ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರೇ ಇರುವಾಗ, ಅವರು ಅಧ್ಯಕ್ಷರಾಗುವುದು ಪಕ್ಕಾ ಎಂದರೆ ಏನರ್ಥ ಎಂದು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ವಿಜಯೇಂದ್ರ ಅವರ ಸ್ಥಾನಕ್ಕೆ ಎಳ್ಳು ನೀರು ಬಿಡಲು ಹೊರಟಿದ್ದ ಎಲ್ಲರಿಗೂ ಉತ್ತರ ಎನ್ನುವಂತೆ ಹೊಸ ಜಿಲ್ಲಾಧ್ಯಕ್ಷರ ನೇಮಕ ಆಗಿದೆ.
ಈ ಹಿಂದೆ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ.
- ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ.
- ಹಾಸನ – ಸಿದ್ದೇಶ್ ನಾಗೇಂದ್ರ.
- ಕೊಡಗು – ರವಿ ಕಾಳಪ್ಪ
- ಉಡುಪಿ – ಕುತ್ಯಾರು ನವೀನ್ ಶೆಟ್ಟಿ
- ದಾವಣಗೆರೆ – ಎನ್ ರಾಜಶೇಖರ
- ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
- ಚಿತ್ರದುರ್ಗ – ಕೆ.ಟಿ. ಕುಮಾರಸ್ವಾಮಿ
- ತುಮಕೂರು – ಎಚ್.ಎಸ್. ರವಿಕುಮಾರ್ (ಹೆಬ್ಬಾಕ)
- ಮಧುಗಿರಿ – ಚಿದಾನಂದ ಗೌಡ
- ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ (ಸೀಕಲ್)
ಜನವರಿಯಲ್ಲಿ 23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿತ್ತು. ಆದ್ರೆ, ಕೆಲ ಗೊಂದಲ, ಆಂತರಿಕ ಕಚ್ಚಾಟದಿಂದ 10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಇದೀಗ ಬಾಕಿ ಇದ್ದ ಜಿಲ್ಲಾಧ್ಯಕ್ಷರನ್ನು ಸಹ ನೇಮಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಅವರನ್ನು ಮೊದಲ ಪಟ್ಟಿಯಲ್ಲೇ ನೇಮಿಕ ಮಾಡಲಾಗಿತ್ತು. ಆದ್ರೆ, ಇದಕ್ಕೆ ಸಂಸದ ಡಾ ಕೆ ಸುಧಾಕರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಯಾರನ್ನು ಕೇಳಿ ಮಾಡಿದ್ದೀರಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೇ ಬಹಿರಂಗವಾಗಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಆಯ್ಕೆ ತಡೆಹಿಡಿಯಲಾಗಿತ್ತು. ಈಗ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನಾಗಿ ಎಸ್.ವಿ. ರಾಮಚಂದ್ರ ಗೌಡ ಅವರನ್ನು ನೇಮಕ ಮಾಡಲಾಗಿದೆ.
ವಿಶೇಷ ಅಂದ್ರೆ, ಈಗ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಾತಿ ಮುಕ್ತಾಯವಾಗಿದ್ದು, ಬಹುತೇಕರು ವಿಜಯೇಂದ್ರ ಅವರ ಬೆಂಬಲಿಗರೇ ಆಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಆಯ್ಕೆ ಅಥವಾ ಚುನಾವಣೆ ನಡೆದರೆ, ಬಹುತೇಕ ಎಲ್ಲರೂ ವಿಜಯೇಂದ್ರ ಅವರಿಗೆ ಜೈ ಎನ್ನುವವರೇ. ಮುಖ್ಯವಾಗಿ ಈ ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಹೊಸ ಯುವ ಶಕ್ತಿ ತಂದಿದ್ದಾರೆ. (ವಿಶೇಷ ಸೂಚನೆ : ರಾಜಕೀಯದಲ್ಲಿ 40 ದಾಟಿದವರನ್ನು ಯುವಕರು ಎಂದು ನಂಬಲಾಗುತ್ತದೆ).
ಇದರ ನಡುವೆ ತಮ್ಮ ವಿರುದ್ಧ ಮುಗಿಬಿದ್ದಿದ್ದ ಯತ್ನಾಳ್ ಟೀಂನ್ನು ಮೌನವಾಗಿರಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ರೆಬಲ್ ಆಗಿದ್ದ ಈಶ್ವರಪ್ಪ ಅವರ ಜೊತೆ ಬಾಂಧವ್ಯ ಸರಿಪಡಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ಧೇಶ್ವರ, ಅರವಿಂದ ಲಿಂಬಾವಳಿ.. ಮೊದಲಾದವರಿಗೆ ಸದ್ಯದ ಮಟ್ಟಿಗೆ ಬಿಜೆಪಿ ಆಯ್ಕೆಯಲ್ಲ. ಅನಿವಾರ್ಯವೂ ಹೌದು. ಇನ್ನು ಬಿಪಿ ಹರೀಶ್ ಆಗಲೇ ಒಂದು ಕಾಲು ಹೊರಗಿಟ್ಟಾಗಿದೆ. ಯತ್ನಾಳ್, ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಪಕ್ಷವೇ ಆಚೆಗಟ್ಟಿದೆ. ಸದ್ಯಕ್ಕೆ ವಿಜಯೇಂದ್ರ ಅವರಿಗೆ ಬಿಜೆಪಿಯಲ್ಲಿ ದೊಡ್ಡ ವಿರೋಧಗಳೇ ಇಲ್ಲ.