ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಅಧ್ಯಕ್ಷರಾದರೂ.. ಯಡಿಯೂರಪ್ಪ ಅವರ ಪ್ರಭಾವ ಕಡಿಮೆಯಾಗಿಲ್ಲ. ರಾಜ್ಯ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರಿಗೆ ಇಡೀ ರಾಜ್ಯದಲ್ಲಿ ಪ್ರಭಾವವಿದೆ. ನಾಯಕರ ಪರಿಯಚವೂ ಇದೆ. ಹೀಗಿರುವಾಗಲೇ.. ದೆಹಲಿ ವರಿಷ್ಠರು ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಅವರಿಗೇ ಟಾರ್ಗೆಟ್ ಕೊಟ್ಟಿದ್ಧಾರೆ. ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುತೇಕ ಭಿನ್ನಮತ ಬಗೆಹರಿಸುವಲ್ಲ ಯಶಸ್ವಿಯೂ ಆಗಿದ್ಧಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಎದುರಾಗಿದ್ದ ಅಡೆತಡೆ, ಸವಾಲುಗಳನ್ನು ತಾವೇ ಮುಂದೆ ನಿಂತು ಒಂದೊಂದಾಗಿ ನಿವಾರಣೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಟಿಕೆಟ್ ಘೋಷಣೆಯಾದ ಬಳಿಕ ಹಲವು ನಾಯಕರು ಅಸಮಾಧಾನದ ಧ್ವನಿ ಎತ್ತಿದ್ದರು. ಅಂತಹ ಹಲವು ನಾಯಕರನ್ನು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸತತವಾಗಿ ವಿವಿಧ ಕ್ಷೇತ್ರಗಳ ಮುಖಂಡರನ್ನು ಭೇಟಿ ಮಾಡಿ, ಮಾತನಾಡಿ ಆಕ್ರೋಶ ಕೂಲ್ ಮಾಡುವ ಪ್ರಯತ್ನ ಮಾಡಿದ್ಧಾರೆ ಯಡಿಯೂರಪ್ಪ.
ಸೋಮವಾರ ಟಿಕೆಟ್ ವಂಚಿತ ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಕ್ಷೇತ್ರದ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ ಅಸಮಾಧಾನ ಶಮನಗೊಳಿಸಿದರಷ್ಟೇ ಅಲ್ಲ, ಕಾಂಗ್ರೆಸ್ನತ್ತ ಮುಖ ಮಾಡಿದ್ದ ಕರಡಿ ಸಂಗಣ್ಣ ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ಧಾರೆ.
ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕ ಹಾಗೂ ಕೆಆರ್ಪಿಪಿ ಪಕ್ಷ ಸ್ಥಾಪಿಸಿದ್ದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆ ತಂದಿದ್ದಾರೆ. ಆ ಮೂಲಕ ಶ್ರೀರಾಮುಲು ಅವರ ಬಯಕೆಯನ್ನೂ ಈಡೇರಿಸಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರುಗಳಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ಧಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಮ್ಯಾರಥಾನ್ ಸಭೆ ನಡೆಸಿದ ಯಡಿಯೂರಪ್ಪ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಮತ್ತಿತರರನ್ನು ಮಾತುಕತೆ ಮೂಲಕ ಮನವೊಲಿಸಿದ್ದಾರೆ. ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮೊದಲಾದವರ ಜೊತೆ ಕೂಡಿಕೊಂಡೇ ಸಂಧಾನ ನಡೆಸಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಪರಿಹರಿಸಿದ್ದಷ್ಟೇ ಅಲ್ಲ, ಎಸ್.ಎ.ರವೀಂದ್ರನಾಥರ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಮಾತನಾಡಿದ್ದಾರೆ.
ಇನ್ನು ಬೆಳಗಾವಿಯಲ್ಲೂ ಅಷ್ಟೆ, ಬೀದರ್ʻನಲ್ಲೂ ಅಷ್ಟೆ, ರಾಯುಚೂರಿನಲ್ಲೂ ಅಷ್ಟೆ… ಭಿನ್ನಮತೀಯರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪ ಒಂದು ಹಂತಕ್ಕೆ ಸಕ್ಸಸ್ ಕಂಡಿದ್ಧಾರೆ. ಪಕ್ಷದ ಮುಖಂಡರಲ್ಲಿ ತಲೆದೋರಿರುವ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಯಶಸ್ಸು ಕಂಡಿದ್ದು, ತಾವೇಕೆ ಲೀಡರ್ ಆಗಿದ್ಧೇನೆ ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಈಶ್ವರಪ್ಪ ಜೊತೆ ಸಂಧಾನ ಇಲ್ಲ : ಎಲ್ಲರನ್ನೂ ಸಮಾಧಾನ ಪಡಿಸಿದ್ದರೂ ಈಶ್ವರಪ್ಪ ಜೊತೆ ಸಂಧಾನ ಮಾಡುವ ಪ್ರಯತ್ನ ಮಾಡಿಲ್ಲ. ತಮ್ಮ ಪುತ್ರನೇ ಅಭ್ಯರ್ಥಿಯಾಗಿದ್ದರೂ.. ಸಂಧಾನಕ್ಕೆ ಮುಂದಾಗಿಲ್ಲ. ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ನಾಯಕರ ಸಲಹೆ ಮೇರೆಗೆ ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲ, ಟೀಕೆ ಮಾಡುವ ಹಂತದಲ್ಲಿ ಈಶ್ವರಪ್ಪ ಲಂಗು ಲಗಾಮಿಲ್ಲದೆ ಮಾತನಾಡಿದ್ದು, ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಘಾಸಿ ಮಾಡುವ ರೀತಿಯಲ್ಲಿ ಮಾತನಾಡಿದ್ದು ಯಡಿಯೂರಪ್ಪ ಅವರನ್ನು ವೈಯಕ್ತಿಕವಾಗಿ ಕೆರಳಿಸಿದೆ ಎನ್ನಲಾಗಿದೆ.



