ಈ ಬಾರಿ ಲೋಕಸಭೆಯಲ್ಲಿ ಶಿವಮೊಗ್ಗ ಅಖಾಡದಲ್ಲಿದ್ದ ಗೀತಾ ಶಿವಣ್ಣ ಸೋತಿದ್ದಾರೆ. ಕರ್ನಾಟಕದಿಂದ ಚಿತ್ರರಂಗದಿಂದ ಸ್ಪರ್ಧಿಸಿದ್ದವರೆಂದರೆ.. ಅದು ಗೀತಾ ಅವರು ಮಾತ್ರ. ಗೀತಾ ಪರ ಸೂಪರ್ ಸ್ಟಾರ್ ಶಿವಣ್ಣ ಇದ್ದರು. ಆದರೂ ಸೋತಿದ್ದಾರೆ. ಬೆನ್ನಿಗೆ ರಾಜ್ಯ ಸರ್ಕಾರದ ಘಟಾನುಘಟಿ ನಾಯಕರೇ ಇದ್ದರು. ಆದರೂ ಸೋತಿದ್ಧಾರೆ. ಚಿತ್ರರಂಗದವರು ಜೊತೆಯಲ್ಲಿ ನಿಂತು ಹೋರಾಡಿದರು. ಆದರೂ ಸೋತಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ ಒಟ್ಟು 7,78,721 ಮತಗಳನ್ನ ಪಡೆದಿದ್ದಾರೆ. ಗೀತಾ ಶಿವರಾಜ್ ಕುಮಾರ್ ಒಟ್ಟು 5,35,006 ಮತಗಳನ್ನು ಪಡೆದಿದ್ದಾರೆ. ಒಟ್ಟು 2,43,715 ಮತಗಳ ಅಂತರದಿಂದ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದಾರೆ.
ಗೀತಾ ಅವರಿಗೆ ಎಲ್ಲವೂ ಇತ್ತು. ಸೂಪರ್ ಸ್ಟಾರ್ ಪತ್ನಿ, ಅಪ್ಪ ಬಂಗಾರಪ್ಪನವರ ಹೆಸರು, ರಾಜ್ಯದಲ್ಲಿ ಸಚಿವರೂ ಆಗಿರುವ ಸಹೋದರ ಮಧು ಬಂಗಾರಪ್ಪನವರ ಬಲ. ಹೀಗೆ ಎಲ್ಲವೂ ಇತ್ತು. ಹಾಗೂ ಕಳೆದ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಕೊಟ್ಟಿದ್ದ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಹೀಗಿದ್ದರೂ ಸೋತಿದ್ದು ಏಕೆ ಎಂಬ ಪ್ರಶ್ನೆಗಳಿವೆ.
ಸೋಲಿಸಿದ್ದು ಈ ತಮ್ಮನೋ.. ಆ ಅಣ್ಣನೋ..?
ಗೀತಾ ಅವರ ಕಂಪ್ಲೀಟ್ ಚುನಾವಣೆ ಉಸ್ತುವಾರಿ ಹೊತ್ತಿದ್ದ ಮಧು ಬಂಗಾರಪ್ಪ, ಚುನಾವಣೆ ನಡೆಯುವ ವೇಳೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. ಇದು ಮಧು ಅವರಿಗೆ ಆದ ಹಿನ್ನಡೆಯಷ್ಟೇ ಅಲ್ಲ, ಅದರ ಹೊಡೆತ ಗೀತಾ ಅವರಿಗೂ ಬಿತ್ತು. ಅನಗತ್ಯವಾಗಿ ಕುಮಾರ್ ಬಂಗಾರಪ್ಪನವರ ಹೆಸರು ಎಳೆದು ತಂದರು. ಕುಮಾರ್ ಬಂಗಾರಪ್ಪ ಕೂಡಾ ತಿರುಗೇಟು ಕೊಟ್ಟರು. ಗೀತಾ ಅವರಿಗೆ ಎಲೆಕ್ಷನ್ ಬಂದಾಗ ಶಿವಮೊಗ್ಗ ನೆನಪಾಗುತ್ತೆ ಎಂದರು.
2014ರಲ್ಲಿಯೂ ನಿಂತು ಸೋತಿದ್ದ ಗೀತಾ, ಆನಂತರ ಕ್ಷೇತ್ರವನ್ನು ಮರೆತೇ ಬಿಟ್ಟಿದ್ದರು. ಚುನಾವಣೆ ಟೈಮಲ್ಲಿ.. ಅದೂ ಎಲೆಕ್ಷನ್ʻಗೆ ಸ್ಪರ್ಧೆ ಮಾಡಿದಾಗ ಬರುತ್ತಾರೆ, ಉಳಿದ ಸಮಯ ಇರುವುದಿಲ್ಲ ಎಂಬ ಅಭಿಪ್ರಾಯ ರೂಪುಗೊಂಡಿತ್ತು.
ಒಂದು ಕಡೆ ಶಿಕ್ಷಣ ಸಚಿವರೂ ಆಗಿರುವ ಮಧು ಬಂಗಾರಪ್ಪ ಅವರ ವರ್ತನೆ, ಹಾವಭಾವ, ಮಾತಿನಲ್ಲಿ ಇಣುಕುತ್ತಿದ್ದ ಅಹಂಕಾರ.. ಎಲ್ಲವೂ ಗೀತಾ ಅವರಿಗೆ ಶತ್ರುವಾಯಿತು. ಜೊತೆಗೆ ಎಷ್ಟು ದಿನ ಎಂದು ಬಂಗಾರಪ್ಪನವರ ಫ್ಯಾಮಿಲಿ ವಿಷಯ ಕೇಳೋದು. ಇನ್ನೂ ಬುದ್ದಿ ಬಂದಿಲ್ವಾ.. ಎಂಬ ಅಭಿಪ್ರಾಯವೂ ಕಾರಣವಾಯ್ತು.
ಗೀತಾ ಅವರ ಸೋಲಿಗೆ ಗೀತಾ ಅವರೇ ಕಾರಣ :
ಜೊತೆಗೆ ಗೀತಾ, ಒಳ್ಳೆಯ ಭಾಷಣಕಾರ್ತಿ ಅಲ್ಲವೇ ಅಲ್ಲ. ವೇದಿಕೆಗಳಲ್ಲಿ ನನಗೆ ವೋಟು ಹಾಕಿ ಎಂದು ಕೇಳುತ್ತಾ, ಒಂದೆರಡು ನಿಮಿಷ ಮಾತನಾಡುತ್ತಿದ್ದುದು ಬಿಟ್ಟರೆ, ಜನರನ್ನು ಆಕರ್ಷಿಸುವ ಮಾತುಗಾರ್ತಿಯಂತೂ ಅಲ್ಲ. ಹಾಗೆ ನೋಡಿದರೆ, ಗೀತಾ ಅವರ ಪತಿ ಶಿವಣ್ಣ, ರಾಜಕಾರಣಿ ಅಲ್ಲದೇ ಹೋದರೂ.. ಚೆನ್ನಾಗಿಯೇ ಭಾಷಣ ಮಾಡಿದರು. ಗೀತಾ ಅವರ ಪರ ಚಿತ್ರರಂಗದಿಂದ ಹಲವರು ಪ್ರಚಾರ ಮಾಡಿದರಾದರೂ.. ಕೊನೆಗೆ ಅದು ಶಿವಮೊಗ್ಗದವರ ಮನಸ್ಸು ಗೆಲ್ಲುವಲ್ಲಿ ವಿಫಲವಾಯಿತು. ಅಲ್ಲದೆ ಚುನಾವಣೆ ವೇಳೆ ಬಂಗಾರಪ್ಪನವರ ಮಕ್ಕಳ ಜಗಳವೇ ಮತ್ತೊಮ್ಮೆ ಬೀದಿಗೆ ಬಂತು. ಇದೆಲ್ಲವೂ ನಕಾರಾತ್ಮಕವಾಗಿ ಗೀತಾ ಅವರಿಗೆ ಮುಳುವಾದವು. ಸರ್ಕಾರದ ಗ್ಯಾರಂಟಿ ಭಾಗ್ಯಗಳು ನಿರೀಕ್ಷಿತ ಮಟ್ಟದಲ್ಲಿ ಕೈ ಹಿಡಿಯಲಿಲ್ಲ.
ಇದೆಲ್ಲದರ ಜೊತೆಗೆ ಯಡಿಯೂರಪ್ಪನವರ ಮಗ ಬಿ.ವೈ.ರಾಘವೇಂದ್ರ, ಕ್ಷೇತ್ರದಲ್ಲಿ ಉತ್ತಮ ಕೆಲಸಗಳ ಮೂಲಕವೇ ಗಮನ ಸೆಳೆದಿದ್ದರು. ಜೊತೆಗೆ ರಾಘವೇಂದ್ರ ಅವರ ಸಹೋದರ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರು. ಇವೆಲ್ಲವೂ ಗೀತಾ ಅವರ ಸೋಲಿಗೆ ಕಾರಣವಾದವು.



