ರಾಜ್ಯದಲ್ಲೀಗ ಸಿಎಂ ಬದಲಾವಣೆಯದ್ದೇ ಸದ್ದು. ಸಿದ್ಧರಾಮಯ್ಯ ಚೇಂಜ್ ಆಗ್ತಾರೆ, ಅವರ ಬದಲಿಗೆ ಬೇರೆಯವರು ಸಿಎಂ ಆಗ್ತಾರೆ ಅನ್ನೋ ಕುತೂಹಲಕಾರಿ ಸಮರ ನಡೆಯುತ್ತಲೇ ಇದೆ. ಡಿಕೆ ಶಿವಕುಮಾರ್, ರೇಸಿನಲ್ಲಿ ಮುಂದಿದ್ದಾರೆ, ಆದರೆ, ಸಿದ್ಧರಾಮಯ್ಯ ಅವರೇ ಸಿಎಂ ಅಂತಿದ್ದಾರೆ. ಮುಂದಿನ ಲಿಸ್ಟಿನಲ್ಲಿ ಸತೀಶ್ ಜಾರಕಿಹೊಳಿ, ಆರ್ವಿ ದೇಶಪಾಂಡೆ, ಎಂಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ.. ಮೊದಲಾದವರೆಲ್ಲ ರೆಡಿಯಾಗ್ತಿದ್ದಾರೆ. ಈ ನಡುವೆ ಕೋಡಿಮಠದ ಸ್ವಾಮೀಜಿಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮಹಿಳೆಯೊಬ್ಬರು ಸಿಎಂ ಆಗ್ತಾರೆ’ ಎಂಬ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರ ಭವಿಷ್ಯ ಕಾಂಗ್ರೆಸ್ನಲ್ಲಿ ವಿಚಿತ್ರ ಸಂಚಲನ ಮೂಡಿಸಿದೆ. ಆಗಸ್ಟ್ 20 ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಒಂದು ಭವಿಷ್ಯವನ್ನು ನುಡಿದಿದ್ದರು. ರಾಜ್ಯದಲ್ಲಿ ಮುಂದಿನ ಸಿಎಂ ಮಹಿಳೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಿಳೆಯರಿಗೂ ಅವಕಾಶ ಸಿಗಲಿ ಎಂದು ಹೇಳಿದ್ದರು. ಮುಂದೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿದೆ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದಿದ್ದರು.
ಇದಾದ ಬೆನ್ನಲ್ಲೇ ರಾಜ್ಯ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಾಮಾಜಿ ಜಾಲತಾಣಗಳಲ್ಲಿ ‘ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಮಹಿಳಾ ಸಿಎಂ ಆಗಲಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ರಾಜ್ಯಕ್ಕೆ ಮಹಿಳಾ ಸಿಎಂ ನಮ್ಮ ಬೆಳಗಾವಿ ಚೆನ್ನಮ್ಮ, ಕೋಡಿಮಠ ಶ್ರೀಗಳ ಭವಿಷ್ಯ ನಿಜವಾಗುತ್ತೋ? ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಸಿಎಂ ಆಗಿ ಬೆಳಗಾವಿಯ ಲಕ್ಷ್ಮೀ ಅಕ್ಕಾ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
ಬೆಳಗಾವಿಯಲ್ಲಿ ಭುಗಿಲೇಳುತ್ತಾ ಇನ್ನೊಂದು ವಾರ್..?
ಸಿಎಂ ರೇಸ್ನಲ್ಲಿ ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು ಸತೀಶರನ್ನೇ ಸಿಎಂ ಆಗಿಸಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಬೆಳಗಾವಿಯವರೇ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆಯೂ ಸಂಬಂಧ ಸರಿ ಇಲ್ಲ. ಹೀಗಿರುವಾಗ ಅಭಿಮಾನಿಗಳು ಆರಂಭ ಮಾಡಿರುವ ಈ ಸೋಷಿಯಲ್ ಮೀಡಿಯಾ ವಾರ್ ಎಲ್ಲಿಗೆ ಹೋಗಿ ನಿಲ್ಲಲಿದೆಯೋ ಎಂಬ ಕುತೂಹಲ ಮೂಡಿದೆ.
ಆದರೆ ಇದೆಲ್ಲದಕ್ಕೂ ಬ್ರೇಕ್ ಹಾಕಿರುವುದು ಸಿಎಂ ಸಿದ್ಧರಾಮಯ್ಯ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ, ಹೀಗಾಗಿ ಯಾರೂ ಸಿಎಂ ಸ್ಥಾನಕ್ಕಾಗಿ ಮಾತನಾಡುತ್ತಿಲ್ಲ. ಯಾವುದೇ ಗೊಂದಲವಿಲ್ಲದೆ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ ಸ್ಥಾನದ ಕುರಿತಂತೆ ಯಾರೂ ಹೇಳಿಕೆ ನೀಡುತ್ತಿಲ್ಲ. ಸದ್ಯ ಸಿಎಂ ಕುರ್ಚಿ ಖಾಲಿಯಿಲ್ಲ. ಎಲ್ಲರೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳುತ್ತಿದ್ದಾರೆ. ಸಿಎಂ ಸ್ಥಾನ ಖಾಲಿಯಾದಾಗ ಮಾತ್ರ ಅದರ ಬಗ್ಗೆ ಚರ್ಚಿಸಲಾಗುವುದು. ನಾನೇ ಸಿಎಂ ಆಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಹಲವು ಸಚಿವರು ಸಿದ್ಧರಾಮಯ್ಯ ಅವರೇ ಸಿಎಂ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಅವರ ಪ್ರಕಾರ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಅವರು ಸಿಎಂ ರೇಸಿಗೆ ಬರೋ ಚಾನ್ಸ್ ಇಲ್ಲ ಎನ್ನುತ್ತಿದ್ದಾರೆ. ರೇಸಿನಲ್ಲಿರುವವರೇ ನಾವು ಸಿಎಂ ರೇಸಿನಲ್ಲಿ ಇಲ್ಲ ಎನ್ನುತ್ತಿದ್ದಾರೆ. ಆದರೆ.. ಕನಸುಗಳು ಮಾತ್ರ ಬೀಳುತ್ತಲೇ ಇವೆ.



