ವಿಜಯಲಕ್ಷ್ಮಿ ಮತ್ತೆ ಬಂದಿದ್ದಾರೆ. 2011ರಲ್ಲಿ ತಮ್ಮ ಮೇಲೆಯೇ ಮೃಗದಂತೆ ಹಲ್ಲೆ ಮಾಡಿದ್ದಾಗ ವಿಜಯಲಕ್ಷ್ಮಿ, ನ್ಯಾಯಾಲಯಕ್ಕೆ ಪ್ರತಿಕೂಲ ಹೇಳಿಕೆ ನೀಡದೆ ಪತಿಯನ್ನು ರಕ್ಷಿಸಿದ್ದರು. ಅದಾದ ಮೇಲೆ ತಮ್ಮನ್ನು ʻನಿನ್ನನ್ನು ಜಲಗಾರನಿಂದ.. ʼ ಎಂಬ ಆಡಿಯೋ ವೈರಲ್ ಆದಾಗಲೂ ಪೊಲೀಸ್ ಠಾಣೆ ಮೆಟ್ಟಿಲೇರಿರಲಿಲ್ಲ. ಅಷ್ಟೇ ಅಲ್ಲ, ದರ್ಶನ್ ಅವರಿಗೆ ಆಕ್ಸಿಡೆಂಟ್ ಆದಾಗ, ಮತ್ತೀಗ ಪವಿತ್ರ ಗೌಡ ವಿಚಾರದಲ್ಲೂ ದರ್ಶನ್ ಬೆನ್ನಿಗೆ ನಿಂತಿದ್ದ ವಿಜಯಲಕ್ಷ್ಮಿ, ಈಗ ಮತ್ತೊಮ್ಮೆ ದರ್ಶನ್ ರಕ್ಷಣೆಗೆ ಬಂದಿದ್ದಾರೆ.
ಮಾಧ್ಯಮಗಳ ʻಸುಳ್ಳು ಸುದ್ದಿ ಪ್ರಸಾರʼಕ್ಕೆ ಬ್ರೇಕ್ :
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ, ವರದಿಗಾರರಿಗೆ , ನಿರೂಪಕರಿಗೆ, ಸೋಷಿಯಲ್ ಮೀಡಿಯಾಗಳಿಗೆ ಹಾಗೂ ಮುದ್ರಣ ಮಾಧ್ಯಮಗಳಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ವೈಯಕ್ತಿಕ ವಿಚಾರದಲ್ಲಿ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು, ಈ ಬಗ್ಗೆ ಇಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಮೊದಲಿಗೆ ಮೃತ ಶ್ರೀ ರೇಣುಕಾಸ್ವಾಮಿ ಕುಟುಂಬಕ್ಕೆ ಹೃದಯದಿಂದ ಸಾಂತ್ವನ ಹೇಳುತ್ತೇನೆ. ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಹದಿಹರೆಯದ ಮಗ ಮತ್ತು ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ನೋವು ಅನುಭವಿಸುತ್ತಿದ್ದೇವೆ. ಗೌರವಾನ್ವಿತ ನ್ಯಾಯಾಲಯವು ಹೊರಡಿಸಿದ ಈ ಆದೇಶದಿಂದ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಮಾಧ್ಯಮಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಮತ್ತು ಅಸತ್ಯಗಳನ್ನು ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ನನಗೆ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಕ್ಕೆ ಜಯವಾಗಲಿ. ಸತ್ಯಮೇವ ಜಯತೆ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಆದರೆ ಈ ರೀತಿಯ ತಡೆಯಾಜ್ಞೆ ಇರುವುದು ದರ್ಶನ್ ಮತ್ತವರ ಕುಟುಂಬದ ಬಗೆಗಿನ ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಮಾತ್ರವೇ ಅನ್ವಯವಾಗುತ್ತದೆ ಎನ್ನುವುದು ಕಾನೂನು ತಜ್ಞರ ವಾದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ಪ್ರತಿಯನ್ನು ಹಂಚಿಕೊಂಡಿರುವ ವಿಜಯಲಕ್ಷ್ಮೀ ದರ್ಶನ್, “ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರು, ನಾನು, ನಮ್ಮ ಮಗ, ದರ್ಶನರ ಸೆಲೆಬ್ರಿಟೀಸ್ ಮತ್ತು ಕುಟುಂಬದವರು ಪದಗಳಲ್ಲಿ ವಿವರಿಸಲಾಗದ ನೋವನ್ನು ಅನುಭವಿಸಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
ಪೊಲೀಸ್ ವಿಚಾರಣೆಗೆ ಹಾಜರು :
ದರ್ಶನ್ & ಗ್ಯಾಂಗ್ ಮೇಲಿನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ತಾಯಿ ಮೀನಾ ತೂಗುದೀಪ್, ತಮ್ಮ ದಿನಕರ್ ಬಂದಿಲ್ಲವಾದರೂ, ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ. ಪ್ರೇಯಸಿ ಪವಿತ್ರಾ ಗೌಡ ಅವರಿಗಾಗಿ ಅಪರಾಧ ಕೃತ್ಯ ಎಸಗಿರುವ ದರ್ಶನ್ (ರಿಮ್ಯಾಂಡ್ ಕಾಪಿ ಪ್ರಕಾರ ತಪ್ಪೊಪ್ಪಿಕೊಂಡಿದ್ದಾರೆ) ಅವರ ಜೊತೆ ಪತ್ನಿ ವಿಜಯಲಕ್ಷ್ಮಿ, ಈ ಬಾರಿಯೂ ಜೊತೆ ನಿಂತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್ಮೆಂಟ್ಗೆ ದರ್ಶನ್ ಹೋಗಿದ್ದರು. ಅಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿದ್ದರು. ಶೂಗಳನ್ನು ಸಹ ಅಲ್ಲಿಯೇ ಬಿಟ್ಟಿದ್ದರು. ಅದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆದಿದ್ದರು.
ಘಟನೆ ನಡೆದ ದಿನ ದರ್ಶನ್ ಮನೆಗೆ ಬಂದಾಗ ನಡೆದ ಘಟನೆಗಳು, ಆಡಿದ ಮಾತು, ನಡೆದುಕೊಂಡ ರೀತಿ ಸೇರಿದಂತೆ ದರ್ಶನ್ರ ಇತರೆ ಕೆಲವು ವಿಷಯಗಳ ಬಗ್ಗೆಯೂ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ.ವಿಜಯಲಕ್ಷ್ಮಿ ಅವರು ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶದಲ್ಲಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಒಂದರಲ್ಲಿ ಪುತ್ರನೊಂದಿಗೆ ವಾಸವಿದ್ದಾರೆ. ರಾಜರಾಜೇಶ್ವರಿ ನಗರದ ಮನೆಯಲ್ಲಿ ದರ್ಶನ್ ಒಬ್ಬರೇ ಇದ್ದಾರೆ. ಅದೇ ಏರಿಯಾದಲ್ಲಿ ಪವಿತ್ರಾ ಗೌಡ ಅವರು ದೊಡ್ಡ ಮನೆಯೊಂದರಲ್ಲಿ ಪುತ್ರಿಯೊಂದಿಗೆ ವಾಸವಿದ್ದಾರೆ. ದರ್ಶನ್ ಆಗಾಗ್ಗೆ ವಿಜಯಲಕ್ಷ್ಮಿ ವಾಸವಿರುವ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾರೆ.
ವಿಜಯಲಕ್ಷ್ಮಿ ಅವರನ್ನು ಪೊಲೀಸರು ಸತತವಾಗಿ ೫ ಗಂಟೆ ನಿಮಿಷ ವಿಚಾರಣೆ ಮಾಡಿದ್ದಾರೆ. ಅದಾದ ನಂತರ ಮತ್ತೊಮ್ಮೆ ತನಿಖೆ ಮತ್ತು ವಿಚಾರಣೆಗೆ ಕರೆದಾಗ ಬರಬೇಕು ಎಂದು ಹೇಳಿ ಕಳಿಸಿಕೊಟ್ಟಿದ್ದಾರೆ.
ಲಾಯರ್ ನೇಮಕ : ಈ ಹಿಂದೆ ಅನಿಲ್ ಬಾಬು ಅವರನ್ನು ನೇಮಕ ಮಾಡಿದ್ದ ವಿಜಯಲಕ್ಷ್ಮಿ, ಈಗ ಪ್ರಖ್ಯಾತ ವಕೀಲ ರವಿ ಬಿ ನಾಯ್ಕ್ ಅವರನ್ನು ಸಂಪರ್ಕಿಸಿದ್ದಾರೆ.
ಪೂಜೆ : ಪತಿ ದರ್ಶನ್ ಅವರು ಈ ಆರೋಪದಿಂದ ಮುಕ್ತರಾಗುವಂತೆ ದೇವರ ಮೊರೆ ಹೋಗಿದ್ದಾರೆ.



