ರಾಜ್ಯದಲ್ಲೀಗ ಇದ್ದಕ್ಕಿದ್ದಂತೆ ಸಿಎಂ ಆಕಾಂಕ್ಷಿಗಳ ಕೂಗು ದಿಢೀರ್ ಸದ್ದು ಮಾಡೋಕೆ ಶುರು ಮಾಡಿದೆ. ಮೊದಮೊದಲು ಡಿಕೆ ಶಿವಕುಮಾರ್ ಅವರಷ್ಟೇ ಇದ್ದರು. ಆದರೆ ರಾಜ್ಯದಲ್ಲಿ ಸರ್ಕಾರ ರಚನೆಯಾಗುವ ಮೊದಲು ಸಿಎಂ ಸ್ಥಾನಕ್ಕೆ ಹೋರಾಟ ಮಾಡಿದ್ದರು. ಆದರೆ ಒಮ್ಮೆ ಸಿದ್ಧರಾಮಯ್ಯ ಫೈನಲ್ ಆದ ಮೇಲೆ ಡಿಕೆ ಶಿವಕುಮಾರ್, ಆಕಾಂಕ್ಷೆ, ಆಸೆಗಳಿದ್ದರೂ.. ಅವುಗಳೆಲ್ಲವನ್ನೂ ಪಕ್ಕಕ್ಕಿಟ್ಟು ಸಿದ್ಧರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಆದರೆ ಯಾವಾಗ ಮುಡಾ ಹಗರಣದ ಹೂರಣ ಹೊರಬಂತೋ.. ಇದ್ದಕ್ಕಿದ್ದಂತೆ ಸಿಎಂ ಸಿದ್ಧರಾಮಯ್ಯ ಕುರ್ಚಿಯ ಮೇಲೆ ಕಣ್ಣಿಟ್ಟವರ ಪಟ್ಟಿ ದೊಡ್ಡದಾಗುತ್ತಿದೆ.
ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್.. ಇಬ್ಬರೂ ಕೂಡಾ ಸದ್ಯಕ್ಕೆ ಆ ರೇಸಿನಲ್ಲಿ ನಾವಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಯಾವುದೇ ಸಿಎಂ ಕೂಗು ಕೇಳುವ ಪ್ರಶ್ನೆ ಇಲ್ಲ. ಈಗಾಗಲೇ ಸಿಎಂ ಇದ್ದಾರೆ ಅವರನ್ನ ಇಳಿಸುವವರು ಯಾರು?. ಪದೇ ಪದೇ ಸಿಎಂ ವಿಚಾರ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಸರಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ ಬಗೆ ಹರಿಸಲು ಸಮಯ ಬೇಕಿದೆ. ಸಿಎಂ ಅವರೇ ಇದ್ದಾರೆ ಸರಕಾರ ಮುಂದುವರೆಯುತ್ತದೆ ಎನ್ನುವುದು ಸತೀಶ್ ಜಾರಕಿಹೊಳಿ ಮಾತು. ಇನ್ನು ಎಂಬಿ ಪಾಟೀಲ್ ಓಪನ್ ಆಗಿಯೇ ಮುಂದೆ ಆಗುತ್ತೇನೆ, ಈಗ ಇಲ್ಲ ಎಂದುಬಿಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ಪ್ಲೀಸ್. ಜನ ನಮ್ಮನ್ನ ನೋಡಿ ಉಗೀತಾರೆ. ಬರೇ ಬರೇ ಸಿಎಂ ಎಂದರೇ ಇವರಗೇನೂ ಕೆಲಸ ಇಲ್ಲ ಎಂದು ಜನ ಉಗಿಯುತ್ತಾರೆ. ಪದೇ ಪದೇ ಈ ವಿಚಾರ ಕೇಳಬೇಡಿ ಎಂದಿದ್ದಾರೆ ಸತೀಶ್ ಜಾರಕಿಹೊಳಿ.
ಆದರೆ ಪಕ್ಷದಲ್ಲಿ ಇದ್ದಕ್ಕಿದ್ದಂತೆ ಇನ್ನೂ ಎರಡು ಹೆಸರುಗಳು ಕೇಳಿ ಬರೋಕೆ ಶುರುವಾಗಿವೆ. ಬಸವರಾಜ ರಾಯರೆಡ್ಡಿ ಅವರೂ, ನಾನು ಸಿಎಂ ಸ್ಥಾನದ ಆಕಾಂಕ್ಷಿ ಇದ್ದೇನೆ. ನಾನು ಯಾಕೆ ಆಗಬಾರದು?. ನಾನು ಲಿಂಗಾಯತ ಸಮುದಾಯಕ್ಕೆ ಸೇರಿದ್ದೇನೆ. ಲಿಂಗಾಯತರಲ್ಲಿ ನಾನು ತುಂಬಾ ಹಿರಿಯ ಇದ್ದೇನೆ. ಕಲ್ಯಾಣ ಕರ್ನಾಟಕ ದಲ್ಲಿ ಅತಿ ಹೆಚ್ಚು ಬಾರಿ ಆಯ್ಕೆಯಾಗಿದ್ದೇನೆ. ಲಿಂಗಾಯತ ಸಮುದಾಯಕ್ಕೆ ಕೊಡೋದಾದ್ರೆ ನನಗೆ ಕೊಡಲಿ. ಆಸೆ ಪಡೋದರಲ್ಲಿ ಯಾವುದೇ ತಪ್ಪಿಲ್ಲಾ. ಯಾರು ಸಿಎಂ ಆಗಬೇಕು ಅನ್ನೋದನ್ನು ವರಿಷ್ಟರು, ಶಾಸಕರು ಮಾಡಬೇಕು. ಜೊತೆಗೆ ಸಿದ್ದರಾಮಯ್ಯ ನವರು ಆಶಿರ್ವಾದ ಮಾಡಬೇಕು ಹೇಳಿದ್ದಾರೆ. ಮುಂದುವರೆದು ರಾಜ್ಯದಲ್ಲಿ ಸಿಎಂ ಆಗಬೇಕು ಅಂತ ಕೆಲವರು ಆಸೆ ಪಡ್ತಿದ್ದಾರೆ. ಸಿಎಂ ಹುದ್ದೆ ಆಸೆ ಪಡೋದು ತಪ್ಪಲ್ಲಾ. ಆದ್ರೆ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ಕೂಡಾ ಹೇಳಿದ್ದಾರೆ.
ಇನ್ನು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನಾನ್ಯಾಕೆ ಸಿಎಂ ಆಗಬಾರದು, ನನಗೂ ಆಸೆ ಇದೆ ಎಂದಿದ್ದಾರೆ. ಅವರೂ ಕೂಡಾ ರಾಯರೆಡ್ಡಿ ಅವರಂತೆಯೇ ಸಿಎಂ ಸಿದ್ಧರಾಮಯ್ಯ ಅವರೇ ನಮ್ಮ ಸಿಎಂ. ಸುಮ್ಮನೆ ವಿವಾದ ಸೃಷ್ಟಿಸಬೇಡಿ ಎಂದಿದ್ದಾರೆ.
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರೂ ಕೂಡಾ ಎಂ.ಬಿ ಪಾಟೀಲ್ ಅವರು ಹೇಳಿದ್ದೇ ಬೇರೆ ಮಾಧ್ಯಮಗಳು ಅರ್ಥಸಿಕೊಂಡಿದ್ದೇ ಬೇರೆ. ಮುಂದೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರಷ್ಟೆ. ಆದರೆ ಸಿಎಂ ಬದಲಾವಣೆ ಅನ್ನೋದು ಕೇವಲ ಮಾಧ್ಯಮಗಳಿಗಷ್ಟೇ ಸೀಮಿತವಾಗಿದೆ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಎಂಎಲ್ಸಿ ದಿನೇಶ್ ಗೂಳಿಗೌಡ ಅವರೆಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದಕ್ಕೆಲ್ಲ ಬ್ರೇಕ್ ಹಾಕಿ ಎಂದು ಒತ್ತಾಯಿಸಿದ್ದಾರೆ. ಖರ್ಗೆ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಕೆಲವು ಸಚಿವರು ಹಾಗೂ ನಾಯಕರು ಬೇರೆ ಉದ್ದೇಶಗಳಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಚಿವರು ತಮ್ಮ ತಮ್ಮ ಇಲಾಖೆಗಳ ಕೆಲಸ ಕಾರ್ಯಗಳತ್ತ ಗಮನ ಹರಿಸಲಿ, ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಎಂದು ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.



