ಅವರನ್ನು ಗೆಲ್ಲಿಸಿ ಕಳುಹಿಸಿದರೆ ಎಂತಹ ಅಭಿವೃದ್ಧಿ ಕೆಲಸಗಳು ನಡೆಯಬಹುದು ನೀವೆ ಚಿಂತಿಸಿ ಎನ್ನುವುದು ಲಕ್ಷ್ಮಣ್ ಅವರ ಪ್ರಶ್ನೆ. ಇನ್ನು ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅಭಿವೃದ್ಧಿಯನ್ನೇ ಮಾಡಲಿಲ್ಲ. ಸುಮ್ಮನೆ ಕುಳಿತು ಕಾಲ ಕಳೆದರು ಎಂದು ಟೀಕಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸಂಸದ ಪ್ರತಾಪ್ ಸಿಂಹ ಏನೂ ಸರಿಯಾಗಿ ಕೆಲಸ ಮಾಡಲಿಲ್ಲ. ಅದನ್ನು ಅವರೇ ತಮಗೆ ಟಿಕೆಟ್ ಕೈತಪ್ಪಿದಾಗ ಹೇಳಿಕೊಂಡರು ಎನ್ನುವುದು ಲಕ್ಷ್ಮಣ್ ಅವರ ಹೇಳಿಕೆ.
ಮೈಸೂರು ಹಾಗೂ ಕೊಡಗು ಸೇರಿ ಮೈಸೂರು ಲೋಕಸಭಾ ಕ್ಷೇತ್ರ ಆಗಿದೆ. ಈ ಭಾಗಕ್ಕೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಲಕ್ಷ್ಮಣ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ನಾನು ಕೊಡಗು ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಎಐಸಿಸಿ 25 ಗ್ಯಾರಂಟಿಗಳ ಪ್ರಣಾಳಿಕೆಯನ್ನು ಸಿದ್ಧಗೊಳಿಸಿ ಬಿಡುಗಡೆ ಮಾಡಿದೆ 2014 ರಲ್ಲಿ ಮೈಸೂರಿಗೆ ಬಂದಿದ್ದ ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುವುದಾಗಿಯೂ ನಂತರ 2019 ರಲ್ಲಿ ಸ್ವಿಡ್ಜರ್ಲ್ಯಾಂಡ್ ಮಾಡುವುದಾಗಿಯೂ ಹೇಳಿದ್ದರು. ಎರಡು ಬಾರಿಯೂ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದ್ದಾರೆ. 10 ತಿಂಗಳಲ್ಲಿ ಕೊಡಗಿನಲ್ಲಿ ಯಾವುದಾದರೂ ಕೋಮು ಗಲಭೆಗಳು ನಡೆದಿವೆಯೆ. ಕೋಮುದ್ವೇಷ ಹರಡುವಂತಹ ವ್ಯವಸ್ಥೆ ಬಿಜೆಪಿಯಲ್ಲಿ ಇದೆ. ಆದರೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಹೇಳಿದ್ದಾರೆ.
2014 ರಲ್ಲಿ ಮೈಸೂರಿಗೆ ಬಂದಿದ್ದ ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುವುದಾಗಿಯೂ ನಂತರ 2019 ರಲ್ಲಿ ಸ್ವಿಡ್ಜರ್ಲ್ಯಾಂಡ್ ಮಾಡುವುದಾಗಿಯೂ ಹೇಳಿದ್ದರು. ಎರಡು ಬಾರಿಯೂ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದ್ದಾರೆ. 10 ತಿಂಗಳಲ್ಲಿ ಕೊಡಗಿನಲ್ಲಿ ಯಾವುದಾದರೂ ಕೋಮು ಗಲಭೆಗಳು ನಡೆದಿವೆಯೆ. ಕೋಮುದ್ವೇಷ ಹರಡುವಂತಹ ವ್ಯವಸ್ಥೆ ಬಿಜೆಪಿಯಲ್ಲಿ ಇದೆ. ಆದರೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಲಕ್ಷ್ಮಣ್ ಹೇಳಿದ್ದಾರೆ.



