ಲಕ್ಷ ಲಕ್ಷ ಕೋಟಿಯ ಒಡೆಯ ರತನ್ ಟಾಟಾರನ್ನು ಹೂಳಲೂ ಇಲ್ಲ. ಸುಡಲೂ ಇಲ್ಲ. ಆದರೆ ಅಂತ್ಯ ಸಂಸ್ಕಾರವನ್ನಂತೂ ಮಾಡಿದರು. ಏಕೆಂದರೆ ರತನ್ ಟಾಟಾ ಹಿಂದೂ ಅಲ್ಲ. ಪಾರ್ಸಿ. ಪಾರ್ಸಿ ಸಮುದಾಯದಲ್ಲಿ ಭೂಮಿಯನ್ನ ಮತ್ತು ಅಗ್ನಿಯನ್ನ ಅತ್ಯಂತ ಪವಿತ್ರ ಎಂದು ಭಾವಿಸ್ತಾರೆ. ಹೀಗಾಗಿ ಪಾರ್ಸಿಯಲ್ಲಿ ಯಾರಾದರೂ ಮೃತಪಟ್ಟರೆ ಅವರ ಮೃತದೇಹವನ್ನ ಹದ್ದುಗಳಿಗೆ ತಿನ್ನೋಕೆ ಬಿಡ್ತಾರೆ. ಏಕೆಂದರೆ ಅದು ಪಾರ್ಸಿ ಸಮುದಾಯದ ಪದ್ಧತಿ ಮತ್ತು ಸಂಪ್ರದಾಯ.
ಪಾರ್ಸಿಗಳಲ್ಲಿ ರುದ್ರಭೂಮಿಗಳಿಲ್ಲ. ಸ್ಮಶಾನಗಳೂ ಇಲ್ಲ. ಅವರ ಸ್ಮಶಾನವೇ ಬೇರೆ ರೀತಿಯದ್ದು. ಪಾರ್ಸಿಗಳಲ್ಲಿ ಒಂದು ಎತ್ತರದ ಸ್ಥಳದಲ್ಲಿ ಮೃತದೇಹವನ್ನ ಇಟ್ಟು, ಬಂದು ಬಿಡ್ತಾರೆ. ಅದನ್ನ ದಖ್ಮಾ ಅಥವಾ ಪಾರ್ಸಿ ಬಾವ್ಡಿ ಅಂತಾ ಕರೀತಾರೆ. ಇಂಗ್ಲಿಷ್ ಇತಿಹಾಸಕಾರರು ಅಂತಹ ಸ್ಥಳಗಳನ್ನ ಟವರ್ ಆಫ್ ಸೈಲೆನ್ಸ್ ಅಂತಾನೂ ಕರೀತಾರೆ.
ಅಂದರೆ ಪಾರ್ಥಿವ ಶರೀರದ ಅಂತಿಮ ದರ್ಶನ, ಪೂಜೆ ಮೊದಲಾದವನ್ನೆಲ್ಲ ಮುಗಿಸಿದ ನಂತರ ಆ ಶರೀರವನ್ನ ಹದ್ದುಗಳಿಗೆ ಅರ್ಪಿಸುವ ಸಂಪ್ರದಾಯ ಇದೆ. ಮನುಷ್ಯ ಸತ್ತ ಮೇಲೆಯೂ ಪ್ರಾಣಿಗಳಿಗೆ ಉಪಯೋಗವಾಗಬೇಕು ಅನ್ನೋದು ಪಾರ್ಸಿಗಳ ಸಂಸ್ಕೃತಿ ಮತ್ತು ನಂಬಿಕೆ. ಅಂತಹ ಒಂದು ದಖ್ಮಾ ಅಥವಾ ಪಾರ್ಸಿ ಬಾವ್ಡಿಯಲ್ಲಿ ಎತ್ತರದ ಸ್ಥಳದಲ್ಲಿ ಮೃತದೇಹ ಇಟ್ಟು ಬರ್ತಾರೆ. ಟಾಟಾ ಅವರ ಅಂತ್ಯ ಸಂಸ್ಕಾರವೂ ಹಾಗೆಯೇ ಆಯ್ತು.
ಅಂತಹ ಎತ್ತರದ ಸ್ಥಳಗಳ ಪಕ್ಕದಲ್ಲಿ ಇಳಿಜಾರಿನಂತಹ ಸ್ಥಳ ಇರುತ್ತೆ. ಟಾಟಾ ಅವರದ್ದೂ ಅಷ್ಟೇ, ಅವರ ಇಡೀ ಶರೀರವನ್ನು ಹದ್ದು, ಕಾಗೆಗಳಂತಹ ಮಾಂಸಾಹಾರಿ ಪಕ್ಷಿಗಳು ಕಿತ್ತು ತಿನ್ನುತ್ತವೆ. ಕೊನೆಗೆ ಇಳಿಜಾರಿನ ಪಕ್ಕ ಇರೋ ಗುಂಡಿಗಳಲ್ಲಿ ಆ ಮೃತದೇಹದ ಮೂಳೆಗಳು ಶೇಖರಣೆಯಾಗ್ತವೆ. ಆ ಮೂಳೆಗಳ ಜೊತೆ ನಿಂಬೆ ಹಣ್ಣಿನ ಹೋಳುಗಳನ್ನ ಹಾಕ್ತಾರೆ. ಅದರಿಂದ ಮೂಳೆಗಳು ಕೊಳೆಯುತ್ತವೆ. ಆನಂತರ ಆ ಮೂಳೆಗಳೂ ಕಪ್ಪು ಪುಡಿಗಳಾಗ್ತವೆ.
ಕೊನೆಗೆ ಮಳೆ ನೀರಿನ ಜೊತೆ ಮೂಳೆಗಳ ಪುಡಿ ಬೆರೆತು, ಪಾರ್ಸಿಗಳ ಟವರ್ನಿಂದ ಹೊರ ಹೋಗುತ್ತದೆ. ರತನ್ ಟಾಟಾ ಅವರ ಅಂತ್ಯಕ್ರಿಯೆಯೂ ಹಾಗೆಯೇ ಆಗುತ್ತದೆ.
ಪಾರ್ಸಿಗಳ ನಂಬಿಕೆಯ ಪ್ರಕಾರ ರತನ್ ಟಾಟಾ ಅವರಷ್ಟೇ ಅಲ್ಲ, ಯಾವ ಪಾರ್ಸಿ ಮೃತಪಟ್ಟರೂ, ಅವರ ಅಂತ್ಯ ಸಂಸ್ಕಾರ ಬೇರೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಅಥವಾ ಬೌದ್ಧ ಸಂಪ್ರದಾಯದಂತೆ ನಡೆಯುವುದಿಲ್ಲ. ಹೂಳುವುದೂ ಇಲ್ಲ. ಸುಡುವುದೂ ಇಲ್ಲ.
ರತನ್ ಟಾಟಾ ಅವರ ಅಂತ್ಯಕ್ರಿಯಲ್ಲಿ ಮೊದಲಿಗೆ ಪ್ರತ್ಯೇಕ ಕೋಣೆಯಲ್ಲಿ ಒಂಟಿಯಾಗಿ ಇಡ್ತಾರೆ. ಅದು ಅವರ ದೇಹ, ಆತ್ಮವಾಗುವ ಹಾದಿಯಲ್ಲಿ ಶುದ್ಧೀಕರಣದ ಹಂತ. ಆಮೇಲೆ ದೇಹವನ್ನು ಬಿಳಿ ವಸ್ತ್ರಗಳಿಂದ ಮುಚ್ಚುತ್ತಾರೆ. ಆನಂತರವೇ ಅವರ ಬಂಧುಗಳು, ಗೆಳೆಯರೆಲ್ಲ ಅಂತಿಮ ದರ್ಶನ ಪಡೀತಾರೆ.
ಅಂತಿಮ ದರ್ಶನ ಮುಗಿದ ಮೇಲೆ ಸಗ್ದಿದ್ ಮಾಡ್ತಾರೆ. ಅಂದರೆ ಮೃತರ ಆತ್ಮಕ್ಕೆ ಶಾಂತಿ ಕೋರಿ, ಬಂಧು ಬಳಗದವರು ಪ್ರಾರ್ಥನೆ ಮಾಡ್ತಾರೆ.
ನಂತರ ನಡೆಯುವುದು ನವ್ಜೋತಿ ಕ್ರಿಯೆ. ಅಂದರೆ ಆತ್ಮವನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವ ಹಂತದ ಪದ್ಧತಿ.
ಅದಾದಮೇಲೆ ನಡೆಯುವುದು ವೆಂಡಿದಾದ್ ಪದ್ಧತಿ. ಅದು ಶುದ್ಧೀಕರಣದ ಪ್ರಕ್ರಿಯೆ.
ನಂತರ ಯಸ್ನಾ ನಡೆಯುತ್ತದೆ. ಅಂದರೆ ಪಾರ್ಸಿಗಳ ದೇವತೆ ಅಹುರಾ ಮಜ್ದಾಗೆ ಪ್ರಾರ್ಥನೆ. ನಂತರ ನಡೆಯುವುದೇ ದೋಕ್ಮೆನಾಷಿನಿ ಪ್ರಕ್ರಿಯೆ. ಅಂದರೆ ಸಂಸ್ಕಾರದ ಹಂತ.
ಸೈಲೆನ್ಸ್ ಆಫ್ ಟವರ್ಗೆ ಇಟ್ಟು ಬಂದ ಮೇಲೆ ನಾಲ್ಕು ದಿನಗಳ ಕಾಲ ನಿರಂತರ ಪ್ರಾರ್ಥನೆ ನಡೆಯುತ್ತೆ. ಅದು ದೇಹದಿಂದ ದೂರವಾದ ಆತ್ಮಕ್ಕೆ ಸಲ್ಲಿಸುವ ಪ್ರಾರ್ಥನೆ.
ನಂತರ ೪೦ ದಿನಗಳ ಕಾಲ ಆತ್ಮ ಪ್ರಯಾಣ ಮಾಡಿ ಸದ್ಗತಿ ಹೊಂದುತ್ತೆ ಎನ್ನೋದು ನಂಬಿಕೆ. ಆ ನಂಬಿಕೆಗೆ ಚಾಹುನ್ ಅಂತಾ ಕರೀತಾರೆ.
ಹೀಗೆ ಲಕ್ಷ ಲಕ್ಷ ಕೋಟಿ ಇದ್ದರೂ.. ರತನ್ ಟಾಟಾ ಅವರ ಅಂತ್ಯ ಸಂಸ್ಕಾರ ವಿಭಿನ್ನವಾಗಿ ನಡೆಯುತ್ತೆ. ಹದ್ದು, ಕಾಗೆಗಳಿಗೆ ಆಹಾರವಾಗುತ್ತದೆ.
ರತನ್ ಟಾಟಾ ಅವರ ನಿಧನಕ್ಕೆ ಶ್ರದ್ದಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಅವರ ಜೊತೆಗಿನ ಒಡನಾಟ, ಮಾತುಕತೆಯನ್ನು ಮೋದಿ ಮೆಲುಕು ಹಾಕಿಕೊಂಡಿದ್ದಾರೆ. ರತನ್ ಟಾಟಾ ಅವರು ದೂರದೃಷ್ಟಿಯ, ಸಹಾನುಭೂತಿಯನ್ನು ಹೊಂದಿರುವ ಮಾನವೀಯತೆಯ ವ್ಯಕ್ತಿ ಆಗಿದ್ದರು. ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆ ಟಾಟಾ ಸಮೂಹ ಸಂಸ್ಥೆಗಳ ವಹಿವಾಟುಗಳನ್ನು ಯಾವುದೇ ಏರುಪೇರು ಇಲ್ಲದೇ ಮುನ್ನಡೆಸಿದ್ದರು” ಎಂದು ಪ್ರಧಾನಿ ಮೋದಿ, ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಅವರಷ್ಟೇ ಅಲ್ಲ, ಇಡೀ ಭಾರತ ದೇಶದ ಗಣ್ಯ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ಸಿನಿಮಾ ನಟ ನಟಿಯರು, ವಿವಿಧ ದೇಶಗಳ ಗಣ್ಯರು, ಸಾಹಿತಿಗಳು, ವಿಜ್ಞಾನಿಗಳು ಕೂಡಾ ಕಂಬನಿ ಮಿಡಿದಿದ್ದಾರೆ.
ಅಪ್ಡೇಟ್ ಮಾಹಿತಿ : ರತನ್ ಟಾಟಾ ಅವರ ಅಂತ್ಯಸಂಸ್ಕಾರ ಟವರ್ ಆಫ್ ಸೈಲೆನ್ಸ್ ಇರುವ ವೊರ್ಲಿ ಚಿತಾಗಾರದಲ್ಲಿಯೇ ನಡೆದಿದ್ದರೂ, ಅವರ ಮೃತದೇಹವನ್ನು ರಣಹದ್ದುಗಳಿಗೆ ಇಡಲಾಗಿಲ್ಲ. ಇತ್ತೀಚೆಗೆ ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯುತ್ ಚಿತಾಗಾರದಲ್ಲಿಯೇ ಸಂಸ್ಕಾರ ಮಾಡಲಾಗಿದೆ.



