ಮಾತು ಮಾತಿನಲ್ಲೇ ಮರ್ಮಾಘಾತ ನೀಡುವ ಕಲೆ ಡಿಕೆ ಶಿವಕುಮಾರ್ ಅವರಿಗೆ ಸಿದ್ದಿಸಿದೆ. ಎದೆಯಲ್ಲಿ ಸಾವಿರ ಅಗ್ನಿ ಪರ್ವತ ಉರಿಯುತ್ತಿದ್ದರೂ, ಹೊರಗೆ ಶಾಂತವಾಗಿರುತ್ತಾರೆ. ಕೆಲವೊಮ್ಮೆ ಯಾವ ಯಾವುದಕ್ಕೋ ಸ್ಫೋಟಗೊಳ್ಳುತ್ತಾರೆ. ಈಗ ಸಿದ್ದರಾಂಯ್ಯ ಅವರು ಹೇಳಿದ್ಮೇಲೆ ಮುಗೀತು, ಫೈನಲ್, ವೇದವಾಕ್ಯ ಎಂಬ ಮಾತು ಹೇಳಿದಾರೆ ಡಿಕೆ. ಇಷ್ಟಕ್ಕೂ ಸಿದ್ದರಾಮಯ್ಯ ಹೇಳಿದ್ದು ಏನು ಎಂದರೆ..
ಹೈಕಮಾಂಡ್ ಹೇಳಿದ ಮೇಲೆ ಮುಗೀತು. ಮಂತ್ರಿಗಳಾದರೂ ಅಷ್ಟೇ, ಕಾರ್ಯಕರ್ತರಾದರೂ ಅಷ್ಟೆ, ನಾನೇ ಆದರೂ ಅಷ್ಟೇ, ಡಿಕೆ ಶಿವಕುಮಾರ್ ಆದರೂ ಅಷ್ಟೇ. ಹೈಕಮಾಂಡ್ ಹೇಳಿದ ಮೇಲೆ ಬೇರೆ ಮಾತನಾಡೋದು ಏನಿದೆ.. ಒಪ್ಪಬೇಕು. ಒಪ್ಪಲೇಬೇಕು ಎಂದಿದ್ದರು ಸಿಎಂ ಸಿದ್ದರಾಮಯ್ಯ. ಮತ್ತೆ ಮತ್ತೆ ಕೇಳಿದಾಗಲೂ.. ಒಂದ್ಸಲ ಹೇಳಿದ್ರೆ ಅರ್ಥ ಆಗಲ್ವೇನ್ರೀ.. ಹೈಕಮಾಂಡ್ ಅಂತ ಹೇಳಿದ್ಮೇಲೂ ಪದೇ ಪದೇ ಕೇಳೋದ್ಯಾಕೆ ಎಂದು ಸಿಡಿಮಿಡಿಗೊಂಡಿದ್ದರು ಡಿಕೆ.
ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಆಸ್ತಿ. ಅವರು ಏನು ಹೇಳಿದರೂ ಅದಕ್ಕೆ ನಮ್ಮ ತಕರಾರಿಲ್ಲ. ಅದು ನಮಗೆ ವೇದವಾಕ್ಯ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಬಗ್ಗೆ ನಾನು ಯಾವತ್ತು ಏನೂ ಹೇಳಿಲ್ಲ. ಅವರು ಹೇಳಿದ್ದಕ್ಕೆ ನಾನು ಗೌರವ ನೀಡುತ್ತೇನೆ, ನನ್ನದೇನೂ ತಕರಾರಿಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಇನ್ನು, ಮಾಧ್ಯಮಗಳು ಸುಮ್ಮನೆ ಗೊಂದಲ ಸೃಷ್ಟಿಸುತ್ತಿವೆ. ಏನಾದರೂ ಇದ್ದರೆ ನನ್ನ ಮತ್ತು ಪಕ್ಷದ ಹೈಕಮಾಂಡ್ ನಡುವೆ ಇರುತ್ತದೆ. ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಹೈಕಮಾಂಡ್ ಎಂದರೆ ಯಾರು..? ಡಿಕೆ ಶಿವಕುಮಾರ್ ವಿವರಣೆ :
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿರುವುದಕ್ಕೆ ಉತ್ತರಿಸಿದ್ದಾರೆ. ʻʻಹೈಕಮಾಂಡ್ ಎಂದರೆ ಒಂದು ಸಮಿತಿ. ಏಕಾಏಕಿ ಒಬ್ಬರೇ ನಿರ್ಧರಿಸಲಾಗದು. ಕೆಪಿಸಿಸಿಗೆ ನಾನು ಅಧ್ಯಕ್ಷನಾಗಿದ್ದರೂ ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಮುಖ್ಯಮಂತ್ರಿ ಅವರನ್ನು ಕೇಳಿದ್ದೇನೆ. ಜಿಲ್ಲಾಧ್ಯಕ್ಷರು, ವಿವಿಧ ನಾಯಕರೊಂದಿಗೆ ಮಾತನಾಡಿದ್ದೇನೆ. ಅದೇ ದಾಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆʼʼ ಎಂದು ಸಮರ್ಥೆ ಮಾಡಿಕೊಂಡಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಇದೀಗ ಬಹಿರಂಗವಾಗಿಯೇ ಲಾಬಿ ಆರಂಭಿಸಿದೆ. ಡಿ.ಕೆ.ಶಿವಕುಮಾರ್ ಅವರ 7 ಆಪ್ತ ಶಾಸಕರ ಒಂದು ತಂಡ ಈಗಾಗಲೇ ದೆಹಲಿ ತೆರಳಿದ್ದು, ಇನ್ನೊಂದು ತಂಡ ಮಂಗಳವಾರ ರಾಷ್ಟ್ರರಾಜಧಾನಿ ತಲುಪುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರ 1 ಗುಂಪು ದೆಹಲಿಗೆ ಹೋಗಿದೆ. ಭಾನುವಾರ ತಡರಾತ್ರಿಯೇ ದೆಹಲಿ ತಲುಪಿರುವ ಈ 7 ಶಾಸಕರ ತಂಡದಲ್ಲಿ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಕದಲೂರು ಉದಯ್, ಶಿವಗಂಗಾ ಬಸವರಾಜು, ಇಕ್ಬಾಲ್ ಹುಸೇನ್, ಮಹೇಂದ್ರ ತಮ್ಮಣ್ಣವರ, ಬಾಬಾ ಸಾಹೇಬ್ ಪಾಟೀಲ್ ಹಾಗೂ ನಯನಾ ಮೋಟಮ್ಮ ಇದ್ದಾರೆ.



