ಮಾಜಿ ಸಿಎಂ, ರಾಜ್ಯ ಬಿಜೆಪಿಯ ಮುತ್ಸದ್ಧಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸೋದಕ್ಕೆ ಸಿದ್ಧತೆ ನಡೀತಿದ್ಯಾ..? ದಿಢೀರ್ ಬೆಳವಣಿಗೆಗಳನ್ನು ನೋಡಿದರೆ ಯಡಿಯೂರಪ್ಪ ಅವರ ಬಂಧನ ನಿಶ್ಚಿತ ಎನ್ನುವ ವಾತಾವರಣ ಕಾಣಿಸುತ್ತಿದೆ. ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಚುನಾವಣೆಯ ಫಲಿತಾಂಶದ ನಂತರ ದಿಢೀರ್ ಬೆಳವಣಿಗೆ ಕಂಡಿದ್ದು, ಯಡಿಯೂರಪ್ಪ ಅವರನ್ನು ಬಂಧಿಸುವ ಸಿದ್ಧತೆ ನಡೆದಿದೆ ಎಂಬ ಸೂಚನೆ ಕಾಣಿಸುತ್ತಿದೆ. ಯಡಿಯೂರಪ್ಪ ಅವರಿಗೆ ಸಿಐಡಿ ಮಂಗಳವಾರ ದಿಢೀರ್ ನೋಟಿಸ್ ನೀಡಿ ಬುಧವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
3 ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣ :
ತಮ್ಮ ಪುತ್ರಿ ಮೇಲೆ ಅತ್ಯಾಚಾರ ನಡೆದಿದೆ. ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದ ಸಂತ್ರಸ್ತೆಯ ತಾಯಿ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಯಡಿಯೂರಪ್ಪ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಎಂದು ಮನವಿ ಮಾಡಿದ್ದರು. ಮಾಜಿ ಸಿಎಂ ಆಗಿದ್ದರೂ.. ಯಡಿಯೂರಪ್ಪ ಹೇಳಿದರೆ.. ಪೊಲೀಸರು ಸೀರಿಯಸ್ ಆಗಿ ತಗೊಳ್ತಾರೆ ಅನ್ನೋ ಕಾರಣಕ್ಕೆ ಯಡಿಯೂರಪ್ಪ ನಿವಾಸಕ್ಕೆ ಹೋಗಿದ್ದರು. ಈ ಘಟನೆ ನಡೆದಿದ್ದು ಫೆಬ್ರವರಿ 2ನೇ ತಾರೀಕು.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತಮ್ಮ 17 ವರ್ಷದ ಮಗಳ ಜತೆ ತೆರಳಿದ್ದ ತಾಯಿ, ಆ ಘಟನೆ ನಡೆದ ಒಂದೂವರೆ ತಿಂಗಳ ನಂತರ ಯಡಿಯೂರಪ್ಪನವರ ಮೇಲೇ ದೂರು ಕೊಟ್ಟಿದ್ದರು. ಘಟನೆ ನಡೆದಿದೆ ಎನ್ನಲಾಗಿದ್ದು ಫೆಬ್ರವರಿ 2ಕ್ಕೆ. ಕಂಪ್ಲೇಂಟ್ ಕೊಟ್ಟ ದಿನಾಂಕ ಮಾರ್ಚ್ 14. ಆದರೆ, ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಎಂಬ ದೂರು ಬಂದ ಕಾರಣ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.
ಅನುಮಾನ ಏಕೆ..?
ಆ ಸಂತ್ರಸ್ತ ಬಾಲಕಿಯ ತಾಯಿ ಈಗ ಇಲ್ಲ. ಇತ್ತೀಚೆಗೆ ಮೃತಪಟ್ಟಿದ್ದಾರೆ. ತಮ್ಮ ಮಗಳ ಮೇಲೆ ಈ ರೀತಿ ಅತ್ಯಾಚಾರಕ್ಕೆ ಯತ್ನಿಸಿದ್ಧಾರೆ ಎಂದು ಹಲವರ ಮೇಲೆ ಆಕೆ ದೂರು ಕೊಟ್ಟಿದ್ದಾರೆ. ಕೆಲ ಹಿರಿಯ ರಾಜಕಾರಣಿ ಹಾಗೂ ಐಪಿಎಸ್ ಅಧಿಕಾರಿ ಸೇರಿ 53 ಮಂದಿ ವಿರುದ್ಧ ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಮನೆಯನ್ನು ಶಿಫ್ಟ್ ಮಾಡಲು ಬಂದ ಹುಡುಗರು, ಆ ಬಾಲಕಿಯ ಸಂಬಂಧಿಕರು ಸೇರಿದಂತೆ ಹಲವರ ವಿರುದ್ಧ ದೂರು ಕೊಟ್ಟಿದ್ದರು. ದೂರು ಕೊಡುವುದೇ ಚಾಳಿಯಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವರು. ಹೀಗಾಗಿ ಆಕೆಯ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ೩ ತಿಂಗಳ ಹಿಂದೆ ಪ್ರಕರಣ ಬೆಳಕಿಗೆ ಬಂದಾಗ ಖುದ್ದು ಗೃಹ ಸಚಿವ ಪರಮೇಶ್ವರ್ ಕೂಡಾ ಇದೇ ಮಾತು ಹೇಳಿದ್ದರು. ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಆರಂಭದಲ್ಲಿ ಇದು ಸತ್ಯಕ್ಕೆ ದೂರವಾದ ಆಪಾದನೆ ಎಂಬ ಮಾತುಗಳು ಕೇಳಿ ಬಂದಿದ್ದವು.ದೂರು ನೀಡಿದ ಸಂತ್ರಸ್ತೆಯ ತಾಯಿಯನ್ನು ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕೊಟ್ಟಿದ್ದರು. ಹೀಗೆಲ್ಲ ಇದ್ದರೂ ತನಿಖೆ ದಿಢೀರ್ ಈ ಹಂತಕ್ಕೆ ಬೆಳವಣಿಗೆ ಕಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ದಿಢೀರ್ ಬೆಳವಣಿಗೆ ಹಿಂದೆ ರಾಜಕೀಯ ಲಾಭದ ಉದ್ದೇಶ..?
ನಾವಣೆಗೂ ಮುನ್ನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು ಇನ್ನೇನು ಇದರಲ್ಲಿ ಹುರುಳಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದ ಅಧಿಕಾರಿಗಳುಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಕರಣದ ವಿಚಾರಣೆ ತೀವ್ರಗೊಳಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಒಂದೇ ದಿನದ ಅವಕಾಶ ನೀಡಿ ನೋಟಿಸ್ ಕೊಟ್ಟಿದ್ದಾರೆ. ೩ ತಿಂಗಳಿಂದ ಸುಮ್ಮನಿದ್ದವರು ಈಗ ನೋಟಿಸ್ ಕೊಟ್ಟು, ಕಾಲಾವಕಾಶವನ್ನೂ ನೀಡಿಲ್ಲ. ಚುನಾವಣೆಗೆ ಮುನ್ನ ಅರೆಸ್ಟ್ ಆಗಿದ್ದರೆ, ಚುನಾವಣೆ ಸಮಯದಲ್ಲಿ ಹೊಡೆತ ಬೀಳುತ್ತಿತ್ತು ಎಂಬ ಕಾರಣಕ್ಕಾಗಿಯೇ ಅರೆಸ್ಟ್ ಮಾಡುವ ಅಥವಾ ವಿಚಾರಣೆ ಚುರುಕುಗೊಳಿಸುವ ಪ್ರಯತ್ನ ಮಾಡಲಿಲ್ಲ ಎನ್ನುವುದು ಒಂದು ವಾದ.ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಹಿನ್ನಡೆಯ ನಂತರ ಈ ಬೆಳವಣಿಗೆ ಆಗುತ್ತಿರುವುದು ಯಾಕೆ ಎನ್ನುವುದು ಯಡಿಯೂರಪ್ಪ ಬೆಂಬಲಿಗರು ಕೇಳುತ್ತಿರುವ ಪ್ರಶ್ನೆ.
ಈ ಹಿಂದೆ ಸಿಐಡಿ ನೋಟಿಸ್ ನೀಡಿದಾಗಲೆಲ್ಲ ಯಡಿಯೂರಪ್ಪ ಅವರು ಸಿಐಡಿ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು. ಈಗ ಕೇವಲ ಒಂದೇ ದಿನದ ಕಾಲಾವಕಾಶ ನೀಡಿ ಬಂಧನದ ಕಾನೂನು ಪ್ರಕ್ರಿಯೆ ಪ್ರಾರಂಭಿಸಿರುವುದು ಸಹಜ ಪ್ರಕ್ರಿಯೆ ಅಲ್ಲ. ಬೆಂಗಳೂರಿನಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ದೆಹಲಿಯಲ್ಲಿರುವ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುವ ಕಾಂಗ್ರೆಸ್ ನಾಯಕರ ಆಗ್ರಹದ ಮೇರೆಗೆ ಈ ಬೆಳವಣಿಗೆ ನಡೆದಿದೆ ಎನ್ನುವ ಆರೋಪ ಕೇಳಿ ಬರುತ್ತಿವೆ.
ಜಾಮೀನನ್ನೂ ಪಡೆದಿಲ್ಲ ಯಡಿಯೂರಪ್ಪ :
ಪ್ರಕರಣದಲ್ಲಿ ಹುರುಳಿಲ್ಲ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಅವರು ಈವರೆಗೂ ಜಾಮೀನನ್ನೂ ಪಡೆದಿಲ್ಲ. ಜಾಮೀನಿಗೆ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಮೇಲ್ನೋಟಕ್ಕೆ ಬಿದ್ದು ಹೋಗಬಹುದಾದ ಕೇಸು ಎಂದುಕೊಂಡಿದ್ದರು ಯಡಿಯೂರಪ್ಪ. ಅಲ್ಲದೆ ಸಂತ್ರಸ್ತೆಯ ಬಾಲಕಿಯ ತಾಯಿ ಈ ಹಿಂದೆ ೫೩ ಗಣ್ಯರ ವಿರುದ್ಧ ದೂರು ಕೊಟ್ಟಿದ್ದರು. ಅವರನ್ನೂ ಇದೇ ರೀತಿ ವಿಚಾರಣೆ ನಡೆಸಲಾಗಿದೆಯೇ.. ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ. ಆದರೆ ಕೋರ್ಟಿಗೆ ಹೋಗಿದ್ದ ಯಡಿಯೂರಪ್ಪ ತಾವು ಯಾವುದೇ ಕಾನೂನು ಬಾಹಿರ ಕೃತ್ಯವೆಸಗಿಲ್ಲ, ದೂರುದಾರರಿಗೆ ದೂರು ನೀಡುವ ಅಭ್ಯಾಸವಿದೆ ಎಂದು ವಾದಿಸಿದ್ದರು.ಎಫ್ಐಆರ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಧ್ವನಿ ಮಾದರಿಗಳನ್ನು ಸಂಗ್ರಹಿಸಿದ್ದರು ಆದರೆ ನನ್ನ ಹೇಳಿಕೆಯನ್ನು ದಾಖಲಿಸಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.ಈಗ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಅವರು ಜಾಮೀನು ಪಡೆಯಲು ಮುಂದಾಗಬೇಕಾಗಿದೆ.
ಬಂಧನದ ವದಂತಿ ಏಕೆ..?
ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿ ಹಲವು ತಿಂಗಳು ಕಳೆದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಸಹೋದರ ಹೈಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ದೂರು ನೀಡಿದ್ದವರು ಸಂತ್ರಸ್ತೆ ಬಾಲಕಿಯ ತಾಯಿ. ಅವರು ಮೇ 26ರಂದು ಮೃತಪಟ್ಟಿದ್ದಾರೆ. ಯಡಿಯೂರಪ್ಪ ನಿವಾಸದ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ ಅಥವಾ ಪೋಕ್ಸೋ ಕಾಯ್ದೆಯ ಸೆಕ್ಷನ್ 41 ಎಅಡಿಯಲ್ಲಿ ಬಿಜೆಪಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ವಾದಿಸಿದ್ದಾರೆ.



