ಜನರು ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ ಎನ್ನುತ್ತಿದ್ದಾರೆ. ಹಿಂದೂ ಪರವಾದ ಪಕ್ಷ ಬೇಕು ಎಂದು ಹೇಳುತ್ತಿದ್ದಾರೆ. ಹಿಂದೂಗಳು ಸಹನೆ ಉಳ್ಳವರು, ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ. ಬಿಜೆಪಿ ಹಿಂದೂ ಪಕ್ಷವಾಗದಿದ್ರೆ ಐತಿಹಾಸಿಕ ನಿರ್ಧಾರ ಮಾಡುತ್ತಾರೆ. BSY ಕುಟುಂಬಕ್ಕೆ ನಾಯಕತ್ವ ಕೊಟ್ರೆ ಬಿಜೆಪಿ ಹೀನಾಯವಾಗಿ ಸೋಲುತ್ತೆ/ ಬಿಎಸ್ವೈ ಕುಟುಂಬ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡಿದೆ. ಆಲಮಟ್ಟಿ ಡ್ಯಾಂಗೆ 25 ಸಾವಿರ ಕೋಟಿ ರೂ. ಕೊಡುವೆ ಎಂದು ಮೋಸ ಮಾಡಿದ್ದಾರೆ. ವಿಜಯಪುರ ನಗರಕ್ಕೆ ಬಂದಿದ್ದ 125 ಕೋಟಿ ರೂ. ಹಿಂಪಡೆದು ವಂಚಿಸಿದ್ದಾರೆ. ಬಿಎಸ್ವೈ ಬಿಟ್ಟರೆ ಲಿಂಗಾಯತರು ಕೈಬಿಡುತ್ತಾರೆ ಎನ್ನುವ ಭಯ ಬಿಡಲಿ.. ಹೀಗೆ ಹೇಳುತ್ತಿರುವ ಯತ್ನಾಳ್, ಹೊಸ ಹಿಂದುತ್ವದ ಪಕ್ಷ ಕಟ್ಟುವ ಸುಳಿವು ಕೊಟ್ಟಿದ್ದಾರೆ. ಆದರೆ ಹೊಸ ಪಕ್ಷ ಕಟ್ಟಲ್ಲ ಎಂದು ಕೂಡಾ ಬಹಿರಂಗವಾಗಿ ಹೇಳಿದ್ದ ಯತ್ನಾಳ್ ‘ರಾಜ್ಯದಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಹೀಗಾಗಿ ನಾನು ಹೊಸ ಪಕ್ಷ ಕಟ್ಟುತ್ತೇನೆ. ವಿಜಯದಶಮಿಯಂದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಯತ್ನಾಳ್ ಅವರು ಈಗ ಸ್ವತಂತ್ರ ಶಾಸಕರಾಗಿರುವುದರಿಂದ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ವದಂತಿ ಹಬ್ಬಿದ್ದರೂ ಅದನ್ನು ಅವರ ಆಪ್ತರು ಬಲವಾಗಿ ಅಲ್ಲಗಳೆಯುತ್ತಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಹೊಸ ಪಕ್ಷ ಕಟ್ಟಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಪರಾಕುಗಳು ಜೋರಾಗಿವೆ. ರಾಜ್ಯ ರಾಜಕಾರಣದ ಅತಿರಥ ಮಹಾರಥರು ಸ್ವಂತ ರಾಜಕೀಯ ಪಕ್ಷ ಸ್ಥಾಪಿಸಿ ಮುಂದೇನು ಮಾಡಿದರು ಎಂಬುದು ಗೊತ್ತಿರುವ ಸಂಗತಿಯೇ. ಹೀಗಾಗಿ, ಆ ಸಾಹಸಕ್ಕೆ ಕೈಹಾಕುವುದಿಲ್ಲ ಎನ್ನಲಾಗುತ್ತಿದ್ದರೂ, ತಳ್ಳಿ ಹಾಕುವಂತಿಲ್ಲ.
ದೇವರಾಜ ಅರಸು : ಕ್ರಾಂತಿರಂಗ ಫೇಲ್
ಇಂದಿರಾ ಗಾಂಧಿ ಅವರಿಂದ ಉಚ್ಚಾಟನೆಯಾಗಿದ್ದ ದೇವರಾಜ ಅರಸು ಅರಸು ಕಾಂಗ್ರೆಸ್ ಎಂಬ ಪಕ್ಷವನ್ನು ಮುನ್ನಡೆಸಿದ್ದರು. ಆದರೆ ಅರಸು ಪಕ್ಷ ಯಾವುದೇ ಪ್ರಭಾವ ಬೀರಲಿಲ್ಲ. ಕೇವಲ ಒಂದು ಸೀಟು ಗೆದ್ದು, ಅರಸು ಕ್ಯಾಂಪಿನಲ್ಲಿದ್ದ ಶಾಸಕರೆಲ್ಲ ಇಂದಿರಾ ಕಾಂಗ್ರೆಸ್ಸಿಗೆ ಸೇರಿದರು. ಅದಾದ ನಂತರ ಅರಸು 1979ರಲ್ಲಿ ಕರ್ನಾಟಕ ಕ್ರಾಂತಿರಂಗ ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು. ಆದರೆ, ಯಾವುದೇ ದೊಡ್ಡ ಪ್ರಭಾವ ಬೀರಲಿಲ್ಲ. ಮುಂದೆ ಅದು ಜನತಾ ಪಕ್ಷದಲ್ಲಿ ವಿಲೀನವಾಯ್ತು.
ಎಸ್. ಬಂಗಾರಪ್ಪ ಕ್ರಾಂತಿರಂಗ ವೈಫಲ್ಯ
ಇನ್ನು ಅರಸು ಅವರು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯಾಗುವುದಕ್ಕೆ ಕಾರಣವಾಗಿದ್ದ ಸಾರೆಕೊಪ್ಪ ಬಂಗಾರಪ್ಪ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ ಅವರ ತಂತ್ರದಿಂದಾಗಿ ಪದವಿ ಕಳೆದುಕೊಳ್ಳಬೇಕಾಯ್ತು. ಕ್ಲಾಸಿಕ್ ಕಂಪ್ಯೂಟರ್ ಹಗರಣದ ಹೆಸರಿನಲ್ಲಿ ಅಧಿಕಾರ ಕಳೆದುಕೊಂಡ ಬಂಗಾರಪ್ಪ, ಕರ್ನಾಟಕ ಕ್ರಾಂತಿರಂಗ ಪಕ್ಷವನ್ನು ಸ್ಥಾಪಿಸಿದರು. ಇದರಲ್ಲಿ ಇನ್ನೂ ಒಂದು ವಿಶೇಷ ಇದೆ. ಅರಸು ಅವರನ್ನು ಕಾಂಗ್ರೆಸ್ಸಿಂದ ಉಚ್ಚಾಟನೆ ಮಾಡಬೇಕು ಎಂದು ವರದಿ ಕೊಟ್ಟಿದ್ದ ಬಂಗಾರಪ್ಪ, ಅದೇ ಅರಸು ಅವರ ಕ್ರಾಂತಿರಂಗದ ಹೆಸರನ್ನೇ ತಮ್ಮ ಪಕ್ಷಕ್ಕೆ ಇಟ್ಟುಕೊಂಡರು.
ಶೇ.8ರಷ್ಟು ವೋಟು ಪಡೆದಿದ್ದೇ ಕ್ರಾಂತಿರಂಗದ ದೊಡ್ಡ ಸಾಧನೆ. ಗೆದ್ದವರು ಕಾಂಗ್ರೆಸ್ ಸೇರಿದ್ದರು. ಅದಾದ ಮೇಲೆ ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ವಿಕಾಸ ಪಕ್ಷಗಳನ್ನು ಕಟ್ಟಿದ್ದರು. ಕೆಸಿಪಿ ಮೂಲಕ 6 ಶಾಸಕರನ್ನೂ ಗೆಲ್ಲಿಸಿಕೊಂಡ ಬಂಗಾರಪ್ಪ, ಅದಾದ ಮೇಲೆ ಸಮಾಜವಾದಿ, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಸುತ್ತುವಂತಾಯ್ತು.
2013 ಯಡಿಯೂರಪ್ಪ ಕೆಜೆಪಿ :
2013ರಲ್ಲಿ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದರು. ಆ ಚುನಾವಣೆಯಲ್ಲಿ ಶೇ.10ರಷ್ಟು ಮತ ಪಡೆದ ಕೆಜೆಪಿಯಿಂದ 6 ಶಾಸಕರು ಗೆದ್ದಿದ್ದರು. ಅದಾದ ನಂತರ 2014ರಲ್ಲಿ ಯಡಿಯೂರಪ್ಪ ತಮ್ಮ ಪಕ್ಷದ ಅಷ್ಟೂ ಜನ ಶಾಸಕರ ಜೊತೆ ಬಿಜೆಪಿಯಲ್ಲಿ ವಿಲೀನವಾದರು.
ಇನ್ನು ಶ್ರೀರಾಮುಲು, ಜನಾರ್ದನ ರೆಡ್ಡಿ, ವಿಜಯ ಸಂಕೇಶ್ವರ, ಜೆಹೆಚ್ ಪಟೇಲ್, ರಾಮಕೃಷ್ಣ ಹೆಗಡೆ, ನಿಜಲಿಂಗಪ್ಪ, ವಾಟಾಳ್ ನಾಗಾರಾಜ್, ವಿಜಯ್ ಮಲ್ಯ.. ಹೀಗೆ ಹಲವು ನಾಯಕರು ಪಕ್ಷ ಕಟ್ಟಿದ್ದಾರೆ. ಆದರೆ.. ಯಾವ ಪಕ್ಷವೂ ಗುರುತರ ಸಾಧನೆ ಮಾಡಿಲ್ಲ. ಈ ಹೋರಾಟದಲ್ಲಿ ಗೆದ್ದವರು ಒಬ್ಬರು ಮಾತ್ರ. ಅದು ಹೆಚ್ ಡಿ ದೇವೇಗೌಡ.
ಜಾತ್ಯತೀತ ಜನತಾ ದಳ ಮತ್ತು ದೇವೇಗೌಡ :
ಜನತಾ ದಳವನ್ನು ಇಬ್ಭಾಗ ಮಾಡಿ ಜಾತ್ಯತೀತ ಜನತಾ ದಳ ಸ್ಥಾಪನೆಯಾಯ್ತು. ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಆಚೆ ಹಾಕಿದ್ದ ಪರಿಣಾಮ, ಜನತಾ ದಳದಲ್ಲಿ ದೇವೇಗೌಡರ ವಿರುದ್ಧ ಒಂದು ಬಣ ಎದ್ದು ನಿಂತಿತ್ತು. ಪ್ರಧಾನಿ ಹುದ್ದೆಯಲ್ಲಿರುವವರೆಗೂ ತಟಸ್ಥವಾಗಿದ್ದ ಹೆಗಡೆ ಬಣದ ನಾಯಕರು ಬಂಡಾಯ ಎದ್ದಾಗ ದೇವೇಗೌಡ ಜೆಡಿಎಸ್ ಹುಟ್ಟುಹಾಕಿದರು. ಮಾಜಿ ಪ್ರಧಾನಿ, ಪ್ರಧಾನಿ ಹುದ್ದೆಗೇರಿದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಯಿಂದಾಗಿ ಸೃಷ್ಟಿಯಾಗಿದ್ದ ಲೆಜೆಂಡ್ ಪಟ್ಟ ಮತ್ತು ಜೊತೆಗೆ ಒಕ್ಕಲಿಗ ಸಮುದಾಯದ ಪ್ರಾಬಲ್ಯದಿಂದಾಗಿ ಜೆಡಿಎಸ್ ಅಸ್ಥಿತ್ವದಲ್ಲಿದೆ. ಕಡಿಮೆ ಸೀಟು ಗೆದ್ದರೂ ಕೂಡಾ ಅಧಿಕಾರದ ಗದ್ದುಗೆ ಏರಿದೆ. ಆದರೆ ಆ ಪಕ್ಷದ ಪ್ರಭಾವವೂ ಕ್ಷೀಣಿಸುತ್ತಿದೆ.
ಇದು ಯತ್ನಾಳ ಅವರಿಗೂ ಗೊತ್ತಿದೆ. ಒಂದು ಪಕ್ಷವನ್ನು ಸ್ಥಾಪಿಸಿ, ಮುನ್ನಡೆಸುವುದು ಸುಲಭದ ಮಾತಲ್ಲ. ಆರ್ಥಿಕ ಸಂಪನ್ಮೂಲ, ಜನಪ್ರಿಯತೆ ಮತ್ತು ಜಾತಿ ಬಲ ಮೂರೂ ಬೇಕು. ಆ ಮೂರೂ ಕೂಡಾ ಯತ್ನಾಳ್ ಅವರಲ್ಲಿ ಸಾಕಾಗುವಷ್ಟಿಲ್ಲ ಎನ್ನುವುದೇ ಯತ್ನಾಳ್ ಹಿಂದೇಟಿಗೆ ಕಾರಣ.



