ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ, ಆಕ್ರೋಶವನ್ನು ಒಂದು ಹಂತಕ್ಕೆ ಮಟ್ಟ ಹಾಕುವ ವಿಷಯದಲ್ಲಿ ಆರ್.ಎಸ್.ಎಸ್. ಮೊದಲ ಹಂತದ ಗೆಲುವು ಸಾಧಿಸಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಆರ್ಎನ್ಎಸ್ ಪ್ರಮುಖರ ಜೊತೆಗೆ ಬಿಜೆಪಿ ಎರಡು ಬಣಗಳ ನಾಯಕರ ಸಭೆ ಬಹುತೇಕ ಯಶಸ್ವಿಯಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಸಂಘದ ಪ್ರಮುಖರಾದ ಸಿ. ಆರ್ ಮುಕುಂದ ಮತ್ತು ತಿಪ್ಪೇಸ್ವಾಮಿ, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ಉಪಸ್ಥಿತಿಯಲ್ಲಿ ಬಿಜೆಪಿ ಎರಡು ಬಣದ ನಾಯಕರ ಮಾತುಗಳನ್ನು ಕೇಳಿ, ಬುದ್ದಿವಾದ ಹೇಳಲಾಗಿದೆ.
ವಿಜಯೇಂದ್ರ ವಿರೋಧಿ ಗುಂಪಿನಿಂದ ಬಂದಿದ್ದವರು : ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ, ಪ್ರತಾಪ್ ಸಿಂಹ ಮೊದಲಾದವರಿದ್ದರ. ಭಿನ್ನರ ಬಣದಲ್ಲಿದ್ದೂ ಒಂದು ರೀತಿ ತಟಸ್ಥ ಧೋರಣೆ ಅನುಸರಿಸಿದವರು ಸಿಟಿ ರವಿ.
ವಿಜಯೇಂದ್ರ ವಿರುದ್ಧ ಆರೋಪಗಳು ಏನೇನು…?
ಯತ್ನಾಳ್ ಹೊರತು ಪಡಿಸಿದರೆ ಉಳಿದ ಯಾವ ನಾಯಕರೂ ನೇರಾನೇರ ಆರೋಪ ಮಾಡಲಿಲ್ಲ. ಪ್ರತಾಪ್ ಸಿಂಹ ಅವರು ಪಕ್ಷ ಮುನ್ನಡೆಸೋರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕೇ ಹೊರತು, ಹಿತ್ತಾಳೆ ಕಿವಿ ಹೊಂದಿರಬಾರದು. ಪಕ್ಷದಲ್ಲಿ ನಡೆಯುತ್ತಿರುವ ಕೆಲ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮನ್ನೇ ಬೇರೆ ರೀತಿಯಾಗಿ ನೋಡೋದು ಏಕೆ ಎಂದು ಪ್ರಶ್ನಿಸಿದವರ ಮಾತಿನಲ್ಲಿ ತಮಗೆ ಟಿಕೆಟ್ ತಪ್ಪಿದ್ದರ ಹಿಂದಿನ ಆಕ್ರೋಶವೇ ಎದ್ದು ಕಾಣುತ್ತಿತ್ತು.
ಕೆಲವು ನಾಯಕರ ಮಾತಿನಲ್ಲಿ ವಿಜಯೇಂದ್ರ ಇನ್ನೂ ಚಿಕ್ಕ ಹುಡುಗ. ಅನುಭವಿಯಲ್ಲ, ಅನುಭವಿ ಹಿರಿಯ ರಾಜಕಾರಣಿಗಳ ಮಾತು ಕೇಳೋದಿಲ್ಲ ಎಂಬ ಮಾತುಗಳಿದ್ದರೆ, ಇನ್ನೂ ಕೆಲವರು ವಿಜಯೇಂದ್ರ ತಮ್ಮ ವಿರೋಧಿಗಳನ್ನು ಯಡಿಯೂರಪ್ಪ ಅವರ ಮೂಲಕ ಮಾತನಾಡಿಸ್ತಾರೆ ಎಂದರು. ಕೆಲವರ ಜೊತೆಯಲ್ಲಷ್ಟೇ ಮಾತನಾಡಿ, ನಿರ್ಧಾರ ತೆಗೆದುಕೊಳ್ತಾರೆ. ಹಿರಿಯ ನಾಯಕರಿಗೆ ಜವಾಬ್ದಾರಿ, ಕೆಲಸ ಎರಡೂ ಇಲ್ಲ ಎಂ ದು ಆರೋಪಿಸಿದರು.
ಹಿರಿಯ ನಾಯಕರನ್ನು ಒಟ್ಟಿಗೇ ತೆಗೆದುಕೊಳ್ಳದ ಕಾರಣದಿಂದಲೇ ಮೂರ್ನಾಲ್ಕು ಲೋಕಸಭೆ ಸ್ಥಾನಗಳನ್ನು ಕಳೆದುಕೊಂಡೆವು ಎನ್ನುವುದು ಹಲವು ನಾಯಕರ ಆರೋಪವಾಗಿತ್ತು. ಪಕ್ಷದ ಸಂಘಟನೆಯ ಕೆಲವು ನಾಯಕರು, ಪದಾಧಿಕಾರಿಗಳನ್ನು ಬದಲಿಸಬೇಕು ಎಂಬ ಒತ್ತಾಯವೂ ಕೇಳಿ ಬಂತು.
ಆರ್. ಎಸ್. ಎಸ್. ಹೇಳಿದ್ದೇನು..?
ಸಂಘದ ಪ್ರಮುಖರು ಬಿಜೆಪಿಯನ್ನು ರಾಜಕೀಯದಲ್ಲಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೇ ನೀವು ಬೇರೆ ಪಕ್ಷಗಳಿಗಿಂತ ಭಿನ್ನ ಎಂಬ ಕಾರಣಕ್ಕೆ. ಈಗ ನೀವು ನಡೆದುಕೊಳ್ಳುತ್ತಿರುವ ರೀತಿಗೂ, ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಹೀಗಾಗಿಯೇ ನಾವು ಪಕ್ಷದಿಂದ ಕೆಲ ಚುನಾವಣೆಗಳಲ್ಲಿ ಅಂತರ ಕಾಯ್ದುಕೊಂಡೆವು. ಈಗಲೂ ಕಾಲ ಮಿಂಚಿಲ್ಲ. ತಿದ್ದಿಕೊಳ್ಳುವ ಹಂತದಲ್ಲಿದೆ. ಪಕ್ಷ ಹಿಂದುತ್ವದ ಕಾರಣಕ್ಕಾಗಿ ಒಂದಾಗಬೇಕು. ಸಂಘ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೆ ಸಂಘದ ಅಪೇಕ್ಷೆಗೆ ಶೇ.೫೦ರಷ್ಟೂ ನಡೆದುಕೊಳ್ಳುತ್ತಿಲ್ಲ. ತತ್ವ ಸಿದ್ಧಾಂತಗಳನ್ನೆಲ್ಲ ಬಿಟ್ಟು ಮಾಧ್ಯಮಗಳಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸಮಸ್ಯೆ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ ಸಂಘದ ಪ್ರಮುಖರು, ಆಗಾಗ ಪಕ್ಷದ ನಾಯಕರ ಜೊತೆ ಅನೌಪಚಾರಿಕವಾಗಿ ಸಭೆಗಳು ನಡೆಯಬೇಕು. ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಬೇಕು.ಎಲ್ಲದಕ್ಕೂ ಹೈಕಮಾಂಡ್ ಕಡೆ ನೋಡುತ್ತಾ ಕೂರುವುದಾದರೆ, ಸ್ಥಳೀಯವಾಗಿ ಪಕ್ಷ ಮತ್ತು ನಾಯಕರು ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಅಷ್ಟೇ ಅಲ್ಲ, ಎಲ್ಲ ನಾಯಕರೂ ಮಾತನಾಡಿ. ಆದರೆ, ಭಾಷೆ ಹಿಡಿತದಲ್ಲಿರಲಿ. ಯಾರಿಗೂ ಮುಜುಗರವಾಗದಂತೆ ಎಂದು ಸೂಚನೆ ನೀಡಿದ್ದ ಕಾರಣ, ಎಲ್ಲರೂ ಕೂಡಾ ಮೃದುವಾಗಿಯೇ ಅಭಿಪ್ರಾಯ ಹೇಳಿದ್ದಾರೆ.
ವಿಜಯೇಂದ್ರ ಹೇಳಿದ್ದೇನು..?
ಈ ಹಿಂದೆಯೂ ಪಕ್ಷಕ್ಕೆ ಸಂಬಂಧಿಸಿದಂತೆ ಒಬ್ಬನೇ ನಿರ್ಣಯ ತೆಗೆದುಕೊಂಡಿಲ್ಲ. ಇನ್ನು ಮುಂದೆಯೂ ನಡೆದುಕೊಳ್ಳುತ್ತೇನೆ. ಪಕ್ಷದ ವರಿಷ್ಠರು, ನಾಯಕರು ಹಾಗೂ ಸಂಘದ ಪ್ರಮುಖರ ಜೊತೆ ಮಾತನಾಡಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಅನ್ನೋ ಭರವಸೆ ಕೊಟ್ಟರು.
ಸಭೆ ಬಳಿಕ ಯತ್ನಾಳ್ ಹೇಳಿದ್ದು :
ನಮ್ಮ ಭಾವನೆಗಳನ್ನು ಕೇಳುವಂತಹ ವೇದಿಕೆ ಸಿಕ್ಕಿತ್ತು, ನಮಗೆ ಬಹಳ ಸಂತೋಷವಾಗಿದೆ. ಎಲ್ಲ ವಿಚಾರಗಳೂ ಒಳ್ಳೆಯ ವಾತಾವರಣದಲ್ಲಿ ಚರ್ಚೆ ಆಗಿದೆ. ಎಲ್ಲರ ಮನಸ್ಸಲ್ಲಿ ಇರುವುದನ್ನು ಹೇಳುವುದಕ್ಕೆ ಅವಕಾಶ ಸಿಕ್ಕಿತು. ಎಲ್ಲರೂ ಕೂಡ ಒಟ್ಟಾಗಿ ಹೋಗುತ್ತೇವೆ. ಪಕ್ಷ ಹೇಳಿದ ಕಡೆ ಹೋಗುತ್ತೇವೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಾದಯಾತ್ರೆಯು ಪಕ್ಷದ ವೇದಿಕೆಯ ಒಳಗೆಯೇ ಇದೆ, ನೀವೇ ತಪ್ಪು ತಿಳಿದುಕೊಂಡಿದ್ದೀರಿ. ನಾವು ನಿಷ್ಠಾವಂತ ಬಿಜೆಪಿಯವರು, ಭಾಜಪ ಅಂತಾ ನಮ್ಮದು ಒಂದು ಗುಂಪು ಇದೆ. ಪಕ್ಷಕ್ಕೆ ನಿಷ್ಠೆ, ದೇಶಕ್ಕೆ ನಿಷ್ಠೆ, ಸನಾತನ ಹಿಂದೂ ಧರ್ಮಕ್ಕೂ ನಿಷ್ಠೆ ಇದೆ. ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ಬದ್ಧ. ತಲೆ ಬಾಗುತ್ತೇವೆ.
ಅಲ್ಲಿಗೆ ವಿವಾದ, ಭಿನ್ನಮತ ಮುಗಿದ ಅಧ್ಯಾಯವಾ..? ಸಾಧ್ಯವೇ ಇಲ್ಲ.



