ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅವರ ಪತ್ನಿ 2ನೇ ಪತ್ನಿ ಪವಿತ್ರಾ ಗೌಡ ಆರೋಪಿ ನಂಬರ್ 1 ಆದರೆ, ದರ್ಶನ್ ಆರೋಪಿ ನಂಬರ್ 2. ಈ ರೇಣುಕಾಸ್ವಾಮಿ ಕೂಡಾ ದರ್ಶನ್ ಅಭಿಮಾನಿ. ಒಟ್ಟು 13 ಜನ ಅರೆಸ್ಟ್ ಆಗಿದ್ದಾರೆ. ದರ್ಶನ್ – ವಿಜಯಲಕ್ಷ್ಮೀ ಮಧ್ಯೆ ಪವಿತ್ರಾ ಗೌಡ ಬಂದಿದ್ದಾರೆ ಅಂತ ಅಭಿಮಾನಿ ರೇಣುಕಾ ಸ್ವಾಮಿ ಕೆರಳಿದ್ದ. ಪವಿತ್ರ ಗೌಡ ಅವರಿಗೆ ಕೆಟ್ಟ ಅಸಹ್ಯ ಮೆಸೇಜ್ ಮಾಡ್ತಿದ್ದಾನೆ ಅಂತಾ ದರ್ಶನ್ ಕೆರಳಿದ್ದ. ದರ್ಶನ್ ಕೆರಳಿದ ಅಂತಾ.. ಅವನ ಜೊತೆಗಿದ್ದವರೂ ಕೆರಳಿದ್ರು. ಫೈನಲ್ಲಾಗಿ ಅದು ಕೊಲೆಯಲ್ಲಿ ಕೊನೆಯಾಯ್ತು.
ಬಚಾವ್ ಆಗಲು ಯತ್ನಿಸಿ ಸಿಕ್ಕಿಬಿತ್ತು ದರ್ಶನ್ ಗ್ಯಾಂಗ್
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಾವೇ ಕೊಲೆಗಾರರು ಎಂದು ಸರೆಂಡರ್ ಆದವರೇ ದರ್ಶನ್ ಅವರನ್ನು ಅರೆಸ್ಟ್ ಮಾಡಿಸಲು ಕಾರಣವಾಗಿದ್ದು ವಿಶೇಷ. ಕ್ರೈಂ ಮಾಡಿದವರಿಗೆ ಒಂದು ಭಯ ಇರುತ್ತದೆ. ಅಂತದ್ದೇ ಭಯದಲ್ಲಿದ್ದವರು ದರ್ಶನ್ ಸಹಚರರು. ರೇಣುಕಾಸ್ವಾಮಿಯನ್ನು ಕೊಂದು ಸುಮನಹಳ್ಳಿ ಬ್ರಿಡ್ಜ್ ಬಳಿ ಎಸೆದು ಹೋದ ಮೇಲೆ ಮತ್ತೆಲ್ಲ ಇಳಿದಿದೆ. ತಾವು ಮಾಡಬಾರದ್ದು ಮಾಡಿದ್ದೇವೆ ಅನ್ನೋದು ಗೊತ್ತಾಗಿದೆ. ಆಗ ಮೂವರು ಬಂದು ತಾವಾಗಿಯೇ ಬಂದು ಶರಣಾಗಿದ್ದಾರೆ.
ಆರೋಪಿಗಳಾದ ನಂದೀಶ್, ಪವನ್ ಮತ್ತು ನವೀನ್ ಎಂಬುವವರು ಕಾಮಾಕ್ಷಿಪಾಳ್ಯ ಪೊಲೀಸರ ಎದುರು ಶರಣಾಗಿದ್ದಾರೆ. ದುಡ್ಡು ಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹಣಕಾಸಿನ ವ್ಯವಹಾರ ಎಂದರೆ, ಅವರ ಮಧ್ಯೆ ಒಂದು ಸುದೀರ್ಘ ಕಾಂಟ್ಯಾಕ್ಟ್ ಇರುತ್ತದೆ. ಫೋನ್ ಪರಿಶೀಲಿಸಿದಾಗ ರೇಣುಕಾಸ್ವಾಮಿ ಮತ್ತು ಶರಣಾದ ಆರೋಪಿಗಳ ಮಧ್ಯೆ ಅಂತಹ ದೊಡ್ಡ ಹಿಸ್ಟರಿ ಕಾಣಿಸಿಲ್ಲ. ಆದರೆ.. ಕೊಲೆಯಾಗಿದೆ ಎಂದು ಹೇಳುತ್ತಿದ್ದ ಸಮಯದಲ್ಲಿ ಕಾಲ್ ಲಿಸ್ಟಿನಲ್ಲಿ ದರ್ಶನ್ ಮತ್ತು ಪವಿತ್ರ ಗೌಡ ಹೆಸರು ಇರುವುದು ಕಾಣಿಸುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ.
ಎರಡು ಏಟು ಬಿದ್ದ ಮೇಲೆ ಬಾಯ್ಬಿಟ್ಟ ಹಂತಕರು..!
ವಿಚಾರಣೆ ವೇಳೆ ಪೊಲೀಸರು ವರ್ಕ್ ಕೂಡಾ ಮಾಡಿದ್ದಾರೆ ಎನ್ನಲಾಗಿದೆ. ಲಾಠಿ ಏಟು ಬೀಳುತ್ತಿದ್ದಂತೆಯೇ ಎಲ್ಲವೂ ಹೊರಬಿದ್ದಿದೆ. ಆದರೆ, ಇಲ್ಲಿಯೂ ಹಲವು ವರ್ಷನ್ʻಗಳಿವೆ. ದರ್ಶನ್ ತಾವು ಹೊಡೆದಾಗ ಸತ್ತಿಲ್ಲ. ಒಂದೇಟು ಬಾರಿಸಿ ಊಟ ಕೊಡಿಸಿ ಮನೆಗೆ ಕಳಿಸಿಬಿಡಿ ಎಂದು ಹೇಳಿದ್ದೆ ಅನ್ನೋದು ದರ್ಶನ್ ವಾದ.
ದರ್ಶನ್ ಒಂದೇಟು ಬಾರಿಸಿ ಹೋದ್ಮೇಲೆ ಕೂಡಾ ನಾವು ಅವನಿಗೆ ಹೊಡೆದ್ವಿ. ಆಗ ರೇಣುಕಾಸ್ವಾಮಿ ಸತ್ತು ಹೋದ. ಆಮೇಲೆ ಬಾಸ್ʻಗೆ ಫೋನ್ ಮಾಡಿ ಹೇಳಿದ್ವಿ. ಬಾಡಿಯನ್ನು ಹೂತು ಹಾಕಿಬಿಡಿ ಅಂದ್ರು. ನಾವು ಭಯದಲ್ಲಿ ಬಾಡಿಯನ್ನ ಎಸೆದು ಹೋದ್ವಿ ಎಂದು ಹೇಳಿದ್ದಾರೆ.
ಠಾಣೆಗೆ ಬಂದ ಮೇಲೆ ನಟ ದರ್ಶನ್ ಆರಂಭದಲ್ಲಿಯೇ ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ. ತನ್ನನ್ನು ಬಿಟ್ಟು ಉಳಿದ ಎಲ್ಲರನ್ನ ಬಂಧಿಸುವಂತೆ ದರ್ಶನ್ಅಮಿಷ ಒಡ್ಡಿದ್ದರು ಎನ್ನಲಾಗಿದೆ. ಇತ್ತ ಬಂಧನಕ್ಕೆ ಒಳಗಾಗಿರುವ ದರ್ಶನ್ ಬಾಡಿಗಾರ್ಡ್ಗಳು ಅಣ್ಣನನ್ನು ಬಿಟ್ಟು ಬಿಡಿ ಎಂದು ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸಿನ ಟೈಂ ಲೈನ್ ಬೆನ್ನು ಹತ್ತಿದ ಪೊಲೀಸರು..!
ಕೊಲೆಯ ಘಟನೆ ಶುರುವಾಗಿದ್ದು ಹೀಗೆ.. ಮೊದಲಿಗೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರಗೆ ರೇಣುಕಾ ಸ್ವಾಮಿ ಬಗ್ಗೆ ಪತ್ತೆ ಹಚ್ಚುವಂತೆ ಸೂಚಿಸ್ತಾರೆ. ನಂತರ ರೇಣುಕಾಸ್ವಾಮಿಯನ್ನು ನಕಲಿ ಖಾತೆ ಮೂಲಕ ಬಲೆಗೆ ಕೆಡವಿ, ಹುಡುಗಿಯಂತೆ ಕರೆ ಮಾಡಿ ಮಾತನಾಡಿ ನಿರ್ದಿಷ್ಟ ಜಾಗಕ್ಕೆ ಬರಲು ಸೂಚಿಸಿದ್ರು. ರೇಣುಕಾಸ್ವಾಮಿ ದರ್ಶನ್ ಗ್ಯಾಂಗ್ಗೆ ಸಿಕ್ಕಿಬಿದ್ದಿದ್ದು ಹಾಗೆ.
ಜೂನ್ 8 ರಂದು ಕಿಡ್ನಾಪ್ & ಮರ್ಡರ್
ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ & ಗ್ಯಾಂಗ್ ರೇಣುಕಾ ಸ್ವಾಮಿ ಅವರನ್ನ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದರು. ದರ್ಶನ್ ಆಪ್ತ ವಿನಯ್ಗೆ ಸೇರಿದ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಲಾಯ್ತು. ಹಲ್ಲೆ, ಚಿತ್ರಹಿಂಸೆ ತಡೆಯಲಾರದೆ, ಪಟ್ಟಣಗೆರೆ ಶೆಡ್ನಲ್ಲಿಯೇ ರೇಣುಕಾ ಸ್ವಾಮಿ ಜೀವ ಬಿಟ್ಟರು. ಬಹುಶಃ ಮುಂಜಾನೆ ಸಮಯ ಇರಬೇಕು. ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ಸಿಕ್ಕಿಲ್ಲ. ಶೆಡ್ನಲ್ಲಿನ ಶವವನ್ನ ಮುಂಜಾನೆ 3 ರಿಂದ 4 ಗಂಟೆ ಸುಮಾರಿಗೆ ವಿನಯ್ ಮತ್ತು ಇತರರು ಸುಮನಹಳ್ಳಿ ರಾಜಕಾಲುವೆಗೆ ಎಸೆದರು.
ಜೂನ್ 9 ಬೆಳಗ್ಗೆ ಅಪರಿಚಿತ ಶವ ಪತ್ತೆಯ ನಂತರ..
ಅಪಾರ್ಟ್ಮೆಂಟ್ ಸಮೀಪ ಅಪರಿಚಿತ ಶವ ಡೆಲಿವರಿ ಬಾಯ್ ಕಣ್ಣಿಗೆ ಬಿತ್ತು. ಆನಂತರ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿ, ಎಫ್ಐಆರ್ ದಾಖಲಾಯ್ತು.
ಜೂನ್ 10 : ಕೊಲೆ ಮಾಡಿದ್ದು ನಾವೇ ಎಂದು ಬಂದರು ದರ್ಶನ್ ಗ್ಯಾಂಗ್
ಜೂನ್ 10ರ ಬೆಳಗ್ಗೆ ‘ಕೊಲೆ ಮಾಡಿದ್ದು ತಾವೇ’ ಎಂದು ಹೇಳಿ ದರ್ಶನ್ ಅವರ ಮೂವರು ಸಹಚರರು ಸರೆಂಡರ್ ಆದರು. ನಂತರ ಆಕ್ಟಿವ್ ಆದ ಪೊಲೀಸರು ಆರೋಪಿಗಳ ಬಾಯಿ ಬಿಡಿಸಿದರು. ಶರಣಾಗತರಾಗಿದ್ದ ಆರೋಪಿಗಳು ಕೊಲೆ ನಡೆಯುವ ಹೊತ್ತಿನಲ್ಲಿ ಅಣ್ಣ ಮತ್ತು ಅಕ್ಕ (ದರ್ಶನ್ ಮತ್ತು ಪವಿತ್ರಾ ಗೌಡ) ಅಲ್ಲಿಯೇ ಇದ್ದರು ಎಂದು ಬಾಯ್ಬಿಟ್ಟರು. ಕೊಲೆಯ ಮಾಹಿತಿಯನ್ನು ತೆಗೆದುಕೊಂಡ ಪೊಲೀಸರು ಇತರೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು.
ಜೂನ್ 11ರ ಬೆಳಗ್ಗೆ ದರ್ಶನ್ ಗ್ಯಾಂಗ್ ಅರೆಸ್ಟ್



