ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಗೆ ಕರೆತರುವ ಯಾವ ಪ್ರಯತ್ನವೂ ಕೆಲಸ ಮಾಡ್ತಿಲ್ಲ. ಹೈಕಮಾಂಡ್ ನಾಯಕರೂ ಯತ್ನಾಳ್ ಅವರ ಮಾತುಗಳಿಂದ ರೋಸಿ ಹೋಗಿದ್ದಾರೆ. RSS ನಾಯಕರೂ ಬೇಸತ್ತು ಹೋಗಿದ್ದಾರೆ. ಯತ್ನಾಳ್ ಬೆನ್ನಿಗೆ ನಿಂತಿದ್ದವರು ತಮ್ಮ ತಮ್ಮ ಕ್ಷೇತ್ರದಲ್ಲೇ ಗೆಲ್ಲಲು ಸಾಧ್ಯವಾಗದೆ ಇನ್ನೊಬ್ಬರ ಕೈಕಾಲು ಹಿಡಿಯುವವರು. ಯತ್ನಾಳ್ ಕೂಡಾ ಲೋಕಸಭೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡಿಂಗ್ ಕೊಡಿಸೋಕೆ ಆಗಿರಲಿಲ್ಲ. ಆದರೆ.. ಯತ್ನಾಳ್ ಪರ ಒಂದು ದೊಡ್ಡ ಪಡೆಯೇ ರಾಜ್ಯದಲ್ಲಿ ಆಕ್ಟಿವ್ ಇರುವುದಂತೂ ನಿಜ. ಆ ಪಡೆ ಈಗ ಫುಲ್ ಆಕ್ಟಿವ್ ಆಗುತ್ತಿದೆ. ಅದು ಕೇಸರಿ ಸಮಿತಿ.
ದಿನದಿಂದ ದಿನಕ್ಕೆ ಬಸನಗೌಡಪಾಟೀಲ್ ಯತ್ನಾಳ್ ಜನಪ್ರಿಯತೆ ಹೆಚ್ಚುತ್ತಿದೆ. ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಯತ್ನಾಳ್ ಇದೀಗ ಮುಧೋಳದಲ್ಲಿ ಕೇಸರಿ ಸಭೆ ನಡೆಸಿದ್ದಾರೆ. ಕೇಸರಿ ಸಮಿತಿ ರಾಜ್ಯ ಸಂಯೋಜಕ ಉಮೇಶ ಆಲಮೇಲಕರ ಸೇರಿದಂತೆ ಕೇಸರಿ ಸಮಿತಿ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಯತ್ನಾಳ್ ನೇತೃತ್ವದಲ್ಲಿ ಈ ಸಭೆ ನಡೆದಿದೆ. ರಾಜ್ಯಾದ್ಯಂತ ಕೇಸರಿ ಸಮಿತಿ ಸಭೆ ನಡೆಸಲು ಯತ್ನಾಳ್ ಹಾಗೂ ಸಮಿತಿ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಬಸನಗೌಡಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶೀಘ್ರದಲ್ಲೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.
ಮುಧೋಳದಲ್ಲಿ ನಡೆದ ಸಭೆಯಲ್ಲಿ ಕೇಸರಿ ಸಮಿತಿ ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಗೆಳ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೇಸರಿ ಸಮಿತಿ ಮೂಲಕ ತುರ್ತಾಗಿ ಕೈಗೊಳ್ಳಬೇಕಾದ ಕಾರ್ಯಗಳು ಹಾಗೂ ಮುಂದಿನ ರೂಪುರೇಶೆಗಳ ಕುರಿತು ಚರ್ಚಿಸಲಾಗಿದೆ. ಮಧೋಳದಲ್ಲಿ ಆಯೋಜಿಸಿದ ಸಭೆ ಮೂಲಕ ರಾಜ್ಯಾದ್ಯಂತ ಕೇಸರಿ ಸಮಿತಿ ಸಂಘಟನೆ ಬಲಪಡಿಸಲು ಮುಂದಾಗಿದೆ. ಯತ್ನಾಳ್ ನೇತೃತ್ವದಲ್ಲಿ ಈ ಸಮಿತಿ ಸಭೆ ನಡೆಸಲಾಗುತ್ತದೆ ಎಂದು ಕೇಸರಿ ಸಮಿತಿ ಹೇಳಿದೆ. ಸಭೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿನ ಕೇಸರಿ ಸಮಿತಿ ಕಾರ್ಯ ವೈಖರಿ ಬಗ್ಗೆ ಯತ್ನಾಳ್ ಮಾಹಿತಿ ಪಡೆದಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಕಿತ್ತೂರು ಚೆನ್ನಮ್ಮಾ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ, ಬಿಜೆಪಿಯಿಂದ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಸನಗೌಡ ಪಾಟೀಲ್ ಅವರನ್ನು ಪಾರ್ಟಿಗೆ ತೆಗೆದುಕೊಳ್ಳದಿದ್ದರೆ ನಿಮಗೆ ಪಾರ್ಟಿ ಕಟ್ಟೋಕೆ ಆಗೋದಿಲ್ಲ ಎಂದು ಶ್ರೀಶೈಲಗೌಡ ಪಾಟೀಲ್ ಹೇಳಿದ್ದಾರೆ. ಮರಕಟ್ಟಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಬಸನಗೌಡಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಗೆ ಮತ್ತೆ ಕರೆತರಬೇಕೆಂದು ರಾಜ್ಯ ನಾಯಕರಿಗೆ ಈಗಾಗಲೇ ನಾನು ಪತ್ರವನ್ನು ಕೂಡ ಬರೆದಿದ್ದೇನೆ. ಅದನ್ನೆಲ್ಲ ವೇದಿಕೆ ಮೇಲೆ ಹೇಳೋಕೆ ಆಗೋದಿಲ್ಲ. ಬರುವಂತ ದಿನಗಳಲ್ಲಿ ಯತ್ನಾಳ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಅಪೇಕ್ಷೆ ಪಡುವ ವ್ಯಕ್ತಿಗಳಲ್ಲಿ ನಾನು ಮೊದಲಿಗ ಎಂದು ಶ್ರೀಶೈಲಗೌಡ ಪಾಟೀಲ್ ಹೇಳಿದ್ದಾರೆ. ಯತ್ನಾಳ್ ಅಂತವರು ನಮ್ಮ ಬೆನ್ನಿಗೆ ಇದ್ದಾರೆ ಎಂದರೆ ನಾವು ಯಾವುದೇ ಕಾರ್ಯವನ್ನು ಸಹಿತ ಸುಲಭವಾಗಿ ಸಾಧಿಸಬಹುದು. ಇದನ್ನು ನಾನು ಬಹಳ ಹೆಮ್ಮೆಯಿಂದ ಹೇಳುತ್ತೇನೆ ಎಂದು ಶ್ರೀಶೈಲಗೌಡ ಪಾಟೀಲ್ ಹೇಳಿದ್ದಾರೆ.
ಹಿಂದುತ್ವ ಉಳಿಸಲು ಯತ್ನಾಳ್ ಬೇಕು
ನಾನು ಕೂಡ ಒಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈಗ ಮೂರ್ನಾಲ್ಕು ವರ್ಷದಲ್ಲಿ ನಾನು ಬಿಜೆಪಿಗೆ ಹೋಗಿದ್ದೇನೆ. ಹಿಂದುತ್ವ ಉಳಿಯಬೇಕು ಅಂದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಅಂತವರೇ ಬೇಕು ಎಂದ ಶ್ರೀಶೈಲ್ ಗೌಡ ಪಾಟೀಲ್ ಹೇಳಿದ್ದಾರೆ.



